Site icon Vistara News

Road Accident : ಯುಗಾದಿ ಅಮಾವಾಸ್ಯೆ ದಿನ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ

Road Accident in Karnataka

ಬೆಂಗಳೂರು: ಯುಗಾದಿ ಅಮಾವಾಸ್ಯೆ ದಿನ (Somvati Amavasya 2024) ರಾಜ್ಯದ ಹಲವೆಡೆ ಭೀಕರ ಅಪಘಾತಗಳು (Road Accident) ಸಂಭವಿಸಿವೆ. ಇಂದು ಒಂದೇ ದಿನದಲ್ಲಿ 9 ಮಂದಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಕೆಲವರು ಗಂಭೀರ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡದಲ್ಲಿ ಭೀಕರ ಅಪಘಾತಗಳು ನಡೆದಿವೆ.

ಹಾಸನ ಜಿಲ್ಲೆಯೊಂದರಲ್ಲೆ ಐವರು ದುರ್ಮರಣ

ಹಾಸನ: ಹಾಸನದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಅಪಘಾತ (Road Accident) ಸಂಭವಿಸಿದ್ದು, ಐವರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಹಾಸನದ ಹೊಳೆನರಸೀಪುರ ತಾಲೂಕಿನ ಆಲದಹಳ್ಳಿ ತಿರುವಿನಲ್ಲಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ರಾಮೇಗೌಡ (55), ಭಾಗ್ಯಮ್ಮ (45) ಹಾಗೂ ಬೇಡಿಗನಹಳ್ಳಿ ಗ್ರಾಮದ ನಂಜಮ್ಮ (65) ಮೃತ ದುರ್ದೈವಿಗಳು.

ರಾಮೇಗೌಡ ಹಾಗೂ ಭಾಗ್ಯಮ್ಮ ದಂಪತಿ ತಮ್ಮ ಬೀಗತಿ ನಂಜಮ್ಮ ಜತೆಗೆ ಒಂದೇ ಬೈಕ್‌ನಲ್ಲಿ ಮೂಡಲ ಮಾಯಗೋಡನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ, ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ರಾಮೇಗೌಡ ಹಾಗೂ ನಂಜಮ್ಮರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರು ಕೂಡ ಮೃತಪಟ್ಟಿದ್ದಾರೆ.

ಆಪೆ ಆಟೋಗೆ ಡಿಕ್ಕಿಗೆ ಸವಾರರಿಬ್ಬರು ಸಾವು

ಮತ್ತೊಂದು ಅಪಘಾತದಲ್ಲಿ ಬೈಕ್‌ಗೆ ಆಪೆ ಆಟೋ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಹಾಸನದ ಹೊಳೆನರಸೀಪುರ ತಾಲೂಕಿನ ಅಗ್ರಹಾರ ಗೇಟ್ ಬಳಿ ಅಪಘಾತ ನಡೆದಿದೆ. ಕುಂಚೇವು ಕೋಡಿಹಳ್ಳಿ ಗ್ರಾಮದ ಕುಮಾರ್ (18), ರತೀಶ್ (17) ಮೃತ ದುರ್ದೈವಿಗಳು. ಮಂಜುನಾಥ್‌ (27) ಅವರಿಗೆ ಗಂಭೀರ ಗಾಯವಾಗಿದೆ.

ಗಾಯಾಳು ಮಂಜುನಾಥ್‌ನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೊದಲು ಕಾರೊಂದು ಆಪೆ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಲಕ್ಕೆ ತಿರುಗಿ ಬೈಕ್‌ಗೆ ಆಪೆ ಆಟೋ ಗುದ್ದಿದೆ. ಪರಿಣಾಮ ಕೆಳಗೆ ಬಿದ್ದ ಸವಾರರು ಗಾಯಗೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಲ್ಲಿ ಬೈಕ್‌ಗೆ ಮಿನಿ ಲಾರಿ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಹಾಸನ ಮಾತ್ರವಲ್ಲದೇ ಚಿಕ್ಕಮಗಳೂರಲ್ಲೂ ಅಪಘಾತ ನಡೆದಿದೆ. ಬೈಕ್ ಹಾಗೂ ಮಿನಿ ಲಾರಿ ನಡುವೆ ಡಿಕ್ಕಿಯಾಗಿದೆ. ಬಳಿಕ ನಿಯಂತ್ರಣ ತಪ್ಪಿ ಮಿನಿಲಾರಿ ಪಲ್ಟಿಯಾಗಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ತೊಂಡವಳ್ಳಿ ಗ್ರಾಮದಲ್ಲಿ ನಡೆದಿದೆ.

