Site icon Vistara News

Ram Mandir: ಮಂದಿರ ಉದ್ಘಾಟನೆಗೆ ಮೊದಲು 1,200 ಮಸೀದಿಗಳಲ್ಲಿ ದೀಪ ಬೆಳಗಲಿದೆ ಬಿಜೆಪಿ

ram mandir ayodhya

BJP to light diyas at 1,200 mosques across India before Ram Mandir inauguration

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಅಯೋಧ್ಯೆಯಲ್ಲಿ ಭದ್ರತೆ, ಅತಿಥಿಗಳಿಗೆ ಸ್ವಾಗತ, ಗಣ್ಯರಿಗೆ ಆಹ್ವಾನ ಸೇರಿ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಮಂದಿರ ಲೋಕಾರ್ಪಣೆಗೂ ಮೊದಲು ದೇಶಾದ್ಯಂತ ಇರುವ 1,200 ಮಸೀದಿ ಹಾಗೂ ದರ್ಗಾಗಳಲ್ಲಿ ದೀಪ ಬೆಳಗಿಸಲು ಬಿಜೆಪಿ ತೀರ್ಮಾನಿಸಿದೆ.

ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಸಂಚಾಲಕ ಯಾಸೆರ್‌ ಜಿಲಾನಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಜನವರಿ 12ರಿಂದ 22ರವರೆಗೆ ಬಿಜೆಪಿಯಿಂದ ದೇಶಾದ್ಯಂತ ದೀಪೋತ್ಸವ ಅಭಿಯಾನ ಕೈಗೊಳ್ಳಲಾಗುತ್ತಿದೆ. ಶಾಂತಿ ಹಾಗೂ ಸೌಹಾರ್ದತೆಯ ಸಂಕೇತವಾಗಿ ದೇಶಾದ್ಯಂತ ಸಣ್ಣ ಅಥವಾ ದೊಡ್ಡ ಮಸೀದಿ, ದರ್ಗಾಗಳಲ್ಲಿ ದೀಪ ಬೆಳಗುತ್ತೇವೆ. ಈಗಾಗಲೇ ದೆಹಲಿಯಲ್ಲಿ ಜಾಮಾ ಮಸೀದಿ, ನಿಜಾಮುದ್ದೀನ್‌ ದರ್ಗಾ ಸೇರಿ 36 ಸ್ಥಳಗಳನ್ನು ದೀಪ ಬೆಳಗಿಸಲು ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಜಾಮಾ ಮಸೀದಿ

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ 30ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. “ರಾಮಮಂದಿರ ಲೋಕಾರ್ಪಣೆಯ ದಿನ ದೇಶದ ಪ್ರತಿಯೊಂದು ಮನೆಯಲ್ಲೂ ರಾಮನ ಜ್ಯೋತಿ ಬೆಳಗಿಸಬೇಕು” ಎಂದು ಕರೆ ನೀಡಿದ್ದರು. ಈಗ ಬಿಜೆಪಿ ನಾಯಕರು ದೇಶದಲ್ಲಿ ಸಾಮರಸ್ಯ ಸಂದೇಶ ರವಾನಿಸುವ ದಿಸೆಯಲ್ಲಿ ಮಸೀದಿ, ದರ್ಗಾಗಳಲ್ಲೂ ದೀಪ ಬೆಳಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Ram Mandir: ರಾಮ ಮಂದಿರ ದೇಗುಲಕ್ಕೆ ಹರಿದು ಬಂತು ದೇಣಿಗೆ; ಇದುವರೆಗೆ ಸಂಗ್ರಹವಾಗಿದ್ದು ಎಷ್ಟು?

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಶೇಷ ರಾಮ ಹಲ್ವಾ ವಿತರಣೆ

ರಾಮಮಂದಿರ ಉದ್ಘಾಟನೆ ದಿನ ಗಣ್ಯರಿಗೂ ಸೇರಿ ಲಕ್ಷಾಂತರ ಜನರಿಗೆ ವಿಶೇಷ ರಾಮ ಹಲ್ವಾ ವಿತರಿಸಲಾಗುತ್ತದೆ. ವಿಷ್ಣು ಮನೋಹರ್‌ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಬೃಹತ್‌ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್‌ ಹಾಲು, 2,500 ಲೀಟರ್‌ ನೀರು, 300 ಕೆಜಿ ಡ್ರೈ ಫ್ರೂಟ್ಸ್‌, 75 ಕೆಜಿ ಏಲಕ್ಕಿ ಪೌಡರ್‌ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್‌ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version