Site icon Vistara News

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ಈ ವಾರ ಮನೆಯಲ್ಲಿ ನೆಮ್ಮದಿ

ಆರ್ಥಿಕ ಪ್ರಗತಿಯ ಕುರಿತು ನಿಶ್ಚಿತ ರೂಪುರೇಷೆಗಳನ್ನು ನಿಗದಿಗೊಳಿಸಿಕೊಳ್ಳಬಹುದು. ಬಲವಾದ ಸ್ವರೂಪದ ಯಶಸ್ಸನ್ನು ಕಾಣುವಲ್ಲಿ ಶುಕ್ರ ಮತ್ತು ಶನಿ ಗ್ರಹಗಳು ಆರ್ಥಿಕವಾದ ಬೆಂಬಲ ಒದಗಿಸಬಲ್ಲವು. ಕೋಪ ತಾಪಗಳ ನಿಯಂತ್ರಣ ಇರಲಿ. ಕಾಲು ಕೆದರಿ ಜಗಳಕ್ಕೆ ಬರುವವರನ್ನು ನಿರ್ಲಕ್ಷಿಸಿ, ಮಾತಿಗೆ ಮಾತು, ವಿತಂಡವಾದ, ನಿಂದನೆ, ದೂಷಣೆಗಳು ಬೇಡ. ಇವು ನಿಮ್ಮ ಶಾಂತವಾದ ಮನಸ್ಸನ್ನು ಹಾಳುಗೆಡುವುತ್ತವೆ. ಬಾಳ ಸಂಗಾತಿಯ ಆರೋಗ್ಯ ತುಸು ಕಳವಳ ಮೂಡಿಸಬಹುದು. ಆದರೆ ದಾಂಪತ್ಯದಲ್ಲಿನ ಬೆಸುಗೆಯಿಂದ ಮನೆಯಲ್ಲಿ ನೆಮ್ಮದಿ ಇರುತ್ತದೆ.
ಶುಭ ಸಂಖ್ಯೆ: 5 ಶುಭ ದಿಕ್ಕು: ಪಶ್ಚಿಮ

ವೃಷಭ: ಆರ್ಥಿಕವಾಗಿ ಯಶಸ್ಸು

ಮನಸ್ಸಿನ ಕೋಲಾಹಲಕ್ಕೆ ವಿರುದ್ಧ ಲಿಂಗಿಗಳು ಕಾರಣರಾಗಬಲ್ಲರು. ಅರ್ಥಪೂರ್ಣವಾದ ಪ್ರೇಮ, ಪ್ರೀತಿಯ ವಿಚಾರದಲ್ಲಿ ಹೆಜ್ಜೆ ಇಡಿ. ಆತುರದ ನಿರ್ಣಯ ಕುತ್ತಿಗೆಗೆ ಬರಬಹುದು. ಎಚ್ಚರ. ಬೌದ್ಧಿಕವಾದ ನಡೆ, ನುಡಿ, ಸೂಕ್ಷ್ಮವಾದ ತಿಳುವಳಿಕೆಯೊಂದಿಗಿನ ಹೆಜ್ಜೆಗಳಿಂದ ಆರ್ಥಿಕವಾದ ಕಾರ್ಯಕ್ರಮ ಸಂವರ್ಧನೆಗಳಲ್ಲಿ ಯಶಸ್ಸನ್ನು ಸಂಪಾದಿಸಬಲ್ಲಿರಿ. ಆದರೂ ತುಂಬಾ ಜಾಣತನ ಪ್ರದರ್ಶಿಸದಿರಿ. ಕೆಲವು ಕಿರಾತಕರ ಕೈಗೆ ಸಿಕ್ಕಿ ಬಿದ್ದರೆ ನಿಮ್ಮನ್ನು ಸತಾಯಿಸಬಲ್ಲರು. ಮಾತಿನಲ್ಲಿ ಎಚ್ಚರ ಇರಲಿ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ

ಮಿಥುನ: ಕೆಲಸದಲ್ಲಿ ಪ್ರಶಂಸೆ, ಯಶಸ್ಸಿನ ಸಮಯ

ಸದ್ವಿವೇಕ ಚಾತುರ್ಯದ ಮಾತು, ಶಿಸ್ತುಬದ್ಧ ಕಾರ್ಯ ವಿಧಾನಗಳಿಂದ ಉನ್ನತ ವಾದುದನ್ನು ಸಾಧಿಸಬಲ್ಲಿರಿ. ಮನೆಯಲ್ಲಿಯೂ ಶಾಂತಿ ಇರುವಂತೆ ಜಾಗ್ರತೆ ವಹಿಸಿ. ಕೆಲಸದ ಸ್ಥಳದಲ್ಲಿ ಬಹು ಮಟ್ಟಿಗಿನ ಪ್ರಶಂಸೆ, ಪ್ರಮೋಷನ್‌ಗೆ ಬೇಕಾದ ದಿಸೆಯತ್ತ ಸೂಕ್ತವಾದುದು ಏನು, ಹೇಗೆ, ಎತ್ತ ಇತ್ಯಾದಿ ಸುಳಿವುಗಳು ಸಿಗಬಹುದು. ಕೆಲಸದ ಸ್ಥಳದಲ್ಲಿ ಉಲ್ಲಾಸ, ಲವಲವಿಕೆ ಸಾಧ್ಯ. ಮಕ್ಕಳ ಬಗೆಗೆ ಕೊಂಚ ಲಕ್ಷ್ಯವಹಿಸಿ. ಧೈರ್ಯದಿಂದ ಇದ್ದರೆ ಹಲವು ಯಶಸ್ಸುಗಳ ಬಗೆಗಿನ ನಿರ್ಣಾಯಕ ಹಂತದಲ್ಲಿ ಚತುರತೆ ತೋರಬಲ್ಲಿರಿ. ಶಿವನನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಆಗ್ನೇಯ

ಕಟಕ: ಅತಿಯಾದ ಆತ್ಮವಿಶ್ವಾಸದಿಂದ ಕೇಡು

ಯಾವುದೇ ಸಂದರ್ಭದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದಿರಿ. ಶನೈಶ್ವರ ಸ್ವಾಮಿಯು ನಿಮ್ಮ ವಿಷಯದಲ್ಲಿ ಕೆಲ ಶಿಸ್ತು, ಸಂಯಮಗಳನ್ನು ಅಪೇಕ್ಷಿಸಿಯೇ ಸೂಕ್ತವಾದ ವರ್ಚಸ್ಸು ಹಾಗೂ ಸಿದ್ಧಿಗಳಿಗೆ ಬೇಕಾದ ದಾರಿಯನ್ನು ತೋರಿಸುತ್ತಾನೆ. ಅತಿಯಾದ ಆತ್ಮವಿಶ್ವಾಸ ಕೇಡು ತರಬಲ್ಲದು. ಸೋತು ಗೆಲ್ಲಲು ಸಜ್ಜಾಗಿ. ಒಳಿತನ್ನು ನಿರೀಕ್ಷಿಸಬಹುದು. ಗೆಲುವಿನ ಕುದುರೆಯ ಮೇಲೆ ದೃಷ್ಟಿ ಇರಿಸಿ. ಆದರೆ ಅತಿಯಾದ ಲಾಭಕ್ಕೆ ಆಸೆ ಪಡದಿರಿ. ಸೋಲು ಗ್ಯಾರಂಟಿ. ಬಾಳ ಸಂಗಾತಿಯ ಬೆಂಬಲ ಲಭ್ಯ. ಶ್ರೀ ಗುರು ದತ್ತಾತ್ರೇಯನನ್ನು ಸ್ತುತಿಸಿದರೆ ಕ್ಷೇಮ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪೂರ್ವ

ಸಿಂಹ: ಉತ್ಸಾಹವಿದ್ದರೆ ಆದಾಯವೂ ಜಾಸ್ತಿ

ನಿಮ್ಮ ನಡೆ ನುಡಿ ಸಿಂಹದಂತೆ ಘನ ಗಾಂಭೀರ್ಯದ ತೂಕದೊಂದಿಗೆ ಶೋಭಿಸುವುದು ಸಾಧ್ಯವಿದ್ದರೂ ಬಾಳ ಸಂಗಾತಿಯ ಜತೆ ಹಲವು ವಿಚಾರಗಳನ್ನು ಚರ್ಚಿಸಿಯೇ ಸೂಕ್ತ ನಿರ್ಣಯವನ್ನು ತಳೆಯಿರಿ. ಅದೃಷ್ಟದ ಬಾಗಿಲು ಕೇವಲ ಘನ ಗಾಂಭೀರ್ಯದಲ್ಲಿ ಅಡಕಗೊಂಡಿಲ್ಲ. ಆಳಾಗಿ ದುಡಿದು ಅರಸನಾಗಿ ಉಣ್ಣುವ ಕಲೆಯನ್ನು ಕೈವಶ ಮಾಡಿಕೊಳ್ಳಿ. ಮಕ್ಕಳ ಮೂಲಕ ಸಂತೋಷ ಲಭ್ಯವಿದೆ. ಮಕ್ಕಳ ಆರೋಗ್ಯದ ಬಗೆಗೂ ಲಕ್ಷ್ಯ ಇರಲಿ. ಒಳ್ಳೆಯ ತಿಳುವಳಿಕೆ ಹೇಳಿ ಮುನ್ನಡೆಸಿ, ಒಳಿತಿದೆ. ದುರ್ಗಾ ಸ್ತುತಿ ಕ್ಷೇಮ.
ಶುಭ ಸಂಖ್ಯೆ :4 ಶುಭ ದಿಕ್ಕು: ಈಶಾನ್ಯ

