Site icon Vistara News

Kidnap Case: ಹಿಂದೂ ಹುಡುಗನ ಜೊತೆಗೆ ಮುಸ್ಲಿಂ ಹುಡುಗಿ ನಾಪತ್ತೆ, ಕಿಡ್ನಾಪ್‌ ದೂರು

kidanp case

ಬೆಂಗಳೂರು: ಪ್ರೀತಿಸುವ ನಾಟಕವಾಡಿ ಬಾಲಕಿಯನ್ನು (Minor girl) ಕಿಡ್ನಾಪ್ (Kidnap Case) ಮಾಡಲಾಗಿದೆ ಎಂದು ಆರೋಪಿಸಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಹುಡುಗಿಯ ಪೋಷಕರು ದೂರು ನೀಡಿದ್ದಾರೆ. ಹುಡುಗಿ ಮುಸ್ಲಿಮಳಾಗಿದ್ದು, ಆಕೆಯ ಜೊತೆಗೆ ತೆರಳಿರುವ ಹುಡುಗ ಹಿಂದೂ ಧರ್ಮದವನಾಗಿದ್ದಾನೆ.

ರಜಿಯಾ ಹಾಗು ಅಬ್ದುಲ್ ರಹಿಂ ಎಂಬುವವರ ಹದಿನಾರು ವರ್ಷದ ಪುತ್ರಿಯನ್ನು ಶಂಕರ್‌ ಎಂಬಾತ ಕಿಡ್ನಾಪ್ ಮಾಡಿದ್ದಾನೆ ಎಂದು ದೂರು ಸಲ್ಲಿಸಲಾಗಿದೆ. ಕಳೆದ ಹದಿನಾಲ್ಕು ದಿನಗಳಿಂದ ಬಾಲಕಿ ಸಿಗದೆ ಪೋಷಕರು ಕಂಗಾಲಾಗಿದ್ದಾರೆ. ಪೋಷಕರು ಈಕೆಯನ್ನು ಕಾಲೇಜಿಗೆ ಬಿಟ್ಟು ಬಂದಿದ್ದರು. ನಂತರ ಕಾಲೇಜಿನಿಂದ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಂದ ಹುಡುಕಾಟ ನಡೆದಿದೆ.

ಮೊಬೈಲ್ ಕೂಡ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಗಿಯನ್ನು ಹುಡುಗ ಬೈಕ್‌ನಲ್ಲಿ ಕರೆದೊಯ್ದಿರುವ ಶಂಕೆ ಇದೆ. ಮೊಬೈಲ್ ಟ್ರೇಸ್ ಮಾಡಿ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರದಲ್ಲಿ ಶಂಕರ್ ಬೈಕ್ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಂಧ್ರದ ಕರ್ನೂಲ್ ಬಸ್ಸು ಹತ್ತಿ ತೆರಳಿರುವುದು ಪತ್ತೆಯಾಗಿದೆ. ಹೀಗಾಗಿ ಆಂದ್ರಪ್ರದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿರಬಹುದು ಎಂದು ತರ್ಕಿಸಲಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದವನ ಬಂಧನ

ಚಿಕ್ಕಬಳ್ಳಾಪುರ: ಮನೆ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಕರೆದೊಯ್ದ 17 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ (Physical Abuse ) ಎಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕಿ ಒಬ್ಬಳೇ ಆಟವಾಡುತ್ತಿದ್ದನ್ನು ಗಮನಿಸಿದ 17ರ ಪೋರ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿದ್ದಾನೆ. ತಿಂಡಿ ಆಸೆಗೆ ಆತನೊಂದಿಗೆ ಬಾಲಕಿ ಹೋಗಿದ್ದಾಳೆ. ಆದರೆ ಅಂಗಡಿ ಕರೆದುಕೊಂಡು ಹೋಗದೇ ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ವಾಪಸ್‌ ಬಾಲಕಿಯನ್ನು ಕಳಿಸಿದ್ದಾನೆ.

ಆದರೆ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಗಮನಿಸಿದ ಪೋಷಕರು ವಿಚಾರಿಸಿದ್ದಾರೆ. ಆಗ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಲಕಿ ಪೋಷಕರು ದೂರು ನೀಡಿದ್ದು, ಅತ್ಯಾಚಾರವೆಸಗಿದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Shawarma: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ಶೀಘ್ರದಲ್ಲೇ ರಾಜ್ಯದಲ್ಲಿ ಶವರ್ಮಾ ಬ್ಯಾನ್ ?

Exit mobile version