Site icon Vistara News

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ತೆರಿಗೆ ವಿಚಾರಗಳಲ್ಲಿ ಎಚ್ಚರಿಕೆ ಇರಲಿ

ಆರ್ಥಿಕ ವಿಚಾರಗಳ ಬಗೆಗೆ ಸರಿಯಾದ ಹೆಜ್ಜೆ ಇಡಿ. ಏನೋ ಒಂದು ಮಾಯೆ ಆವರಿಸಿದಂತಾಗಿ ನಿಮ್ಮ ಹಣಕಾಸಿಗೆ ಕನ್ನ ಹಾಕುವ ವಿಚಾರ ತಲೆದೋರಬಹುದು. ಟ್ಯಾಕ್ಸ್‌ ವಿಚಾರಗಳಲ್ಲೂ ಸೂಕ್ತ ಎಚ್ಚರಿಕೆ ಹೊಂದಿರಿ. ಭದ್ರಕಾಳಿಯ ವರ ಪ್ರಸಾದದಿಂದಾಗಿ ಕೆಲವು ಕೃತ್ತಿಮ ಪ್ರಯೋಗಗಳು ದುಷ್ಟರಿಂದ ನಡೆದರೂ ಕೂದಲು ಕೊಂಕದಂತೆ ಪಾರಾಗಿ ಬರುವಿರಿ. ಧೈರ್ಯದ ಹೆಜ್ಜೆಗಳು ಸರಿ. ನೀವು ಮುನ್ನುಗ್ಗಿ ನಡೆಯುವ ಸಾಹಸ ಮಾಡಬಲ್ಲಿರಿ. ಆದರೂ ಮಿತಿ ಮೀರದ ವೇಗ, ಆವೇಶ ಬೇಡ. ರಾಹು ಪೀಡಾ ನಿವಾರಣಾ ಸ್ತ್ರೋತ್ರ ಓದಿ.
ಶುಭ ಸಂಖ್ಯೆ: 7 ಶುಭ ದಿಕ್ಕು: ಪಶ್ಚಿಮ

ವೃಷಭ: ಗಣಪತಿ ಆರಾಧಣೆಯಿಂದ ಹೊಸ ಅವಕಾಶ

ನೀವು ಸರಳ ಜೀವಿಗಳಾದರೂ ಮಹತ್ತರವಾದ ಕೋಪ ತರಿಸಿ, ನಿಮ್ಮ ಮಾತುಗಳು ಕಟುವಾದಾಗ ಅದನ್ನೇ ಆಧಾರವಾಗಿಸಿಕೊಂಡು ʻʻಈ ವ್ಯಕ್ತಿ ಸರಿ ಇಲ್ಲʼʼ ಎಂದು ಕಂಡವರ ಮುಂದೆ ನಿಮ್ಮನ್ನು ಹರಾಜಿಗಿಡುವ, ಹಗುರವಾಗಿಸುವ ಅಭಿಜಾತ ಕಿರಾತಕರು ಸುತ್ತಲೂ ತುಂಬಿಕೊಳ್ಳುತ್ತಾರೆ, ಎಚ್ಚರವಿರಲಿ. ಗಣಪತಿಯ ಆರಾಧನೆಯಿಂದ ಹೊಸದೇ ಕೆಲಸ ಸಂಪಾದಿಸಿಕೊಳ್ಳುವ ಉತ್ತಮ ಅವಕಾಶ ಬರುವುದು ದಟ್ಟವಾಗಿದೆ. ಕೆಲ ಪ್ರಮಾದಗಳಿಂದ ಹೊರ ಬರಲಾಗದ ಕಿರಿಕಿರಿ ಇದ್ದರೂ ಶಿವನನ್ನು ಸ್ತುತಿಸಿ. ಸಂಕಟದಿಂದ ಪಾರು ಮಾಡುವ ಶಕ್ತಿ ಶಿವನಿಗಿದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ನೈಋತ್ಯ