ಕನ್ಯಾ: ಕೆಲಸದ ಸ್ಥಳದಲ್ಲಿ ಎಲ್ಲರಿಂದ ಪ್ರಶಂಸೆ

ಸಮಾಧಾನದ, ನಿತ್ಯವೂ ನಲಿವಿನ ಕೌಟುಂಬಿಕ ಸ್ಥಿತಿಗತಿ ನಿಮ್ಮ ಅದೃಷ್ಟದ ವಿಷಯವಾಗಿದೆ. ಹಲವಾರು ಬಗೆಯ ಪ್ರಾಪ್ತಿಗೂ ಇದು ಸಕಾಲ. ಸರ್ಪದ ಕಿರಿಕಿರಿ ಇದ್ದದ್ದು ಸ್ಪಷ್ಟ. ಹೀಗಾಗಿ ನರಸಿಂಹನನ್ನು, ಕುಮಾರ ಸ್ವಾಮಿ, ದುರ್ಗೆಯನ್ನು ಆರಾಧಿಸಿ. ಉನ್ನತ ಶಿಕ್ಷಣ, ಸ್ವಂತ ಉದ್ಯೋಗ, ಕೆಲಸದ ಸ್ಥಳದಲ್ಲಿ ಎಲ್ಲರ ಪ್ರಶಂಸೆಗಳಿಂದ ಮನಸ್ಸಿನ ನೆಮ್ಮದಿ ನಿಮಗೆ ಲಭ್ಯವಿದೆ. ಕೋಪವಿರದ ಸರಳ, ಶಾಂತ ನಡೆ ನುಡಿಯಿಂದ ಅನೇಕ ದುಷ್ಟ ಶಕ್ತಿಗಳ ವಿರುದ್ಧ ಅಂತಿಮ ಜಯ ಗಳಿಸುವಿರಿ. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ದಕ್ಷಿಣ

ತುಲಾ: ಈ ವಾರ ಯಾರನ್ನೂ ನಂಬದಿರಿ

ಪಂಚಮ ಶನಿ ಕಾಟದ ಕಾರಣದಿಂದಾಗಿ ಹಗುರವಾಗಿದ್ದ ತಲೆಯ ಮೇಲೀಗ ಭಾರ ಬೀಳುತ್ತ ಹೋಗುವ ಸಮಯ. ಆದರೂ ಶನಿ, ಶುಕ್ರಯುತಿಯಿಂದಾಗಿ ಪೂರ್ವ ಪುಣ್ಯದ ಭಾಗ ವಿಶೇಷವಾಗಿ ನಿಮ್ಮನ್ನು ಕಾಪಾಡಲು ಕತ್ತಲಿನ ದೊಡ್ಡ ವರ್ತಮಾನದಲ್ಲೂ ಟಾರ್ಚ್‌ ಬೆಳಕಿನಂತೆ ಸೂಕ್ತವಾದ ದಾರಿಯನ್ನು ಬೆಳಗಿ ತೋರಿಸಲಿದೆ. ಅಕ್ಷರಶಃ ಯಾರನ್ನೂ ನಂಬದಿರಿ. ಆದರೆ ಮುಖದಲ್ಲಿ ಮಂದಹಾಸವಿರಲಿ. ದೋಷ ಭರಿತನಾದ ಕುಜ ಧನ ಲಾಭದ ದಾರಿ ಕಾಣಿಸಿದರೂ ಕಾಣದಂತೆ ಮಾಯವಾಗುವ (ಧನ ನಷ್ಟ) ತಾಪತ್ರಯ ತರುತ್ತಾನೆ. ರಾಮ ರಕ್ಷಾ ಮಂತ್ರ ಪಠಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ಪ್ರಮೋಷನ್‌ ಪಡೆಯುವ ಸಮಯ

