Site icon Vistara News

Love Dhoka: ಇದೊಂದು “ಮೈನಾʼ ಸಿನಿಮಾ ಕತೆ; ಆದರೆ ಕ್ಲೈಮ್ಯಾಕ್ಸ್‌ ರಿವರ್ಸ್‌! ಪ್ರೇಮಿಗೆ ಪೊಲೀಸರ ತಲಾಷ್‌!

Love Dhoka For disabled Girl in banglore

ಬೆಂಗಳೂರು: ನೀವು ಕನ್ನಡದ “ಮೈನಾʼ ಸಿನಿಮಾ (Myna Cinema Kannada) ನೋಡಿರಬಹುದು. ವಿಶೇಷಚೇತನ ಯುವತಿ (disabled Girl) ಮತ್ತು ಸುಂದರ ಯುವಕನ ನಡುವಿನ ಪ್ರೇಮ ಕತೆಯ ಹೂರಣ ಅದು. ಈ ಚಿತ್ರದ ನಾಯಕಿಗೆ (Love Dhoka) ಎರಡೂ ಕಾಲು ಸ್ವಾಧೀನದಲ್ಲಿರುವುದಿಲ್ಲ. ಆದರೆ ಹೀರೊ ಆಕೆಗೆ ಮನಸೋಲುತ್ತಾನೆ. ಆಕೆಯ ಬೆನ್ನು ಬೀಳುತ್ತಾನೆ. ನಾಯಕಿ ರೈಲಿನಲ್ಲಿ ಪಯಣಿಸುವಾಗ ತನಗೂ ಕಾಲಿಲ್ಲ ಎಂಬಂತೆ ನಟಿಸುತ್ತಾನೆ. ಇದು ವಾಸ್ತವಿಕವಾಗಿ ನಡೆದ ಕತೆಯಾಗಿತ್ತು. ಪೊಲೀಸ್‌ ಅಧಿಕಾರಿಯಾಗಿದ್ದ ಟೈಗರ್‌ ಅಶೋಕ್‌ ಕುಮಾರ್‌ ಅವರು ಈ ಜೋಡಿಗೆ ಬದುಕು ರೂಪಿಸಿಕೊಳ್ಳಲು ನೆರವಾಗಿದ್ದರು. ಈಗ ಇಂಥದ್ದೇ ಒಂದು ಸ್ಟೋರಿ (disabled Girl love cheat) ಬೆಳಕಿಗೆ ಬಂದಿದೆ. ಆದರೆ ಇದರ ಕ್ಲೈಮ್ಯಾಕ್ಸ್‌ ಮಾತ್ರ ರಿವರ್ಸ್‌! ಸಿನಿಮಾದು ಲವ್‌ ಸ್ಟೋರಿ (love story Crime) ಆಗಿದ್ದರೆ, ಇದು ಇದು ಲವ್ ದೋಖಾ ಸ್ಟೋರಿ!