ಮಿಥುನ: ಪ್ರಮೋಷನ್‌ ಪಡೆಯುವ ಸಮಯ

ಜ್ಞಾನದ, ಬೌದ್ಧಿಕ, ವಿವೇಕದ ವಿಷಯದಲ್ಲಿ ನೀವು ಅತ್ಯಂತ ಚತುರರಾಗಿ ಗುರುತಿಸಲ್ಪಡುತ್ತೀರಾದರೂ ನಿಮ್ಮ ಮುಂಗೋಪ ಕೆಲವು ಸಮಸ್ಯೆಗಳನ್ನು ತರಬಲ್ಲದು. ಮಕ್ಕಳ ವಿಚಾರದಲ್ಲಿ ತಾಳ್ಮೆ ಇರಲಿ. ತಿಳಿಯದೇ ಇರುವ ವಿಷಯದಲ್ಲಿ ಹೆಜ್ಜೆ ಇರಿಸಿ, ಅಪಾಯ ತಂದುಕೊಳ್ಳುವ ವಿಚಾರ ಮಕ್ಕಳಿಂದ ನೆರವೇರದಂತೆ ನೋಡಿಕೊಳ್ಳಿ. ಹಲವು ರೀತಿಯ ನಿಮ್ಮ ಪ್ರತಿಭಾ ಸಾಮರ್ಥ್ಯದ ಕಾರಣಗಳಿಂದಾಗಿ ನಿರೀಕ್ಷಿಸುತ್ತಿರುವ ಪ್ರಮೋಷನ್‌ ನಿಮಗೆ ಲಭ್ಯವಾಗುವ ಅವಕಾಶ ಜಾಸ್ತಿ ಇದೆ. ಕಾಮಧೇನುವಾಗಿ ಇಷ್ಟಾರ್ಥ ಪೂರೈಸುವ ಶ್ರೀ ಗುರು ರಾಘವೇಂದ್ರರನ್ನು ಮನಸಾ ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪೂರ್ವ

ಕಟಕ: ಆರೋಗ್ಯದ ಕಡೆಗೆ ಗಮನ ನೀಡಿ

ʻಕಾರಿರುಳು ಕವಿದಿಹುದು ದಟ್ಟ ಹಗಲಿನಲ್ಲಿ ಕೂಡʼ ಎಂಬ ಕವಿ ವಾಣಿಯನ್ನು ನೆನಪಿಸಿಕೊಳ್ಳಿ. ಒಂದೇ ರೀತಿಯಾಗಿ ಕಾಲದ ಸಂದರ್ಭ ಇರಲಾರದು. ಗ್ರಹಗಳು ಅನುಕೂಲಕರವಾದರೆ ಕಡುಗತ್ತಲಲ್ಲೂ ಪ್ರಖರವಾದ ಆನಂದದಾಯಕ ಬೆಳಕಾಗಿ ಇರುತ್ತವ ಅವು ನಿಮ್ಮೊಂದಿಗೆ. ಅನಾನುಕೂಲವಾದಾಗ ಕಾಡುತ್ತವೆ. ಸದ್ಯ ಮನೋಕಾರಕ ಚಂದ್ರ, ಶ್ರಮ ಸಹನೆಗಳಿಂದ ಫಲ ಕೊಡುವ ಶನೈಶ್ವರನ ಜತೆ ತಿಕ್ಕಾಟದಲ್ಲಿ ಇದ್ದಾನೆ. ವರ್ಚಸ್ಸಿಗೆ ಧಕ್ಕೆ ತರುವ ವಿಚಾರ ಎದ್ದೇಳಬಹುದು. ಆರೋಗ್ಯದ ಬಗೆಗೆ ಗಮನವಿರಲಿ. ಶ್ರೀ ಹನುಮಾನ್‌ ಚಾಲೀಸಾ ಓದಿದರೆ ಕ್ಷೇಮ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ಸಿಂಹ: ಲಲಿತಾ ಅಷ್ಟೋತ್ತರ ಪಠಿಸಿ

ಕೆಲವು ಬ್ರೆಡ್‌ನ ತುಂಡುಗಳನ್ನು ಅಳಿಲುಗಳಿಗೆ ತಿನ್ನಲು ಕೊಡಿ. ಸಾಂಸಾರಿಕ ಕಿರಿಕಿರಿಗಳು, ವೈವಾಹಿಕ ಸಮಸ್ಯೆಗಳು ದೂರವಾಗಲು ಅನೂಹ್ಯ ಶಕ್ತಿಯ ಬೆಂಬಲ ಪಡೆಯಬಲ್ಲ ಅವಕಾಶ ನಿಮಗೆ ಲಭ್ಯವಾಗುತ್ತದೆ. ನಿಮ್ಮ ಕೆಲ ಶಿಸ್ತು ಬದ್ಧ, ನ್ಯಾಯ ಬದ್ಧ ನೇರ ನಡೆ ನಿಮ್ಮನ್ನು ಹಲವು ರೀತಿಯ ಪ್ರಾಪ್ತಿಯ ವಿಚಾರಗಳಲ್ಲಿ ಯಶಸ್ಸು ತರಬಲ್ಲವು. ಯಾವುದೇ ಸಮಸ್ಯೆಗಳಿದ್ದರೂ ಸಂಭಾವಿತ ಮಧ್ಯವರ್ತಿಗಳ ಸಹಾಯದಿಂದ ನಿಮ್ಮ ವಿರೋಧಿಗಳನ್ನು ನಿಯಂತ್ರಿಸುವ ಕೆಲಸ ಮಾಡಿ. ಶ್ರೀ ದೇವಿ ಲಲಿತಾಂಬಿಕೆಯನ್ನು ಆರಾಧಿಸಿ. ಲಲಿತಾ ಅಷ್ಟೋತ್ತರ ಪಠಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಈಶಾನ್ಯ

