Site icon Vistara News

Basava Jayanti 2023 : ಜಗದ ಜ್ಯೋತಿ, ವಿಶ್ವಗುರು ಶ್ರೀ ಬಸವೇಶ್ವರರು

Basava Jayanti 2023 What you ought to know about renowned philosopher Basaveshwara

#image_title

ಶ್ರೀ ಮ.ನಿ.ಪ್ರ. ಪ್ರಭು ಚನ್ನಬಸವ ಸ್ವಾಮೀಜಿ
ಜಂಗಮಲಿಂಗಕ್ಷೇತ್ರ, ಶ್ರೀಮೋಟಗಿಮಠ, ಅಥಣಿ.

ಆಯತದಲ್ಲಿ ಪೂರ್ವಾಚಾರಿಯ ಕಂಡೆ
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ
ಸನ್ನಿಹಿತದಲ್ಲಿ ಪೂರ್ವಾಚಾರಿಯ ಕಂಡೆ
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು

-ಅಲ್ಲಮಪ್ರಭು ದೇವರು

ಬಸವರಾಜಾ ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ;
ಈಶನ ಮೀಸಲಪ್ಪ ಭಕ್ತ ನಿನಗೆಣೆಯಿಲ್ಲ, ಪಡಿಯಿಲ್ಲ?
ಪಾಸಟಿಯಾವಂ?
ಪಾಷಂಡಿ ಭೂಮಿಯೊಳು ಶಿವಭಕ್ತಿಯನಾರಂಭಿಸಿ, ಸಾಮರ್ಥ್ಯಂ ಬಿತ್ತಿ
ಪ್ರತ್ಯಕ್ಷಂಗಳಂ ಬೆಳೆದು, ಗಣಪರ್ವಂಗಳಂ ಸುಫಲಂ ಮಾಡಲೆಂದು
ಬಂದ ಕಾರಣಿಕ ಬಸವಾ, ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು

-ಹರಿಹರ

ಬಸವ ಶರಣೆನೆ ಭವವಡಗುವುದು
ಬಸವ ಶರಣೆನೆ ಕೀರ್ತಿಯೆಸೆಯುವುದು
ಬಸವ ಶರಣೆನೆ ದುಸ್ಥಿತಿಗಳತ್ತತ್ತಲೋಡುವುವು
ಬಸವ ಶರಣೆನೆ ಸೌಖ್ಯಮೊದಗುಂ
ಬಸವ ಶರಣೆನೆ ಭಾಗ್ಯವಪ್ಪುಗು
ಬಸವ ಶರಣೆನೆ ಕಾಮಿತೋನ್ನತ ಸಿದ್ಧಿ ಸಿದ್ಧಿಸುಗು

-ಭೀಮಕವಿ

ಬಸವಂ ಭಕ್ತಿಗೆ ಮೂಲಂ
ಬಸವA ಕಾಲಂಗೆಕಾಲನನುಪಮಶೀಲಂ
ಬಸವA ಜಂಗಮಲೋಲಂ
ಬಸವಾ ರಕ್ಷಿಪುದೆನ್ನ ಸಂಗನಬಸವಾ

-ಪಾಲ್ಕುರಿಕೆ ಸೋಮನಾಥ

ಹನ್ನೆರಡನೇಯ ಶತಾಬ್ದಿಯ ಸ್ವರ್ಣೋಧ್ಯಾಯದ ಸಮಾನತೆಯ ಶಿಖರಸೂರ್ಯ ವಿಶ್ವಗುರು ಬಸವಣ್ಣನವರು. ವಿಶ್ವಕ್ಕೆ ಸಂಸತ್ತನ್ನು ಕೊಟ್ಟ ಪ್ರಥಮ ಪಿತಾಮಹ, ವಚನಾಂದೋಲನದ ಪ್ರಥಮ ನೇತಾರ, ನಾಡಿಗೆ ಇಷ್ಟಲಿಂಗ ಕೊಟ್ಟ ಪ್ರಥಮ ಹರಿಕಾರ, ಮಹಾಮಾನವತಾವಾದಿ.

ಕಲ್ಯಾಣವೆಂಬ ಪ್ರಣತಿಯಲ್ಲಿ ಬಹುಬೆಲೆ ಬಾಳುವ ಭಕ್ತಿರಸವೆಂಬ ತೈಲವನ್ನೆರೆದು ಬೆಳ್ಳಂಬೆಳಕಾಗಿ ಶಿವನ ಪ್ರಕಾಶದಂತೆ ತೊಳಗಿ ಬೆಳಗಿದ ವಿಶ್ವವಿಭೂತಿ ಬಸವಣ್ಣನವರು ಮುತ್ತಿನಹಾರದಂತೆ ನುಡಿದು, ಲಿಂಗಮೆಚ್ಚಿ ಅಹುದು ಎಂಬಂತೆ ನಡೆದು, ಸಾರ್ವಕಾಲಿಕವೂ ಶಾಶ್ವತವೂ ಆದ ವಿಶ್ವತತ್ವಗಳನ್ನು ಸಾರಿದವರು. ಇಂಗಳೇಶ್ವರದ ಮಂಗಳಮೂರ್ತಿಯಾದ ಇವರು ಶಿವಾನುಭವದ ಸಾಕಾರಮೂರ್ತಿಯಾಗಿ ಜಂಗಮ ಶಿವಶಾಸನದಂತೆ ಬಾಳಿದವರು. ದೇಶ-ಕಾಲ-ಜಾತಿ-ಕುಲ-ಮತಗಳ ಮಾನವ ನಿರ್ಮಿತ ಸಂಕುಚಿತ ಸೀಮಾರೇಖೆಯನ್ನು ಸೀಮೋಲ್ಲಂಘನಗೈದು ಕಾಯಕ ತತ್ವದ ತಾರಕ ಮಂತ್ರವನ್ನು ಉಪದೇಶಿಸಿ ದಕ್ಷಿಣ ಭಾರತದಲ್ಲಿ ಮೊದಲ ಸ್ವತಂತ್ರ ಕನ್ನಡ ಧರ್ಮವನ್ನು ಕೊಟ್ಟವರು ಬಸವಣ್ಣನವರು. ‘ಲಿಂಗಾಯತ ಧರ್ಮ’ ಬಸವಣ್ಣನವರು ನೀಡಿದ ಮೊದಲ ಪ್ರಜಾಸತ್ತಾತ್ಮಕ ಧರ್ಮವಾಗಿದೆ.ಇದರ ನೇತಾರ ಶ್ರೀ ಬಸವಣ್ಣ.

