Site icon Vistara News

Makar Sankranti : ಈ ಬಾರಿ 14ರ ಬದಲು ಜ.15ರಂದು ಸಂಕ್ರಾಂತಿ ಆಚರಣೆ ಏಕೆ?

Ellu bella

ವಿಸ್ತಾರ ನ್ಯೂಸ್ ಬೆಂಗಳೂರು: ಭಾರತೀಯರು ಹಾಗೂ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಮಕರ ಸಂಕ್ರಾಂತಿ (Makar Sankranti) ಅತ್ಯಂತ ಮಹತ್ವದ ಹಾಗೂ ಪವಿತ್ರ ಹಬ್ಬ. ಇದು ಉತ್ತರಾಯಣದ ಆರಂಭದ ಸೂಚಕ. ಜತೆಗೆ ಸುಗ್ಗಿಯ ಸಂಭ್ರಮಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ವಿವಿಧತೆಯಲ್ಲಿ ಏಕತೆಯ ಸಾರವನ್ನು ಪ್ರತಿಬಿಂಬಿಸುವ ಆಚರಣೆ. ಸೂರ್ಯ ದೇವರು, ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಏಕಕಾಲಕ್ಕೆ ಪೂಜಿಸುವ ದಿನವೂ ಹೌದು. ಮಹಾಭಾರತದಲ್ಲಿ ಭೀಷ್ಮ ಪಿತಾಮಹ ಈ ವೇಳೆಯಲ್ಲಿ ಮರಣವನ್ನಪ್ಪಿ ಮೋಕ್ಷ ಪಡೆಯುತ್ತಾರೆ.

ಸಂಕ್ರಾಂತಿ ದಿನ ದಿನ ಸೂರ್ಯನ ಉತ್ತರ ದಿಕ್ಕಿನ ಚಲನೆ ಆರಂಭಗೊಳ್ಳುತ್ತದೆ. ಹೀಗಾಗಿ ಈ ದಿನಕ್ಕೆ ಸಾಕಷ್ಟು ಮಹತ್ವಗಳಿವೆ. ಪವಿತ್ರ ನದಿ ಸ್ನಾನಗಳು, ಸಮುದ್ರ ಸ್ನಾನಗಳು, ಶುದ್ಧೀಕಣ, ಸೂರ್ಯ ದೇವನಿಗೆ ಕೃತಜ್ಞತೆ ಸಲ್ಲಿಕೆಯಂಥ ವಿಧಿವಿಧಾನಗಳನ್ನು ನಡೆಸುತ್ತಾರೆ. ದೇಶದ ಪ್ರಮುಖ ಪುಣ್ಯ ನದಿಗಳಲ್ಲಿ ಮಿಂದು ಪುಣ್ಯ ಗಿಟ್ಟಿಸಿಕೊಳ್ಳುತ್ತಾರೆ. ಜಗತ್ತಿಗೆ ಬೆಳಕು ನೀಡು ಸೂರ್ಯ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಜನನ, ಮರಣ ಹಾಗೂ ಪುನರ್ಜನ್ಮದ ಚಕ್ರದಿಂದ ಮುಕ್ತಿ ಪಡೆಯುವ ದಿನ ಇದೆಂಬ ಎಂಬ ನಂಬಿಕೆಯಿದೆ.

ಇದನ್ನೂ ಓದಿ : ಬಾಲಕಿ ಹಾಡಿಗೆ ತಲೆದೂಗಿದ ಮೋದಿ; ತಮ್ಮ ಶಾಲು ಹೊದಿಸಿ ಸನ್ಮಾನ, ವಿಡಿಯೊ ವೈರಲ್

ಮಕರ ಸಂಕ್ರಾಂತಿ ಈ ವರ್ಷ ಯಾವ ದಿನದಂದು?

ಮಕರ ಸಂಕ್ರಾಂತಿಯನ್ನು ಸಾಮಾನ್ಯವಾಗಿ ಜನವರಿ 14 ರಂದು ಆಚರಿಸಲಾಗುತ್ತದೆ. ಆದಾಗ್ಯೂ, ಈ ವರ್ಷ ಅಧಿಕ ವರ್ಷವಾಗಿರುವ ಕಾಣ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಈ ರೀತಿ 15ರಂದು ಮಕರ ಸಂಕ್ರಾಂತಿ ಬರುತ್ತದೆ.