ಕನ್ಯಾ: ಒಳಿತು ಮಾಡಲಿದ್ದಾನೆ ಸೂರ್ಯದೇವ

ಬೌದ್ಧಿಕ ಕ್ಷಮತೆಯಿಂದಾಗಿ ಜನರ ನಡುವೆ ಎದ್ದು ಕಾಣುವ ವ್ಯಕ್ತಿತ್ವ ನಿಮ್ಮದು. ಜ್ಞಾನದಾಯಕನಾದ ಗುರುವು ಬುದ್ಧಿ ಪ್ರಚೋದಕ ಸೂರ್ಯನು ಒಳಿತನ್ನು ಉಂಟು ಮಾಡುವ ಎಲ್ಲಾ ಅನುಕೂಲಕರ ಸಂದರ್ಭಗಳು ನಿಮ್ಮ ಪಾಲಿಗೆ ಸದ್ಯ ಉಂಟು. ಆದರೂ ವಾರದ ಮಧ್ಯ ಭಾಗದಲ್ಲಿ ವಿರುದ್ಧ ಲಿಂಗಿಗಳ ವಿಚಾರವಾಗಿ ಕೆಲ ಇರುಸು ಮುರುಸಿನ ಸಂದರ್ಭ ಎದುರಾಗುವ ಸಾಧ್ಯತೆ ಇದೆ, ಎಚ್ಚರ. ಕಲ್ಲಿಗೆ ತಲೆ ತಗುಲಿದರೂ ತಲೆಗೇ ಪೆಟ್ಟು. ತಲೆ ಗಟ್ಟಿ ಇದೆ ಎಂದು ಕಲ್ಲಿಗೆ ತಲೆ ಬಡಿದುಕೊಂಡರೂ ನೋವೇ. ಶ್ರೀ ಮಹಾವಿಷ್ಣುವನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ವಾಯವ್ಯ

ತುಲಾ: ವಿನಯದಿಂದಲೇ ಗೆಲುವು

ವಿನಯವು ನಿಮ್ಮನ್ನು ಗೆಲ್ಲಿಸುತ್ತದೆ. ತೀರಾ ಅವಶ್ಯಕ ಸಂದರ್ಭದಲ್ಲಿ ಜವಾಬ್ದಾರಿ ಇರದ ಜನ ಬಹಳ ಜಾಣತನದಿಂದ ವರ್ತಿಸುವ ವಿಚಾರ ನಿಮಗೆ ಜಿಗುಪ್ಸೆ ತರುವ ಸಾಧ್ಯತೆ. ಆರ್ಥಿಕ ಶಿಸ್ತಿನ ಮನುಷ್ಯರಾದ ನಿಮಗೆ ಇದು ಅಥವಾ ಈ ರೀತಿಯ ಢೋಂಗಿ ವ್ಯಕ್ತಿಗಳು ಸಮಯ, ಸಂದರ್ಭ ಹಾಳು ಮಾಡುತ್ತಲೇ ಇರುತ್ತಾರೆ. ಆದರೂ ನಾಲಗೆಯನ್ನು ನಿಯಂತ್ರಿಸಿ. ಗ್ರಹಗಳು ತಿರುಗಿ ಬಿದ್ದಾಗ ನೀವೇ ಅಪರಾಧಿಗಳಾಗುತ್ತೀರಿ. ಸರ್ಪ ಪೀಡೆಯಿಂದ ಇಂಥ ಕಿರಿಕಿರಿಗಳು ಎದುರಾಗುತ್ತಿವೆ. ಧೈರ್ಯವು ನಿಮ್ಮನ್ನು ಗೆಲ್ಲಿಸುವ ಶಕ್ತಿ ಹೊಂದಿದೆ. ಕುಮಾರಸ್ವಾಮಿಯನ್ನು ಪ್ರಾರ್ಥಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ದಕ್ಷಿಣ