ಅಚ್ಚಡದಮನೆ ಗ್ರಾಮದ ನಿವಾಸಿ ಮಣಿ ಮೃತ ದುರ್ದೈವಿ. ಹಿಂಬದಿ ಕುಳಿತಿದ್ದ ಮಹಿಳೆಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಡರ್‌ಗೆ ಸ್ಕೂಟಿ ಡಿಕ್ಕಿ; ತಂದೆ ಸೇರಿ ಮಕ್ಕಳಿಬ್ಬರು ಗಂಭೀರ

ಹೆದ್ದಾರಿ ಡಿವೈಡರ್‌ಗೆ ಸ್ಕೂಟಿ ಡಿಕ್ಕಿಯಾಗಿದ್ದು, ತಂದೆ ಸೇರಿ ಇಬ್ಬರೂ ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ‌ 66ರ ಮಿರ್ಜಾನ್ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ. ಬೈಕ್ ಸವಾರ ಇಸಾಕ್ ಸಾಬ್ ಹಾಗೂ ಅವರ ಇಬ್ಬರು ಮಕ್ಕಳು ‌ಗಂಭೀರ ಗಾಯಗೊಂಡಿದ್ದಾರೆ. ಬೆಟ್ಕುಳಿ ಗ್ರಾಮದ ನಿವಾಸಿಯಾದ ಇಸಾಕ್‌ ಕುಮಟಾದಿಂದ ಬೆಟ್ಕುಳಿಗೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ಸಿಗದೆ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಗಾಯಗೊಂಡವರಿಗೆ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming: ಬೆಂಗಳೂರಿನಲ್ಲಿ 19ನೇ ಮಹಡಿ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಕೆಆರ್‌ ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್‌ ಸವಾರ ಬಲಿ

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಾರಿಗೆ ಸವಾರನೊಬ್ಬ ಬಲಿಯಾಗಿದ್ದಾನೆ. ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಮೃತ ದುರ್ದೈವಿ. ಬೆಂಗಳೂರಿನ ಕೆ.ಆರ್ ಪುರಂ ಸಮೀಪದ‌ ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ಅಪಘಾತ (Road Accident) ಸಂಭವಿಸಿದೆ.

ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆಯುವಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಪ್ರಕಾಶ್‌ ಗುದ್ದಿ ಕೆಳೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಪ್ರಕಾಶ್‌ ಮೇಲೆ ಖಾಸಗಿ ಬಸ್‌ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್‌ ಮೃತಪಟ್ಟಿದ್ದಾರೆ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಪ್ರಕಾಶ್‌ ಬಿಜೆಪಿ ಕಾರ್ಯಕರ್ತ. ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಡೋರ್‌ ತೆರೆಯುವಾಗ ಬೈಕ್‌ನಲ್ಲಿ ಬಂದು ಗುದ್ದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಸ್‌ ಹರಿದಿದೆ. ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗುವುದು. ಈ ಘಟನೆ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬಸ್ಥರ ಜತೆಗೆ ನಾವಿದ್ದೇವೆ, ಪಾರ್ಟಿ ವತಿಯಿಂದ ಪರಿಹಾರ ಕೊಡುತ್ತೇವೆ ಎಂದರು. ಶೋಭಾ ಕರಂದ್ಲಾಜೆ, ಶಾಸಕ ಭೈರತಿ ಬಸವರಾಜು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಇದನ್ನೂ ಓದಿ: Physical Abuse : ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ ಶಿಕ್ಷಕ ಅರೆಸ್ಟ್‌

ನಿಂತಿದ್ದ ಕಸದ ಲಾರಿಗೆ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು;‌ ಕೊಡಗಿನಲ್ಲಿ ಪಲ್ಟಿ ಹೊಡೆದ ಬಸ್

ಬೆಂಗಳೂರು/ಕೊಡಗು: ನಿಂತಿದ್ದ ಕಸದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Road Accident) ಘಟನೆ ನಡೆದಿದೆ. ಒಡಿಶಾ ಮೂಲದ ಸಾಗರ್ (23) ಮೃತ ದುರ್ದೈವಿ.

