Site icon Vistara News

Prerane | ಮನಸ್ಸಿನ ಸ್ಥಿಮಿತದಲ್ಲಿದೆ ಬದುಕಿನ ಸೌಂದರ್ಯ

Prerane osho on mind

ಓಶೋ ರಜನೀಶ್
ಎಲ್ಲ ಸಂದರ್ಭದಲ್ಲಿಯೂ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದು ಕಷ್ಟ. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ನಿಮ್ಮ ಮನಸ್ಸು ಸಮತೋಲನದಿಂದ ಇದೆ ಎಂದಾದರೆ, ಅಲ್ಲಿ ನಿಮ್ಮ ಮನಸ್ಸು ಕಣ್ಮರೆಯಾಗಲಾರಂಭಿಸುತ್ತದೆ. ಮನಸ್ಸು ಒಂದು ಖಾಯಿಲೆಯ ಹಾಗೆ; ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ, ನೀವು ಸಮತೋಲನಗೊಂಡಾಗ ಅದು ಮರೆಯಾಗುತ್ತದೆ.

ಆದ್ದರಿಂದಲೇ ಅತಿಯಾಗಿ ತಿನ್ನುವವರಿಗೆ ಉಪವಾಸ ಮಾಡುವುದು ಸುಲಭ. ಇದು ನಿಮಗೆ ಅತಾರ್ಕಿಕವೆಂದು ತೋರಬಹುದು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿರುವವರು ಉಪವಾಸ ಮಾಡಲಾರರು ಎಂದುಕೊಳ್ಳುವಿರಿ. ಆದರೆ ಅದು ತಪ್ಪು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾದ ವ್ಯಕ್ತಿಯೇ ಉಪವಾಸ ಮಾಡಬಲ್ಲ. ಏಕೆಂದರೆ ಉಪವಾಸ ಎಂದರೆ ಅದೇ ಕಡು ವ್ಯಾಮೋಹ, ಆದರೆ ವಿರುದ್ಧ ದಿಕ್ಕಿನಲ್ಲಿ ಅಷ್ಟೆ. ನೀವು ನಿಮ್ಮನ್ನು ಬದಲಿಸಿಕೊಳ್ಳುತ್ತಿಲ್ಲ. ನೀವಿನ್ನೂ ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿಯಿದ್ದೀರಿ. ಮೊದಲು ನೀವು ಅತಿಯಾಗಿ ತಿನ್ನುತ್ತಿದ್ದಿರಿ, ಈಗ ಹಸಿವೆಯಿಂದ ಇದ್ದೀರಿ, ಆದರೆ ಮನಸ್ಸು ಇನ್ನೂ ಆಹಾರದ ಕುರಿತೇ, ಆದರೆ ವಿರುದ್ಧ ದಿಕ್ಕಿನಲ್ಲಿ ಗಮನ ಕೇಂದ್ರೀಕರಿಸಿದೆ. ಅತಿಯಾಗಿ ಲೈಂಗಿಕತೆಯಲ್ಲಿ ಮುಳುಗಿರುವ ವ್ಯಕ್ತಿ ಬಹುಸುಲಭವಾಗಿ ಬ್ರಹ್ಮಚರ್ಯ ಪಾಲಿಸಬಲ್ಲರು. ಅದರಲ್ಲೇನೂ ಸಮಸ್ಯೆ ಇಲ್ಲ. ಆದರೆ ಸರಿಯಾದ ಆಹಾರ ಕ್ರಮದಲ್ಲಿರುವುದು, ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ.