ದಲಿತೋದ್ಧಾರಕ, ಮಹಿಳಾ ಸ್ವಾತಂತ್ರ್ಯ ನೀಡಿದ ಸಮತಾವಾದಿ, ವಚನಕಾರ ಸಮಾಜೋಧಾರ್ಮಿಕ ಚಳುವಳಿಯ ವಿಶ್ವಚೇತನ ಶ್ರೀ ಬಸವಣ್ಣನವರು. ಅರ್ಥರ್ ಮೈಲ್ಸ್ ಹೇಳುವಂತೆ, ‘ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣ’ ಎಂದು ಬಣ್ಣಿಸುತ್ತಾರೆ.ಬಸವಣ್ಣನವರು ಹೊಸದೊಂದು ಧರ್ಮ ನೀಡಿದರು.

ರಾಷ್ಟ್ರಕವಿ ಕುವೆಂಪು ಹೀಗೆ ಹೇಳುತ್ತಾರೆ;
ಕಾರ್ತಿಕದ ಕತ್ತಲಲಿ ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿದಿಕ್ಕಾಗಿ
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತ ಓ ಅಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಬಸವೇಶ್ವರಾ!
ಜಾತಿ ಪದ್ಧತಿಯ ಹೋಮಕೂಪಕ್ಕೆ
ಬಿದ್ದು, ವೈದಿಕರ ಯಜ್ಞ ತಾಪಕ್ಕೆ
ಬಲಿವೋದ ದಲಿತ ಜೀವರನೆತ್ತಿಮತಿ ವಿಚಾರಕ್ಕೆ
ಕಾಯಕದ ದಿವ್ಯತತ್ತ್ವ ದಾಸುಕ್ಷೇಮ ಧರ್ಮನಾಶಕ್ಕೆ
ನಡೆಸಿದ ಮಹಾತ್ಮನೆ ನಿನಗೆ ನಮೋ ನಮಃ|
ಇಂದಿಗೂ ನಾವು ನಿನ್ನೆತ್ತರಕೆ ಏಳಲಾರದೆ ಅಯ್ಯಾ
ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹೆವಯ್ಯ!
ಬಾರಯ್ಯ ಕೈ ಹಿಡಿದೆತ್ತಿ ಬದುಕಿಸು ನಮ್ಮನೆಳೆದು
ವರ್ಣಾಶ್ರಮದ ಹೆಸರ ಹೊಲೆಗೆಸರ ವಂಚನೆಯ ಹೊಂಡದಿಂದೆ!
ಭಕ್ತಿ ಗಂಗೆಯನೆರೆದು
ಭಾಗವತ ಶಕ್ತಿಯಂ ಕರೆದು
ಮತ ಮೌಢ್ಯದ ಜ್ಞಾನಕಂಪವನು ತೊಳೆದು
ರುಚಿಗೊಳಿಸು ವಿಜ್ಞಾನ ವೇದಾಂತ ತೀರ್ಥದಿಂದೆ

ಚಾರಿತ್ರಿಕ ಯುಗಪುರುಷ ಬಸವಣ್ಣನವರ ಕುರಿತು ಮೂಡಿಬಂದಷ್ಟು ಪುರಾಣಗಳು ಕಾವ್ಯಗಳು ಚರಿತ್ರೆಗಳು ವಚನಗಳು ಮತ್ತಾವ ವ್ಯಕ್ತಿಗಳ ಕುರಿತು ಬಂದಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಶಂಭು ಶಿವನಾಗಿ ದರ್ಶನವಿತ್ತರೆ; ದ್ವಿತೀಯ ಶಂಭುವಾಗಿ ಭುವಿಯ ಬೆಳಗಿದ ಭಾಗ್ಯವಿಧಾತ ಬಸವಣ್ಣನವರು.

ಬಸವಣ್ಣನವರ ಕುರಿತು ಕಾವ್ಯಗಳು

ಅರ್ಜುನವಾಡದ ಶಾಸನ ಬಸವಣ್ಣನವರನ್ನು ಚಾರಿತ್ರಿಕ ವ್ಯಕ್ತಿಯೆಂದು ಸಾಬೀತು ಮಾಡಿದರೆ, ಬಸವಣ್ಣನವರನ್ನು ಕುರಿತು ಮೊಟ್ಟ ಮೊದಲ ಕೃತಿ ಹೊರಬಂದದ್ದು ಹರಿಹರನಿಂದ. ಹರಿಹರನ ಬಸವರಾಜ ದೇವರ ರಗಳೆ ಮೊದಲ ಕೃತಿಯೆಂಬ ಕೀರ್ತಿಗೆ ಪಾತ್ರವಾಗಿದೆ. ತದನಂತರ ಪಾಲ್ಕುರಿಕೆ ಸೋಮನಾಥನು ತೆಲುಗು ಭಾಷೆಯಲ್ಲಿ ಬಸವ ಪುರಾಣವನ್ನು ರಚಿಸಿದನು. ಈ ಕೃತಿಯನ್ನು ಆಧರಿಸಿ ಭೀಮಕವಿ ಕನ್ನಡದಲ್ಲಿ ಬಸವ ಪುರಾಣವನ್ನು ಅನುವಾದಿಸಿದನು. ಸಿಂಗಿರಾಜನ ‘ಅಮಲ ಬಸವರಾಜ ಚಾರಿತ್ರ’, ಷಡಕ್ಷರದೇವನ ‘ಬಸವರಾಜ ವಿಜಯಂ’ ಮೊದಲಾದ ಕೃತಿಗಳು ಬಸವಣ್ಣನವರ ಘನವ್ಯಕ್ತಿತ್ವವನ್ನು ಲೋಕಕ್ಕೆ ಸಾರುವ ಅಮೂಲ್ಯ ಆಕರಗಳಾಗಿವೆ.