ವೃಶ್ಚಿಕ: ತುಂಬಾ ಸಂತೋಷದ ಸಮಯ

ತುಂಬಾ ಸಂತೋಷದ ವೇಳೆಯನ್ನು ನೀವು ನಿರೀಕ್ಷಿಸಬಹುದಾಗಿದೆ. ಸ್ವಾಸ್ಥ್ಯದ ಸರ್ವಸ್ವ ಶಕ್ತಿ ಪಡೆದ ಶನೈಶ್ವರ ಸ್ವಾಮಿ ನಿಧಾನವಾಗಿಯೇ ಸರಿ, ಆದರೆ ಸಕಲ ಕಾರ್ಯಗಳಲ್ಲೂ ಜಯಶೀಲರಾಗುವ ಬಲ, ಧೈರ್ಯ ಇತ್ಯಾದಿಗಳನ್ನು ನಿಮಗೆ ತುಂಬುತ್ತಾನೆ. ನೀರಿನ ಬಗೆಗಿನ ಎಚ್ಚರ ಮಾತ್ರ ಇರಲಿ. ಹೊಯ್ದಾಡುವ ಮನಸ್ಸು ಬೇಡ. ಆರ್ಥಿಕ ವಿಚಾರಗಳಲ್ಲಿ ಯೋಚಿಸಿಯೇ ತೀರ್ಮಾನ್ಕೆ ಬನ್ನಿ. ಆದರೆ ಸಕಾರಾತ್ಮಕ ನಿಲುವು ಹೊಂದಿರಿ. ನಿಮ್ಮ ವಹಿವಾಟಿನಲ್ಲಿ, ಉದ್ಯಮಗಳಲ್ಲಿ ಲಾಭ ಸಂಪಾದಿಸುತ್ತೀರಿ. ಮಾತು ಮೃದುವಾಗಿರಲಿ. ಪಾರ್ವತಿ ಸ್ತುತಿಯಿಂದ ಲಾಭ.
ಶುಭ ಸಂಖ್ಯೆ : 6 ಶುಭ ದಿಕ್ಕು: ನೈಋತ್ಯ

ಧನಸ್ಸು: ಕೃಷಿಕರು ಲಾಭ ಮಾಡಿಕೊಳ್ಳಬಹುದು!

ಕಟುವಾಗಿ ವಿಮರ್ಶಿಸುವ ಜನ ಸಿಗುತ್ತಾರೆ. ಅವರ ಬಳಿ ಹೊಂದಾಣಿಕೆ ಅನಿವಾರ್ಯವೇ ಆಗಿರುತ್ತದೆ. ಈ ರೀತಿಯ ಕಟುವಾಗಿರುವ ಅವರ ಪ್ರವೃತ್ತಿಯ ಕುರಿತು ನಿಮ್ಮ ನಿರುತ್ಸಾಹ, ನಿರ್ಲಕ್ಷ್ಯತನವನ್ನೂ ಪ್ರದರ್ಶಿಸುವಂತಿಲ್ಲ. ಕಾಲ ಇವರನ್ನು ಬಿಟ್ಟು ಇರಲು ನಿಮಗೆ ಅವಕಾಶವನ್ನು ಒದಗಿಸದು. ಇವರ ಜತೆಗೇ ಜೀವನವನ್ನು ಹೊಂದಿಸಿಕೊಂಡು ಹೋಗಬೇಕು. ಇಷ್ಟಾದರೂ ಕೃಷಿ, ಆಯಾತ, ನಿರ್ಯಾತ, ಷೇರುಮಾರುಕಟ್ಟೆ ವ್ಯವಹಾರ, ಕಂಟ್ರಾಕ್ಟ್‌ ಕೆಲಸ ಕಾರ್ಯಗಳು ನಿಮಗೆ ಲಾಭ ತರುವ ಹರ್ಷಕ್ಕೆ ದಾರಿ ಮಾಡಬಲ್ಲವು. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪೂರ್ವ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಮಾರುತಿಯನ್ನು ಆರಾಧಿಸಿ ಗೆಲ್ಲಿ