ಇದು ಗಡಿಯಾರದ ಲೋಲಕದಂತೆ. ಲೋಲಕ ಬಲಕ್ಕೆ ಹೋಗುತ್ತದೆ, ನಂತರ ಎಡಕ್ಕೆ, ಮತ್ತೆ ಬಲಕ್ಕೆ; ಗಡಿಯಾರದ ಕೆಲಸ ಲೋಲಕದ ಈ ಚಲನೆಯನ್ನು ಅವಲಂಬಿಸಿದೆ. ಲೋಲಕ ಮಧ್ಯದಲಿದ್ದರೆ ಗಡಿಯಾರ ನಿಲ್ಲುತ್ತದೆ. ಲೋಲಕ ಬಲಕ್ಕೆ ಸಾಗುವಾಗ, ಅದು ಕೇವಲ ಬಲಕ್ಕೆ ಸಾಗುತ್ತಿದೆ ಎಂದು ಭಾವಿಸುವಿರಿ. ಆದರೆ ಲೋಲಕ ಅಲ್ಲಿಂದ ಆವೇಗವನ್ನು ಒಗ್ಗೂಡಿಸಿಕೊಂಡು, ಎಡಕ್ಕೆ ಹೋಗುತ್ತದೆ. ಅದು ಬಲಕ್ಕೆ ಹೆಚ್ಚು ಸಾಗಿದಷ್ಟೂ, ಹೆಚ್ಚು ಆವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಹೆಚ್ಚು ಎಡಕ್ಕೆ ಹೋಗುತ್ತದೆ. ಹಾಗೆಯೇ ಹೆಚ್ಚು ಎಡಕ್ಕೆ ಸಾಗಿದಷ್ಟು ಬಲಕ್ಕೆ ಸಾಗಲು ಹೆಚ್ಚು ಆವೇಗವನ್ನು ಅಲ್ಲಿಂದ ಪಡೆದುಕೊಳ್ಳುತ್ತದೆ. ಯೋಚಿಸುವುದು ಎಂದರೆ ಆವೇಗದ ಹಾಗೆ. ಮನಸ್ಸು ವಿರುದ್ಧ ದಿಕ್ಕಿಗೆ ವ್ಯವಸ್ಥೆಗೊಳಿಸಲು ಆರಂಭಿಸುತ್ತದೆ. ಆದ್ದರಿಂದಲೇ ಗೆಳೆಯರು ಮಾತ್ರವೇ ಶತ್ರುಗಳಾಗಬಲ್ಲರು.

ಮೊದಲು ಗೆಳೆಯರಾಗಿಲ್ಲದಿದ್ದರೆ, ಇದ್ದಕ್ಕಿದ್ದ ಹಾಗೆ ಶತ್ರುವಾಗಲು ಸಾಧ್ಯವಿಲ್ಲ. ಪ್ರೇಮಿಗಳು ಮಾತ್ರವೇ ಜಗಳವಾಡಬಲ್ಲರು, ಮುನಿಸಿಕೊಳ್ಳಬಲ್ಲರು, ಏಕೆಂದರೆ ಪ್ರೀತಿಸದಿದ್ದರೆ ಹೇಗೆ ನೀವು ದ್ವೇಷಿಸುವಿರಿ? ನೀವು ಅಷ್ಟು ಆತ್ಯಂತಿಕ ಎಡಕ್ಕೆ ಹೋಗದಿದ್ದರೆ ಅತಿಹೆಚ್ಚು ಬಲಕ್ಕೆ ಹೇಗೆ ಸಾಗಬಲ್ಲಿರಿ? ಪ್ರೀತಿ ಎನ್ನುವುದು ಆತ್ಯಂತಿಕ ದ್ವೇಷದ ಸಂಬಂಧವೆಂದು ಆಧುನಿಕ ಸಂಶೋಧನೆ ಹೇಳುತ್ತದೆ.