ಭುವನ ಭಾಗ್ಯೋದಯ!

ಐತಿಹಾಸಿಕ ನಗರಿ ವಿಜಯಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣನವರ ಉದಯದಿಂದ ಅದು ‘ಬಸವನ ಬಾಗೇವಾಡಿ’ಯಾಯಿತು. ಇಲ್ಲಿ ಸುಪ್ರಸಿದ್ಧ ಅಗ್ರಹಾರವಿತ್ತು. ಹೆಚ್ಚಾಗಿ ಶೈವಬ್ರಾಹ್ಮಣರು ವಾಸವಾಗಿದ್ದರು. ಈ ಅಗ್ರಹಾರದ ಅಧಿಪತಿ ಮಂಡಿಗೆಯ ಮಾದಿರಾಜ.ಕಮ್ಮೆಕುಲದ ವಂಶಸ್ಥನಾದ ಮಾದರಸ ಮತ್ತು ಮಾದಲಾಂಬಿಕೆಯರು ಆದರ್ಶ ದಂಪತಿಗಳು.ಮಾದಲಾಂಬಿಕೆಯವರ ತವರುಮನೆ ಇಂಗಳೇಶ್ವರ. ಇಂತಹ ದಂಪತಿಗಳ ಪುಣ್ಯೋದರದಿಂದ ಕ್ರಿ.ಶ.1131 ರಲ್ಲಿ ಅವತರಿಸಿದ ಅರಿವ ಮಹಾಮೂರ್ತಿ ಶ್ರೀ ಬಸವಣ್ಣನವರು.

ಬಸವಣ್ಣನ ಸಹೋದರ ದೇವರಾಜು, ಅಕ್ಕ ನಾಗಲಾಂಬಿಕೆ.ಕಿರಿಯ ಪುತ್ರನೇ ಬಸವಣ್ಣ. ಹುಟ್ಟುತ್ತಲೇ ಕೆಳವರ್ಗದ ಬಂಧುವಿನ ಬಂಧನ ಬಗೆಹರಿಸಿದ ಪರಮಾವತಾರಿ. ಮುಂದೆ ಬಾಗೇವಾಡಿಯಲ್ಲಿ ಬಸವಣ್ಣ ಬೆಳೆಯತೊಡಗಿದ. ವಯಸ್ಸಿಗೆ ಮೀರಿದ ಕುತೂಹಲ, ಅಪರೂಪದ ಜಾಣ್ಮೆ, ಎಚ್ಚೆತ್ತ ಚೇತನ; ಆಗಲೇ ಎಚ್ಚರಿಕೆಯ ಜೀವನ ಅರಿತಿದ್ದ ಸೂಕ್ಷ್ಮಗ್ರಾಹಿ! ಬ್ರಾಹ್ಮಣ ಪದ್ಧತಿಯಂತೆ ಬಸವಣ್ಣನಿಗೆ ಎಂಟನೆಯ ವಯಸ್ಸಿಗೆ ‘ಉಪನಯನ’ ನೆರವೇರಿಸಲು ಸಿದ್ಧತೆಗೆ ಸನ್ನದ್ಧರಾದರು. ಅಕ್ಕಳಿಗೂ ಈ ಉಪನಯನ ಮಾಡಿಸಿರಿ, ಅಂದಾಗ ಮಾತ್ರ ನಾನೂ ಉಪನಯನ ಮಾಡಿಕೊಳ್ಳುತ್ತೇನೆ ಎಂದ. ಕರ್ಮಲತೆಯಂತಿದ್ದ ‘ಉಪನಯನ’ ವೈದಿಕಾಚರಣೆಗಳು ಬೇಡವಾಗಿದ್ದವು. ಹಠ ಹಿಡಿಯುತ್ತಾನೆ.

ಕೂಡಲ ಸಂಗಮದೆಡೆಗೆ…

ಬಸವಣ್ಣನ ಮಾತಿಗೆ ಸಹಮತ ಸಿಗದಾದಾಗ ಈ ಸಂಪ್ರದಾಯವಾದಿಗಳ ಸಹವಾಸವೇ ಸಾಕು ಎಂದು ಮನೆಯ ಬಿಟ್ಟು ಹೊರಟನು. ಕೂಡಲಸಂಗಮಕ್ಕೆ ಬರುತ್ತಾನೆ. ಕೂಡಲಸಂಗಮವು ಆ ಕಾಲದಲ್ಲಿ ಒಂದು ದೊಡ್ಡ ವಿದ್ಯಾಕೇಂದ್ರವಾಗಿತ್ತು. ತಮ್ಮ ಮನೆ ಬಿಟ್ಟು, ಬಂಧು ಬಳಗ ಬಿಟ್ಟು ಹೊರಟಾಗ ಒಡಹುಟ್ಟಿದ ಅಕ್ಕ ನಾಗಲಾಂಬಿಕೆ ತಮ್ಮನೊಂದಿಗೆ ಹೊರಟು ನಿಲ್ಲುತ್ತಾಳೆ. ಆತನನ್ನೆ ಹಿಂಬಾಲಿಸುತ್ತಾಳೆ.

