Site icon Vistara News

Love failure: ಪ್ರೀತಿಸಿ ಕೈಬಿಟ್ಟಳು; ನೊಂದು ಬೆಂಕಿ ಹಚ್ಚಿಕೊಂಡ ಪ್ರೇಮಿ!

Rakesh Youth commits suicide by pouring petrol on himself

ಬೆಂಗಳೂರು: ಪ್ರೀತಿಸಿದ ಹುಡುಗಿ ಏಕಾಏಕಿ ಪ್ರೀತಿಯನ್ನು ನಿರಾಕರಿಸಿ (Love failure) ಬಿಟ್ಟು ಹೋಗಿದ್ದಕ್ಕೆ ಮನನೊಂದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ರಾಕೇಶ್ ಮೃತ ದುರ್ದೈವಿ. ರಾಕೇಶ್‌ ಐದಾರು ವರ್ಷದಿಂದ‌ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಇಬ್ಬರು ಪಾರ್ಕ್‌, ಸಿನಿಮಾ ಎಂದು ಊರು ಊರು ತಿರುಗಿದ್ದರು. ಆದರೆ ಇತ್ತೀಚೆಗೆ ರಾಕೇಶ್‌ನನ್ನು ಯುವತಿ ಅವಾಯ್ಡ್‌ ಮಾಡಲು ಶುರು ಮಾಡಿದ್ದಳು.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು ಏಕಾಏಕಿ ದೂರಾಗಿದ್ದಳು. ಮಸೇಜ್‌, ಫೋನ್‌ ಕಾಲ್‌ಗೂ ರೆಸ್ಪಾನ್ಸ್‌ ಮಾಡುತ್ತಿರಲಿಲ್ಲ. ಈ ನಡುವೆ ಬೇರೆ ಯುವಕನ ಜತೆ ಮದುವೆಗೆ ಸಿದ್ಧತೆಯನ್ನು ನಡೆಸಿದ್ದಳು. ಈ ವಿಷಯ ತಿಳಿದು ನಿನ್ನೆ ಬುಧವಾರ ರಾಕೇಶ್ ನೇರ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ವೇಳೆ ರಾಕೇಶ್ ಹಾಗೂ ಯುವತಿ ನಡುವೆ ಗಲಾಟೆ ಆಗಿತ್ತು.

ಪ್ರೀತಿಸಿದವಳು ಮೋಸ ಮಾಡಿಬಿಟ್ಟಳೆಂದು ಮನನೊಂದಿದ್ದ ರಾಕೇಶ್‌, ಮನೆಗೆ ಬಂದವನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಗಾಯಾಳು ರಾಕೇಶ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬೆಂಕಿ ತೀವ್ರತೆಗೆ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿಯೇ ಮೃತಪಟ್ಟಿದ್ದಾನೆ. ರಾಕೇಶ್ ಕುಟುಂಬಸ್ಥರು ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಂದದ ಹುಡುಗಿ ಅಂತ ಆಸೆಪಟ್ಟು ರೂಮಿಗೆ ಹೋದರೆ ಅಲ್ಲಿ ಕಂಡಿದ್ದೇ ಬೇರೆ!