ಅಲ್ಲಿ ಹೀರೊ ವಿಶೇಷ ಚೇತನ (Love Dhoka) ಯುವತಿಯನ್ನು ಹೃದಯಪೂರ್ವಕವಾಗಿ ಪ್ರೀತಿಸಿದ್ದರೆ, ಇಲ್ಲಿಯ ಯುವಕ ವಿಶೇಷಚೇತನ ಯುವತಿಯನ್ನು ಪ್ರೀತಿಸುವ ನಾಟಕವಾಡಿದ್ದಾನೆ. ಹಣ, ಚಿನ್ನ ಪಡೆದು ವಂಚಿಸಿ ದೋಖಾ ಕೊಟ್ಟಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದಾನೆ. ಸುರೇಂದ್ರ ಮೂರ್ತಿ ಎಂಬಾತನೇ ಹೀಗೆ ವಿಶೇಷ ಚೇತನ ಯುವತಿಯನ್ನು ವಂಚಿಸಿದ ಆರೋಪಿ. ಸುಂದರಳಾಗಿದ್ದ ವಿಶೇಷಚೇತನ ಯುವತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಫೋನ್‌ನಲ್ಲೇ ದಿನ ರಾತ್ರಿ ಮಾತನಾಡಿ ಮರಳು ಮಾಡಿದ್ದ. ಇವರಿಬ್ಬರ ನಡುವೆ ಪರಿಚಯ ನಿಧಾನಕ್ಕೆ ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಬ್ಯುಸಿನೆಸ್ ಮಾಡಲು ಹಣ ಬೇಕೆಂದು ಕತೆ ಕಟ್ಟಿದ್ದ ಸುರೇಂದ್ರ ಮೂರ್ತಿ. ಈತನ ಮಾತು ನಂಬಿದ್ದ ಯುವತಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದಳು. ಇನ್ನೂ ಹಣ ಬೇಕು ಎಂದಾಗ ಸಾಲ ಮಾಡಿ ಹಣ ಹೊಂದಿಸಿ ಕೊಟ್ಟಿದ್ದಳು. ಹೀಗೆ ಮೋಸಗಾರ ಪ್ರೇಮಿಯು ಯುವತಿಯಿಂದ ಲಕ್ಷಾಂತರ ರೂ. ಪೀಕಿದ್ದ. ಜತೆಗೆ ಲೈಂಗಿಕವಾಗಿಯೂ ಬಳಸಿಕೊಂಡಿದ್ದ. ಆಕೆ ಇದೆಲ್ಲ ಸರಿಯಲ್ಲ ಎಂದಾಗ, ಹೇಗೂ ಮದುವೆಯಾಗುತ್ತೇವಲ್ಲ ಎಂದು ಯಾಮಾರಿಸಿದ್ದ. ಆದರೆ ಲಕ್ಷಾಂತರ ರೂ. ಪಡೆದು, ಲೈಂಗಿಕವಾಗಿ ಬಳಸಿಕೊಂಡ ಬಳಿಕ ನಿಧಾನವಾಗಿ ಜಾರಿಕೊಳ್ಳಲು ಯತ್ನಿಸಿದ. ಮದುವೆಯಾಗು ಎಂದು ಯುವತಿ ಒತ್ತಾಯಿಸತೊಡಗಿದಾಗ ದಿನಕ್ಕೊಂದು ಚಂದಮಾಮನ ಕತೆ ಹೇಳಿ ತಪ್ಪಿಸಿಕೊಳ್ಳತೊಡಗಿದ.

ಇದನ್ನೂ ಓದಿ: Love Sex Dhoka: ಎಷ್ಟು ಮೋಸ ಮಾಡಿದ್ರೂ ಅವಳೇ ಬೇಕು! ರಾಯಚೂರಿನಲ್ಲೊಂದು ವಿಚಿತ್ರ ಲವ್‌ ಕಹಾನಿ

ಕೊನೆಗೆ ಪೋನ್‌ ಮಾಡಿದರೂ ರಿಸೀವ್‌ ಮಾಡದೆ ಪರಾರಿಯಾದ. ಇದರಿಂದ ಆಘಾತಗೊಂಡ ವಿಶೇಷ ಚೇತನ ಯುವತಿ ಈಗ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಕೊಡಿಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೋಸ, ನಂಬಿಕೆಗೆ ದ್ರೋಹ, ಹಣ ಪಡೆದು ವಂಚನೆ, ಅತ್ಯಾಚಾರ ಇತ್ಯಾದಿ ಪ್ರಕರಣಗಳನ್ನು ಸುರೇಂದ್ರಮೂರ್ತಿ ವಿರುದ್ಧ ದಾಖಲಿಸಲಾಗಿದೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆತ ಒಟ್ಟು 56 ಲಕ್ಷ ರೂ. ಟೋಪಿ ಹಾಕಿದ್ದಾನೆ.

ಇದನ್ನೂ ಓದಿ: Assault Case: ವೃದ್ಧ ದಂಪತಿ ಮೇಲೆ ಕ್ರೈಸ್ತ ಧರ್ಮಗುರು ಹಲ್ಲೆ; ಇಲ್ಲಿದೆ ದೌರ್ಜನ್ಯದ ವಿಡಿಯೊ

ದೂರಿನಲ್ಲಿ ಏನಿದೆ?

