Site icon Vistara News

Chaitra Kundapura : ಚೈತ್ರಾ ಟೀಮ್‌ ದುಡ್ಡನ್ನು ಏನು ಮಾಡಿತು ಗೊತ್ತಾ? ಎಫ್‌ಡಿ, ಸೈಟು, ಕಾರು, ಒಡವೆ, ಗೋಲ್ಡ್‌ ಬಿಸ್ಕೆಟ್‌!

Chaitra kundapura gold and money

ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ (Five crores Fraud) ಮಾಡಿದ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ ಆ ಹಣವನ್ನು ಏನೇನು ಮಾಡಿದೆ ಎಂಬ ಬಗ್ಗೆ ಮಾಹಿತಿಗಳು ಸಿಗುತ್ತಿದೆ.

ಐದು ಕೋಟಿ ರೂ.ಯಲ್ಲಿ 1.5 ಕೋಟಿ ರೂ. ಹಣ ವಿಜಯ ನಗರ ಜಿಲ್ಲೆಯ ಹಿರೇಹಡಗಲಿ ಹಾಲು ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಪಾಲಾಗಿದ್ದರೆ, ಚೈತ್ರಾ ಕುಂದಾಪುರ ಮತ್ತು ಉಳಿದವರಿಗೆ ಸಿಕ್ಕಿರುವುದು 3.5 ಕೋಟಿ ರೂ. ಇದರಲ್ಲಿ ಹೆಚ್ಚಿನ ಪಾಲು ಸಿಕ್ಕಿದ್ದು ಚೈತ್ರಾ ಕುಂದಾಪುರ, ಗಗನ್‌ ಕಡೂರ್‌, ಶ್ರೀಕಾಂತ್‌ ನಾಯಕ್‌ಗೆ. ಪ್ರಕರಣದ ಇತರ ಆರೋಪಿಗಳಾದ ಧನರಾಜ್‌, ರಮೇಶ್‌, ಚನ್ನಾ ನಾಯಕ್‌ ಮತ್ತು ಪ್ರಜ್ವಲ್‌ಗೆ ಅವರವರು ನಿಭಾಯಿಸಿದ ಪಾತ್ರಕ್ಕೆ ಅನುಗುಣವಾಗಿ ಸಂಭಾವನೆ ನೀಡಲಾಗಿದೆ!

ಒಂದು ಕಡೆ ಚೈತ್ರಾ ಕುಂದಾಪುರ ಸಿಸಿಬಿ ವಿಚಾರಣೆಯನ್ನು ತಪ್ಪಿಸಿಕೊಂಡು ಆಸ್ಪತ್ರೆ ಸೇರಿದ್ದರೂ ಪೊಲೀಸರು ಇತರರನ್ನು ವಿಚಾರಣೆ ನಡೆಸಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಜತೆಗಿನ ಫೋನ್‌ ಸಂಪರ್ಕ ಮತ್ತಿತರ ವಿಚಾರಗಳನ್ನೂ ಜಾಲಾಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಚೈತ್ರಾ ಗ್ಯಾಂಗ್‌ ಹಣ ಏನು ಮಾಡಿದೆ ಎಂಬುದನ್ನು ಹುಡುಕಲು ಹೊರಟ ಪೊಲೀಸರಿಗೆ ಹಲವು ಮಹತ್ವದ ಸಂಗತಿಗಳು ಗೋಚರಿಸಿವೆ. ಇದರಲ್ಲಿ ಪ್ರಮುಖವಾಗಿರುವುದು 1 ಕೋಟಿ 8 ಲಕ್ಷ ರೂ.ವನ್ನು ಆರೋಪಿಗಳ ಹೆಸರಲ್ಲಿ ನಿಶ್ಚಿತ ಠೇವಣಿಯಾಗಿ ಇಡಲಾಗಿದೆ. ಅಂದರೆ ಚೈತ್ರಾ, ಗಗನ್‌ ಕಡೂರು ಮತ್ತು ಶ್ರೀಕಾಂತ್‌ ನಾಯಕ್‌ ಅವರ ಹೆಸರಿನಲ್ಲಿ ಎಫ್‌ಡಿ ಇಡಲಾಗಿದೆ.

ಇನ್ನು ಚೈತ್ರಾ ನಾಯಕ್‌ ಗೆಳೆಯನೆಂದೇ ಹೇಳಲಾಗುವ ಹಿರಿಯಡ್ಕದ ಶ್ರೀಕಾಂತ್‌ 10 ಲಕ್ಷ ರೂಪಾಯಿಯ ಒಡವೆ ಮಾಡಿಸಿಕೊಂಡಿದ್ದಾನೆ. ಪ್ರಕರಣದ ಎರಡನೇ ಪ್ರಮುಖ ಆರೋಪಿಯಾಗಿರುವ ಗಗನ್‌ ಕಡೂರ್‌ ಬೆಂಗಳೂರಿನಲ್ಲಿ ಒಂದು ಸೈಟ್‌ ತೆಗೆದುಕೊಂಡಿದ್ದಾನಂತೆ.