ಬೆಂಗಳೂರು: ಅವರು ಸೂರತ್‌ ಮೂಲದ ಒಬ್ಬ ನಿವೃತ್ತ ಅಧಿಕಾರಿ (Retired officer). ಗಜೆಟೆಡ್‌ ಹುದ್ದೆಯಲ್ಲಿದ್ದವರು. ಬೆಂಗಳೂರಿಗೆ ಯಾವುದೋ ಟ್ರಿಪ್‌ ಮೇಲೆ (Officer came on trip to Bangalore) ಬಂದಿದ್ದರು. ಊರು ಬಿಟ್ಟು ಬೆಂಗಳೂರಿಗೆ ಬಂದ ಅವರು ಸ್ವಲ್ಪ ಮೈ ಚಳಿ ಬಿಟ್ಟು ಸುತ್ತಾಡಿದ್ದರು. ಆಗ ಅವರಿಗೆ ಚರ್ಚ್‌ ಸ್ಟ್ರೀಟ್‌ನಲ್ಲಿ (Church Street) ಒಬ್ಳು ಸುಂದರವಾದ ಹುಡುಗಿ ಸಿಗ್ತಾಳೆ (A Beautiful Girl). ಅದೂ ಇದೂ ಮಾತಾಡೋ ಹೊತ್ತಿಗೆ 61ರ ವಯಸ್ಸಿನಲ್ಲಿ 16ರ ಕಾಮನೆ ಕೆರಳಿಬಿಡುತ್ತದೆ ಈ ರಿಟೈರ್ಡ್‌ ಆಫೀಸರ್‌ಗೆ. ಚಂದದ ಹುಡುಗಿ, ಬೆಂಗಳೂರಿನ ಹಿತವಾದ ವಾತಾವರಣ, ಚರ್ಚ್‌ ಸ್ಟ್ರೀಟ್‌ನ ಹಿತವಾದ ಜಾಗ. ಇದಕ್ಕಿಂತ ಬೇರೆ ಬೇಕಾ ಎಂದು ಮಾತನಾಡುತ್ತಲೇ ಹುಡುಗಿಯನ್ನು ಸೆಟ್‌ ಮಾಡಿಕೊಂಡರು. ಆಕೆಯೋ ಮೊದಲೇ ಪಳಗಿದ ಹುಡುಗಿ. ಇವರು ನಾನ್‌ ರೆಡಿ ಎಂದ ಕೂಡಲೇ ಆಟೋ ಅಂತ ಕೂಗಿ ಕರೆದಳು. ಅವರಿಬ್ಬರು ಹೋಗಿದ್ದು ಒಂದು ಮನೆಗೆ!

ಅದುಮಿಟ್ಟಿದ್ದ ಆಕಾಂಕ್ಷೆಗಳನ್ನು ಬೆಂಗಳೂರಿನಲ್ಲಿ ಪೂರ್ಣವಾಗಿ ತೆರೆದಿಡುವ ಉತ್ಸಾಹದಲ್ಲಿ ಹೋಗಿದ್ದ ನಿವೃತ್ತ ಅಧಿಕಾರಿಗೆ ಅಲ್ಲಿ ಒಬ್ಬಳಲ್ಲ, ಇಬ್ಬರು ಸುಂದರಿಯರು ಸಿಕ್ಕರು. ಒಂದಕ್ಕೆ ಒಂದು ಫ್ರೀ ಎಂದು ಖುಷಿಯಲ್ಲಿದ್ದ ಅವರ ಉತ್ಸಾಹ ಕೆಲವೇ ಕ್ಷಣಗಳಲ್ಲಿ ಇಳಿದುಹೋಯಿತು. ಹಾಗಿದ್ದರೆ ಅಲ್ಲಿ ನಡೆದಿದ್ದೇನು? (Fraud Case) ಇದು ಯಾರೋ ಹೇಳಿದ ಕಥೆಯಲ್ಲ, ಸ್ವತಃ ಆ ವ್ಯಕ್ತಿಯೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ಗೆ ಬಂದು ವಿವರಿಸಿದ ರೋಚಕ ಕಹಾನಿ.

ನಾನು ಹಿಮವತ್‌ (ಹೆಸರು ಬದಲಿಸಿದೆ) ಅಂತ. ಸೂರತ್‌ ನನ್ನ ಊರು, ನಿವೃತ್ತ ಅಧಿಕಾರಿ. ಬೆಂಗಳೂರಿಗೆ ಒಂದು ಕೆಲಸದಲ್ಲಿ ಬಂದಿದ್ದೆ. ಇಲ್ಲೇ ಒಂದು ಹೋಟೆಲ್‌ನಲ್ಲಿ ರೂಮ್‌ ಮಾಡಿದ್ದೆ. ನನಗೆ ಒಂದು ಬ್ಯಾಗ್‌ ಬೇಕಿತ್ತು. ಹಾಗಾಗಿ ನಾನು ನವೆಂಬರ್‌ 29ರಂದು ಸಂಜೆ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಅಲ್ಲಿ ಮಲ್ಟಿನ್ಯಾಷನಲ್‌ ಕಾಫಿ ಚೈನ್‌ನ ಒಂದು ಔಟ್‌ ಲೆಟ್‌ ಎದುರು ನಿಂತಿದ್ದಾಗ ಒಬ್ಬ ಹುಡುಗಿ ಪರಿಚಯ ಆದ್ಳು. ನಾವಿಬ್ಬರೂ ಮಾತನಾಡಿಕೊಂಡೆವು.

