Site icon Vistara News

Murder Case: ಸ್ನೇಹಿತನ‌ ಜತೆ ಹೋದವನು ತೋಟದ ಮನೆಯಲ್ಲಿ ಶವವಾಗಿ ಪತ್ತೆ

belagavi savadatthi murder case

ಬೆಳಗಾವಿ: ಸ್ನೇಹಿತನ‌ ಜತೆ ಹೊರ ಹೋದ ವ್ಯಕ್ತಿ ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾದ (body found) ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಕೋಲಕಾರ (25) ಕೊಲೆಯಾದ (Murder Case) ಯುವಕ.

ಮೂರು ದಿನದ ಹಿಂದೆ ನಾಪತ್ತೆಯಾಗುವ ಮುನ್ನ ಮಂಜುನಾಥ ಸ್ನೇಹಿತನ‌ ಜತೆ ಹೊರ ಹೋಗಿದ್ದ. ಜೊತೆಗೆ ಎಣ್ಣೆ ಪಾರ್ಟಿ ಮಾಡಿದ ಸ್ನೇಹಿತನೇ ಈ ವ್ಯಕ್ತಿಗೆ ಚಟ್ಟ ಕಟ್ಟಿ ಪರಾರಿಯಾಗಿದ್ದಾನೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಕೊಲೆಯಾಗುವ ಮುನ್ನ ಪ್ರದೀಪ ಎಂಬ ಯುವಕನ ಜತೆ ಕೊಲೆಯಾದ ಮಂಜುನಾಥ ತಿರುಗಾಡುತ್ತಿದ್ದ. ಇದೇ ತಿಂಗಳ 16ರಂದು ಸಂಜೆ ಹೊಸೂರು ಗ್ರಾಮದ ತೋಟದ ಮನೆಯಲ್ಲಿ ಮಂಜುನಾಥನ ಕೊಲೆಯಾಗಿದೆ. ಕೊಲೆಯಾದ ದಿನದಿಂದ ಆತನ ಸ್ನೇಹಿತ ಪ್ರದೀಪ ಕಾಣಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಣ್ಮರೆಯಾಗಿರುವ ಪ್ರದೀಪಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ

ವಿಜಯಪುರ: ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ಘಟನೆ ನಡೆದಿದೆ. ರೇಶ್ಮಾ ರಾಠೋಡ (25) ಎಂಬಾಕೆಯನ್ನು ಗುದ್ದಲಿಯಿಂದ ಹೊಡೆದು ಅಶೋಕ ರಾಠೋಡ (33) ಕೊಲೆ ಮಾಡಿದ್ದಾನೆ.

ರೇಶ್ಮಾ ಹಾಗೂ ಅಶೋಕ್‌ ಮದುವೆಯಾಗಿ 11 ವರ್ಷಗಳೇ ಕಳೆದಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದರು. ಆದರೆ ಕೆಲ ತಿಂಗಳಿನಿಂದ ಅಶೋಕ್‌, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯವನ್ನು ಹೊಂದಿದ್ದ. ಆಗಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.

ಪತ್ನಿ ರೇಶ್ಮಾಳ ಶೀಲ ಶಂಕಿಸುತ್ತಿದ್ದ ಅಶೋಕ, ಕುಡಿದು ಬಂದು ನಿತ್ಯ ಕಿರುಕುಳ ಕೊಡುತ್ತಿದ್ದ. ಈತನ ಕಾಟ ತಾಳಲಾರದೆ ಹುಬನೂರಿನಲ್ಲಿದ್ದ ತನ್ನ ತವರು ಮನೆಗೆ ರೇಶ್ಮಾ ಹೋಗಿದ್ದಳು. ಅಲ್ಲಿಗೆ ಹೋದ ಅಶೋಕ ಮತ್ತೆ ಕ್ಯಾತೆ ತೆಗೆದಿದ್ದಾನೆ. ಮಲಗಿದ್ದವಳ ಮೇಲೆ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಶೋಕನ ಸಂಶಯಾ ಸ್ವಭಾವಕ್ಕೆ ಪತ್ನಿ ಮೃತಪಟ್ಟರೆ, ಮಕ್ಕಳು ತಂದೆ-ತಾಯಿ ಇಬ್ಬರ ಆಸರೆ ಇಲ್ಲದೇ ಅನಾಥರಾಗಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಗೆಳೆಯರು

ಕುಡಿದ ಮತ್ತಿನಲ್ಲಿ ಸ್ನೇಹಿತರ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ನಿಂಗಪ್ಪಾ ಬುಳ್ಳಾರ (25) ಮೃತ ದುರ್ದೈವಿ.

ಹುಕ್ಕೇರಿ ತಾಲೂಕಿನ ರುಸ್ತಂಪೂರ ಗ್ರಾಮದ ನಿವಾಸಿಯಾಗಿರುವ ನಿಂಗಪ್ಪಾ ಬುಳ್ಳಾರನನ್ನು, ಆತನ ಸ್ನೇಹಿತರೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ಕಟ್ಟಡ ಕಾಮಗಾರಿಗೆ ಬಂದಿದ್ದರು. ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದೆ. ನೋಡನೋಡುತ್ತಲೇ ಗೆಳಯನ ಕೊಂದು ಪರಾರಿ ಆಗಿದ್ದಾರೆ. ಕೊಲೆ ಮಾಡಿ ಇಬ್ಬರು ಸ್ನೇಹಿತರು ಪರಾರಿ ಆಗಿದ್ದಾರೆ. ಚಿಕ್ಕೋಡಿ ಪೊಲೀಸರು ಆರೋಪಗಳ ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ: Murder Case : ಕಡೂರು ಕೊಲೆ ಕೇಸ್‌; ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತರು

Exit mobile version