Site icon Vistara News

ಉದಯಪುರ ಶಿರಚ್ಛೇದ ಪ್ರಕರಣ; ಗಿರಾಕಿಗಳಂತೆ ಬಂದಿದ್ದ ಹಂತಕರು!

udaipur

ಉದಯಪುರ: ಇಲ್ಲಿಯ ಧನ್‌ಮಂಡಿ ಪ್ರದೇಶದಲ್ಲಿ ಟೈಲರ್‌ ಕನ್ನಯ್ಯ ಲಾಲ್‌ ಶಿರಚ್ಛೇದ ಮಾಡಿದ ಹಂತಕರು ಗಿರಾಕಿಗಳಂತೆ ಅವರ ಶಾಪ್‌ಗೆ ಬಂದಿದ್ದರು. “ನಾವು ಬಟ್ಟೆ ಹೊಲಿಸಬೇಕಾಗಿದೆʼʼ ಎಂದು ಇಬ್ಬರೂ ಹೇಳಿದ್ದರು. ಇವರಲ್ಲಿ ಒಬ್ಬಾತ ತನ್ನನ್ನು ರಿಯಾಜ್‌ ಎಂದು ಪರಿಚಯ ಮಾಡಿಕೊಂಡಿದ್ದ. ಆತನ ಅಳತೆಯನ್ನೂ ಟೈಲರ್‌ ಕನ್ನಯ್ಯ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.

ಇದಾದ ಕೆಲವೇ ಕ್ಷಣದಲ್ಲಿ ಒಬ್ಬಾತ ಹರಿತವಾದ ಚಾಕು ತೆಗೆದು ಕನ್ನಯ್ಯನ ಕುತ್ತಿಗೆ ಕುಯ್ಯುತ್ತಾನೆ. ಇದನ್ನು ಇನ್ನೊಬ್ಬ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಈ ಹಂತಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ವಿಡಿಯೋದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾರಿಗೂ ಹಂತಕರು ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ʼʼಇನ್ಷಲ್ಲಾ…ನಮ್ಮ ಚಾಕುಗಳು ಹೀಗೆಯೇ ನಿಮ್ಮ ಕುತ್ತಿಗೆಯನ್ನೂ ತಲುಪಲಿವೆʼʼ ಎಂದು ಬೆದರಿಕೆಯ ಸಂದೇಶವನ್ನೂ ನೀಡಿದ್ದಾರೆ.

ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದರಿಂದ ಕನ್ನಯ್ಯಗೆ ಕೆಲ ದಿನಗಳಿಂದ ಜೀವ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಇದರಿಂದ ಹೆದರಿದ ಕನ್ನಯ್ಯ ಕಳೆದ ಆರುದಿನದಿಂದ ಶಾಪ್‌ ತೆರೆದಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತದಾದರೂ ಅವರು ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಲಾಗುತ್ತಿದೆ. ಈ ಹತ್ಯೆ ನಡೆಸಿದ ಆರೋಪಿಗಳನ್ನು ಮಹಮ್ಮದ್‌ ರಿಯಾಜ್‌ ಅನ್ಸಾರಿ, ಗೌಸ್‌ ಮಹಮ್ಮದ್‌ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ| ಉದಯಪುರ ಶಿರಚ್ಛೇದ ಪ್ರಕರಣ ಎನ್‌ಐಎನಿಂದ ನಡೆಯಲಿದೆ ತನಿಖೆ

Exit mobile version