Site icon Vistara News

Road Accident: ಕಾರು-ಬಸ್‌ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರ ಸಾವು

Road Accident

Road Accident

ಚಾಮರಾಜನಗರ: ಕಾರು ಚಾಲಕನ ಓವರ್‌ ಸ್ಪೀಡ್‌ ಇಬ್ಬರ ಪ್ರಾಣ ಕಸಿದಿದೆ. ಎರ್ಟಿಗಾ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಊಟಿ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ (Road Accident).

ಗುಂಡ್ಲುಪೇಟೆ ಎಪಿಎಂಸಿ ಮಾರ್ಕೆಟ್ ಬಳಿ ಈ ಅವಘಡ ಸಂಭವಿಸಿದ್ದು, ವೇಗವಾಗಿ ಬಂದ ಎರ್ಟಿಗಾ ಕಾರು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ.

ಬೆಳಗಾವಿಯಲ್ಲಿ ಬೈಕ್‌ ಮುಖಾಮುಖಿ ಡಿಕ್ಕಿ, ಸವಾರರಿಬ್ಬರು ಸಾವು

ಬೆಳಗಾವಿ: ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ‌ಇಬ್ಬರು ಸವಾರರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಬಳಿ ಘಟನೆ ನಡೆದಿದೆ. ಬಸವರಾಜ ಪ್ರಭುನವರ್(48), ಯಲ್ಲಪ್ಪ ಕೊರವಿನಕೊಪ್ಪ( 46) ಮೃತ ದುರ್ದೈವಿಗಳು. ಮತ್ತಿಬ್ಬರು ಬೈಕ್ ಸವಾರಿಗೆ ಗಂಭೀರ ‌ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆಯಲ್ಲಿ ಟ್ರಕ್ – ಬೊಲೆರೊ ಮುಖಾಮುಖಿ ಡಿಕ್ಕಿ

ಬಾಗಲಕೋಟೆ: ಟ್ರಕ್ ಹಾಗೂ ಬೊಲೆರೊ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೊಲೆರೋ ವಾಹನದ ಮುಂಭಾಗ ನಜ್ಜು ಗುಜ್ಜಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ‌ ತಾಲೂಕಿನ ಬೆಳಗಲಿ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಬೊಲೆರೋ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಗಾಯಾಳನ್ನು ಮುಧೋಳ ತಾಲ್ಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮುಧೋಳ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ

ವಿಜಯಪುರ: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಲ್ಲದೇ ಕುಡುಕನೊಬ್ಬ ಮಹಿಳೆಯರಿಗೆ ಗುದ್ದಿದ್ದಾನೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ನಗರದ ಟಿಪ್ಪು ನಗರದಲ್ಲಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಇಬ್ಬರು ಮಹಿಳೆಯರಿಗೆ ಗುದ್ದಿ ಮುಂದೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.

ರಿಯಾಜ್ ದುಮ್ಮಾದ್ರಿ ಎಂಬಾತ ಕುಡಿದು ವಾಹನ ಚಲಾಯಿಸಿದವನು. ಕಾರು ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಐಶ್ವರ್ಯ ರಾಮಚಂದ್ರ ಗೊಲ್ಲರ್ (16), ಯಲ್ಲವ್ವ ಪರಶುರಾಮ ಗೊಲ್ಲರ್ (50) ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೀರಜ್‌ಗೆ ಕರದೊಯ್ಯಲಾಗಿದೆ. ಸದ್ಯ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹಾಗೂ ಕಾರನ್ನು ದೇವರ ಹಿಪ್ಪರಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ವಿವಾರಣೆ ನಡೆಯುತ್ತಿದೆ.

ಇದನ್ನೂ ಓದಿ: Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

Exit mobile version