Site icon Vistara News

Bihar Murder Case: ಆಸ್ತಿಗಾಗಿ ಮಹಿಳೆಯ ನಾಲಗೆ, ಕಿವಿ ಕತ್ತರಿಸಿ, ಗುಪ್ತಾಂಗಕ್ಕೆ ಘಾಸಿಗೊಳಿಸಿ ಹತ್ಯೆ

Dalit Woman Raped In Uttar Pradesh

Dalit Woman Raped, Body Chopped In Pieces In Uttar Pradesh

ಪಟನಾ: ಹಣ, ಆಸ್ತಿ, ಸಂಪತ್ತಿಗಾಗಿ ಮನುಷ್ಯ ಎಂತಹ ಕ್ರೂರ ಕೆಲಸವನ್ನು ಬೇಕಾದರೂ ಮಾಡುತ್ತಾನೆ, ಪ್ರಾಣವನ್ನು ಬೇಕಾದರೂ ತೆಗೆಯುತ್ತಾನೆ ಎಂಬುದಕ್ಕೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿರುವುದೇ (Bihar Murder Case) ಸಾಕ್ಷಿಯಾಗಿದೆ. ಆಸ್ತಿಯ ಕಾರಣಕ್ಕಾಗಿ ನಾಲ್ವರು ದುರುಳರು ಮಹಿಳೆಯನ್ನು ಸಾಯುವ ಹಾಗೆ ಥಳಿಸಿದ್ದಾರೆ. ಮಹಿಳೆಯ ಕಿವಿ, ನಾಲಗೆ ಕತ್ತರಿಸಿ, ಗುಪ್ತಾಂಗಕ್ಕೆ ಘಾಸಿಗೊಳಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಕಳೆದ ಶನಿವಾರ (ಜುಲೈ 8) ಖಗಾರಿಯಾ ಜಿಲ್ಲೆಯ ಮೆಹಂದಿಪುರ ಗ್ರಾಮದ ಮಹಿಳೆಯು ಜಮೀನಿನಲ್ಲಿ ಭತ್ತ ನಾಟಿ ಮಾಡುವಾಗ ಬೈಕ್‌ನಲ್ಲಿ ಬಂದ ನಾಲ್ವರು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. “ಮಹಿಳೆ ಮೇಲೆ ಎರಗಿದ ನಾಲ್ವರು ವ್ಯಕ್ತಿಗಳು ಆಕೆಯ ಕಣ್ಣುಗಳಿಗೆ ಚಾಕು ಚುಚ್ಚಿದ್ದಾರೆ. ಕಿವಿ ಹಾಗೂ ನಾಲಗೆಯನ್ನು ಕತ್ತರಿಸಿ, ಗುಪ್ತಾಂಗಕ್ಕೆ ಘಾಸಿಗೊಳಿಸಿದ್ದಾರೆ. ಭೀಕರವಾಗಿ ಹಲ್ಲೆಗೊಳಗಾದ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

3 ಎಕರೆ ಆಸ್ತಿಗಾಗಿ ಕದನ

ಮೂರು ಎಕರೆ ಜಮೀನು ವಿವಾದಕ್ಕಾಗಿ ದುರುಳರು ಮಹಿಳೆಯನ್ನು ಹತ್ಯೆ ಮಾಡಿದ್ದಾರೆ. ಮಹೇಂದ್ರ ಸಿಂಗ್‌, ರುಲೋ ಸಿಂಗ್‌, ರಾಜದೇವ್‌ ಸಿಂಗ್‌, ಫುಲುಂಗಿ ಸಿಂಗ್‌ ಹಾಗೂ ಶ್ಯಾಮ್‌ ಕುಮಾರ್‌ ಹತ್ಯೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇವರೆಲ್ಲರೂ ಪಕ್ಕದ ಮನೆಯವರಾಗಿದ್ದು, ಹಲವು ವರ್ಷಗಳಿಂದ ಜಮೀನು ವಿವಾದ ತಲೆದೋರಿದೆ. ಎರಡೂ ಕುಟುಂಬಗಳ ಮಧ್ಯೆ ಆಗಾಗ ವಾಗ್ವಾದ ಕೂಡ ನಡೆಯುತ್ತವೆ. ಈಗ ಪಕ್ಕದ ಮನೆಯವರು ಮಹಿಳೆಯನ್ನು ಕೊಂದಿದ್ದಾರೆ.

ಇದನ್ನೂ ಓದಿ: Murder Case: ತಿ.ನರಸೀಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತನ ಕೊಲೆ

ಹಲವು ವರ್ಷಗಳಿಂದಲೂ ಇವರ ಮಧ್ಯೆ ಜಮೀನಿಗಾಗಿ ಕದನ ನಡೆಯುತ್ತಲೇ ಇದೆ. ಒಂಬತ್ತು ವರ್ಷಗಳ ಹಿಂದೆ ಮಹಿಳೆಯ ಪತಿ ಹಾಗೂ ಆತನ ಸಹೊದರನನ್ನು ಕೂಡ ಆಸ್ತಿ ವಿಷಯಕ್ಕೆ ಕೊಲೆ ಮಾಡಲಾಗಿದೆ. ಪ್ರಕರಣವು ನ್ಯಾಯಾಲಯದಲ್ಲಿದ್ದು, ಇದುವರೆಗೆ ಇತ್ಯರ್ಥವಾಗಿಲ್ಲ. ಆದರೆ, ನ್ಯಾಯಾಲಯದ ತೀರ್ಪು ಬರುವ ಮೊದಲೇ ಹೆಣಗಳು ಉರುಳುತ್ತಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಆಸ್ತಿಗಾಗಿ ಇಡೀ ಕುಟುಂಬವನ್ನು ನಾಶಪಡಿಸಲು ಮುಂದಾಗಿರುವ ದುರುಳರ ಕೃತ್ಯವು ಮೆಹಂದಿಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆತಂಕ ಮೂಡಿಸಿದೆ.

Exit mobile version