Site icon Vistara News

Weekly Horoscope | ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳಿವೆ ನೋಡಿ

horoscope today

ವಾರ ಭವಿಷ್ಯ

ಮೇಷ: ಈ ರಾಶಿವರಿಗೆ ಗುರುವಿನ ಬಲವೇ ಶ್ರೀರಕ್ಷೆ

ಭೂತ ಕಾಲದ ತಪ್ಪುಗಳನ್ನು ಈಗ ನೆನಪಿಸಿಕೊಂಡರೆ, ನೆನಪಿಸಿಕೊಳ್ಳುತ್ತಿದ್ದರೆ ಅದರಿಂದ ಪ್ರಯೋಜನಗಳಿಲ್ಲ ಎಂಬುದನ್ನು ತಿಳಿಯಿರಿ. ಆದರೆ ಅದೇ ತಪ್ಪುಗಳನ್ನು ಮಾಡದಿರಿ. ಇದರ ಅರ್ಥ ಹೊಸ ತಪ್ಪುಗಳನ್ನು ಮಾಡಬಹುದು ಎಂದಲ್ಲ. ಬುಧನ ದೋಷದಿಂದ ಈ ವಾರ ನಿಮಗೆ ನಿಮ್ಮ ಬಗ್ಗೆ ನಂಬಿಕೆ ದೂರವಾಗುವ ಭಯವಿರುತ್ತದೆ. ಆದರೆ ನೀವು ಗುರುವಿನ ಕೆಲವು ಮಹತ್ವದ ಶಕ್ತಿ ದೊರಕಿರುವುದರಿಂದ ಕೆಲಸ ಕಾರ್ಯಗಳಲ್ಲಿ ಗಟ್ಟಿಯಾದ ಆಶಾವಾದಗಳೊಂದಿಗೆ ಮುನ್ನುಗ್ಗಿ ಗೆಲ್ಲುವ ಬಲವನ್ನು ಪಡೆಯುತ್ತೀರಿ. ಅರಿವಿರದ ಮೂಲದಿಂದ ಒಂದು ಬೆಂಬಲ ಏಕಾಏಕಿ ನಿಮಗೆ ಸಿಗುವ ಸಾಧ್ಯತೆ ಇದೆ. ದತ್ತನನ್ನು ಸ್ತುತಿಸಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ವಾಯವ್ಯ

ವೃಷಭ: ಈ ರಾಶಿವರು ದೇವರನ್ನು ನಂಬಿದರೆ ಒಳಿತು

ವಿಳಂಬವನ್ನು ಸಹಿಸಿಕೊಳ್ಳುವುದು ನಿಮಗೆ ಅನಿವಾರ್ಯ. ಆದರೆ ಆಶಾವಾದದಿಂದ ಮುನ್ನುಗ್ಗಿ ಕೆಲಸ ಮಾಡಿ. ಮಾತುಗಳು ಜಾಸ್ತಿಯಾಗ ಕೂಡದು. ಪ್ರಾಜ್ಞರು ಹೇಳುವ ಮಾತುಗಳಿಗೆ ಚೆನ್ನಾಗಿ ಉತ್ತರಿಸಿ. ವಿನಯ ಪೂರ್ವಕ, ತೂಕ ಬದ್ಧ ಮಾತುಗಳಿಂದ ನಂಬಿ ಕೆಟ್ಟವರಿಲ್ಲವೋ ಎಂಬ ವ್ಯವಹಾರಿಕ ಮಾತನ್ನು ನೀವು ಕೇಳಿರುತ್ತೀರಿ. ದೇವರನ್ನು ನಂಬಿ. ಜತೆಗೆ ನಿಮ್ಮದಾದ ಕರ್ತವ್ಯ ಮುಂದುವರಿಸಿಕೊಂಡು ಹೋಗುವುದು. ನೀವೇ ಸರಿ ಎಂಬ ಧೋರಣೆ ಬಿಡಿ. ಚಂಡಿಕಾ ಹಾಗೂ ಮಾರುತಿಯ ಆರಾಧನೆಯಿಂದ ಒಳಿತು.
ಶುಭ ಸಂಖ್ಯೆ : 3 ಶುಭ ದಿಕ್ಕು: ಪಶ್ಚಿಮ

