Site icon Vistara News

ದತ್ತಪೀಠ ವಿವಾದ | ಡಿ.6ರಿಂದ ಮೂರು ದಿನ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

datta peeta

ಬೆಂಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ (ದತ್ತ ಪೀಠ ವಿವಾದ) ಡಿಸೆಂಬರ್‌ ೬,೭ ಮತ್ತು ೮ರಂದು ದತ್ತ ಜಯಂತಿ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ.

ರಾಜ್ಯ ಸರಕಾರ ಇತ್ತೀಚೆಗೆ ದತ್ತ ಪೀಠ ಪೂಜೆಗೆ ಅರ್ಚಕರನ್ನು ನೇಮಿಸಲು ನಿರ್ವಹಣಾ ಸಮಿತಿ ರಚಿಸಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅರ್ಚಕರ ನೇಮಕ ಪ್ರಶ್ನಿಸಿ ಗೌಸ್ ಮೌಸಿನ್ ಶಾ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ದತ್ತ ಜಯಂತಿ ಆಚರಣೆಗೆ ಅವಕಾಶವನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ, ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠದಿಂದ ಆದೇಶ ಹೊರಬಿದ್ದಿದೆ.

ಸರ್ಕಾರ ಈಗಾಗಲೇ ನಿರ್ವಹಣಾ ಸಮಿತಿ ರಚಿಸಿದೆ. ಹಿಂದೂ, ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕ ಮಾಡಲಾಗಿದ್ದು ಪ್ರತಿದಿನ ಎರಡೂ ಸಮುದಾಯದವರೂ ಪೂಜೆ ನಡೆಸುತ್ತಿದ್ದಾರೆ. ಹೀಗಾಗಿ ದತ್ತ ಜಯಂತಿಗೆ ಅನುಮತಿ‌ ನೀಡಲು ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್​ಗೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮನವಿ ಸಲ್ಲಿಸಿದ್ದರು. ಅದರಂತೆ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅಸ್ತು ಎಂದಿದೆ. ಹಾಗೂ ವಿಚಾರಣೆಯನ್ನು ಜ. 12ಕ್ಕೆ ಮುಂದೂಡಿದೆ.

ವಿವಾದವೇನು?
ಬಾಬಾಬುಡನ್‌ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಪೀಠ ಮುಸ್ಲಿಮರಿಗೆ ಸೇರಿದ್ದೇ, ಹಿಂದೂಗಳಿಗೆ ಸೇರಿದ್ದೇ ಎನ್ನುವುದು ಹಿಂದಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಸರಕಾರಿ ದಾಖಲೆಗಳಲ್ಲಿ ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಹೇಳಲಾಗಿದೆ. ಈ ಸ್ಥಳವನ್ನು ಬಾಬಾ ಬುಡನ್‌ ಗಿರಿ ಎಂದು ಕೆಲವರು ಕರೆದರೆ, ಇನ್ನು ಕೆಲವರು ಇನಾಂ ದತ್ತಾತ್ರೇಯ ಪೀಠ ಎನ್ನುತ್ತಾರೆ. ಒಂದು ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿ ಇದು ಗುರುತಿಸಲ್ಪಟ್ಟಿತ್ತು. ಆದರೆ, ಬಳಿಕ ವಿವಾದ ಹುಟ್ಟಿಕೊಂಡಿತು.

ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದರು. ಆದರೆ, ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದಾರೆ. ಇದೀಗ ಅರ್ಚಕರ ನೇಮಕಕ್ಕೆ ಅವಕಾಶ ನೀಡಿ ಸರಕಾರ ಆಡಳಿತ ಮಂಡಳಿ ರಚಿಸಿದೆ. ಶೀಘ್ರವೇ ಅರ್ಚಕರ ನೇಮಕ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ | ದತ್ತಪೀಠ ವಿವಾದ | ಒಬ್ಬ ಮುಸ್ಲಿಂ ಸೇರಿದಂತೆ 8 ಸದಸ್ಯರ ಆಡಳಿತ ಮಂಡಳಿ ರಚನೆ, ಅರ್ಚಕರ ನೇಮಕಕ್ಕೂ ಅಧಿಕಾರ

Exit mobile version