Site icon Vistara News

Road Accident : ತುಮಕೂರು ಬಳಿ ಬಸ್‌ – ಕಾರು ನಡುವೆ ಅಪಘಾತ; ಇಬ್ಬರ ಸಾವು

Tumkur accident

ತುಮಕೂರು: ತುಮಕೂರಿನ ಮರಳೂರು ಕೆರೆ ಏರಿ ಬಳಿ ಖಾಸಗಿ ಬಸ್ ಹಾಗೂ ಓಮಿನಿ ಕಾರು ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿದ್ದು, ಓಮಿನಿ ಕಾರು ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ತುಮಕೂರಿನ ಮರಳೂರು ಕೆರೆ ಏರಿ ಬಳಿ ಅಪಘಾತ ಸಂಭವಿಸಿದ್ದು, ಓಮಿನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಓಮಿನಿ ನಡುವೆ ಡಿಕ್ಕಿ ಸಂಭವಿಸಿದೆ.

ಇದನ್ನೂ ಓದಿ: Job News : ಅತಿಥಿ ಉಪನ್ಯಾಸಕರ ಸೇವಾ ಅವಧಿ ವಿಸ್ತರಣೆ; ಹೊರಗುತ್ತಿಗೆ ನೌಕರರಿಗೆ ಗುಡ್‌ ನ್ಯೂಸ್‌

ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓಮಿನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗಿದ್ದ ಕಾರು ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು ತಾಲೂಕಿನ ಮಾನಂಗಿ ಗ್ರಾಮದ ನಿವಾಸಿ ಸುರೇಶ್ ಹಾಗೂ ಸುಮಾ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ತುಮಕೂರಿನಿಂದ ಮಾನಂಗಿ ಕಡೆಗೆ ಇವರು ಹೊರಟಿದ್ದರು ಎಂದು ತಿಳಿದುಬಂದಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಈ ದರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಸದ್ಯ ಖಾಸಗಿ ಬಸ್ ಚಾಲಕನನ್ನು ತುಮಕೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಅಪಘಾತದಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಭೀಕರ ರಸ್ತೆ ಅಪಘಾತ: ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

ಕಲಬುರಗಿ: ಒಂದು ಸಣ್ಣ ನಿರ್ಲಕ್ಷ್ಯವು ಐವರ ಜೀವವನ್ನೇ ತೆಗೆದಿದೆ. ಒಂದೇ ಬೈಕ್‌ನಲ್ಲಿ ಬರುತ್ತಿದ್ದ ಒಂದೇ ಕುಟುಂಬದ ಐವರು ರಸ್ತೆ ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾರೆ. ಬೈಕ್‌ಗೆ ಲಾರಿ ಡಿಕ್ಕಿಯಾಗಿ ಐವರು ಮೃತಪಟ್ಟಿರುವ ಘಟನೆ ಕಲಬುರಗಿಯ ಅಫಜಲಪುರ ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ನಡೆದಿದೆ. ನೇಪಾಳ ಮೂಲದ ಒಂದೇ ಕುಟುಂಬದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದೇ ಬೈಕ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ತೆರಳುತ್ತಿದ್ದರು. ದುದನಿಯಿಂದ ಅಫಪೂರ ಕಡೆಗೆ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಒಂದೊಂದು ದಿಕ್ಕಿಗೆ ಎಗರಿ ಬಿದ್ದಿದ್ದಾರೆ. ಐವರಿಗೂ ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Zika Virus : ಝಿಕಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಮೃತಪಟ್ಟವರೆಲ್ಲರೂ ಅಫಜಲಪೂರದಲ್ಲಿ ಫಾಸ್ಟ್ ಫುಡ್ ಮಾರಾಟ ಹೋಟೆಲ್ ನಡೆಸುತ್ತಿದ್ದರು. ನೇಪಾಳ ಮೂಲದ ಈ ಕುಟುಂಬ ಕಳೆದ ಹಲವು ವರ್ಷಗಳಿಂದ ಅಫಜಲಪೂರದಲ್ಲಿ ವಾಸವಿತ್ತು ಎನ್ನಲಾಗಿದೆ. ಐವರ ಗುರುತು ಪತ್ತೆಯಾಗಬೇಕಿದೆ. ಘಟನಾ ಸ್ಥಳಕ್ಕೆ ಅಫಜಲಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Exit mobile version