ಸುಖವು ಮರೀಚಿಕೆಯಾಗದು, ಆತ್ಮ ವಿಶ್ವಾವಿರಲಿ. ಸುಖದ ತಳಹದಿ ಗಟ್ಟಿಯಾಗಿ ಇರಲಿದೆ. ನಿಮ್ಮ ಅನೇಕ ಅರಿಷ್ಟಗಳನ್ನು ದೂರವಾಗಿಸಲು ಗುರು ಅನುಗ್ರಹವಿದೆ. ಮೇಧಾ ದಕ್ಷಿಣಾ ಮೂರ್ತಿ ಶಿವನನ್ನು ಸ್ತುತಿಸಿ. ದೈವಿಕವಾದ ಯೋಗಗಳು ಅರ್ಥಪೂರ್ಣವಾಗಿ ಚಾಲನೆ ಪಡೆಯಲು ಬುಧನು ಬುದ್ಧಿ ಶಕ್ತಿಯನ್ನು ನಿಮಗೆ ಸಂವೇದಿಸುತ್ತಾನೆ. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ನಿರೀಕ್ಷೆ ಮಾಡಬಹುದು. ನಷ್ಟಗಳನ್ನು ತರುವುದಕ್ಕೆ ಕೇತು ಹಪಹಪಿಸುತ್ತಿದ್ದಾನೆ. ವಿರುದ್ಧ ಲಿಂಗಿಗಳ ಬಗೆಗೆ ಎಚ್ಚರ ಇರಲಿ. ವಿರಾಟ ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ

ಧನಸ್ಸು: ನಿಮಗೆ ಶುಭಕರ ವಾರ

ಬೌದ್ಧಿಕ ಬಲ ನಿಮ್ಮ ಪಾಲಿಗೆ ಸಂಜೀವಿನಿಯಾಗಿದೆ. ಜ್ಞಾನಿಗಳಾದ ನೀವು ದುರ್ಬುದ್ಧಿಗಳನ್ನು ಪ್ರದರ್ಶಿಸಲಾರಿರಿ ಎಂಬುದು ನಿಸ್ಸಂಶಯ. ಹಾಗೆಯೇ ದುರ್ಬುದ್ಧಿ ಹೊಂದಿದವರಿಂದ ಅಂತರ ಕಾಯ್ದುಕೊಳ್ಳಿ. ನಗು, ಮಾತುಗಳು ಸ್ನೇಹ ಪೂರ್ಣವಾಗಿ ಹೊರ ಹೊಮ್ಮಲಿ. ನಿಮ್ಮದೇ ಆದ ಸ್ವಂತ ವಹಿವಾಟು ಸೂಕ್ತರಾದವರ ಜತೆಗಿನ ಪಾರ್ಟ್‌ನರ್‌ಶಿಪ್‌ ವ್ಯವಹಾರ ಗೆಲುವು ತರುತ್ತದೆ. ಬಾಳ ಸಂಗಾತಿಯ ಜತೆ ಹೊಂದಾಣಿಕೆ ಇರಲಿ. ಚರ್ಚೆಗಳಿಗೆ ದಾರಿ ಬೇಡ. ಧೈರ್ಯವೇ ನಿಮ್ಮನ್ನು ಕಾಪಾಡುವ ಅಸ್ತ್ರವೂ ಆಗುವ ಈ ವಾರದ ದಿನಗಳು ಶುಭಕರವಾಗಿದೆ. ವೆಂಕಟೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ದಕ್ಷಿಣ