ಈ ವೇಳೆಗೆ ಅಕ್ಕ ನಾಗಲಾಂಬಿಕೆಗೆ ಶಿವಸ್ವಾಮಿ ಅವರೊಂದಿಗೆ ವಿವಾಹವಾಗಿತ್ತು. ಬೆನ್ನ ಹಿಂದಿನ ನೆರಳಿನಂತೆ ಬಸವಣ್ಣನವರಿಗೆ ಬೆಂಗಾವಲಾಗಿ ನಿಂತ ‘ಶಕ್ತಿಗಂಗೋತ್ರಿ’ ಅಕ್ಕನಾಗಲಾಂಬಿಕಾತಾಯಿ. ಕೂಡಲಸಂಗಮ ಕ್ಷೇತ್ರದೊಳಗೆ ಅಪರೂಪದ ಗುರುಕುಲದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಬಸವಣ್ಣ ಅಲ್ಲಿ ವಿದ್ಯಾರ್ಜನೆ ಪೂರೈಸಿದನು. ಪುಟಕ್ಕಿಟ್ಟ ಚಿನ್ನವಾದನು. ಸಾಧನೆಯ ಅರಿವಿನ ಮೂರ್ತಿಯಾದನು. ಸಂಸ್ಕೃತ, ಹಳೆಗನ್ನಡ ಭಾಷೆಗಳು ಪರವಶವಾದವು. ಸಂಗಮದ ಸಾಧನಾ ರಂಗದಲ್ಲಿ ಸಂಪ್ರದಾಯ, ವೈಚಾರಿಕತೆ, ಮಾನವತೆ ಹೀಗೆ ಅನೇಕ ಮಹತ್ವದ ವಿಷಯಗಳು ಬಸವಣ್ಣನಿಗೆ ಗೋಚರಿಸತೊಡಗಿದವು.ವಯಸ್ಸು ಪ್ರೌಢಾವಸ್ಥೆಗೆ ಬಂದಿತು.

ಕಲ್ಯಾಣ ಮಹೋತ್ಸವ

ತಾಯಿ ಮಾದಲಾಂಬಿಕೆಯ ಅಣ್ಣ ಬಲದೇವರು ಕಳಚೂರಿ ವಂಶದ ಬಿಜ್ಜಳ ಮಹಾರಾಜನ ದಂಡನಾಯಕರಾಗಿದ್ದರು. ಬಲದೇವ ಬಸವಣ್ಣನ ಸೋದರಮಾವ; ಬಸವಣ್ಣನ ಕೀರ್ತಿ ಅದಾಗಲೆ ಕಲ್ಯಾಣ ತಲುಪಿತ್ತು.ಬಸವಣ್ಣನನ್ನು ಅರಸಿ ಕೂಡಲಸಂಗಮಕ್ಕೆ ಬಂದ ಬಲದೇವ ಮಂತ್ರಿ ಬಸವಣ್ಣನನ್ನು ನೋಡಿ ಸಂತಸಗೊಂಡ. ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿಸಲು ಮುಂದಾದ. ಅಕ್ಕ ಹಾಗೂ ಬಲದೇವರು ಸೇರಿ ಬಸವಣ್ಣನನ್ನು ಒಪ್ಪಿಸಿ ಗಂಗಾಂಬಿಕೆಯೊಂದಿಗೆ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರು. ಮಂಗಳವೇಡೆಯಲ್ಲಿ ಅಕ್ಕನಾಗಲಾಂಬಿಕೆ ಪತಿ ಶಿವದೇವರು, ತಮ್ಮ ಬಸವಣ್ಣನವರು ನೆಲೆ ನಿಂತರು.

ಬಿಜ್ಜಳ ಮಹಾರಾಜನ ಮತ್ತೋರ್ವ ದಂಡನಾಯಕನಾಗಿದ್ದನು ಸಿದ್ಧರಸ. ರಾಜಕರ‍್ಯಗಳಲ್ಲಿ ತೊಡಗಿದಾಗ ಅಚಾತರ‍್ಯದಿಂದ ಸಿದ್ಧರಸ ದಂಪತಿಗಳು ಕಾಲವಾದರು. ಅವರಿಗೆ ಓರ್ವ ಮಗಳಿದ್ದಳು. ಬಾಲ್ಯದಿಂದಲೂ ಅವಳನ್ನು ಸಾಕಿ ಸಲುಹಿದವರು ಬಿಜ್ಜಳ ಮಹಾರಾಜರು. ಅವಳೇ ಶ್ರೀ ನೀಲಾಂಬಿಕೆ.ಬಸವಣ್ಣನ ವಿನಯ, ವಿದ್ವತ್ತು. ಪ್ರೌಢಿಮೆ ಅರಿತು ಮಹಾರಾಜರು ಗಂಗಾಂಬಿಕೆಯೊಂದಿಗೆ ನೀಲಾಂಬಿಕೆಯನ್ನೂ ಕೊಟ್ಟು ವಿವಾಹ ಮಾಡಿದರು. ಬಸವಣ್ಣನವರು ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ಬಾಳಿನ ಆದರ್ಶ ಪತಿದೇವರಾದರು.

ಪ್ರಧಾನ ಮಂತ್ರಿ ಪಟ್ಟ

ಭಗವದವತಾರವೇ ಮೈವೆತ್ತು ಬಂದ ಬಸವಣ್ಣ, ಜನಮಾನಸದ ಏಳ್ಗೆಗಾಗಿಯೇ ಅವತರಿಸಿದ ಮನುಕುಲೋದ್ಧಾರಿ! ಅಪಾರ ಅಧ್ಯಯನ, ಆರ್ಥಿಕ ಸೂಕ್ಷ್ಮತೆ, ಆಡಳಿತ ಪ್ರಜ್ಞೆ, ಸಮಾಜ ಸಂವೇದನೆ, ಸಾಹಿತ್ಯ ಆಲೋಚನೆ ಹೀಗೆ ಎಲ್ಲ ವ್ಯಕ್ತಿತ್ವಗಳ ಸಂಗಮವಾಗಿದ್ದರು! ಓರ್ವ ಪರಿಪೂರ್ಣ ಜಂಗಮರಾಗಿದ್ದರು. ಪೂರ್ವದ ಚಾಲುಕ್ಯರು ಅಡಗಿಸಿಟ್ಟಿದ್ದ ಅರವತ್ತಾರು ಕೋಟಿ ಹೊನ್ನಿನ ಸ್ಥಳವನ್ನು ಪರಿಶೀಲಿಸಿ ಹೇಳಿದರು.