ಶುಭ ಮುಹೂರ್ತ ಯಾವಾಗ?

ಪಂಚಾಂಗದ ಪ್ರಕಾರ ಜನವರಿ 15 ರಂದು ಒಟ್ಟು 10 ಗಂಟೆ 31 ನಿಮಿಷಗಳಷ್ಟು ಹೊತ್ತು ಪುಣ್ಯಕಾಲ ಇದೆ. ಈ ಕಾಲಾವಧಿಯು ಧಾರ್ಮಿಕ ಆಚರಣೆಗಳಲ್ಲಿ ತೊಡಗಲು, ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ಸೂರ್ಯ ದೇವರಿಗೆ ಗೌರವ ಸಲ್ಲಿಸಲು ಸೂಕ್ತ ಸಮಯ.

ಭಾರತದ ನಾನಾ ರಾಜ್ಯಗಳಲ್ಲಿ ಹೇಗೆ ಆಚರಿಸಲಾಗುತ್ತದೆ?

ಮಕರ ಸಂಕ್ರಾಂತಿಯನ್ನು ಭಾರತದಲ್ಲಿ ವಿವಿಧ ಹೆಸರುಗಳು ಮತ್ತು ಪದ್ಧತಿಗಳೊಂದಿಗೆ ಆಚರಿಸಲಾಗುತ್ತದೆ. ಈ ಹಬ್ಬದಂದು ಶ್ರಮಜೀವಿ ರೈತರು ತಮ್ಮ ನೇಗಿಲು ಮತ್ತು ಎತ್ತುಗಳಿಗೆ ಗೌರವ ಸಲ್ಲಿಸುತ್ತಾರೆ. ಈ ಹಬ್ಬಕ್ಕೂ ಕೃಷಿಗೂ ಜೋರು ನಂಟಿದೆ. ಮಕರ ಸಂಕ್ರಾಂತಿ ದಾನಕ್ಕೂ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Pongal Saree styling tips: ಪೊಂಗಲ್‌ ಹಬ್ಬ ಆಚರಿಸುವ ಸೀರೆ ಪ್ರಿಯರಿಗೆ 5 ಸ್ಟೈಲಿಂಗ್‌ ಟಿಪ್ಸ್

ಎಳ್ಳು, ಬೆಲ್ಲ ಬೀರುವುದು: ಕರ್ನಾಟದಲ್ಲಿ ಮಕರ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಎಳ್ಳು- ಬೆಲ್ಲ ಬೀರುವುದು ಪ್ರಮುಖ ಆಚರಣೆಯಾಗಿದೆ. ಜತೆಗೆ ಕಬ್ಬು ತಂದು ಪೂಜೆ ಮಾಡುತ್ತಾರೆ. ಎಳ್ಳು, ಬೆಲ್ಲ, ಕೊಬ್ಬರಿ ಇತ್ಯಾದಿಗಳನ್ನು ಹಂಚುತ್ತಾರೆ. ಎಳ್ಳೆಣ್ಣೆಯ ದೀಪವನ್ನು ಉರಿಸುವುದು, ಸೂರ್ಯ ನಮಸ್ಕಾರ ಮಾಡಲಾಗುತ್ತದೆ.

ಲೋಹ್ರಿ: ಹರಿಯಾಣ ಮತ್ತು ಪಂಜಾಬ್​ನಲ್ಲಿ ಲೋಹ್ರಿ ಎಂದು ಆಚರಿಸಲಾಗುತ್ತದೆ. ಇದನ್ನು ಜನವರಿ 13ರಂದು ಆಚರಿಸಲಾಗುತ್ತದೆ. ಜನರು ದೀಪೋತ್ಸವ ನಡೆಸುತ್ತಾರೆ. ಮಂಡಕ್ಕಿ ಹಾಗೂ ಜೋಳವನ್ನು ಅಗ್ನಿಗೆ ಅರ್ಪಿಸುತ್ತಾರೆ. ಸಂತೋಷ, ಆರೋಗ್ಯ, ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಗಾಳಿಪಟ ಉತ್ಸವ: ಗುಜರಾತ್ ನಲ್ಲಿ ಈ ಹಬ್ಬವನ್ನು ಗಾಳಿಪಟ ಹಾರಿಸುವ ಮೂಲಕ ಆಚರಿಸಲಾಗುತ್ತದೆ. ಇದು ಸಂತೋಷ ಹಾಗೂ ವಿನೋದದ ಹಬ್ಬವಾಗಿರುತ್ತದೆ.