ಅಂದರೆ ನಿಮ್ಮ ಗಂಡ ನಿಮ್ಮ ಆಪ್ತ ಶತ್ರು ಮತ್ತು ನಿಮ್ಮ ಹೆಂಡತಿ ನಿಮ್ಮ ಆಪ್ತ ಶತ್ರು; ಪರಮಾಪ್ತ ಮತ್ತು ಹಗೆತನದ ಸಂಬಂಧ. ಅವರು ವಿರೋಧಿಗಳ ಹಾಗೆ, ಅತಾರ್ಕಿಕವಾಗಿ ತೋರುತ್ತಾರೆ; ಏಕೆಂದರೆ ನಮಗೆ ಇಷ್ಟು ಆಪ್ತರಾಗಿದ್ದವರು ಹೇಗೆ ಶತ್ರುಗಳಾಗಬಲ್ಲರು ಎಂದು ನಮಗೆ ಅಚ್ಚರಿಯಾಗುತ್ತದೆ; ಮೊದಲು ಗೆಳೆಯನಾಗಿದ್ದವನು ಈಗ ಹೇಗೆ ಶತ್ರುವಾಗಬಲ್ಲ? ತರ್ಕ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ, ಆದರೆ ಬದುಕು ಆಳಕ್ಕೆ ಸಾಗುತ್ತದೆ. ಬದುಕಿನಲ್ಲಿ ಎಲ್ಲ ವಿರುದ್ಧಗಳೂ ಒಟ್ಟಾಗಿ ಹೆಣೆಯಲಾಗಿವೆ, ಅವು ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ.

ಇದನ್ನು ನೆನಪಿಡಿ; ಧ್ಯಾನದಿಂದ ನಿಮ್ಮ ಮನಸ್ಸು ಸ್ಥಿಮಿತದಲ್ಲಿರುತ್ತದೆ. ಬುದ್ಧ ಎಂಟು ಶಿಸ್ತುಗಳನ್ನು ಬೋಸಿದ್ದು, ಪ್ರತಿ ಶಿಸ್ತಿನ ಜೊತೆಗೆ ಅವನು ಸರಿ ಎಂಬ ಪದ ಬಳಸಿದ್ದಾನೆ. ಅವನ ಮಾತೊಂದು ಹೀಗಿದೆ; ಸರಿಯಾದ ಪ್ರಯತ್ನ, ಎಂದರೆ ಕ್ರಿಯೆಯಿಂದ ನಿಷ್ಕ್ರಿಯೆತೆಗೆ ಸಾಗುವುದು, ಎಚ್ಚರದಿಂದ ನಿದ್ರೆಗೆ ಜಾರುವುದು ಸುಲಭ; ಆದರೆ ಮಧ್ಯದಲ್ಲಿರುವುದು ಕಷ್ಟ.

ಬುದ್ಧ ಸರಿ ಎಂಬ ಪದವನ್ನು ಹೇಳುವಾಗ ವಿರುದ್ಧ ದಿಕ್ಕಿಗೆ ಸಾಗಬೇಡ, ಮಧ್ಯದಲ್ಲಿರುವ ಎಂಬರ್ಥದಲ್ಲಿ ಹೇಳಿದ್ದಾನೆ. ನೀವು ಮಧ್ಯದಲ್ಲಿರುವಾಗ ಯಾವುದೇ ಆವೇಗವನ್ನು ಒಗ್ಗೂಡಿಸುವುದಿಲ್ಲ, ನಿಮ್ಮಷ್ಟಕ್ಕೆ ಆರಾಮಾಗಿರಬಹುದು. ಎಲ್ಲಿಗೂ ಹೊರಡದೇ ಇರುವ ವ್ಯಕ್ತಿ ಮನೆಯಲ್ಲಿರುವ ಹಾಗೆ ಆರಾಮಾಗಿ ಇರಬಹುದು; ಬದುಕಿನ ಸೌಂದರ್ಯವಿರುವುದೇ ಹೀಗೆ ಮಧ್ಯದಲ್ಲಿರುವುದರಲ್ಲಿ, ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದರಲ್ಲಿ.

ದ ಎಮ್ಟಿ ಬೋಟ್‌ ಕೃತಿಯ ಉದ್ಧೃತ ಭಾಗ,
ಸೌಜನ್ಯ, ಓಷೋ ಪ್ರತಿಷ್ಠಾನ.

ಇದನ್ನು ಓದಿ| Prerane | ಭಾರತೀಯ ವಿದ್ಯೆಗಳ ವಿಶೇಷತೆ ಏನು?

Exit mobile version