ಬಸವಣ್ಣನವರ ಬೆಳವಣಿಗೆಯನ್ನು ಅರಿತ ಬಿಜ್ಜಳ ಮಹಾರಾಜನು ಬಲದೇವರಸರ ಮಂತ್ರಿಪದವಿಯನ್ನು ಬಸವಣ್ಣನವರಿಗೆ ನೀಡಿದರು.ಯಾವ ಪದವಿ ಪ್ರಶಸ್ತಿಗಳಿಗೆ ಮನಸೋಲದ ಬಸವಣ್ಣ ನಾಡವರ ಏಳ್ಗೆಗಾಗಿ ಸೇವೆ ಎಂದು ಒಪ್ಪಿಕೊಂಡರು. ಬಿಜ್ಜಳ ಮಹಾರಾಜನ ಪ್ರಧಾನ ಮಂತ್ರಿಯಾಗಿ ಆರ್ಥಿಕ, ಸಾಮಾಜಿಕ ಎಲ್ಲ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದರು. ಇದರಿಂದ ಸಂತಸಗೊಂಡ ಬಿಜ್ಜಳ ಮಹಾರಾಜ ಇವರನ್ನು ಕಲ್ಯಾಣದ ಮಹಾಪ್ರಧಾನಿಯನ್ನಾಗಿ ಮಾಡಿದರು. ಬಸವಣ್ಣನವರಿಂದ ರಾಜ್ಯವು ಸುಭಿಕ್ಷೆಯಿಂದ ಕಂಗೊಳಿಸತೊಡಗಿತು.

ಮಹಾಮನೆಯ ಮೌಕ್ತಿಕದಚ್ಚು

ಕಲ್ಯಾಣದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿಕಾರಿ ಕೆಲಸಗಳ ಜೊತೆಗೆ ಜನಸಾಮಾನ್ಯರಿಗೂ ಧರ್ಮ ತತ್ವ ಸಿದ್ಧಾಂತಗಳ ಅರಿವು ಆಗಬೇಕು.ಅವರಲ್ಲಿ ವೈಚಾರಿಕ ಪ್ರಜ್ಞೆ ಮೂಡಬೇಕು. ಸಮಾನತೆ-ಕಾಯಕ-ದಾಸೋಹ ತತ್ವಗಳು ಅನುಷ್ಠಾನಕ್ಕೆ ಬರಬೇಕೆಂದು ಬಸವಣ್ಣನವರು ಬಯಸಿದರು. ಅದಕ್ಕಾಗಿ ‘ಅನುಭವ ಮಂಟಪ’ ಮಹಾಮನೆಯನ್ನು ನಿರ್ಮಿಸಿದರು. ಇಷ್ಟಲಿಂಗದ ಅನುಸಂಧಾನ, ವಚನ ರಚನೆ ಮೊದಲಾದ ಕಾರ್ಯಗಳ ಜೊತೆಗೆ ಶತಶತಮಾನಗಳಿಂದ ಅಸ್ಪೃಶ್ಯತೆಯ ಕಳಂಕದಿಂದ ಬದುಕುತ್ತಿದ್ದ ಜನರ ನೋವಿಗೆ ಸ್ಪಂದಿಸಿದರು.ಅವರ ಬಾಳಿನಲ್ಲಿ ಬೆಳಕು ಮೂಡಿಸಿದರು.

ಬಸವಣ್ಣನವರ ಈ ಕೀರ್ತಿ ವಾರ್ತೆಯನ್ನು ಕೇಳಿ ದೇಶ ವಿದೇಶದಿಂದ ಜನರು ಕಲ್ಯಾಣಕ್ಕೆ ಆಗಮಿಸಿದರು.ಕಾಶ್ಮೀರದ ಅರಸು ಮಾರಯ್ಯ ತನ್ನ ಅರಸೊತ್ತಿಗೆಯನ್ನೇ ಧಿಕ್ಕರಿಸಿ ಕಲ್ಯಾಣಕ್ಕೆ ಬಂದ. ಮಹಾರಾಷ್ಟ್ರ, ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕಂದಹಾರ (ಇಂದಿನ ಅಫಘಾನಿಸ್ತಾನ) ಮೊದಲಾದ ಕಡೆಗಳಿಂದ ಕಾಯಕಜೀವಿಗಳು ಕಲ್ಯಾಣಪುರ ಪ್ರವೇಶಿಸಿದರು. ಕಲ್ಯಾಣದಲ್ಲಿ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರು ನೆಲೆ ನಿಂತರು. ಅವರಿಗೆಲ್ಲ ಬಸವಣ್ಣನವರ ಮಹಾಮನೆಯಲ್ಲಿ ನಿತ್ಯ ಪ್ರಸಾದ ವ್ಯವಸ್ಥೆಯಾಯಿತು.ಇವರೆಲ್ಲರ ಸಹಕಾರದಿಂದ ಬಸವಣ್ಣನವರು ‘ಅನುಭವ ಮಂಟಪ’ ಎಂಬ ಸಂಸತ್ತನ್ನು ನಿರ್ಮಿಸಿದರು. ಶೂನ್ಯಪೀಠವನ್ನು ಸ್ಥಾಪಿಸಿದರು.

