Site icon Vistara News

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Assault Case in Shivamogga

ಶಿವಮೊಗ್ಗ: ಶಿವಮೊಗ್ಗದ (Shivamogga News) ಹೊಸಮನೆ ಬಡಾವಣೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಮುನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ ಹಾಗೂ ಬೈಕ್‌ಗಳನ್ನು ಕಿಡಿಗೇಡಿಗಳು (Assault Case) ಧ್ವಂಸಗೊಳಿಸಿದ್ದಾರೆ. ಗಾಂಜಾ ನಶೆಯಲ್ಲಿ ವಾಹನಗಳನ್ನು ಜಖಂ ಮಾಡಿದ್ದಾರೆ ಎನ್ನಲಾಗಿದೆ.

ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನು ರಾತ್ರೋ ರಾತ್ರಿ‌ ಹಾನಿ ಮಾಡಿದ್ದಾರೆ. ಕಾರಗಳ ಗಾಜು ಚೂರು ಚೂರು ಮಾಡಿದ್ದು, ಜಗದೀಶ್ ಎಂಬವರಿಗೆ ಸೇರಿದ ಅಂಗಡಿಯ ಬೀಗವನ್ನು ಮಚ್ಚಿನಿಂದ ಹೊಡೆದು ಹಾನಿ ಮಾಡಿದ್ದಾರೆ.

ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶಾಸಕ ಎಸ್ಎ‌ನ್ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಗಾಂಜಾ ಪ್ಯಾಕೇಟ್ ಹಾಗೂ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ. ಬಡಾವಣೆಯ ಪರಿಸ್ಥಿತಿ ಕಂಡು ಶಾಸಕ ಚನ್ನಬಸಪ್ಪ ಅಚ್ಚರಿಗೊಳಗಾದರು. ಇದೇ ವೇಳೆ ಸ್ಥಳೀಯರು ಕಿಡಿಗೇಡಿಗಳ ಹಾವಳಿಯನ್ನು ವಿವರಿಸಿದರು. ಕಿಡಿಗೇಡಿಗಳ ನಿರಂತರ ಹಾವಳಿಯಿಂದ ಬೇಸತ್ತಿರುವುದಾಗಿ ತಿಳಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಚನ್ನಬಸಪ್ಪ ನಿನ್ನೆ ಬುಧವಾರ ರಾತ್ರಿ ದೊಡ್ಡ ಗುಂಪುವೊಂದು ಸಿಕ್ಕ ಸಿಕ್ಕ ವಾಹನಗಳನ್ನು ಜಖಂ ಮಾಡಿದೆ. ಮಚ್ಚು ಲಾಂಗ್‌ನಿಂದ ಹೊಡೆದು ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ.
ಬರ್ತ್‌ ಡೇ ಆಚರಣೆ ಗಾಂಜಾ ಸೇವನೆ ಮಾಡಿ ಈ ರೀತಿ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಈ ರೀತಿ ನಡೆಯುತ್ತಿದೆ ಆದರೆ ರಕ್ಷಣಾ ಇಲಾಖೆ ಗಮನ ಕೊಟ್ಟಿಲ್ಲ. ಆನಂದಪುರದಲ್ಲಿ ತಲ್ವಾರು ಇಟ್ಟುಕೊಂಡು ಓಡಾಡುತ್ತಾರೆ. ಗೃಹ ಸಚಿವರು ಲಾ ಆ್ಯಂಡ್‌ ಆರ್ಡರ್ ನಿಯಂತ್ರಣದಲ್ಲಿದೆ ಅಂತಾರೆ ಆದರೆ ಗಾಂಜಾ ಸೇವನೆಯಿಂದ ‌ಈ ರೀತಿ ಆಗುತ್ತಿದೆ ಅಂದರೆ ಹೊಣೆ ಯಾರು? ಗೃಹ ಇಲಾಖೆ ಜವಾಬ್ದಾರಿ ಹೊಣೆ ಹೊರಬೇಕು. ಈ ರೀತಿ ‌ಗೂಂಡಾ ವರ್ತನೆಗೆ ಕಡಿವಾಣ ಹಾಕದಿದ್ದರೆ ನಾಗರೀಕರೇ ಗೂಂಡಾ ವರ್ತನೆ ತೋರುವವರಿಂದ ಆತ್ಮ ರಕ್ಷಣೆಗೆ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಶಿವಮೊಗ್ಗ ‌ಜಿಲ್ಲೆಯ ರಕ್ಷಣಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

ಕೋಲಾರದಲ್ಲಿ ಬಿಯರ್‌ ಬಾಟೆಲ್‌ಗಳಲ್ಲಿ ಬಡಿದಾಟ

ಕ್ಷುಲ್ಲಕ ಕಾರಣಕ್ಕೆ ಯುವಕರು ಬಿಯರ್ ಬಾಟೆಲ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಕೋಲಾರದ ಗಾಂಧಿನಗರ ಮತ್ತು ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮಕ್ಕೆ ಸೇರಿದ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಎದುರು ಬಿಯರ್ ಬಾಟೆಲ್‌ನಿಂದ ಕಿತ್ತಾಡಿಕೊಂಡಿದ್ದಾರೆ.

ಇವರ ಬಡಿದಾಟಕ್ಕೆ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಪ್ರಕರಣ ದಾಖಲಿಸಿ, ಇಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮಂಜುನಾಥ್ ಹಾಗೂ ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಧಾರವಾಡದಲ್ಲಿ ಆಸ್ತಿ ವಿಚಾರಕ್ಕೆ ಕಿರಿಕ್‌; ಯುವತಿಯನ್ನು ಥಳಿಸಿದ ಗ್ರಾ.ಪಂ ಸದಸ್ಯ

ಆಸ್ತಿ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಧಾರವಾಡ ತಾಲೂಕಿನ ಕನಕೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮಾರುತಿ ಪವಾರ್ ಎಂಬ ಗ್ರಾಮ ಪಂಚಾಯತಿ ಸದಸ್ಯನೇ ಯುವತಿ ಮೇಲೆ ಹಲ್ಲೆ ಮಾಡಿದವನು.

ಹಲ್ಲೆ ಮಾಡುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾರುತಿ ತನ್ನ ಅಕ್ಕನ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರುತಿ ಜತೆಗೆ ಮತ್ತೊಬ್ಬ ಸಂಬಂಧಿ ಸಹೋದರ ರಾಮಚಂದ್ರ ಕೂಡ ಸಾಥ್‌ ನೀಡಿದ್ದಾನೆ. ಆಸ್ತಿ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಕ್ಕೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧದಿಂದ ನಿಂದಿಸಿದ ಹಲ್ಲೆ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version