Site icon Vistara News

Road Rage: ರಾಜಧಾನಿಯಲ್ಲಿ ಮತ್ತೊಂದು ರೋಡ್‌ ರೇಜ್‌, ಹಿಂಬಾಲಿಸಿಕೊಂಡು ಬಂದು ಅಟ್ಟಹಾಸ, ಇಲ್ಲಿದೆ ವಿಡಿಯೋ

road rage bangalore crime

ಬೆಂಗಳೂರು: ರಾಜಧಾನಿಯ ಬೀದಿಗಳಲ್ಲಿ (Bangalore crime) ಬೆಚ್ಚಿ ಬೀಳಿಸುವಂಥ ರೋಡ್‌ ರೇಜ್‌ (Road Rage) ಪ್ರಕರಣಗಳು ಹೆಚ್ಚುತ್ತಿವೆ. ಒಂಟಿಯಾಗಿ ಅಥವಾ ರಾತ್ರಿ ಡ್ರೈವ್‌ ಮಾಡುವವರನ್ನು ಟಾರ್ಗೆಟ್‌ ಮಾಡಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಹಲ್ಲೆ (Assault) ಮಾಡುವುದು, ವಾಹನಕ್ಕೆ ಹಾನಿ ಮಾಡುವುದು ನಡೆಯುತ್ತಿದೆ. ಒಂದೇ ವಾರದಲ್ಲಿ ಎರಡನೇ ಅಂಥ ಪ್ರಕರಣ ವರದಿಯಾಗಿದೆ.

ಸರ್ಜಾಪುರ ರಸ್ತೆಯಲ್ಲಿ ಮಾರ್ಚ್‌ 29ರ ರಾತ್ರಿ 10:40ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ‌ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಬೈಕ್ ಸವಾರನೊಬ್ಬ ಕಿರಿಕ್ ಮಾಡಿದ್ದಾನೆ. ಓವರ್‌ಟೇಕ್ (overtake) ಮಾಡುವ ವಿಚಾರಕ್ಕೆ ಗಲಾಟೆಯಾಗಿ ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ.

ಓವರ್‌ಟೇಕ್‌ ವಿಚಾರದಲ್ಲಿ ತಗಾದೆ ಸೃಷ್ಟಿಯಾಗಿದ್ದು, ಯುವಕ ಕಾರಿನ ಹಿಂಬದಿಯಿಂದ ಸುಮಾರು 2 ಕಿಲೋಮೀಟರ್‌ನಷ್ಟು ಅಟ್ಟಿಸಿಕೊಂಡು ಬಂದಿದ್ದಾನೆ. ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ ಅದಕ್ಕೆ ಅಡ್ಡ ಬಂದು ನಿಲ್ಲಿಸಿ ಧಮಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದು, ಮಹಿಳೆ ಭಯದಿಂದ ಚೀರಿಕೊಂಡಿದ್ದಾರೆ. ನಂತರ ದಂಪತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ದಂಪತಿ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನೊಂದು ರೇಡ್‌ ರೇಜ್‌

ಇಂಥದೇ ಇನ್ನೊಂದು ಘಟನೆ ಕಳೆದ ವಾರ ವರದಿಯಾಗಿತ್ತು. ರಾತ್ರಿ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಚೇಸ್‌ ಮಾಡಿಕೊಂಡು ಬಂದು ಪುಂಡರು ಕಿರುಕುಳ ನೀಡಿದ್ದರು. ದಾರಿಯುದ್ದಕ್ಕೂ ಚೇಸ್ ಮಾಡಿದ್ದಲ್ಲದೇ ಬೈಕ್‌ ಮೂಲಕ ಕಾರನ್ನು ಸುತ್ತುವರಿದು ಟಾರ್ಚರ್ ನೀಡಿದ್ದರು. ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ಅಲ್ಲಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಡಲೇ 112ಗೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್‌ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಎಸ್ಕೇಪ್ ಆಗಿದ್ದಾರೆ.

ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಇಬ್ಬರು ಯುವತಿಯರು ಕಾರಿನಲ್ಲಿ ಮಡಿವಾಳ ಕಡೆಯಿಂದ ಕೋರಮಂಗಲ ಕಡೆ ಹೊರಟಿದ್ದರು. ಆ ವೇಳೆ ಕಾರಿನಲ್ಲಿದ್ದ ಯುವತಿಯರ ಜತೆ ಜಗನ್ನಾಥ್, ತೇಜಸ್, ಮತ್ತು ಕಣ್ಣನ್ ಎಂಬುವವರು ಕಿರಿಕ್ ಶುರು ಮಾಡಿದ್ದರು. ಈ ಮೂವರು ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರನ್ನು ಹಿಂಬಾಲಿಸಿ ಕೀಟಲೆ ಮಾಡಿದ್ದಾರೆ. ಸದ್ಯ ಪೊಲೀಸರು ಜಗನ್ನಾಥ್ ಮತ್ತು ತೇಜಸ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಣ್ಣನ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ (Madivala Police station) ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ವಿದ್ಯಾರ್ಥಿನಿಯನ್ನು ಟಚ್‌ ಮಾಡಿ ವಿಕೃತಿ

ನಗರದಲ್ಲಿ ಬೀದಿ ಕಾಮುಕರ ಕಾಟ ಹೆಚ್ಚಾಗಿದೆ. ವಿದ್ಯಾರ್ಥಿನಿಯೊಬ್ಬಳು (College Student) ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯನ್ನು ಹಿಂಬಾಲಿಸಿ ಬಂದ ಕಾಮುಕನೊಬ್ಬ ಖಾಸಗಿ ಅಂಗವನ್ನು ಮುಟ್ಟಿ ಅಸಭ್ಯವಾಗಿ (Physical Abuse) ವರ್ತಿಸಿದ್ದರು. ಬೆಂಗಳೂರಿನ ಜಯನಗರ (Jayanagar) ಸುರಾನ ಕಾಲೇಜು (Surna College) ಸಮೀಪದ ಚಾಯ್ ಪಾಯಿಂಟ್ (Chai point) ಬಳಿ ಘಟನೆ ನಡೆದಿತ್ತು.

ರಾಜಧಾನಿ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್‌ ಸಿಟಿ (Bengaluru Safe City) ಎಂಬ ಮಾತಿದೆ. ಆದರೆ ಕೆಲ ಬೀದಿ ಕಾಮುಕರಿಂದ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾರೆ. ಬಿಎಂಟಿಸಿ ಬಸ್‌ನಿಂದ ಹಿಡಿದು ನಮ್ಮ ಮೆಟ್ರೋ ರೈಲಿನಲ್ಲೂ ಯುವತಿಯರಿಗೆ ಬೇಕಂತಲೇ ಸ್ಪರ್ಶಿಸಿ ವಿಕೃತಿ ಮೆರೆಯುತ್ತಿದ್ದಾರೆ.

ಕಾಮುಕ ಸ್ಪರ್ಶಿಸುತ್ತಿದ್ದಂತೆ ಬೆಚ್ಚಿದ ವಿದ್ಯಾರ್ಥಿನಿ ಕೂಡಲೇ ಸಹಾಯಕ್ಕೆ ಕೂಗಿದ್ದಾಳೆ. ಅಲ್ಲೇ ಇದ್ದ ಕಾಲೇಜು ವಿದ್ಯಾರ್ಥಿಗಳು ಸಹಾಯಕ್ಕೆ ಧಾವಿಸಿ, ಕಾಮುಕನನ್ನು ಹಿಡಿದಿದ್ದಾರೆ. ಜಯನಗರದ ನಿವಾಸಿ ಸುರೇಶ್ (26) ಎಂಬಾತ ಕೀಟಲೆ ಮಾಡಿದ ಪುಂಡನಾಗಿದ್ದಾನೆ. ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾಮುಕ ಸುರೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದ ದಾಖಲಿಸಿ‌ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Assault Case : ವ್ಯಕ್ತಿಯನ್ನು ನೆಲಕ್ಕೆ ಕೆಡವಿ ರಾಡ್‌ನಿಂದ ಹಲ್ಲೆ; ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಅಕ್ಕ-ತಮ್ಮ

Exit mobile version