ಮಿಥುನ: ನರಸಿಂಹನನ್ನು ಆರಾಧಿಸಿದರೆ ಒಳಿತು

ಕೆಲವು ರೀತಿಯ ಭಯದಿಂದ ಬಳಲಿಕೆ ಸಾಧ್ಯ. ಆದರೆ ನೆನಪಿಡಿ, ನಿಮಗಿರುವ ಉತ್ತಮ ಗುರು ಬಲವು ನಿಮ್ಮನ್ನು ನಿಶ್ಚಯವಾಗಿಯೂ ನಡು ನೀರಿನಲ್ಲಿ ಕೈ ಬಿಡಲಾರದು. ಮುಖ್ಯವಾಗಿ ನರಸಿಂಹನನ್ನು ಸ್ತುತಿಸುವುದು ಆತ್ಮ ವಿಶ್ವಾಸವನ್ನು ಸಂವರ್ಧಿಸುವಲ್ಲಿ ಬೆಂಬಲಕ್ಕೆ ಬರುತ್ತದೆ. ಅನಗತ್ಯವಾದ ಘರ್ಷಣೆಯು ದಾಂಪತ್ಯದಲ್ಲಿ ಒಳನುಸುಳದಿರಲಿ. ಹುಳಿ ಹಿಂಡುವ ಕೆಲಸ ನಡೆಸುವವರು ಅಧಿಕವಾಗಿರುತ್ತಾರೆ. ಪ್ರಶ್ನಾರ್ಹವಾದ ಕೆಲವು ತಪ್ಪು ಹೆಜ್ಜೆಗಳು ಒಡ ಮೂಡದಂತೆ ನಿಗಾ ಇರಿಸಿ. ವ್ಯಾಜ್ಯದ ವಿಚಾರದಲ್ಲಿ ನಿಮ್ಮ ಪರವಾದ ಬೆಳವಣಿಗೆಗಳಿಂದ ಹರ್ಷ ಹೊಂದುವುದಕ್ಕೆ ವರ್ತಮಾನದಲ್ಲಿ ಅವಕಾಶವಿದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ನೈಋತ್ಯ

ಕಟಕ: ಈ ವಾರ ನಿಮಗೆ ಸಹನೆ ಇರಲಿ

ನಿರಾಶರಾಗುವ ಅವಶ್ಯಕತೆ ಬಾರದಂತೆ ಕೆಲಸ ಮಾಡಿ. ಅನ್ಯರನ್ನು ಸಹಿಸಿಕೊಂಡು ಹೋಗಲೇ ಬೇಕಾದ ಸಹನೆ ಇರಲಿ. ವರ್ತಮಾನದ ವಾಸ್ತವ ಏಕಾಗ್ರತೆಗೆ ಕೆಲವು ಭಂಗಗಳನ್ನು ತರುತ್ತಲೇ ಇರುತ್ತದೆ. ಹಿತ್ತಾಳೆ ಕಿವಿಯ ಜನರನ್ನು ಪ್ರತಿಯೊಬ್ಬನೂ ಟೀಕಿಸುತ್ತಾನೆಯೇ ವಿನಃ ಹಿತ್ತಾಳೆ ಕಿವಿಯವರ ಸಾಲಿನಲ್ಲಿ ತಾನೂ ಬರುತ್ತೇನೆ ಎಂದು ಯೋಚಿಸುವುದಿಲ್ಲ. ಇಂಥ ಜನರಿಂದ ನಿಮ್ಮ ಮಾನಸಿಕ ಶಾಂತಿಗೆ ಧಕ್ಕೆ ಬರಬಹುದು. ಮಧುರತೆ ನಿಮ್ಮ ಭಾಷೆಯಲ್ಲಿದೆ. ಅದನ್ನು ಶಕ್ತಿಯುತವಾಗಿ ರೂಪಿಸಿಕೊಳ್ಳುವುದಕ್ಕೆ ಮುಂದಡಿ ಇಡಿ. ಕಾರಣವಿರದೇ ಸುತ್ತಿಕೊಳ್ಳುವ ಖರ್ಚುಗಳ ಬಗ್ಗೆ ಎಚ್ಚರ ಇರಲಿ. ಭವಾನಿ ಶಂಕರನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಸಿಂಹ: ಬುದ್ಧಿ ಶಕ್ತಿಯ ಕಡೆಗೆ ಗಮನವಿರಲಿ

