Site icon Vistara News

Ram Mandir: ರಾಮಮಂದಿರ ಉದ್ಘಾಟನೆಯ ಆಹ್ವಾನ ಪತ್ರಿಕೆ ಹೇಗಿದೆ? ಇಲ್ಲಿದೆ ವಿಡಿಯೊ

Ram Mandir Invitation

Ayodhya Ram Mandir consecration ceremony invitation video goes viral

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದ (Ram Mandir) ಲೋಕಾರ್ಪಣೆಗೆ ಕೇವಲ 18 ದಿನ ಬಾಕಿ ಉಳಿದಿವೆ. ಹಾಗಾಗಿ, ಅಯೋಧ್ಯೆಯಲ್ಲಿ (Ayodhya) ಅದ್ಧೂರಿ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಿನಿಮಾ, ರಾಜಕೀಯ, ಸಾರ್ವಜನಿಕ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ 6 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈಗ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ (Invitation Card) ವಿಡಿಯೊ ವೈರಲ್‌ ಆಗಿದ್ದು, ಆಹ್ವಾನ ಪತ್ರಿಕೆಯ ವಿನ್ಯಾಸ, ಅದರಲ್ಲಿರುವ ಅಂಶಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರ ಹೆಸರಿವೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯ ಅತಿಥಿಗಳು, ರಾಮಲಲ್ಲಾನ ಫೋಟೊ, ಜನವರಿ 22ರಂದು ನಡೆಯುವ ಕಾರ್ಯಕ್ರಮಗಳ ಪಟ್ಟಿ, ರಾಮಮಂದಿರದ ಇತಿಹಾಸ ಸಾರುವ ಅಂಶಗಳು ಆಹ್ವಾನ ಪತ್ರಿಕೆಯಲ್ಲಿವೆ. ದೂರದರ್ಶನ ನ್ಯಾಷನಲ್‌ ಚಾನೆಲ್‌ನ ಎಕ್ಸ್‌ ಖಾತೆಯಲ್ಲಿ ವಿಡಿಯೊ ಪೋಸ್ಟ್‌ ಮಾಡಲಾಗಿದ್ದು, ಇದು ಈಗ ವೈರಲ್‌ ಆಗಿದೆ.

ಸೆಲೆಬ್ರಿಟಿಗಳಿಗೆ ಆಹ್ವಾನ

ಸ್ಯಾಂಡಲ್‌ವುಡ್‌ನ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ರಾಮಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ.

ಧಾರ್ಮಿಕ ವಿಧಿವಿಧಾನಗಳ ವೇಳಾಪಟ್ಟಿ

ಜನವರಿ 16
ದೇವಸ್ಥಾನದ ಟ್ರಸ್ಟ್ ನೇಮಿಸಿದ ಆತಿಥೇಯರಿಂದ ಸರಯೂ ನದಿಯ ದಡದಲ್ಲಿ ದಶವಿದ್ ಸ್ನಾನ, ವಿಷ್ಣು ಪೂಜೆ ಮತ್ತು ಗೋದಾನ.

ಜನವರಿ 17
ರಾಮಲಲ್ಲಾ ಮೂರ್ತಿಯೊಂದಿಗೆ ಅಯೋಧ್ಯೆಯಲ್ಲಿ ಮೆರವಣಿಗೆ ನಡೆಯಲಿದ್ದು, ಭಕ್ತರು ಮಂಗಲ ಕಲಶದಲ್ಲಿ ಸರಯು ಜಲವನ್ನು ಹೊತ್ತು ದೇವಸ್ಥಾನಕ್ಕೆ ಬರಲಿದ್ದಾರೆ.

ಜನವರಿ 18
ಗಣೇಶ ಅಂಬಿಕಾ ಪೂಜೆಗಳೊಂದಿಗೆ ಔಪಚಾರಿಕ ಪೂಜಾ ವಿಧಿ ವಿಧಾನಗಳು ಶುರುವಾಗಲಿವೆ. ವರುಣ ಪೂಜೆ, ಮತ್ರಿಕಾ ಪೂಜೆ, ಬ್ರಾಹ್ಮಿಣ್ ವರನ್, ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 19
ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: Ram Mandir: ರಾಮಮಂದಿರ ಭದ್ರತೆಗೆ ಕೃತಕ ಬುದ್ಧಿಮತ್ತೆ ಬಲ; ಹೀಗಿದೆ ಹೈ ಸೆಕ್ಯುರಿಟಿ

ಜನವರಿ 20
ದೇವಾಲಯದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆದ ನಂತರ ವಾಸ್ತು ಶಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಜನವರಿ 21
125 ಕಲಶಗಳಿರುವ ದೈವ ಸ್ನಾನದ ನಂತರ ಶಯಾಧಿವಾಸ ನಡೆಯಲಿದೆ.

ಜನವರಿ 22
ಬೆಳಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version