ಈ ಪೀಠಕ್ಕೆ ಕೆಳವರ್ಗದ ಮಹಾಜ್ಞಾನಿ ಅಲ್ಲಮನನ್ನು ಅಧ್ಯಕ್ಷನನ್ನಾಗಿ ಮಾಡಿ ಸಮಾನತೆಯ ಕ್ರಾಂತಿಗೆ ನಾಂದಿ ಹಾಡಿದರು. 770 ಅಮರಗಣಂಗಳು ಸಂಸದರಂತೆ ಕಾರ್ಯ ನಿರ್ವಹಿಸಿದರು. ಆಧ್ಯಾತ್ಮಿಕ ಸಾಮ್ರಾಜ್ಯವೇ ನಿರ್ಮಾಣವಾಯಿತು. ಕಲ್ಯಾಣ ಕೈಲಾಸವಾಯಿತು.

ಕಾಯಕಜೀವಿಗಳ ಸಂಘಟನೆ

‘ಆರಂಭ ಮಾಡುವೆ ಗುರುಪೂಜೆಗೆಂದು’ ಎಂದು ಭಾವಿಸಿದ್ದ ಬಸವಣ್ಣನವರು ಕಲ್ಯಾಣ ರಾಜ್ಯದಲ್ಲಿ ಪ್ರತಿಯೊಬ್ಬರೂ ಕಾಯಕ ಮಾಡಿಯೇ ಪ್ರಸಾದ ಮಾಡಬೇಕೆಂದು ಆದೇಶ ನೀಡಿದರು. ಕಸ ಹೊಡೆಯುವುದರಿಂದ-ಕಲಶದವರೆಗೆ, ಪತ್ರಿ ಎತ್ತುವುದರಿಂದ ಹಿಡಿದು ಪಾದರಕ್ಷೆಯ ತಯಾರಿಸುವವರೆಗೆ, ಎಲ್ಲರೂ ನಿತ್ಯ ಕಾಯಕದಲ್ಲಿ ನಿರತರಾದರು. ಕಲ್ಯಾಣ ಎನ್ನುವುದು ಕೇವಲ ಒಂದು ಪುರವಾಗಿ, ಪ್ರದೇಶವಾಗಿ ಉಳಿಯಲಿಲ್ಲ. ಅದು ಕಲ್ಯಾಣ ರಾಜ್ಯವಾಯಿತು. 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಹೇಳಿದ್ದು ಕಾಯಕ ಜೀವಿಗಳ ಸಂಘಟನೆಯನ್ನು, 12ನೇ ಶತಮಾನದಲ್ಲಿ ಸಂಘಟನೆ ಮಾಡಿ ಪ್ರತಿಯೊಬ್ಬ ಶರಣರಿಗೆ ಕಾಯಕವೇ ಕೈಲಾಸವಾಯಿತು.

ದಾಸೋಹವೇ ಪ್ರಾಣಜೀವಾಳ

ಕಾಯಕದಿಂದ ಬಂದದ್ದನ್ನು ಕೂಡಿಡದೆ ಅದನ್ನು ಸಮಾಜಕ್ಕೆ ಬಳಸಬೇಕು ಎನ್ನುವ ದೈವೀಭಾವವೇ ದಾಸೋಹ. ಹಸಿದವರಿಗೆ, ನೊಂದವರಿಗೆ, ನಿರಾಶ್ರಿತರಿಗೆ ಉಣಿಸಿ ಉಣ್ಣುವ ಶರಣಾಗತಿ ಭಾವವೇ ಅದಾಗಿದೆ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂದು ಬಸವಣ್ಣನವರು ಕೇಳಿಕೊಂಡರು.ಕಲ್ಯಾಣದ ಮಹಾಮಾರ್ಗದಲ್ಲಿ ಎಲ್ಲರೂ ನೀಡುವವರೇ ಇದ್ದರು. ‘ಬೇಡುವವರಿಲ್ಲದೆ ಬಡವನಾದೆ’ ಎಂದರು ಬಸವಣ್ಣನವರು.

ಅನುಭವ ಮಂಟಪ

ವಿಶ್ವದ ಎಲ್ಲ ಅನುಭಾವಿಗಳು, ಕಾಯಕಜೀವಿಗಳು ಸಂಗಮಗೊಂಡ ಅವಿಮುಕ್ತ ಕ್ಷೇತ್ರವೇ ಅನುಭವ ಮಂಟಪ! ವಿಶ್ವದ ಪ್ರಥಮ ಸಂಸತ್ತನ್ನು ನಿರ್ಮಿಸಿದ ನಿರ್ಮಾತೃ ಬಸವಣ್ಣನವರು. ಪ್ರತಿಯೊಬ್ಬರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಸಮಾನತೆಯಿಂದ ಬದುಕಬೇಕೆಂಬ ಆಶಯದ ಆಡುಂಬೊಲ ಈ ಅನುಭವ ಮಂಟಪ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಭಾವಜೀವಿಗಳು ಬಸವಣ್ಣನವರ ಕೀರ್ತಿವಾರ್ತೆಗಳನ್ನು ಕೇಳಿ ಅನುಭವ ಮಂಟಪಕ್ಕೆ ಬಂದರು.