ಭಾನುವಾರ ರಾತ್ರಿ‌ 11:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸಾಗರ್‌ ತನ್ನ ಸ್ನೇಹಿತರೊಟ್ಟಿಗೆ ಕಾರಿನಲ್ಲಿ ಬರುವಾಗ ರಸ್ತೆ ಬದಿ ನಿಂತಿದ್ದ ಕಸದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಸಾಗರ್‌ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಇನ್ನೂ ಸಾಗರ್‌ ಜತೆಗೆ ಇನ್ನುಳಿದ ನಾಲ್ವರು ಟೆಕ್ಕಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್‌

ನಿನ್ನೆ ಚಿತ್ರದುರ್ಗದಲ್ಲಿ ಖಾಸಗಿ ಬಸ್ ಪಲ್ಟಿ ಪ್ರಕರಣ ಮಾಸುವ ಮುನ್ನವೇ ಕೊಡಗಿನಲ್ಲೂ ಅಂತದ್ದೇ ಘಟನೆ ನಡೆದಿದೆ. ರಾಷ್ಟೀಯ ಹೆದ್ದಾರಿ 275ರ ಮಡಿಕೇರಿ ಬಳಿಯ ಸಂಪಾಜೆ ಬಳಿ ಖಾಸಗಿ ಬಸ್ ಪಲ್ಟಿಯಾಗಿದೆ. ಗೌರಿ ಶಂಕರ ಹೆಸರಿನ ಖಾಸಗಿ ಬಸ್ ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ ಹೋಗುತ್ತಿತ್ತು.

ಸಂಪಾಜೆ ಬಳಿ ಬರುವಾಗ ಮುಂಜಾನೆ ಸಮಯ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಸಮೀಪದ ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ರಸ್ತೆಯಲ್ಲಿ ಅಡ್ಡಲಾಗಿ ಬಸ್‌ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಯಿತು. ರಾಷ್ಟೀಯ ಹೆದ್ದಾರಿ 275ರಲ್ಲಿ ಗಂಟೆಗಟ್ಟಲೆ‌ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: Pushpa 2 Teaser: ಕಾಲ್ಗೆಜ್ಜೆ ಧರಿಸಿ ಸೀರೆಯುಟ್ಟು ಖಡಕ್‌ ಆಗಿ ದರ್ಶನ ಕೊಟ್ಟ ಪುಷ್ಪರಾಜ್‌; ತಪ್ಪದೇ ಟೀಸರ್‌ ನೋಡಿ!

ಮುಖಾಮುಖಿ ಡಿಕ್ಕಿಗೆ 2 ಕಾರುಗಳು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಔಟ್‌

ಶಿವಮೊಗ್ಗ : ಎರಡು ಕಾರುಗಳ (Car Accident) ನಡುವೆ ಭೀಕರ ಅಪಘಾತ (Road Accident) ನಡೆದಿದ್ದು, ಸ್ಥಳದಲ್ಲೇ ಕಾರು ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ (Shivamogga News) ತಾಲೂಕಿನ ನಿದಿಗೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಶಿವಮೊಗ್ಗ ನಗರದ ಮೇಘರಾಜ್ ಮೃತ ದುರ್ದೈವಿ.

ಮೇಘರಾಜ್ ಮಾಚೇನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ ಕೆಲಸಕ್ಕೆಂದು ಕಾರಿನಲ್ಲಿ ತೆರಳುವಾಗ ಈ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮೇಘರಾಜ್‌ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಎರಡು ಕಾರುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಮತ್ತೊಂದು ಕಾರಿನೊಳಗೆ ಸಿಲುಕಿದ್ದ ವ್ಯಕ್ತಿಗೂ ಗಾಯವಾಗಿದ್ದು, ಮಹಿಳೆಯರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳಿಗೆ ಸ್ಥಳೀಯರು ಅಪಚರಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆ ಮಧ್ಯದಲ್ಲಿದ್ದ ಕಾರುಗಳನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: Murder Case : ಬಹಿರ್ದೆಸೆಗೆ ತೆರಳಿದವನ ಹತ್ಯೆ; ಯುಗಾದಿ ಅಮಾವಾಸ್ಯೆ ದಿನ ಯಾದಗಿರಿಯಲ್ಲಿ ಚಿಮ್ಮಿತ್ತು ರಕ್ತ

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಖಾಸಗಿ ಬಸ್‌

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೊರಕೋಡು ಕ್ರಾಸ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ, ಪೂರ್ಣಚಂದ್ರ ಖಾಸಗಿ ಬಸ್‌ವೊಂದು ಕೆರೆಗೆ ಇಳಿದಿದೆ. ಕೆರೆಯಲ್ಲಿ ನೀರು ಇಲ್ಲದ ಕಾರಣ ದೊಡ್ಡ ಅನಾವುತವೊಂದು ತಪ್ಪಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖಾಸಗಿ ಬಸ್‌ ಆನವಟ್ಟಿಯಿಂದ ಸೊರಬಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ರಸ್ತೆ ತಿರುವು ಇದ್ದ ಕಾರಣ ಚಾಲಕ ನಿಯಂತ್ರಣ ತಪ್ಪಿದ್ದು, ನೇರವಾಗಿ ಕೆರೆಗೆ ಇಳಿದಿದೆ. ಬಸ್‌ನ ಮುಂಭಾಗ ಹಾನಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version