ನಾನು ಮತ್ತು ತಾಯಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದೇವೆ. 2018ರಲ್ಲಿ ಸುರೇಂದ್ರಮೂರ್ತಿ ಎಂಬಾತನ ಪರಿಚಯವಾಗಿತ್ತು. ಬಳಿಕ ಆತ ಪ್ರೀತಿ ಮಾಡುವುದಾಗಿ ಹೇಳಿ ನನ್ನನ್ನು ಒಪ್ಪಿಸಿದ. ಆದಷ್ಟು ಬೇಗ ಮದುವೆ ಮಾಡಿಕೊಳ್ಳುತ್ತೇನೆ ಎಂದ. ಕೆಲ ದಿನ ಕಳೆದ ಬಳಿಕ, ನಾನೊಂದು ಕಂಪನಿ ಆರಂಭಿಸಬೇಕು. ಆದರೆ ಸಾಕಷ್ಟು ಹಣ ಇಲ್ಲ. ನೀನು ಸಾಧ್ಯವಾದಷ್ಟು ಹಣ ಸಹಾಯ ಮಾಡು. ಕಂಪನಿ ಆರಂಭವಾದ ಬಳಿಕ ವಾಪಸ್‌ ಕೊಡುತ್ತೇನೆ ಎಂದು ನಂಬಿಸಿದ. ಹಣ ಇಲ್ಲ ಎಂದರೂ ಕೇಳಲಿಲ್ಲ. ಸಾಲ ಮಾಡಿಯಾದರೂ ಕೊಡು. ಇದು ನಮ್ಮ ಭವಿಷ್ಯದ ಪ್ರಶ್ನೆ ಎಂದು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿದ. ನಾನು ನನ್ನ ಮುಂದಿನ ಭವಿಷ್ಯಕ್ಕಾಗಿ ಕೂಡಿಟ್ಟಿದ್ದ ಹಣ, ಬಂಗಾರವನ್ನೆಲ್ಲ ಆತನಿಗೆ ಕೊಟ್ಟೆ. ಚಿನ್ನ ಅಡವಿಟ್ಟು ಹಣ ನೀಡಿದೆ. ಸಾಲಗಾರರು ನನ್ನನ್ನು ಕೊಲ್ಲುತ್ತಾರೆ, ಮತ್ತಷ್ಟು ಹಣ ಒಟ್ಟು ಮಾಡಿ ಕೊಡು ಎಂದ. ನಾನು ಸಾಲ ಮಾಡಿ ಮತ್ತಷ್ಟು ಹಣ ಕೊಟ್ಟೆ. ಮದುವೆ ಆಗು ಎಂದಾಗಲೆಲ್ಲ ಒಂದಲ್ಲ ಒಂದು ನೆಪ ಹೇಳಿ ತಪ್ಪಿಸಿಕೊಳ್ಳತೊಡಗಿದ. ಕೊನೆಗೆ ನನ್ನನ್ನೇ ಕೊಲ್ಲುವ ಬೆದರಿಕೆ ಹಾಕತೊಡಗಿದ. ಆತನ ಮನೆಗೆ ಹೋಗಿ ಕೇಳಿದರೆ ಆತನ ಅಮ್ಮ, ಒಳ್ಳೆಯ ದಿನ ಬರಲಿ ಎಂದು ಸಾಗ ಹಾಕತೊಡಗಿದರು. ಆತನ ಅಪ್ಪ, ಕಾಲಿಲ್ಲದವಳನ್ನು ನಾವು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅವಮಾನಿಸಿದರು. ಕೊನೆಗೂ 2024ರ ಜನವರಿ 31ರಂದು ಮದುವೆ ಗೊತ್ತು ಮಾಡಿದರು. ಆದರೆ ಆ ದಿನ ಸಮೀಪಿಸುತ್ತಿದ್ದಂತೆ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡ. ನಾನು ಸಂಜಯ ನಗರ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದೆ. ಅಲ್ಲಿಯ ಇನ್ಸ್‌ಪೆಕ್ಟರ್‌ ಎದುರು ಆತ ಬಂದು, ಕಾಲಾವಕಾಶ ಬೇಕೆಂದು ಮನವಿ ಮಾಡಿಕೊಂಡು ಹೋದವನು ಈವರೆಗೂ ಪತ್ತೆ ಇಲ್ಲ. ಹಾಗಾಗಿ ಆರೋಪಿ ಸುರೇಂದ್ರಮೂರ್ತಿ, ಆತನ ಅಪ್ಪ ಪರಮೇಶರಪ್ಪ ಮತ್ತು ತಾಯಿ ಮೀನಾಕ್ಷಮ್ಮ ಅವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.

Exit mobile version