Site icon Vistara News

Physical Abuse: ಬಡ್ಡಿ ಹಣಕ್ಕಾಗಿ ದಲಿತ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ; ಮೂತ್ರ ಕುಡಿಸಲೂ ಯತ್ನಿಸಿದ ದುರುಳರು

crime agaist women

crime agaist women

ಪಟನಾ: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆ ಇಲ್ಲ ಎಂಬಂತಾಗಿದೆ. ಬಿಹಾರದ (Physical Abuse) ಪಟನಾದಲ್ಲಿ ಮಹಿಳೆಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಆಕೆಯನ್ನು ನಗ್ನಗೊಳಿಸಿ ಬಲವಂತವಾಗಿ ಮೂತ್ರ ಕುಡಿಸಲು ಯತ್ನಿಸಿದ ಅಮಾನುಷ ಘಟನೆ ಸೆಪ್ಟಂಬರ್‌ 23ರಂದು ನಡೆದಿದೆ. ಪಟನಾದಲ್ಲಿ (Patna) ಖುರ್ಸುಪುರ್‌ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಸಾಲ ನೀಡಿದ ವ್ಯಕ್ತಿ ಮತ್ತು ಆತನ ಪುತ್ರ ಇಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾಲ ತೀರಿಸಿದ ಬಳಿಕ ಹೆಚ್ಚಿನ ಹಣ ಪಾವತಿಸಲು ಸಂತ್ರಸ್ತೆ ನಿರಾಕರಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಘಟನೆಯಿಂದ ಮಹಿಳೆಯ ತಲೆಗೆ ಬಲವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಾದ ಪ್ರಮೋದ್‌ ಸಿಂಗ್‌ ಮತ್ತು ಆತನ ಪುತ್ರ ಅನ್ಶು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸಂತ್ರಸ್ತೆ ಮನೆಗೆ ತೆರಳಿದ್ದರು. ಈ ಸಮಯದಲ್ಲಿ ಆಕೆ ಮನೆ ಮುಂದಿನ ನಲ್ಲಿಯಿಂದ ನೀರು ತರುತ್ತಿದ್ದರು. ಆರೋಪಿಗಳು ಮತ್ತು ಅವರ ಸಹಚರರು ಆಕೆಯನ್ನು ಬಲವಂತದಿಂದ ಮನೆಯೊಳಗೆ ಎಳೆದು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನವೀಯತೆ ಮರೆತ ರಾಕ್ಷಸರಿಂದ ಹೀನ ಕೃತ್ಯ

ದೊಣ್ಣೆಯಿಂದ ಮಹಿಳೆ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಬಳಿಕ ಅವರನ್ನು ವಿವಸ್ತ್ರಗೊಳಿಸಲಾಯಿತು. ಈ ವೇಳೆ ಆರೋಪಿ ಪ್ರಮೋದ್‌ ಸಿಂಗ್‌ ತನ್ನ ಮಗನಿಗೆ ಆಕೆಯ ಬಾಯಿಯೊಳಗೆ ಮೂತ್ರ ಮಾಡಲು ಆದೇಶ ನೀಡಿದ್ದ. ಹೇಗೂ ಅಲ್ಲಿಂದ ತಪ್ಪಿಸಿಕೊಂಡ ಮಹಿಳೆ ನಗ್ನ ಸ್ಥಿತಿಯಲ್ಲೇ ಮನೆಯಿಂದ ಹೊರಗೆ ಓಡಿಸಿದರು. ಕೂಡಲೇ ಅವರನ್ನು ಸಂಬಂಧಿಕರೊಬ್ಬರು ರಕ್ಷಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಜೀವ ಉಳಿಸಿದರು ಎಂದು ಮೂಲಗಳು ತಿಳಿಸಿವೆ.

1,500 ರೂ.ಗಾಗಿ ನಡೆಯಿತಾ ಕೃತ್ಯ?

ಮಹಿಳೆ ಆರೋಪಿಯಿಂದ 1,500 ರೂ. ಸಾಲ ಪಡೆದುಕೊಂಡಿದ್ದೇ ಇಷ್ಟಲ್ಲ ರಾದ್ದಾಂತಕ್ಕೆ ಕಾರಣ ಎನ್ನಲಾಗಿದೆ. ಬಡ್ಡಿ ಹಣಕ್ಕೆ ಸಾಲ ಪಡೆದುಕೊಂಡಿದ್ದ ಸಂತ್ರಸ್ತೆ ಬಡ್ಡಿ ಸಮೇತ ಸಾಲ ತೀರಿಸಿದ್ದರು. ಇದಾದ ಬಳಿಕವೂ ಆರೋಪಿ ಹೆಚ್ಚಿನ ಹಣಕ್ಕಾಗಿ ಮಹಿಳೆಯನ್ನು ಪೀಡಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದರು. ಹೆಚ್ಚಿನ ಹಣ ಕೊಡದಿದ್ದರೆ ಊರಿಡೀ ನಗ್ನವಾಗಿ ಮೆರವಣಿಗೆ ಮಾಡಿಸುವುದಾಗಿ ಪ್ರಮೋದ್‌ ಈ ಹಿಂದೆ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮೊದಲೇ ಪೊಲೀಸರಿಗೆ ತಿಳಿಸಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Cyber Crime Awareness: ಪುತ್ರನ ನಾಮಕರಣ ಆಹ್ವಾನ ಪತ್ರಿಕೆಯಲ್ಲಿ ಸೈಬರ್‌ ಕ್ರೈಂ ಜಾಗೃತಿ ಮೂಡಿಸಿದ ಕಾನ್ಸ್‌ಟೇಬಲ್‌

ಆರೋಪಿಗಳು ಪರಾರಿ

ಸದ್ಯ ಈ ಘಟನೆ ಪಾಟ್ನಾದ ಖುಸುರ್ಪುರ್‌ ಬ್ಲಾಕ್‌ನ ಮೊಂಸಿಪುರ್‌ ಪಂಚಾಯತ್‌ನಲ್ಲಿ ಕೋಲಾಹಲ ಸೃಷ್ಟಿಸಿದೆ. ಅನೇಕರು ಈ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಮಹಿಳೆಯ ಕುಟುಂಬ ಮತ್ತು ಅವರ ಸಮುದಾಯದ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಆರೋಪಿ ಮತ್ತು ಆತನ ಪುತ್ರ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version