ಮದದಾನೆಗಳನ್ನೂ ಮೆಟ್ಟಿ ನಿಲ್ಲುವ ಕೇಸರಿಯ ಶಕ್ತಿ ನಿಮ್ಮದು. ಆದರೆ ಅದು ಯಾಕೆ ಸೂಕ್ತ ಸಮಯದಲ್ಲಿ ಚಿಮ್ಮಿ ಹೊರ ಬರಲಾರದು ಎಂಬ ಬೇಗುದಿ ನಿಮ್ಮಲ್ಲಿದೆ. ಕೆಲವು ಕೃತ್ತಿಮ ಶಕ್ತಿಗಳು ನಿಮ್ಮನ್ನು ಬಾಧಿಸುತ್ತಿವೆ. ಹಳೆಯ ಬಾವಿಯ ಸಮೀಪ, ಗಿಡ ಗುಂಟಿಗಳು ಬೆಳೆವ ಅಥವಾ ಹೆಮ್ಮರಗಳ ಸಾಲು ಸಾಲೇ ತುಂಬಿರುವ ಸಸ್ಯ, ಗಿಡ, ಮರಗಳ ಗುಂಪು ಪ್ರದೇಶಕ್ಕೆ ಒಂಟಿಯಾಗಿ ಹೋಗದಿರಿ. ಪಂಚಮ ಭಾವದಲ್ಲಿ ಕೇತುಯುಕ್ತ ಶನಿ ರವಿಗಳು ಬುದ್ಧಿ ಶಕ್ತಿಯನ್ನು ಒಂದು ಮಿತಿಗೆ ತಳ್ಳಿ ಸತಾಯಿಸುತ್ತವೆ. ಪ್ರಸ್ತುತ ಗೊಂದಲಗಳನ್ನು, ಇಬ್ಬದಿತನವನ್ನು ಶ್ರೀ ಲಲಿತಾಂಬಿಕಾಧ್ಯಾನ ಮತ್ತು ಪಂಚಮುಖಿ ಹನುಮಂತ ಕವಚ ಪಠಿಸುವ ಮೂಲಕ ನಿವಾರಿಸಿಕೊಳ್ಳಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ನೈಋತ್ಯ

ಕನ್ಯಾ: ಸುಬ್ರಹ್ಮಣ್ಯನ ಅನುಗ್ರಹ ಪಡೆಯಿರಿ

ಲಾಭದ ದಾರಿಯಲ್ಲಿ ಸಾಗಲು ಅತ್ಯಂತ ಮಹತ್ವದ ಧೈರ್ಯ, ಸಾಮರ್ಥ್ಯಗಳು ನಿಮ್ಮಲ್ಲಿವೆಯಾದರೂ, ಕೆಲಸದ ಸ್ಥಳದಲ್ಲಿನ ನೀರವ ಸ್ಥಿತಿಯಿಂದಾಗಿ ಶೀಘ್ರವಾಗಿ ಹುರುಪಿನಿಂದ ಎದ್ದು ಕ್ಷಿಪ್ರವಾಗಿ ಕೆಲಸ ಮಾಡಿ ಮುಗಿಸಲು ಸಾಧ್ಯವಾಗದು. ಆಹಾರದಲ್ಲಿ ಉಪ್ಪನ್ನು ಈ ವಾರ ಅತಿಯಾಗಿ ಬಳಸಲೇಬಾರದು. ಜಲೋತ್ಪನ್ನ ಸರಕುಗಳು ನಿಮ್ಮ ಪಾಲಿಗೆ ವರದಾನವಾಗಬಲ್ಲದು. ರಾಜಕೀಯದಲ್ಲಿ ಆಸಕ್ತರಾದವರಿಗೆ, ರಾಜಕಾರಣವನ್ನೇ ಕಾಯಕ ಮಾಡಿಕೊಂಡವರಿಗೆ ಶ್ರಮ ಭರಿತ ಒಡಾಟ, ಪರದಾಟಗಳಿಂದ ಅಂತಿಮವಾಗಿ ವಿಜಯದತ್ತ ಹೊರಳಿ ಕೊಳ್ಳುವ ಶಕ್ತಿ ಸುಬ್ರಹ್ಮಣ್ಯನ ಅನುಗ್ರಹದಿಂದಾಗಿ ಸಾಧ್ಯವಿದೆ. ಸುಬ್ರಹ್ಮಣ್ಯನನ್ನು ಸ್ತುತಿಸಿ, ಅನ್ಯ ಲಿಂಗಿಗಳೊಡನೆ ಸಲಿಗೆ ಬೇಡ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ

ತುಲಾ: ಪ್ರಮುಖ ಯೋಜನೆಯಲ್ಲಿ ಯಶಸ್ಸು

ಹಳದಿ ಅಥವಾ ಕೆಂಪು ಬಣ್ಣಗಳು ಅಪಾಯ ತರುತ್ತವೆ. ಗೋದಿಯನ್ನು ನೆನಸಿಟ್ಟು ನೀರನ್ನು ಗೋದಿಯ ಜತೆ ಹಸುವಿಗೆ ಆಹಾರವಾಗಿ ನೀಡಿ. ದುರ್ಗಾಳ ಅನುಗ್ರಹಕ್ಕೆ ಪಾತ್ರರಾಗುವ ಅಪೂರ್ವ ಅವಕಾಶ ಲಭ್ಯ. ಶ್ರಮದಿಂದಲೇ ಸುಖವಿದೆ. ನಿರ್ದಿಷ್ಟವಾದುದು ಇದೇ ಎಂಬುದನ್ನು ಗುರುತಿಸಿಕೊಳ್ಳಿ. ಎರಡು ದೋಣಿಯ ಪಯಣ ಬೇಡ. ದೈವ ಶಕ್ತಿಯ ಪ್ರಾಬಲ್ಯವನ್ನು ಬೆಳಗಿನ ಹೊತ್ತಿನ ಸ್ನಾನಾ ನಂತರ “ಶ್ರೀ ಖಡ್ಗ ಮಾಲಿನಿ ಸ್ತೋತ್ರಾವಳಿʼʼಯನ್ನು ಪಠಿಸಿ, ಅಂತರ್ಗತವಾದ ಶಕ್ತಿ ಮೂಲವನ್ನು ಅನಾಹತ ಚಕ್ರಸಿಂಧು ಮೂಲಕ್ಕೆ ಸಂವೇದಿಸಿಕೊಂಡಾಗ ಸಂಕಲ್ಪಿತ ಕಾರ್ಯ ಸಿದ್ಧಿಗೆ ಅವಕಾಶ ಹೇರಳ. ಮನಸ್ಸಿನ ಪ್ರಮುಖ ಯೋಜನೆಗೆ ವಿಜಯ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ವೃಶ್ಚಿಕ: ವ್ಯಾಪಾರ-ವಹಿವಾಟಿನಲ್ಲು ಯಶಸ್ಸು

ವ್ಯಕ್ತಿತ್ವದ ವಿಚಾರವಾಗಿ ಸುಹಾಸಕರ ಚೌಕಟ್ಟನ್ನು ನಿರ್ಮಿಸಲು ಅವಕಾಶ ಭದ್ರವಾಗಿದೆ. ನಿಮಗೆ ಸರ್‌ಅನೆ ಬರುವ ಕೋಪ, ಯೋಚಿಸಿದೆ ಸರ್‌ಅನೆ ಮಾತನಾಡುವ ಗುಣ, ವೈರಿಯನ್ನು ವಿನಯದಿಂದ ಮಾತನಾಡಿಸಲು ಸಾಧ್ಯವಾಗದ ಉದ್ವಿಗ್ನತೆಗಳನ್ನು ನಿಯಂತ್ರಿಸಲು ಸಾಧ್ಯವಾದರೆ ವ್ಯಾಪಾರ, ವಹಿವಾಟು, ಕುಶಲ ಕಲಾ ವಸ್ತುಗಳ ಮಾರಾಟ, ಎಲೆಕ್ಟ್ರಾನಿಕ್ಸ್‌ ಗೂಡ್ಸ್‌ ವಿತರಣಾ ಘಟಕ ಇತ್ಯಾದಿಗಳನ್ನು ಗರಿಷ್ಠ ಲಾಭ ಬರುವಂತೆ ನಿರ್ವಹಿಸಬಲ್ಲ ಚಾಕಚಕ್ಯತೆ ಪಡೆಯುತ್ತೀರಿ. ಸಿನಿಮಾ ತಯಾರಿಕೆ, ವಿತರಣೆ ಅಥವಾ ಅಭಿನಯ ದಿಗ್ದಶರ್ನಗಳಲ್ಲಿ ವ್ಯತ್ಯಯಗಳು ಬಂದು ಪರದಾಟವಾಗಬಹುದು. ಗರಿಕೆ ಮತ್ತು ಕೆಂಪು ಹೂಗಳಿಂದ ಗಣೇಶನನ್ನು ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಧನಸ್ಸು: ಭೂ ವ್ಯವಹಾರ ಎಚ್ಚರಿಕೆ ಅಗತ್ಯ