ವೈರಾಗ್ಯನಿಧಿ ಅಲ್ಲಮ ಪ್ರಭುದೇವರು ಇದರ ಅಧ್ಯಕ್ಷರಾದರು. ಶಾಂತರಸರು ವಚನ ಭಂಡಾರಿಯಾದರು. ಎಲ್ಲ ಶರಣ ಸಮೂಹ ಅನುಭವ ಮಂಟಪದ ಕರ್ಣಧಾರತ್ವ ವಹಿಸಿಕೊಂಡರು. ಪ್ರಜಾಪ್ರಭುತ್ವದ ಪ್ರತೀಕದಂತಿದ್ದ ಅನುಭಾವಿಗಳ ಒಡ್ಡೋಲಗವದು.ಅಲ್ಲಿ ಪ್ರಧಾನವಾದುದು ಕುಲವಲ್ಲ ಶೀಲ. ಉಚ್ಚನೀಚ ಭಾವದ ಕೊಚ್ಚೆ, ಜಾತಿಭೇದದ ದುರ್ಗಂಧ ಅಲ್ಲಿ ಇರಲಿಲ್ಲ. ಹೀಗೆ ಸದಾಚಾರ ಸದ್ಭಕ್ತಿಗಳೇ ಸೋಪಾನವಾಗಿದ್ದ ಈ ಶಿವಾನುಭವ ಮಂಟಪದ ಸದಸ್ಯರೆಲ್ಲ ಸಮಾನವಾಗಿ ಸವಿದರು. ಸಾನುಕಂಪದ ದ್ಯೋತಕವಾದ ಈ ಅನುಭವ ಮಂಟಪದಲ್ಲಿ ವರ್ಣಸಂಕರ ಭಾವನೆಯನ್ನು ಸೂತಕವೆಂದು ದೂರೀಕರಿಸಿ ಸರ್ವಸಮಾನತೆಯ ಸೋದರಭಾವನೆಯಿಂದ ಅದರೊಳಕ್ಕೆ ಬರಲು ಎಲ್ಲರಿಗೂ ಸ್ವಾಗತ ನೀಡಿದರು.

ದಶದಿಕ್ಕಿಗೂ ಅದರ ಹೆಚ್ಚಳದ ಹಿರಿಮೆ ಹಬ್ಬಿತು. ಆಂಧ್ರ, ತಮಿಳುನಾಡು, ಸೌರಾಷ್ಟ್ರದಿಗಳಿಂದ ಮುಮುಕ್ಷಗಳನೇಕರು ಅಲ್ಲಿಗೆ ಆಕರ್ಷಿತರಾದರು. ಇದರ ಶ್ರೇಯಸ್ಸಿನ ಬಹುಪಾಲು ಬಸವಣ್ಣನವರಿಗೆ ಸಲ್ಲುತ್ತದೆ. ಸಂಪ್ರದಾಯಬದ್ಧವಾಗಿ ಬಂದಿದ್ದ ವರ್ಣಭೇದದ ವಜ್ರ ಭಿತ್ತಿಯನ್ನು ಶಿಥಿಲಗೊಳಿಸಿ, ತಪ್ಪುಭಾವನೆಯನ್ನು ತೊರೆದು ವರ್ಗಭೇದವನ್ನು ತೊಡೆದು, ಅಡುಗೆಯ ಮನೆಗಷ್ಟೇ ಸೀಮಿತವಾಗಿದ್ದ ಸ್ತ್ರೀಯರಿಗೆ ಅನುಭವ ಮಂಟಪದಲ್ಲಿಯೂ ಸಮಾನ ಸ್ಥಾನವನ್ನಿತ್ತು ಅಂದಿನ ಸಮಾಜದಲ್ಲಿ ಅಪೂರ್ವವಾದ ಒಂದು ಪ್ರೇಮ ಪ್ರಭಾವಳಿಯನ್ನು ನಿರ್ಮಿಸಿದ ಕೀರ್ತಿ ಬಸವಣ್ಣನವರದು.

ಕರ್ತಾರನ ಕಮ್ಮಟ!

ಭಾರತ ಮೌಢ್ಯದ ಮನೆ, ಕಂದಾಚಾರದ ಕೊಂಪೆ. ಕಲ್ಲು ನಾಗರಿಗೆ ಹಾಲೆರೆವ, ಉಣ್ಣದ ಲಿಂಗಕ್ಕೆ ಬೋನ ಹಿಡಿವ, ನೀರು ಕಂಡಲ್ಲಿ ಮುಳುಗುವ, ಮರ ಸಿಕ್ಕಲ್ಲಿ ಸುತ್ತುವ, ಮಡಕೆ ದೈವ, ಮೊರದೈವ ಎಂದು ನೂರೆಂಟು ಗತಿಗೆಟ್ಟ ದೈವಂಗಳನ್ನು ಪೂಜಿಸುವ, ಹೆಜ್ಜೆಗೊಂದು ಶಕುನ, ಬಿದ್ದರೊಂದು ಶಾಸ್ತ್ರ ಕೇಳುವ ಮೌಢ್ಯಕ್ಕೆ ಒಲಿದು, ಸಹಜತೆಯನ್ನು ಮರೆತವರೇ ಬಹಳ. ಇವರಿಗೆ ನಡೆನುಡಿಯಲ್ಲಿ ಮಡಿಯಾಗಿರುವುದನ್ನು ಕಲಿಸಿದರು ಬಸವಣ್ಣನವರು.
ಧರ್ಮ ಎಂಬುದು ಒಂದು ಜೀವನವಿಧಾನ. ಬಸವಣ್ಣನಲ್ಲಿ ಶ್ರೇಷ್ಠ ಮಾನವತೆ ನಿಜವಾದ ಧರ್ಮ. ಅಂತಹ ಧರ್ಮವನ್ನು ಅಪ್ಪಿದ, ಜಾತೀಯತೆಯನ್ನು ದ್ವೇಷಿಸಿದ. ಅದೇ ರೀತಿ ದೈವದ ಅಸ್ತಿತ್ವವನ್ನು ಒಪ್ಪಿದ, ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿದ.

ಅವನು ದೇವರನ್ನು ಕಂಡಿದ್ದು ಕಲ್ಲಿನಲ್ಲಿ ಅಲ್ಲ, ಮಣ್ಣಿನಲ್ಲಿ ಅಲ್ಲ, ಪ್ರತಿಯೊಬ್ಬ ಮಾನವನ ಹೃದಯದಲ್ಲಿ. ಪಕ್ಕದವರನ್ನು ಪ್ರೀತಿಸಿದರೆ ದೇವದೇವನನ್ನೂ ಪೂಜಿಸಿದಂತೆ ಎಂಬ ಭಾವನೆ ಸದ್ಭಾವನೆಯನ್ನು ಬಿತ್ತಿದ. ಮನುಷ್ಯ ಮನುಷ್ಯರ ನಡುವೆ ಸೌಹಾರ್ದದ ಸೂತ್ರವೇ ಹರಿದು ಹೋಗಿ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ದ್ವೀಪವಾಗಿರುವ ಈ ದಿನಗಳಲ್ಲಿ ಬಸವಣ್ಣನವರು ತುಂಬಾ ಪ್ರಸ್ತುತರಾಗುತ್ತಾರೆ.ಅವರ ವಿಶ್ವಪ್ರೇಮ ವಿಶ್ವಮೈತ್ರಿ ಅನ್ಯಾದೃಶ್ಯವಾದವುಗಳು.

