Site icon Vistara News

Road Accident: ಹಾವೇರಿಯಲ್ಲಿ ಭೀಕರ ಅಪಘಾತ; ಮೂವರ ದುರ್ಮರಣ, ಮಹೀಂದ್ರ ಪಿಕಪ್‌ನಲ್ಲಿದ್ದ 20 ಕುರಿಗಳ ಸಾವು

Road Accident

ಹಾವೇರಿ: ನಗರದ ವರದಾಹಳ್ಳಿ ಬಳಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿ, ನಾಲ್ವರು ಗಾಯಗೊಂಡಿದ್ದಾರೆ. ಕ್ಯಾಂಟರ್ ಮತ್ತು ಕುರಿಗಳನ್ನು ಸಾಗಿಸುತ್ತಿದ್ದ ಮಹೀಂದ್ರ ಪಿಕಪ್ ನಡುವೆ ಡಿಕ್ಕಿಯಾಗಿ ಮೂವರು ಕೊನೆಯುಸಿರೆಳೆದಿದ್ದರೆ, ಮಹೀಂದ್ರ ಪಿಕಪ್‌ನಲ್ಲಿ 20 ಕುರಿಗಳೂ ಮೃತಪಟ್ಟಿವೆ.

ಕಾಕೋಳ ಗ್ರಾಮದ ಮೈಲಾರಪ್ಪ ಕೈದಾಳಿ (40), ಗುಡ್ಡಪ್ಪ ಕೈದಾಳಿ (35), ಶಿವಕುಮಾರ್ ಹೊಳಿಯಪ್ಪನವರ ಮೃತರು. ಹುಬ್ಬಳ್ಳಿಯಿಂದ ಹಾವೇರಿಗೆ ಬರುತ್ತಿದ್ದಾಗ ಭೀಕರ ಅಪಘಾತ ನಡೆದಿದೆ. ಬೆಳಗಾವಿ ಜಿಲ್ಲೆ ಕೇರೂರು ಗ್ರಾಮಕ್ಕೆ ಕುರಿ ತರಲು ಕುರಿಗಾಹಿಗಳು ಹೋಗಿದ್ದರು. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹೆದ್ದಾರಿ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸಾವು

ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿ-50 ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿರುವುದು ಇಳಕಲ್‌ ಬಳಿ ನಡೆದಿದೆ. ಇಳಕಲ್ ನಿವಾಸಿ ದುರ್ಗಮ್ಮ ಬಾರಿಗಿಡದ (80) ಮೃತರು. ಇತ್ತೀಚೆಗೆ ಇದೇ ಸ್ಥಳದಲ್ಲೇ ಗರ್ಭಿಣಿ ಮೃತಪಟ್ಟಿದ್ದರು. ಹೀಗಾಗಿ ಸರ್ಕಾರ ಈ ಸ್ಥಳದಲ್ಲಿ ಪಾದಚಾರಿಗಳಿಗೆ ಸ್ಕೈವಾಕ್ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಇಳಕಲ್ ಶಹರ ಠಾಣೆ ಪಿಎಸ್‌ಐ ಸೋಮೇಶ್ ಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡುರಸ್ತೆಯಲ್ಲಿ ಅಕ್ಕನನ್ನು ಅಟ್ಟಾಡಿಸಿ ಸುತ್ತಿಗೆಯಿಂದ ಹೊಡೆದು ಕೊಂದ

ಯಾದಗಿರಿ: ತಮ್ಮನಿಂದಲೇ ಅಕ್ಕನ ಬರ್ಬರ (Murder Case) ಕೊಲೆಯಾಗಿದೆ. ಯಾದಗಿರಿ (Yadagiri News) ತಾಲೂಕಿನ ಬೊಮ್ಮರಾಲದೊಡ್ಡಿಯಲ್ಲಿ ಘಟನೆ ನಡೆದಿದೆ. ನರಸಮ್ಮ(65) ಕೊಲೆಯಾದ ಸಹೋದರಿ.