ಫಟಾಫಟ್‌ ಎಲ್ಲವೂ ಆಗಬೇಕು ಎಂಬ ನಿಮ್ಮ ನಿರೀಕ್ಷೆಯನ್ನು ಗೆಲ್ಲಿಸುವುದು ಕಷ್ಟಕರವಾಗುವ ಸಮಯವಾಗಿದೆ ಇದು. ದುರ್ಗೆಯನ್ನು, ಶಕ್ತಿ ಮಾರುತಿಯನ್ನು ಆರಾಧಿಸಿ. ಭಾಷೆಯ ಬಗೆಗೆ, ಮಾತಿನ ಗಟ್ಟಿತನದ ಬಗೆಗೆ ಕಾಳಜಿ ಹೊಂದಿರುವಿರಾದರೂ ಮಾತನಾಡಿದಂತೆ ಕ್ಷಿಪ್ರವಾಗಿ ಆಡಿದ ಮಾತನ್ನು ಉಳಿಸಿಕೊಳ್ಳುವ ಚುರುಕುತನ ಪ್ರದರ್ಶಿಸಲೇಬೇಕು. ಮೇಧಾ ದಕ್ಷಿಣಾಮೂರ್ತಿಯನ್ನು ಅರಿಷಿಣ, ಅಕ್ಷತ, ಕುಂಕುಮ, ತ್ರಿದಳಗಳೊಂದಿಗೆ ಆರಾಧಿಸಿ. ವಿಷಮಯವಾಗಿರುವ ವರ್ತಮಾನವನ್ನು ಪರಿವರ್ತಿಸಿ, ಅಮೃತತ್ವಕ್ಕೆ ಹೊರಳಿಕೊಳ್ಳುವ ದಿಸೆಯತ್ತ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭೂ ವ್ಯವಹಾರದಲ್ಲಿ ಬಿಸಿ ತಾಪಗಳಿವೆ ಎಚ್ಚರಿಕೆ.
ಶುಭ ಸಂಖ್ಯೆ: 3 ಶುಭ ದಿಕ್ಕು: ದಕ್ಷಿಣ

ಮಕರ: ಆಲಸ್ಯ ಬಿಟ್ಟರೆ ಧನ ಲಾಭ

ಯಾರ ಹಂಗಿನಲ್ಲೂ ಹೆಜ್ಜೆ ಇರಿಸಲಾರೆ ಎನ್ನುವ ಹಟಕ್ಕೆ ಬೀಳಬೇಡಿ. ಕಾಲದ ಪ್ರಕ್ಷುಬ್ಧತೆಯಲ್ಲಿ ತೇಜೋವಧೆ ಮಾಡುವ ದುರಹಂಕಾರಿಗಳನ್ನು ಬಿಟ್ಟು ಯಾರ ಜತೆ ಬೇಕಾದರೂ ಹೆಜ್ಜೆ ಇರಿಸಿ. ಸಾಮಾಜಿಕ ಜನ ಜೀವನದ ಶಾಂತಿ, ನೆಮ್ಮದಿಗಳನ್ನು ಹಾಳು ಮಾಡುವ ಜನರ ಜತೆ ಸ್ನೇಹ ಬೇಡ. ಮಹತ್ವದ ನಿಮ್ಮ ಯೋಜನೆಗಳನ್ನು ಕೈ ಬಿಡುವ ಸ್ಥಿತಿಗೆ ಈ ಸ್ನೇಹ ಮುಂದೆ ದಾರಿ ಮಾಡಬಹುದಾಗಿದೆ. ಇಚ್ಛಾ ಶಕ್ತಿಯ ಪ್ರದರ್ಶನದಿಂದ ಗೋಜಲುಗಳು ಬೇಡ ಎಂಬ ಕೆಲಸವೇ ನಿಮಗೆ ಸುಲಭವಾಗುತ್ತದೆ. ಆದರೆ ನಿಮ್ಮ ಆಲಸ್ಯದಿಂದ ಹೊರಬನ್ನಿ. ವಿಷ್ಣು ಸಹಸ್ರನಾಮಾವಳಿ, ಹನುಮಾನ್‌ ಚಾಲೀಸ್‌ ಓದಿ, ಇದು ಧನ ಲಾಭಕ್ಕೆ ದಾರಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ

