Site icon Vistara News

Self Harm: ನಿಶ್ಚಿತಾರ್ಥವಾದ ಯುವತಿಗೆ ಹಳೆಯ ಪ್ರಿಯಕರನ ಕಾಟ, ಆತ್ಮಹತ್ಯೆ

anekal self harm

ಆನೇಕಲ್: ಪಕ್ಕದ ಮನೆಯಲ್ಲಿದ್ದು ನಿರಂತರ ಕಾಟ ಕೊಡುತ್ತಿದ್ದ ಪ್ರಿಯಕರನ ಕಾಟ (harassment) ತಾಳಲಾರದೆ, ನಿಶ್ಚಿತಾರ್ಥವಾಗಿದ್ದ (Engagement) ಯುವತಿಯೊಬ್ಬಳು ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ.

ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಚಂದ್ರಕಲಾ (19) ಆತ್ಮಹತ್ಯೆಗೆ ಶರಣಾದ ಯುವತಿ. ಜಿಗಣಿ ಸಮೀಪದ ನಂಜಾಪುರದಲ್ಲಿ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಹಿಂದೆ ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನನ್ನು ಚಂದ್ರಕಲಾ ಪ್ರೀತಿಸುತ್ತಿದ್ದಳು. ಪ್ರೀತಿಯ ವಿಚಾರ ಗೊತ್ತಾಗಿ ಮನೆಯವರು ಮನೆಯವರು ಹುಡುಗಿಗೆ ಬುದ್ಧಿವಾದ ಹೇಳಿದ್ದರು. ಅರುಣ್ ಜೈಲಿಗೆ ಹೋಗಿ ಬಂದವನಾಗಿದ್ದು, ಹುಡುಗನ ವ್ಯಕ್ತಿತ್ವ ಸರಿ ಇಲ್ಲ. ಆತನನ್ನು ಮದುವೆಯಾಗಬೇಡ ಎಂದು ಹುಡುಗಿಯ ಮನವೊಲಿಸಿದ್ದರು. ತಮ್ಮ ಪರಿಚಿತರ ಹುಡುಗನೊಬ್ಬನ ಜೊತೆ ಎಂಗೇಜ್‌ಮೆಂಟ್ ಮಾಡಿಸಿದ್ದರು.

ಬೇರೆಯವನನ್ನು ಮದುವೆಯಾದರೆ ನಿನ್ನನ್ನು ಕೊಲ್ಲುವುದಾಗಿ ಅರುಣ್‌ ಬೆದರಿಕೆ ಹಾಕಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಗಳ ಸಾವಿಗೆ ಆತನೇ ಕಾರಣವೆಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ನಂತರ ಅರುಣ್‌ ಕುಮಾರ್‌ ತಲೆ ಮರೆಸಿಕೊಂಡಿದ್ದಾನೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರಿಂದ ಪ್ರಕರಣ ದಾಖಲಾಗಿದೆ.

ಬಳೆ ವ್ಯಾಪಾರಿಗಳ ನಡುವೆ ಜಗಳ, ಕತ್ತು ಸೀಳಿ ಬರ್ಬರ ಕೊಲೆ

ಯಾದಗಿರಿ: ಬಳೆ ವ್ಯಾಪಾರಿಯೊಬ್ಬನನ್ನು ಬರ್ಬರವಾಗಿ ಕತ್ತು ಸೀಳಿ ಕೊಲೆ (murder Case) ಮಾಡಲಾಗಿದ್ದು, ಕೊಲೆ ಮಾಡಿದ ಪಕ್ಕದ ಅಂಗಡಿಯ ವ್ಯಾಪಾರಿಯೂ ಹೆಣದ ಪಕ್ಕದಲ್ಲೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿಯ ಬಳೆ ವ್ಯಾಪಾರಿ ಮಲ್ಲಪ್ಪ (38) ಕೊಲೆಯಾದ ವ್ಯಕ್ತಿ. ಬುರ್ರಾನ್ ಎಂಬಾತ ಕೊಲೆ ಮಾಡಿದ ವ್ಯಕ್ತಿ. ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಕೊಲೆ ನಡೆದಿದೆ.

murder case burhan

ತಿಂಥಣಿ ಗ್ರಾಮದಲ್ಲಿ ಮೌನೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದು, ಇಂದು ಸಂಜೆ ರಥೋತ್ಸವ ಕೂಡ ಇದೆ. ಈ ಜಾತ್ರೆಯಲ್ಲಿ ಅಂಗಡಿ ಹಾಕಲೆಂದು ಕೊಲೆಯಾದವನು ಹಾಗೂ ಆರೋಪಿ ಇಬ್ಬರೂ ಬಂದಿದ್ದರು. ಇಬ್ಬರೂ ಅಕ್ಕಪಕ್ಕದಲ್ಲಿ ಅಂಗಡಿ ಹಾಕಿದ್ದಾರೆ. ರಾತ್ರಿ, ಬಳೆ ವ್ಯಾಪಾರಿ ಮಲ್ಲಪ್ಪ, ಬಳೆ ವ್ಯಾಪಾರದ ವಿಷಯದಲ್ಲಿ ಹಾಗೂ ಬುರ್ರಾನ್ ಪತ್ನಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದಾಗಿ ಸಿಟ್ಟಿಗೆದ್ದ ಬುರ್ರಾನ್‌, ಚಾಕುವಿನ ಮೂಲಕ ಕೋಳಿ ಕತ್ತು ಕಯ್ಯುವಂತೆ ಮಲ್ಲಪ್ಪನ ಕತ್ತು ಸೀಳಿ ಹಾಕಿದ್ದಾನೆ.

ಬುರ್ರಾನ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವನಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ತಡರಾತ್ರಿ ಅಕ್ಕಪಕ್ಕದ ಅಂಗಡಿಯವರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಲ್ಲಪ್ಪನ ಮೃತದೇಹವನ್ನು ಸುರಪುರ ತಾಲೂಕು ಆಸ್ಪತ್ರೆಗೆ ಒಯ್ಯಲಾಗಿದೆ.

ಇದನ್ನೂ ಓದಿ: Murder Case : ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ; ಪಾಳು ಬಿದ್ದ ಕಟ್ಟಡದಲ್ಲಿ ಶವ ಪತ್ತೆ

Exit mobile version