Site icon Vistara News

ಮೊದಲು ಚಂದ್ರಶೇಖರ್‌ ಗುರೂಜಿ ಕಾಲಿಗೆ ಬಿದ್ದರು, ನಂತರ 60 ಬಾರಿ ಇರಿದು ಕೊಂದರು!

sarala vasthu

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿಯವರ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಸಿಸಿ ಟಿವಿಯಲ್ಲಿ ರೆಕಾರ್ಡ್‌ ಆಗಿದೆ.

ಇಲ್ಲಿಯ ಉಣಕಲ್‌ ಕೆರೆ ಬಳಿ ಇರುವ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಗುರೂಜಿ ತಮ್ಮನ್ನು ಭೇಟಿಯಾಗಲು ಬಂದಿದ್ದ ಭಕ್ತರ ವೇಷದಲ್ಲಿದ್ದ ಹಂತಕರನ್ನು ನೋಡಲು ರಿಸೆಪ್ಷನ್‌ಗೆ ಬಂದಾಗ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರು ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಅವರ ಕಾಲಿಗೆ ಒಬ್ಬ ಬೀಳುತ್ತಾನೆ. ಪಕ್ಕದಲ್ಲಿಯೇ ಚಾಕುವನ್ನು ಪೇಪರ್‌ನಲ್ಲಿ ಮುಚ್ಚಿಟ್ಟುಕೊಂಡಿದ್ದ ಮತ್ತೊಬ್ಬ ಹಂತಕ ಗುರೂಜಿಯ ಎದೆಗೇ ಬಲವಾಗಿ ಚಾಕುವಿನಿಂದ ಇರಿಯುತ್ತಾನೆ. ಅವರು ತಪ್ಪಿಸಿಕೊಳ್ಳಲು ಕಿರುಚುತ್ತಾ ಎದ್ದು ನಿಂತರೂ ಬಿಡದ ಹಂತಕರಿಬ್ಬರು ಜಿದ್ದಿಗೆ ಬಿದ್ದವರಂತೆ ಚಾಕುವಿನಿಂದ ಇರಿಯುತ್ತಲೇ ಇರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಗುರೂಜಿ ನೆಲಕ್ಕುರುಳಿದರೂ ಬಿಡದೆ ಅವರನ್ನು ನಿರಂತರವಾಗಿ ಇರಿಯಲಾಗಿದೆ. ಕೇವಲ ೪೦ ಸೆಕೆಂಡುಗಳಲ್ಲಿ ಸುಮಾರು ೬೦ಕ್ಕೂ ಹೆಚ್ಚು ಬಾರಿ ಹಂತಕರು ಇರಿದಿದ್ದಾರೆ. ಹಂತಕರಲ್ಲಿ ಒಬ್ಬ ಮೊದಲಿಗೆ ಓಡಿ ಹೋಗಿದ್ದರೆ, ಇನ್ನೊಬ್ಬ ಇನ್ನಷ್ಟು ಬಾರಿ ಇರಿದು ಓಡಿ ಹೋಗಿದ್ದಾನೆ. ಇಬ್ಬರೂ ಹೋಟೆಲ್‌ನಿಂದ ಹೊರ ಹೋಗಿರುವುದು ಕೂಡ ದಾಖಲಾಗಿದೆ.

ಹಂತಕರು ಹೋಟೆಲ್‌ನ ರಿಸೆಪ್ಷನ್‌ನಲ್ಲಿ ಬಹಳ ಹೊತ್ತಿನಿಂದ ಕಾಯುತ್ತಿದ್ದರು ಎನ್ನಲಾಗಿದೆ. ವಾಸ್ತು ಕೇಳುವ ನೆಪದಲ್ಲಿ ಅವರು ಗುರೂಜಿಯವರನ್ನು ಭೇಟಿಯಾಗಿದ್ದರು. ಹಂತಕರು ಬಾಗಲಕೋಟೆಯ ನಿವಾಸಿಗಳಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Exit mobile version