ನೀರಸ ದಿನಗಳನ್ನು ಗೆಲ್ಲಬಹುದು. ಆದರೆ ಆರ್ಥಿಕ ಮುಗ್ಗಟ್ಟು, ಮಾತಿನ ಜಟಾಪಟಿ, ಶಾಂತಿ ಬಯಸಿದಷ್ಟೂ ಅದು ಮರೀಚಿಕೆಯಾಗುವ ದುರಾದೃಷ್ಟ ಇತ್ಯಾದಿಗಳನ್ನು ಎದುರಿಸಿ ದಣಿಯುತ್ತೀರಿ. ದಶರಥಮಹಾರಾಜ ವಿರಚಿತ ಶನೈಶ್ವರ ಸ್ತ್ರೋತ್ರ ಓದಿ. ಹಲವು ದಾರುಣತೆಗಳನ್ನು, ಭಿನ್ನ ವಿಭಿನ್ನ ರೀತಿಯ ಮಾನಸಿಕ ತೊಳಲಾಟಗಳನ್ನು ಜಯಿಸಲು ಇದು ಸಹಾಯಕ. ಚುನಾವಣೆಯನ್ನು ಎದುರಿಸುವ ಮನೋಗತ ಇದ್ದಲ್ಲಿ ಶ್ರೀ ದೇವಿ ಆರ್ಯದುರ್ಗಾ, ಅಂಬಾ ಭವಾನಿಯ ರಕ್ಷಾಕವಚ ಬೇಕು. ಮಾರುತಿಯನ್ನೂ ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಕುಂಭ: ಗಟ್ಟಿತನದಿಂದಲೇ ನಿಮ್ಮ ಯಶಸ್ಸು

ಸಮುದ್ರದ ತೆರೆಗಳು ಎಂದೂ ನಿಲ್ಲಲಾರದ ಭರತದ ಸಮಯ ಇದಾಗಿದೆ. ಪೂರ್ತಿಯಾದ ಎಚ್ಚರ, ಮಾನಸಿಕವಾದ ಗಟ್ಟಿತನ ನಿಮ್ಮನ್ನು ಗೆಲ್ಲಿಸಲು ಸಂಜೀವಿನಿಯಾಗಿದೆ. ನಿಮ್ಮ ವರ್ಚಸ್ಸನ್ನು ಹಾಳು ಮಾಡಲು ಕುಟಿಲ ರಾಜಕೀಯಗಳು ತೆರೆಮರೆಯಲ್ಲಿ ಸಾಗಿವೆ. ನೀವೇ ಪತ್ತೆದಾರರಾಗಿ ನಿಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಅವಿವೇಕೆಗಳನ್ನು, ಮಾರ್ಜಾಲರನ್ನು ನಿಯಂತ್ರಿಸಿ. ನಿಮ್ಮ ಯಶಸ್ಸನ್ನು ಸಹಿಸಲಾರದ ಜನರು ನಿಮ್ಮ ವಿರುದ್ಧ ದೊಡ್ಡದೇ ಆದ ಷಡ್ಯಂತ್ರ ನಡೆಸಿ, ನೀವು ತಮಾಷೆಗೆ ತುತ್ತಾಗುವ ವಿಚಾರವನ್ನು ನಡೆಸುತ್ತಲೇ ಇರುತ್ತಾರೆ. ಶಿವನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪಶ್ಚಿಮ

ಮೀನ: ಮಾತಿನಿಂದಲೇ ಸೋಲು, ಮಾತಿಂದಲೇ ಗೆಲುವು!

ಮಾತು, ಆರ್ಥಿಕ ವಿಚಾರ, ಕೋರ್ಟ್‌, ಕಚೇರಿ ಅಥವಾ ಕಾನೂನು ವಿಚಾರಗಳಲ್ಲಿ ನಿಗಾ ವಹಿಸಿ. ಮಾಡಿರದ ಅಪರಾಧಕ್ಕೆ ನಿಮ್ಮ ಜವಾಬ್ದಾರಿ ಗಂಟು ಹಾಕಿಕೊಂಡು ಪರದಾಟವಾಗದಂತೆ ನಿಗಾವಹಿಸಿ. ನಿಮ್ಮ ವ್ಯವಹಾರ, ಲಾಗಾಯ್ತಿನ ವಹಿವಾಟುಗಳನ್ನು ಕೆಲಸಗಾರರ ಜವಾಬ್ದಾರಿಯ ಮೇಲೆ ಬಿಡದಿರಿ. ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೀರಿ. ಮಾತು ಸ್ಪಷ್ಟವಾಗಿರಲಿ. ಆದರೆ ಒರಟಾದ ಮಾತುಗಳು ಬೇಡ. ಜನರ ನಡುವೆ ಒರಟು ಮಾತುಗಳಿಂದ ನಿಮ್ಮ ತೂಕ ಕಳೆದುಕೊಳ್ಳುತ್ತೀರಿ. ಮಾತಿನ ಕಾರಣಕ್ಕೆ ಹಲವು ಯಶಸ್ಸೂ ಇದೆ. ಶ್ರೀ ರಾಮರಕ್ಷಾ ಸ್ತ್ರೋತ್ರ ಓದಿ, ಗೆಲುವಿದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version