ಮಕರ: ಗುರು ರಾಯರ ಸ್ತುತಿಸಿ

ಆರೋಗ್ಯದ ಕುರಿತು ಗಮನವಿರಲಿ. ಬಾಳ ಸಂಗಾತಿಯ ಆರೋಗ್ಯವೂ ಚಿಂತೆಗೆ ದಾರಿ ಮಾಡಬಹುದಾಗಿದೆ. ಸೂಕ್ತವಾಗಿ ಗಮನ ಕೊಡಿ. ಹಣಕಾಸಿನ ವಿಚಾರ ತೊಂದರೆ ಆಗದಿದ್ದರೂ ಸಮಾಧಾನವಿರದ ದಿನಗಳು ಇವು. ಏನೋ ಒಂದನ್ನು ಅಂತೂ ಬಗೆಹರಿಸಿಯಾಯ್ತು ಎಂಬಷ್ಟರಲ್ಲಿ ಮತ್ತೊಂದು ಆತಂಕ ಸೃಷ್ಟಿಯಾಗುವ ಕಿರಿಕಿರಿ ಎದುರಿಸುವಿರಿ. ಗುರು ಸಾರ್ವಭೌಮನಾದ ಶ್ರೀ ರಾಘವೇಂದ್ರ ಸ್ವಾಮಿಯನ್ನು ಹಾಗೂ ಮಾರುತಿಯನ್ನು ಬಿಡದೆ ಸ್ತುತಿಸಿ. ಕಾಮಧೇನುವಾದ ರಾಯರ ಅನುಗ್ರಹ ಅನೇಕ ತಾಪತ್ರಯಗಳನ್ನು ದೂರ ಮಾಡುವ ದಿವ್ಯತೆಯನ್ನು ಪಡೆದಿದೆ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ಕುಂಭ: ಸೂರ್ಯನೇ ಸುಡುವ ಕಾವಲಿಯಾಗದಿರಲಿ

ವರ್ಚಸ್ಸು, ಧನ ಲಾಭವೆಲ್ಲ ಇದೆ. ಆದರೆ ಗೀರಿದರೆ ಬೆಂಕಿ ಹತ್ತುವಂತೆ ಬೆಂಕಿಗಟ್ಟಿಯಾಗುವ ಧೂರ್ತರು ನಿಮ್ಮ ಸಂಯಮ ಹಾಗೂ ತಾಳ್ಮೆಯನ್ನು ಹಾಳು ಮಾಡಬಲ್ಲರು. ಜೀರ್ಣಾಂಗದ ಕುರಿತಾದ ಸಮಸ್ಯೆ ಎದುರಾದೀತು. ನಿರ್ಲಕ್ಷ್ಯ ತೋರದಿರಿ. ಸುಲಭವಾಗಿ ಸಿಗುವ ಸಾಲದ ಬಗ್ಗೆ ಅಸ್ಥೆ ತಳೆದು ಸಾಲದ ಶೂಲ ಹೊರಲು ಮುಂದಾಗದಿರಿ. ಸರ್ರನೆ ಬಂದು ಕೇಳಿದರೆಂದು ಹಣ ಕೊಡಲು ಹೋಗಬೇಡಿ. ಶನಿ ಕಾಟದ ದಟ್ಟ ದಿನಗಳು ಇವು. ಸೂರ್ಯನ ಬೆಳಕು ಬೇಕು. ಆದರೆ ಸೂರ್ಯನೇ ಸುಡುವ ಕಾವಲಿ ಆಗಬಾರದು. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ

ಮೀನ: ಲವಲವಿಕೆಯಿಂದ ಕೂಡಿದ ವಾರ

ನೀರಿನ ಬಗೆಗೆ ಎಚ್ಚರ. ಅಲರ್ಜಿಗಳು, ವಿಶೇಷವಾಗಿ ಕಲುಷಿತ ನೀರಿನಿಂದಾಗಿ ಉದರ ಸಮಸ್ಯೆ, ಅತಿಸಾರ ಇತ್ಯಾದಿ ಬೆನ್ನು ಹತ್ತದಂತೆ ಎಚ್ಚರ ಇರಲಿ. ಡಿ ಹೈಡ್ರೇಷನ್‌ ಆಗದಂತೆಯೂ ನಿಗಾ ಇಡಿ. ಪ್ರಾಪ್ತಿಯ ವಿಚಾರ ಮುಖ್ಯವಾಗಿ ಹಿರಿಯ ಆಸ್ತಿಯ ಕಾರಣ ಮುನ್ನಲೆಗೆ ಬಂದು ವ್ಯಾಜ್ಯದ ಸುಳಿಯಾಗಿ ಸುತ್ತಿಕೊಳ್ಳಬಹುದು. ಉತ್ತಮವಾದ ಕುಜನು ಧೈರ್ಯ, ಸಾಹಸ, ಶಕ್ತಿ ಹಾಗೂ ಲವಲವಿಕೆಗಳನ್ನು ಕೊಡುತ್ತಾನೆ. ಕುಮಾರಸ್ವಾಮಿಯನ್ನು ಆರಾಧಿಸಿ. ಧನ ಸಮೃದ್ಧಿಗೆ ನರಸಿಂಹನನ್ನು ಸ್ತುತಿಸಿ ಗೆಲ್ಲಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version