ನಾನೂ ಸೂರತ್‌ ನಿಂದ ಬಂದಿದ್ದೆ. ಬೆಂಗಳೂರಿನ ಹುಡುಗಿಯರು ಹೇಗೆ ಅಂತ ನೋಡುವ ಆಸೆ ಆಯಿತು. ಇಬ್ಬರೂ ಒಪ್ಪಿಕೊಂಡು ಒಂದು ಸುತ್ತಿನ ಸುಖ ಪಡೆಯುವುದು ಎಂದು ತೀರ್ಮಾನ ಮಾಡಿದೆವು. ಇದು ಸೆಕ್ಸ್‌ ಫಾರ್‌ ಮನಿ ಡೀಲ್‌. ಅಷ್ಟೆಲ್ಲ ಆಗುವಾಗ ರಾತ್ರಿ 9.35 ಆಗಿತ್ತು. ಆಕೆ ಒಂದು ಆಟೊವನ್ನು ಕರೆದು ನನ್ನನ್ನು ಇಂದಿರಾನಗರದ ಒಂದು ಕೋಣೆಗೆ ಕರೆದುಕೊಂಡು ಹೋದಳು. ಅಲ್ಲಿ ಹೋಗಿ ನೋಡಿದರೆ ಅಲ್ಲಿ ಇನ್ನೊಬ್ಬಳಿದ್ದಳು. ನಾವು ಇಬ್ಬರೂ ಸೇವೆಗೆ ಸಿದ್ಧ ಎಂದು ಅವರು ಹೇಳಿದರು. ನಂಗೂ ಖುಷಿಯಾಯಿತು. ಕೆಲವು ನಿಮಿಷ ಮಾತನಾಡಿ ನಾನು ನನ್ನ ಖುಷಿಯ ಕ್ಷಣಗಳನ್ನು ಪಡೆಯುವ ಉದ್ದೇಶದಿಂದ ಸಿದ್ಧನಾಗುತ್ತಿದ್ದರೆ, ಅವರಿಬ್ಬರೂ ರೆಡಿ ಆದರು. ಆದರೆ, ನಾನು ಅವರಿಬ್ಬರನ್ನೂ ನೋಡಿ ಬೆಚ್ಚಿ ಬಿದ್ದೆ. ಯಾಕೆಂದರೆ, ಅವರಿಬ್ಬರು ಹುಡುಗಿಯರಾಗಿರಲೇ ಇಲ್ಲ. ಇಬ್ಬರೂ ತೃತೀಯ ಲಿಂಗಿಗಳಾಗಿದ್ದರು.