ಬಸವಣ್ಣನವರ ಬದುಕಿನಲ್ಲಿ ನಡೆದ ಅಪರೂಪದ ಘಟನೆಗಳಿವು…

ಕ್ರಾಂತಿಕಾರಿ, ಸಮಾನತೆಯ ಸೇನಾನಿಯಾಗಿದ್ದ ಬಸವಣ್ಣನವರ ವಿಚಾರ ಧಾರೆಗಳು ಸಂಪ್ರದಾಯವಾದಿಗಳನ್ನು ಕೆರಳಿಸಿದವು. ಮಧುವರಸ ಮತ್ತು ಹರಳಯ್ಯ ನವರು ಬಂಧುಗಳಾಗಲು ಪ್ರೇರಣೆ ನೀಡಿದರು. ಜಾತಿ ಸಂಕರ ಕಿತ್ತೊಗೆಯಲು ಇರುವ ಮಾರ್ಗವೆಂದರೆ ಪರಸ್ಪರ ವಿವಾಹ ಕರ‍್ಯ ನೆರವೇರಬೇಕು ಎನ್ನುವ ಜ್ಯೋತಿತತ್ವ ಅವರದ್ದಾಗಿತ್ತು. ಬ್ರಾಹ್ಮಣ್ಯದ ಮಧುವರಸನ ಮಗಳು ಲಾವಣ್ಯ, ಹರಳಯ್ಯನವರ ಮಗ ಶೀಲವಂತ ಇಬ್ಬರಿಗೂ ಕಲ್ಯಾಣ (ವಿವಾಹ) ನೆರವೇರಿಸಿದರು.

ರಾಜ್ಯವನ್ನು ದುರುಪಯೋಗ ಮಾಡಿ ಧರ್ಮ ಹಾಳು ಮಾಡುತ್ತಿದ್ದಾರೆ ಬಸವಣ್ಣನವರು ಎಂದು ಬಿಜ್ಜಳ ಮಹಾರಾಜನಿಗೆ ದೂರು ನೀಡಿದರು. ಕೊಂಡಿ ಮಂಚಣ್ಣಾದಿಗಳು ಬಹುದೊಡ್ಡ ರಾಜಕೀಯ ಕುತಂತ್ರ ಸಂಚು ರೂಪಿಸಿದರು.ಇದನ್ನು ತಲೆಗೆ ತುಂಬಿಕೊಂಡ ರಾಜ ಬಿಜ್ಜಳ ಹರಳಯ್ಯ-ಮಧುವರಸರಿಗೆ ಮರಣದಂಡನೆ ವಿಧಿಸಿದನು. ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿದನು. ಈ ವಿಷಯ ಕೇಳಿ ಶರಣರು ಗಣಾಚಾರಿಗಳಾದರು. ಕಲ್ಯಾಣ ನಾಡು ಅಲ್ಲೋಲ ಕಲ್ಲೋಲವಾಯಿತು. ಒಂದೆಡೆ ರಾಜ ಬಿಜ್ಜಳನ ಹತ್ಯೆಯಾಯಿತು. ಶರಣರಿಗೆ ಎಳೆಹೂಟೆ ಶಿಕ್ಷೆಯಾಯಿತು. ಕಲ್ಯಾಣಕ್ರಾಂತಿಯಾಯಿತು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಧಾರ್ಮಿಕ ಮತಾಂಧತೆಯ ಅಟ್ಟಹಾಸ ಅರಿತ ಶರಣರು ಕಲ್ಯಾಣದಿಂದ ಹತ್ತು ಹಲವು ಕಡೆ ಚೆಲ್ಲುವರಿದರು. ಬಸವಣ್ಣನವರು ಕೂಡಲ ಸಂಗಮದೆಡೆಗೆ, ಪ್ರಭುದೇವರು ಶ್ರೀಶೈಲಕ್ಕೆ, ಚೆನ್ನಬಸವಣ್ಣನವರು ಉಳವಿಗೆ ವಚನ ತಾಡೋಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು ‘ವಚನ ಸಂಗ್ರಹ’ ಕಾಯಕದೊಳಗೆ ತೊಡಗಿದರು. ನೂರೊಂದು ಕ್ಷೇತ್ರಗಳಿಗೆ ಶರಣರು ಪಾದ ಬೆಳೆಸಿದರು. ಇತ್ತ ಏಕಾಂಗಿಯಾಗಿ ಗುರು ಬಸವಣ್ಣನವರು ತಮ್ಮ ಲೋಕಸೇವಾಕಾರ್ಯಗಳನ್ನು ಪೂರೈಸಿ ಶ್ರಾವಣ ಶುದ್ಧ ಪಂಚಮಿ ದಿನ ಕೂಡಲಸಂಗಮದೊಳಗೆ ಲಿಂಗಯ್ಯನೊಂದಿಗೆ ಬೆರೆತು ಮಹಾಲಿಂಗದೊಳಗೆ ಬಯಲಾದರು. ಸಮರಸಗೊಂಡರು.

ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ಬಸವಣ್ಣನಂತೆ ತಾತಯ್ಯ ಕೂಡ ದೇಹವೇ ದೇಗುಲ ಎಂದಿದ್ದಾರೆ!

Exit mobile version