Site icon Vistara News

Murder Case: ಉಜ್ಬೆಕಿಸ್ತಾನ್ ಮಹಿಳೆ ಬೆಂಗಳೂರಿನಲ್ಲಿ ಹತ್ಯೆ; ದೊಡ್ಡ ಬ್ಯಾಗೇ ಕೊಲೆಗೆ ಕಾರಣ!

zarina uzbekistan woman murder case

ಬೆಂಗಳೂರು: ಉಜ್ಬೆಕಿಸ್ತಾನದಿಂದ (Uzbekistan) ಪ್ರವಾಸಿ ವೀಸಾದಲ್ಲಿ ದೇಶಕ್ಕೆ ಬಂದಿದ್ದ ಮಹಿಳೆಯೊಬ್ಬರನ್ನು ರಾಜಧಾನಿಯ ಲಾಡ್ಜ್‌ ಒಂದರಲ್ಲಿ ಕೊಲೆ (Murder Case) ಮಾಡಲಾಗಿದೆ. ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಮೃತ ಮಹಿಳೆಯನ್ನು ಜರೀನಾ ಉತ್ಕಿರೋವ್ನಾ (Zarina Utkirovna, 27 ವರ್ಷ) ಎಂದು ಗುರುತಿಸಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬಂದ ಇವರು ಶೇಷಾದ್ರಿಪುರಂ ಬಳಿಯ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಬುಧವಾರ ಇವರನ್ನು ಕಾಣದೆ ಹೋಟೆಲ್‌ ಸಿಬ್ಬಂದಿ ಇವರು ಉಳಿದುಕೊಂಡಿದ್ದ ರೂಮಿನ ಬಾಗಿಲನ್ನು ಡೂಪ್ಲಿಕೇಟ್‌ ಕೀ ಬಳಸಿ ತೆಗೆದಾಗ ಜರೀನಾ ಮೃತಪಟ್ಟಿದ್ದು ಗೊತ್ತಾಗಿದೆ.

ಹೋಟೆಲ್‌ನಲ್ಲಿ ಹೌಸ್ ಕೀಪಿಂಗ್ ಮಾಡುತ್ತಿದ್ದ ಅಸ್ಸಾಂ ಮೂಲದ ರಾಬರ್ಟ್ ಹಾಗು ಅಮ್ರಿತ್, ಈ ಮಹಿಳೆಯ ಕೊಲೆ ಮಾಡಿದ್ದಾರೆ. ಬುಧವಾರ ರಾತ್ರಿಯ ಬಳಿಕ ಇವರು ನಾಪತ್ತೆಯಾಗಿದ್ದರು. ಆರೋಪಿಗಳ ಬೆನ್ನು ಬಿದ್ದ ಪೊಲೀಸರು, ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನೂ ಹೆಡೆಮುರಿ ಕಟ್ಟಿ ತಂದಿದ್ದಾರೆ.

ಮಹಿಳೆ ಬಳಿ ಇದ್ದ ಹಣ ಹಾಗೂ ಮೊಬೈಲ್‌ಗಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈಕೆ ದೊಡ್ಡ ಬ್ಯಾಗ್ ತಂದಿದ್ದ ಹಿನ್ನೆಲೆಯಲ್ಲಿ ಇದರಲ್ಲಿ ತುಂಬಾ ದುಡ್ಡಿರಬಹುದು ಎಂದು ಆರೋಪಿಗಳು ಭಾವಿಸಿದ್ದರು. ಹಣ ಲಪಟಾಯಿಸುವ ಉದ್ದೇಶದಿಂದ ಕೊಠಡಿಗೆ ತೆರಳಿ ಉಸಿರುಗಟ್ಟಿಸಿ ಕೊಂದಿದ್ದರು. ಆದರೆ ಅವರಿಗೆ ಸಿಕ್ಕಿದ್ದು 13 ಸಾವಿರ ರೂ. ಹಣ, ಉಜ್ಬೆಕಿಸ್ತಾನದ 7 ಸಾವಿರ ರೂ. ಮೌಲ್ಯದ ಕರೆನ್ಸಿಗಳು ಮಾತ್ರ. ಶೇಷಾದ್ರಿಪುರ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಪುಟ್ಟ ಮಗುವಿನ ಮೇಲೆ ಮಲತಂದೆ ಕ್ರೌರ್ಯ

ಆನೇಕಲ್: ಮೂರು ವರ್ಷದ ಮಗುವನ್ನು ತಾಯಿ ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಘಟನೆ ನಡೆದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ (Assault on Child) ನಡೆದಿದೆ. ಪುಟ್ಟ ಮಗುವಿನ ಮೇಲೆ ಮಲತಂದೆ ಕ್ರೌರ್ಯ ಮೆರೆದಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಕೃತ್ಯಕ್ಕೆ ತಾಯಿಯೂ ಬೆಂಬಲ ನೀಡಿದ್ದಾಳೆ.‌

ನಾಲ್ಕು ವರ್ಷದ ಹೆಣ್ಣು ಮಗು ಮೇಲೆ ಕಳೆದೊಂದು ವರ್ಷದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ಹಲ್ಲೆ ಆರೋಪಿಗಳು. ಪಾಪಿ ಮಲತಂದೆಯು ಮಗುವಿನ ಕೈ ಮತ್ತು ಕುತ್ತಿಗೆ ಭಾಗದಲ್ಲಿ ಹೀಟರ್ ಮತ್ತು ಸಿಗರೇಟ್‌ನಿಂದ ಸುಟ್ಟಿದ್ದು, ಹಲ್ಲೆಯಿಂದ ಮಗುವಿನ ತಲೆ, ಕೈಗಳು ಮತ್ತು ಹಣೆ ಭಾಗದಲ್ಲೂ ಗಾಯಗಳಾಗಿವೆ.

ತಮ್ಮ ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂದು ಮಗುವಿನ ಮೇಲೆ ಮಲತಂದೆ ಹಲ್ಲೆ ನಡೆಸಿದ್ದಾನೆ. ಶುಕ್ರವಾರ ಸಂಜೆ ಕುಡಿದ ಮತ್ತಿನಲ್ಲಿ ಮಗುವಿನ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ, ಕೇಬಲ್ ವೈರ್‌ನಿಂದ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಸ್ಥಳೀಯರಿಗೆ ಮಗು ತಿಳಿಸಿದ ಹಿನ್ನೆಲೆ ದಂಪತಿಯನ್ನು ಸ್ಥಳೀಯರು ಥಳಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದಕ್ಕೂ ಮೊದಲು ನಾಲ್ಕು ತಿಂಗಳ ಹಿಂದೆ ಮಗುವಿನ ಅಣ್ಣನ‌ ಮೇಲೂ ಮಲತಂದೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಆಗಲೂ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪುನಃ ಇದೀಗ ಹೆಣ್ಣು ಮಗುವಿನ ಮೇಲೆ ದಂಪತಿ ಹಲ್ಲೆ ಮಾಡಿದ್ದಾರೆ. ಸದ್ಯ ಸಿಡಬ್ಲ್ಯುಸಿ ಆರೈಕೆ ಕೇಂದ್ರದಲ್ಲಿ ಮಗು ಇದ್ದಾಳೆ.

ಇದನ್ನೂ ಓದಿ: Couple death : ದಂಪತಿ ಶವವಾಗಿ ಪತ್ತೆ; ಪತ್ನಿಯ ಕೊಂದು ಆತ್ಮಹತ್ಯೆ ಮಾಡಿಕೊಂಡನಾ ಗಂಡ?

Exit mobile version