ನರಸಮ್ಮಳ ಸಹೋದರ ಸೂಗುರಪ್ಪ ಕೊಲೆ ಆರೋಪಿ ಆಗಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದ ಸೂಗುರಪ್ಪನನ್ನು ನಸರಮ್ಮಳೇ ನೋಡಿಕೊಳ್ಳುತ್ತಿದ್ದರು. ಇನ್ನೂ ಮನೆಯಲ್ಲಿ ಕೈ-ಕಾಲು ಕಟ್ಟಿ ಕೂರಿಸುತ್ತಿದ್ದರು. ಕೋಪದಲ್ಲಿ ಸರಪಳಿ ಬಿಚ್ಚಿಕೊಂಡು ಕಬ್ಬಿಣ್ಣದ ಸುತ್ತಿಗೆಯಿಂದ ಹೆಂಡತಿಗೆ ಹಾಗೂ ಸಹೋದರಿಗೆ ನರಸಮ್ಮನಿಗೆ ಹೊಡೆದಿದ್ದಾನೆ.

ನರಸಮ್ಮ ಈತನಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೂ ಬಿಡದ ಸೂಗುರಪ್ಪ ನಡು ರಸ್ತೆಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Assault case : ಬಾರ್‌ನಲ್ಲಿ ಕುಡುಕರ ಗಲಾಟೆ; ಓರ್ವನಿಗೆ ಚಾಕು ಇರಿತ

ಗಲಾಟೆ ಬಿಡಿಸಲು ಹೋದ ಮಹಿಳೆಯ ಎದೆಗೆ ಗುದ್ದಿ ಹೊಡೆದು ಕೊಂದರು

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಸಾವಿನಲ್ಲಿ (Murder case) ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಪೂರದಲ್ಲಿ ಘಟನೆ ನಡೆದಿದೆ. ತಾಯವ್ವ ಸಾಲಮಂಟಪಿ (60) ಮೃತ ದುರ್ದೈವಿ.

ಸಾರಾಯಿ ಮಾರಾಟ ಮಾಡುತ್ತಾರೆ ಎಂಬ ವಿಚಾರವನ್ನು ಕೇಳಲು ತಾಯವ್ವ ಸಹೋದರ ವಿಠ್ಠಲ ಸಾಲಮಂಟಪಿ ಹೋಗಿದ್ದರು. ಸೋಮವಾರ ರಾತ್ರಿ1 ಗಂಟೆಗೆ ಆರೋಪಿಗಳ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಠ್ಠಲ ಹಾಗೂ ಮಾದರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ವಿಠ್ಠಲ ಸಹೋದರಿ ತಾಯವ್ವ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದಾರೆ.

ಈ ವೇಳೆ ತಾಯವ್ವಳಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಆಕೆಯ ಎದೆ ಭಾಗಕ್ಕೆ ಜೋರಾಗಿ ಗುದ್ದಿ ತಳ್ಳಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ತಾಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹಿಂದೆಯೂ ಸಾರಾಯಿ ಮಾರಾಟ ಮಾಡುವ ವಿಚಾರಕ್ಕೆ ವಿಠ್ಠಲ ಸಾಲಮಂಟಪಿ ಹಾಗೂ ಮಾದರ ಕುಟುಂಬಸ್ಥರ ನಡುವೆ ಜಗಳ ಆಗಿತ್ತು. ನಿನ್ನೆಯೂ ಇದೇ ವಿಚಾರವನ್ನು ಕೇಳಲು ಹೋದಾಗ ಗಲಾಟೆ ಶುರುವಾಗಿ, ವೃದ್ಧೆಯ ಸಾವಿನಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ | Fire Tragedy: ಬೆಂಕಿ ಅವಘಡ; ಉಸಿರುಗಟ್ಟಿ ಮೃತಪಟ್ಟ ಸಹೋದರಿಯರು

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿತರಾದ ಪ್ರಕಾಶ್ ಮಾದರ, ಯಮನಪ್ಪ ಮಾದರ, ಭೀಮಪ್ಪ ಮಾದರ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಮುಧೋಳ ಸಿಪಿಐ, ಲೋಕಾಪುರ ಪಿಎಸ್‌ಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version