Site icon Vistara News

ಆಸ್ತಿಗಾಗಿ ತಂದೆ, ತಾಯಿ, ಸಹೋದರನನ್ನೇ ಕೊಂದ ದುಷ್ಟ; ಎಂಥಾ ಕಲಿಗಾಲ ಬಂತು ನೋಡಿ!

Punjab Triple Murder

Man Guns Down Mother, Father And Brother In Punjab Over A Property Dispute

ಚಂಡೀಗಢ: ‘ಹಣಕ್ಕಾಗಿ ಹೆಣ ಕೂಡ ಬಾಯಿ ಬಿಡುತ್ತದೆ’ ಎಂಬ ಮಾತಿದೆ. ಕಲಿಗಾಲದಲ್ಲಿ ‘ಹಣಕ್ಕಾಗಿ ಹೆಣ ಬೀಳಿಸುವರುʼ ಕೂಡ ಇದ್ದಾರೆ. ಆದರೆ, ಹಣಕ್ಕಾಗಿ ತಂದೆ-ತಾಯಿಯನ್ನೇ ಕೊಂದು ಹಾಕುವ, ಅಣ್ಣ-ತಮ್ಮಂದಿರ ಹೆಣವನ್ನೇ ಬೀಳಿಸುವ ಪ್ರಕರಣಗಳು ಸಮಾಜವನ್ನು ಮತ್ತಷ್ಟು ಅಪಾಯದ ಅಂಚಿಗೆ ತಳ್ಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಪಂಜಾಬ್‌ನ (Punjab) ಜಲಂಧರ್‌ನಲ್ಲಿ (Jalandhar) ಆಸ್ತಿಗಾಗಿ ಕ್ರೂರಿಯೊಬ್ಬ ತಂದೆ, ತಾಯಿ ಹಾಗೂ ಸಹೋದರನನ್ನೇ ಕೊಂದುಹಾಕಿದ್ದಾನೆ.

ಜಲಂಧರ್‌ನ ಫೇಸ್‌ 3ನಲ್ಲಿರುವ ಟವರ್‌ ಎನ್‌ಕ್ಲೇವ್‌ನ ನಿವಾಸದಲ್ಲಿ ದುರುಳನು ಕೃತ್ಯ ಎಸಗಿದ್ದಾನೆ. ಮೃತರನ್ನು ಜಗದೀಪ್‌ ಸಿಂಗ್‌, ಅವರ ಪತ್ನಿ ಅಮೃತ್‌ಪಾಲ್‌ ಕೌರ್‌ ಹಾಗೂ ಪುತ್ರ ಗಗನ್‌ದೀಪ್‌ ಸಿಂಗ್‌ ಎಂಬುದಾಗಿ ಗುರುತಿಸಲಾಗಿದೆ. ಪರವಾನಗಿ ಇರುವ ಬಂದೂಕಿನಿಂದ ಮೂವರ ಮೇಲೂ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

“ತಂದೆ, ತಾಯಿ ಹಾಗೂ ಸಹೋದರನ ಮೇಲೆ ಗುಂಡು ಹಾರಿಸಿದ ಆರೋಪಿಯನ್ನು ಹರ್‌ಪ್ರೀತ್‌ ಸಿಂಗ್‌ ಎಂಬುದಾಗಿ ಗುರುತಿಸಲಾಗಿದೆ. ಕುಟುಂಬದಲ್ಲಿ ಆಸ್ತಿಗಾಗಿ ವಿವಾದ ಉಂಟಾಗಿರಬಹುದು ಎಂಬ ಶಂಕೆ ಇದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ” ಎಂದು ಜಲಂಧರ್‌ ದೆಹಾತ್‌ ಡಿಸಿಪಿ ಬಲಬೀರ್‌ ಸಿಂಗ್‌ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Murder Case: ಹಸುಳೆಯನ್ನೇ ಕೊಲೆಮಾಡಿದ ತಂದೆ, ಎಂಥಾ ಕಲ್ಲು ಹೃದಯ!

ತಂದೆ, ತಾಯಿ ಹಾಗೂ ಸಹೋದರನನ್ನೇ ಕೊಲೆ ಮಾಡಿರುವುದರಿಂದ ಹಿಂದೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ, ಪೊಲೀಸ್‌ ಮೂಲಗಳ ಪ್ರಕಾರ, ಕಳೆದ ಕೆಲ ತಿಂಗಳುಗಳಿಂದ ಆಸ್ತಿಗಾಗಿ ಕುಟುಂಬದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದೇ ಕಾರಣಕ್ಕಾಗಿ ದುಷ್ಕರ್ಮಿಯು, ಮೂವರನ್ನೂ ಗುಂಡು ಹಾರಿಸಿ ಕೊಂದಿದ್ದಾನೆ ಎನ್ನಲಾಗಿದೆ. ಮೂವರನ್ನೂ ಹತ್ಯೆ ಮಾಡಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

Exit mobile version