Site icon Vistara News

Narendra Modi: ರಾಮನಿಗಾಗಿ ಮೋದಿ ನಿತ್ಯ 1 ಗಂಟೆ ವಿಶೇಷ ಮಂತ್ರ ಪಠಣ; ಏನದು?

Narendra Modi

Over an hour-long special mantra is part of PM Narendra Modi's Ram Mandir anushthaan

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆ, ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 11 ದಿನಗಳ ಕಠಿಣ ವ್ರತ ಕೈಗೊಂಡಿದ್ದಾರೆ. ಅನುಷ್ಠಾನದ ಭಾಗವಾಗಿ ನರೇಂದ್ರ ಮೋದಿ (PM Modi Anushthaan) ಅವರು ನೆಲದ ಮೇಲೆಯೇ ಮಲಗುತ್ತಾರೆ. ಅವರ ಆಹಾರ ಪದ್ಧತಿಯೂ ಬದಲಾಗಿದೆ. ಅಷ್ಟೇ ಅಲ್ಲ, ಮೋದಿ ಅವರು ನಿತ್ಯ 1 ಗಂಟೆ 11 ನಿಮಿಷ ವಿಶೇಷ ಮಂತ್ರವನ್ನೂ ಪಠಿಸುತ್ತಾರೆ ಎಂದು ತಿಳಿದುಬಂದಿದೆ.

ಬೆಳಗ್ಗೆ ಬೇಗನೆ ಎದ್ದೇಳುವುದು ನರೇಂದ್ರ ಮೋದಿ ಅವರ ರೂಢಿಯಾಗಿದೆ. ಬೆಳಗಿನ ಜಾವ ಎದ್ದೇಳುವ ಮೋದಿ ಅವರು ಅನುಷ್ಠಾನದ ಭಾಗವಾಗಿ ಬ್ರಾಹ್ಮೀ ಮುಹೂರ್ತದಲ್ಲಿ 1 ಗಂಟೆ 11 ನಿಮಿಷ ವಿಶೇಷ ಮಂತ್ರ ಪಠಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಮೋದಿ ಅವರು ವ್ರತದ ಹಿನ್ನೆಲೆಯಲ್ಲಿ ನೆಲದ ಮೇಲೆಯೇ ಮಲಗುತ್ತಾರೆ. ಹಣ್ಣು ಹಾಗೂ ಎಳನೀರು ಮಾತ್ರ ಸೇವಿಸುತ್ತಿದ್ದಾರೆ. ಗೋವುಗಳಿಗೆ ಪೂಜೆ ಸಲ್ಲಿಸುವ ಅವರು ಅನ್ನದಾನವನ್ನೂ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 12ರಂದು ಮೋದಿ ಅವರು ನಾಸಿಕ್‌ನ ಪಂಚವಟಿ ಪ್ರದೇಶದ ಗೋದಾವರಿ ತಟದಲ್ಲಿರುವ ಶ್ರೀ ಕಾಲ ರಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಅನುಷ್ಠಾನ ಪ್ರಾರಂಭಿಸಿದರು. ಅಲ್ಲದೆ ಅವರು ಕೇರಳದ ಗುರುವಾಯೂರು ದೇವಸ್ಥಾನ ಮತ್ತು ಆಂಧ್ರ ಪ್ರದೇಶದ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಮೋದಿ ತಮಿಳುನಾಡಿನ ಸರಣಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಜನವರಿ 22ರಂದು ರಾಮಮಂದಿರದಲ್ಲಿ ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಬಿಗಿ ಬಂದೋಬಸ್ತ್‌ ಕೂಡ ಏರ್ಪಡಿಸಲಾಗಿದೆ.

ಇದನ್ನೂ ಓದಿ: Narendra Modi : ಸಂಪೂರ್ಣ ಸಂತರಾದ ಮೋದಿ; ಬರಿ ನೆಲದಲ್ಲಿ ನಿದ್ದೆ, ಹಣ್ಣುಗಳಷ್ಟೇ ಆಹಾರ

ಶನಿವಾರ (ಜನವರಿ 20) ತಿರುಚಿರಾಪಳ್ಳಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕಂಬ ರಾಮಾಯಣದ ಶ್ಲೋಕಗಳನ್ನು ಪಠಿಸುವ ವಿವಿಧ ವಿದ್ವಾಂಸರೊಂದಿಗೆ ಸಮಯ ಕಳೆಯಲಿದ್ದಾರೆ. ನಂತರ ಅವರು ರಾಮೇಶ್ವರಂಗೆ ತೆರಳುತ್ತಾರೆ. ಅಲ್ಲಿ ಅವರು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬಂಗಾಳಿ, ಮೈಥಿಲಿ ಮತ್ತು ಗುಜರಾತಿ ಭಾಷೆಗಳ ರಾಮಾಯಣವನ್ನು ಆಲಿಸಲಿದ್ದಾರೆ. ಸಂಜೆ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಭಜನೆ, ಭಕ್ತಿಗೀತೆಗಳನ್ನು ಆಲಿಸಲಿದ್ದಾರೆ. ಭಾನುವಾರ ಮೋದಿ ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಮತ್ತು ನಂತರ ರಾಮ ಸೇತುವನ್ನು ನಿರ್ಮಿಸಿದ ಸ್ಥಳವೆಂದು ಹೇಳಲಾಗುವ ಅರಿಚಲ್ ಮುನೈಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಜನವರಿ 22ರ ಸಮಾರಂಭಕ್ಕೆ ಅನುಗುಣವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವಂತೆ ಬಿಜೆಪಿ ತನ್ನ ಎಲ್ಲ ಸದಸ್ಯರು ಮತ್ತು ಕಾರ್ಯಕರ್ತರಿಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲು ಮತ್ತು ದೀಪಾವಳಿಯಂತೆ ಆಚರಣೆ ನಡೆಸಲು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಎಲ್ಲ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version