ಯಾಕೆ ಹೀಗೆ ಮೋಸ ಮಾಡಿದೆ ಎಂದು ನಾನು ಜಗಳ ಮಾಡಿದೆ. ಆಗ ನನ್ನನ್ನು ಕರೆದುಕೊಂಡು ಬಂದವಳು, ನಿನಗೆ ವಯಸ್ಸಾಗಿದೆ, ಇದರಲ್ಲೇ ಅಜಸ್ಟ್‌ ಮಾಡಿಕೋ ಎಂದು ಹೇಳಿದಳು. ನಾನು ಆಕೆ ಮೋಸ ಮಾಡಿದ್ದಕ್ಕೆ ಬೈದೆ. ಆಗ ಅವರಿಬ್ಬರೂ ಸೇರಿ ನನ್ನ ಮೇಲೆ ಮುಗಿಬಿದ್ದರು. ನನ್ನ ಕೈಯಲ್ಲಿದ್ದ 10,00೦ ರೂ. ಭಾರತೀಯ ಕರೆನ್ಸಿ ಮತ್ತು 9500 ರೂ. ಮೌಲ್ಯದ 4000 ಥಾಯ್‌ ಬಹ್ತ್‌ ಕಿತ್ತುಕೊಂಡರು. ನನಗೆ ಬೆದರಿಕೆ ಹಾಕಿ ನನ್ನ ಮೊಬೈಲನ್ನು ಕಿತ್ತುಕೊಂಡರು. ನನ್ನ ಡಿಜಿಟಲ್‌ ಪೇಮೆಂಟ್‌ ಆಪ್‌ನ ಪಾಸ್‌ ವರ್ಡ್‌ ಕೂಡಾ ಬೆದರಿಸಿ ಪಡೆದುಕೊಂಡರು. ಅದರಿಂದ 30,000 ರೂ.ವನ್ನು ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡರು.

ಯಾರಿಗಾದರೂ ಈ ವಿಷಯ ಹೇಳಿದರೆ ಹುಷಾರ್‌ ಎಂದು ಹೆದರಿಸಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ನಾನು ಸಿಕ್ಕಿದ ರಿಕ್ಷಾ ಹಿಡಿದುಕೊಂಡು ನನ್ನ ರೂಮಿಗೆ ಬಂದೆ. ಮಾರನೇ ದಿನ ಮತ್ತೆ ಅದೇ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಆಕೆ ಅಲ್ಲೇ ಬರಬಹುದಾ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ಆಕೆ ಬಂದಿರಲಿಲ್ಲ. ನಂತರ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ಗೆ ಹೋಗಿ ದೂರು ನೀಡಿದೆ. ಬೆಂಗಳೂರಿನಲ್ಲಿ ಪುರುಷರನ್ನು ಈ ರೀತಿಯಲ್ಲಿಯೂ ಯಾಮಾರಿಸುತ್ತಾರೆ ಎಂದು ಹೇಳಿದೆ.

ಇದಿಷ್ಟು ಹಿಮವತ್‌ ಅಲ್ಲಿ ನಡೆದುದನ್ನು ಹೇಳಿದ್ದು. ಈಗ ದೂರು ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಪೊಲೀಸರು ಏನು ಹೇಳುತ್ತಾರೆ ಕೇಳಿ..

ಆ ನಿವೃತ್ತ ಅಧಿಕಾರಿ ಆ ಕೋಣೆಗೆ ಹೋಗಿದ್ದು ನಿಜ ಇರಬಹುದು. ಆದರೆ, ಅವರು ಹೆಣ್ಣು ಎಂದುಕೊಂಡೇ ಹೋಗಿದ್ದರಾ ಅಥವಾ ತೃತೀಯ ಲಿಂಗಿ ಎಂದು ಗೊತ್ತಿದ್ದೇ ಹೋಗಿದ್ದಾರಾ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಅವರು ನೀಡಿದ ಗುರುತಿನ ಆಧಾರದಲ್ಲಿ ಪತ್ತೆ ಹಚ್ಚಿ ವಿಚಾರಣೆ ನಡೆಸುತ್ತೇವೆ. ಬಳಿಕ ವಿಷಯ ಸ್ಪಷ್ಟವಾಗಲಿದೆ.

ಇಷ್ಟು ಹೇಳಿದ ಮೇಲೆ ಒಂದು ವಿಷಯ ಹೇಳಲೇಬೇಕು: ನೀವು ಅಪರಿಚಿತ ಹೆಣ್ಮಕ್ಕಳ ಜತೆ ವ್ಯವಹರಿಸುವಾಗ ಎಚ್ಚರವಾಗಿರಿ. ಮೋಸ ಹೋಗಬೇಡಿ. ಇದು ಪೊಲೀಸರ ಸಲಹೆಯೂ ಹೌದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version