Site icon Vistara News

Suspicious Death : ಕೊಪ್ಪಳದಲ್ಲಿ ತಾಯಿ, ಮಗಳು, ಮೊಮ್ಮಗನ ಅನುಮಾನಾಸ್ಪದ ಸಾವು

Suspicious Death

ಕೊಪ್ಪಳ: ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಮೂವರು ಅನುಮಾನಾಸ್ಪದವಾಗಿ (Suspicious Death) ಮೃತಪಟ್ಟಿದ್ದಾರೆ. ಮನೆಯಲ್ಲಿಯೇ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು‌ ಪತ್ತೆಯಾಗಿವೆ. ರಾಜೇಶ್ವರಿ (45), ವಸಂತಾ (22) ಹಾಗೂ ಸಾಯಿ (4) ಮೃತ ದುರ್ದೈವಿಗಳು.

ಹಂತಕರು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಸೋಮವಾರ ರಾತ್ರಿ ತಾಯಿ ರಾಜೇಶ್ವರಿಗೆ ಮತ್ತೊಬ್ಬ ಮಗಳು ಫೋನ್ ಮಾಡಿದ್ದಾಳೆ. ಆದರೆ ಯಾರು ಫೋನ್‌ ರಿಸೀವ್ ಮಾಡಿರಲಿಲ್ಲ, ಮನೆಯ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮುಂಜಾನೆ ಬಂದು ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬೆಡ್ ರೂಮ್‌ನಲ್ಲಿ ಮಲಗಿದ್ದಲ್ಲಿ ಅಜ್ಜಿ ಮತ್ತು ಮೊಮ್ಮಗನ ಶವಗಳು ಪತ್ತೆಯಾದರೆ, ಮಗಳು ವಸಂತಾಳ ಶವ ಅಡುಗೆ ಮನೆಯಲ್ಲಿತ್ತು.

ಅಂದಹಾಗೇ ವಸಂತಾಳಿಗೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜತೆ ವಿವಾಹವಾಗಿತ್ತು. ಆದರೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ವಸಂತಾ, ನಂತರ ಹೊಸ‌‌ಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಹೊಸ‌‌ ಲಿಂಗಾಪುರ ಬಳಿ ಬೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಅನ್ಯ ಧರ್ಮದ ವ್ಯಕ್ತಿ ಜತೆ ವಸಂತಾ ಸಂಬಂಧ ಹೊಂದಿದ್ದಳು ಎಂಬ ಆರೋಪವೂ ಇದೆ.

ಸದ್ಯ ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಅಡುಗೆ ಮನೆಯಲ್ಲಿ ಪಾತ್ರೆಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ವಸಂತಾಳ ಮೂಗಿನ ರಕ್ತ ಬಂದಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

ಜಮೀನಿಗಾಗಿ ಕಿತ್ತಾಟ; ತಮ್ಮನ ಎದೆಗೆ ಚೂರಿ ಹಾಕಿ ಕೊಂದ ಅಣ್ಣ

ವಿಜಯನಗರ: ಆಸ್ತಿ ವಿವಾದ ಹಿನ್ನೆಲೆ ಚೂರಿಯಿಂದ ಇರಿದು ಸಹೋದರನ ಕೊಲೆ (Murder case) ಮಾಡಲಾಗಿದೆ. ವಿಜಯನಗರದ ಹೂವಿನಹಡಗಲಿ ತಾಲೂಕು ನಂದಿಗಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ರಮೇಶ ಹನುಮಂತಪ್ಪ ಕಿನ್ನೂರಿ (28) ಕೊಲೆಯದವರು.

ಅಣ್ಣ ಮಲ್ಲಪ್ಪನ ಜಮೀನನನ್ನು ಸಹೋದರರಿಬ್ಬರು ಹತ್ತು ವರ್ಷದ ಕರಾರಿಗೆ ಲಾವಣಿ ಹಾಕಿಕೊಂಡಿದ್ದರು. ಕರಾರು ಅವಧಿ ಮೂರು ವರ್ಷ ಇರುವಾಗಲೇ ಹೊಲ ಬಿಟ್ಟು ಕೊಡು ಎಂದು ಹಿರಿಯ ಸಹೋದರ ಮಲ್ಲಪ್ಪ ತನ್ನ ತಮ್ಮಂದಿರ ಜತೆ ಜಗಳ ಮಾಡಿದ್ದರು.

ಸಹೋದರರ ಜಗಳ ವಿಕೋಪಕ್ಕೆ ಹೋಗಿ ಅಣ್ಣ ಮಲ್ಲಪ್ಪ, ರಮೇಶನ ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದ ರಮೇಶ್ ಇದ್ದ ಜಾಗದಲ್ಲೇ ಕುಸಿದುಬಿದ್ದಾನೆ. ರಮೇಶನ ಜತೆಯಲ್ಲೆ ಇದ್ದ ಚಮನ ಸಾಬ್ ಎಂಬಾತ ಕೂಗಿ ಜನರನ್ನು ಸೇರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಮೇಶ್‌ನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆ ಸಮೀಪಿಸುತ್ತಿದ್ದ ರಮೇಶ ಉಸಿರು ಚೆಲ್ಲಿದ್ದಾನೆ.

ಕೊಲೆ ಮಾಡಿದ ಮಲ್ಲಪ್ಪನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆಯ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version