ಖಿಚಡಿ ಹಬ್ಬ: ಉತ್ತರ ಪ್ರದೇಶದಲ್ಲಿ ಈ ದಿನದಂದು ಉಡುಗೊರೆ ಹಾಗೂ ದಾನ ಕೊಡುತ್ತಾರೆ. ಅಲಹಾಬಾದ್ ನ ಮಾಘ ಜಾತ್ರೆಯು ಮಕರ ಸಂಕ್ರಾಂತಿಯಂದು ಪ್ರಾರಂಭವಾಗುತ್ತದೆ. ಅಲ್ಲಿ ಜನರು ಉಪವಾಸ ಮಾಡುತ್ತಾರೆ ಮತ್ತು ಖಿಚಡಿಯನ್ನು ದೇವರಿಗೆ ಅರ್ಪಿಸುತ್ತಾರೆ. ಖಿಚಡಿ ಮೇಳವನ್ನು ಗೋರಖ್ಪುರಲ್ಲಿ ಜೋರಾಗಿ ಅಚರಿಸುತ್ತಾರೆ.

ಎಳ್ಳು ದಾನ : ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿ ದಿನ ಪುಣ್ಯ ಸ್ನಾನ ಮಾಡಿದ ನಂತರ ಜನರು ಎಳ್ಳು ದಾನ ಮಾಡುತ್ತಾರೆ. ಗಂಗಾಸಾಗರದಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ.

ಪೊಂಗಲ್: ತಮಿಳುನಾಡು ಈ ಸಂದರ್ಭವನ್ನು ನಾಲ್ಕು ದಿನಗಳ ಕಾಲ ಪೊಂಗಲ್ ಎಂದು ಆಚರಿಸುತ್ತದೆ. ತಮಿಳು ನಾಡು ಜನರ ಪಾಲಿಗೆ ಇದು ಅತ್ಯಂತ ದೊಡ್ಡ ಹಬ್ಬ. ಜಲ್ಲಿಕಟ್ಟು ಸ್ಪರ್ಧೆಯೂ ಇದೇ ದಿನಗಳಲ್ಲಿ ನಡೆಯುತ್ತದೆ.

ಉಣ್ಣೆ ಬಟ್ಟೆಗಳ ಹಬ್ಬ: ಬಿಹಾರದಲ್ಲಿ ಮಕರ ಸಂಕ್ರಾಂತಿಯನ್ನು ಖಿಚಡಿ ಎಂದು ಕರೆಯಲಾಗುತ್ತದೆ. ಈ ದಿನ ಉದ್ದು, ಅಕ್ಕಿ, ಚಿನ್ನ ಮತ್ತು ಉಣ್ಣೆ ಬಟ್ಟೆಗಳನ್ನು ದಾನವಾಗಿ ನೀಡಲಾಗುತ್ತದೆ.

ಮುತ್ತೈದೆಯರ ಹಬ್ಬ : ವಿವಾಹಿತ ಮಹಿಳೆಯರು ಮದುವೆಯಾದ ಮೊದಲ ವರ್ಷದ ಸಂಕ್ರಾಂತಿಯಂದು ಇತರ ವಿವಾಹಿತ ಮಹಿಳೆಯರಿಗೆ ಹತ್ತಿ, ಎಣ್ಣೆ ಮತ್ತು ಉಪ್ಪನ್ನು ದಾನ ಮಾಡುತ್ತಾರೆ. ಅವರಿಗೆ ಇದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ.

Exit mobile version