ಕುಂಭ: ಕಲಿಯುವ ಹಸಿವಿನಿಂದ ಲಾಭ

ಕಲಿತುಕೊಳ್ಳುವುದು ಅಗಾಧವಾದುದಿದೆ, ತಿಳಿದದ್ದು ಕಡಿಮೆಯಾಗಿದೆ ಎಂಬ ಜ್ಞಾನ ದಾಹದಿಂದಾಗಿ ಮಹತ್ವದ ಹೊಸದೇ ಕವಲುಗಳು ಬದುಕುವ ಮಾರ್ಗದಲ್ಲಿ ನಿಮಗೆ ವರವಾಗಿ ಒದಗಿ ಬರಲಿವೆ. ಧನ, ಧ್ಯಾನ, ಧಾನ್ಯ ಸಮೃದ್ಧಿಗೆ ಅವಕಾಶ ಹೇರಳ. ಆದರೆ ನಿಮ್ಮ ಉನ್ನತಿಯನ್ನು ಕ್ಷೀಣಗೊಳಿಸುವ ಅಪರ ಮಾರ್ಗಕ್ಕೆ ಇಳಿಯುವ ದುರ್ಬುದ್ಧಿಗಳು ನಿಮ್ಮನ್ನು ಬಸವಳಿಸಬಲ್ಲವು. ಯಾವಾಗಲೂ ಚೈತನ್ಯಮಯವಾದ, ಜಗದ ರಕ್ಷಕಿಯಾದ ಐಂದ್ರಿತಾಳನ್ನು ಆರಾಧಿಸಿ. ಕೆಂಪು ಬಟ್ಟೆಗಳು ಬೇಡ. ಕಪ್ಪು ಮತ್ತು ನೀಲಿ ಆವರಣಗಳಲ್ಲಿ ಗರುಡನ ರೂಪು ಮೂಡಿಸಿ ವಿನುತ ಪುತ್ರ ಗರುಡನನ್ನು ಆರಾಧಿಸಿ, ವರ್ಚಸ್ಸು ಸಂವರ್ಧಿಸಲಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ

ಮೀನ: ಈ ವಾರ ಕಬ್ಬಿಣದ ಸಹವಾಸ ಬೇಡ

ಕಬ್ಬಿಣದ ವ್ಯಾಪಾರದ ವಿಷಯಗದಲ್ಲಿ ಅಥವಾ ಕಬ್ಬಿಣದ ಸರಕುಗಳ ಸಂಗ್ರಹದಲ್ಲಿ ಆಸಕ್ತಿ ತೋರಬೇಡಿ. ಪ್ರಖ್ಯಾತ ಉದ್ಯಮಿಯೊಬ್ಬರು ಹಳೆಯ ಕಬ್ಬಿಣದ ಸರಕನ್ನು ಹಣಕೊಟ್ಟು ಖರೀದಿಸಿ ತಂದು ತಮ್ಮನ್ನು ಬಿಕ್ಕಟ್ಟಿಗೆ ಸಿಕ್ಕಿಸಿಕೊಂಡು ದಿವಾಳಿಯಾಗಿದ್ದಾರೆ ಎಂಬ ವಿಷಯವನ್ನು ನೆನಪಿಡಿ. ಹೊಸದೇ ವಿನ್ಯಾಸದೊಂದಿಗೆ ಈಗಿರುವ ವಹಿವಾಟಿನ ಚೌಕಟ್ಟನ್ನು ಸಮೃದ್ಧಿಗೊಳಿಸಿಕೊಳ್ಳಿ. ನಿಮ್ಮ ಮಕ್ಕಳು ತುಸು ಕಿರಿಕಿರಿ ತೋರಿಸಬಹುದು. ಬಾಳ ಸಂಗಾತಿಯನ್ನು ಕ್ಲಿಷ್ಟ ಸಂದರ್ಭದಲ್ಲಿ ಸೂಕ್ತ ಸಲಹೆಗಳಿಗಾಗಿ ಅವಲಂಬಿಸುವುದು ಸೂಕ್ತ ವಿಷಯವೇ. ಲಿಂಬೆಯ ಹಣ್ಣಿನ ಬಳಿ ಇರಿಸಿದ ಅರಿಷಿನದ ಬೇರಿನ ತುಂಡಿಗೆ ಅಕ್ಷತೆ ಹಾಕಿ ಶ್ರೀ ಲಕ್ಷ್ಮೀಯನ್ನು ಸ್ತುತಿಸಿ, ಕ್ಷೇಮವಾಗಿರುವಿರಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಆಗ್ನೇಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version