ಚೈತ್ರಾ ಮತ್ತು ಟೀಮ್‌ನಿಂದ 40 ಲಕ್ಷ ರೂಪಾಯಿ ಬೆಲೆ ಬಾಳುವ 350 ಗ್ರಾಂ ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆಯಲಾಗಿದೆ. ಇದು ಬ್ಯಾಂಕ್‌ನ ಲಾಕರ್‌ನಲ್ಲಿ ಸಿಕ್ಕಿದೆ.

ಶ್ರೀಕಾಂತ್‌ ನಾಯಕ್‌ ಮತ್ತು ಚೈತ್ರಾ ಹಿರಿಯಡ್ಕ ಒಂದು ಜಾಗ ಖರೀದಿಸಿ ಮನೆ ಕಟ್ಟಿಸುತ್ತಿದ್ದಾರೆ. ಅದಕ್ಕೆ ಹೂಡಿಕೆ ಮಾಡಿರುವ ಮೊತ್ತವೇ 60 ಲಕ್ಷ ರೂ. ದಾಟಿದೆ. ಚೈತ್ರಾ ಮತ್ತು ಗಗನ್‌ ಇಬ್ಬರೂ ಒಂದೊಂದು ವಾಹನವನ್ನು ಖರೀದಿ ಮಾಡಿದ್ದಾರೆ.

ಇನ್ನು 80 ಲಕ್ಷ ರೂ. ನಗದು ರೂಪದಲ್ಲೇ ಸಿಕ್ಕಿದೆ. ಬ್ಯಾಂಕ್ ಲಾಕರ್ ಅಲ್ಲಿ 41 ಲಕ್ಷ ರೂ. ಇತ್ತಂತೆ. ಸಿಸಿಬಿ ಪೊಲೀಸರು ಉಡುಪಿಯ ಶ್ರೀರಾಮ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸೀಜ್ ಮಾಡಿದ ಆಭರಣ ಹಾಗೂ ಕರೆನ್ಸಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಮೌನಕ್ಕೆ ಶರಣಾದ ಚೈತ್ರಾ ಕುಂದಾಪುರ

ಈ ನಡುವೆ, ಕಳೆದ ಮೂರು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು ಸೋಮವಾರ ಬಿಡುಗಡೆಗೊಂಡಿರುವ ಚೈತ್ರಾ ಕುಂದಾಪುರಗಳನ್ನು ಸಿಸಿಬಿ ಕಚೇರಿಗೆ ತಂದು ಕೂರಿಸಲಾಗಿದೆ. ಸೋಮವಾರ ಮಧ್ಯಾಹ್ನದ ನಂತರ ಯಾವುದೇ ವಿಚಾರಣೆ ನಡೆದಿಲ್ಲ. ಮಂಗಳವಾರ ಬೆಳಗ್ಗಿನಿಂದ ಗ್ರಿಲ್ಲಿಂಗ್‌ ನಡೆಯಲಿದೆ.

ಇತ್ತ ಸಿಸಿಬಿ ಕಚೇರಿಯಲ್ಲಿರುವ ಚೈತ್ರ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಊಟ ಮುಗಿಸಿರುವ ಚೈತ್ರಾ ಏನು ಕೇಳಿದರೂ ಬೇಡ ಎನ್ನುತ್ತಿದ್ದಾರಂತೆ. ಸಿಬ್ಬಂದಿಗಳು ಆಕೆಯನ್ನು ಕರೆತಂದು ಕೊಣೆಯಲ್ಲಿ ಕೂರಿಸಿದ್ದಾರೆ. ತನಿಖಾಧಿಕಾರಿಯಾಗಿರುವ ರೀನಾ ಸುವರ್ಣ ಅವರು ಕಚೇರಿಗೆ ಬಂದಿದ್ದಾರಾದರೂ ವಿಚಾರಣೆ ಶುರು ಮಾಡಿಲ್ಲ. ಸಿಸಿಬಿ ಕಚೇರಿಯಲ್ಲಿ ಒಬ್ಬಳೆ ಸೈಲೆಂಟ್ ಆಗಿ ಕುಳಿತ ಚೈತ್ರಾ ಕುಂದಾಪುರಗಳನ್ನು ಬಳಿಕ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

Exit mobile version