Site icon Vistara News

Gitarama Prison: ಈ ಜೈಲಿನಲ್ಲಿ ಅಪರಾಧಿಗಳೇ ಪಕ್ಕದವರನ್ನು ಕೊಂದು ಮಾಂಸ ತಿನ್ನುತ್ತಿದ್ದರಂತೆ!

gitarama prison

ನರಕ ಎಂದರೆ ಎಲ್ಲಿದೆ ಎಂದು ತೋರಿಸಲು ಏನೇನೋ ಊಹನೆ ಮಾಡಬೇಕಿಲ್ಲ. ಭೂಮಿಯ ಮೇಲೆ ತಪ್ಪು ಮಾಡಿ ಸಿಕ್ಕಿ ಬಿದ್ದು ಜೈಲಿಗೆ ಹೋದರೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಎಂಬಂತೆ ನರಕ ಪ್ರಾಪ್ತಿ ಎಂದು ನಾವೂ ವಿವರಣೆ ಕೊಡಬಹುದು. ಆದರೆ ಇಲ್ಲೊಂದು ಜೈಲಿದೆ. ಅಲ್ಲಿರುವುದು ನಮ್ಮ ಊಹನೆಗೂ ಮೀರಿದ ನರಕವೇ. ಇಲ್ಲಿನ ಜೈಲುವಾಸಿಗಳು ಹಸಿವಾದರೆ ತಮ್ಮ ಸಹವರ್ತಿಯ ಜೊತೆಗೇ ಬಡಿದಾಡಿ ಅವರ ಮಾಂಸವನ್ನು ತಿಂದಂಥ (ಘಟನೆಗಳೂ ನಡೆದಿವೆಯಂತೆ! ಹೌದು ಇಂತಹ ಕುಖ್ಯಾತಿ ಪಡೆದಿರುವ ಜೈಲು ರುವಾಂಡಾದ ಗಿಟಾರಾಮ ಜೈಲು (Gitarama Prison). ರುವಾಂಡಾ ಪೂರ್ವ ಆಫ್ರಿಕಾದ ದೇಶ. ಇಲ್ಲಿನ ಗಿಟಾರಾಮ ಎಂಬ ಜೈಲು ವಿಶ್ವದ ಅತಿ ಖತರ್ನಾಕ್‌ ಜೈಲುವಾಸಗಳಲ್ಲಿ ಒಂದು. ಈ ಜೈಲು ಅಪರಾಧಿಗಳಿಂದ ತುಂಬಿ ತುಳುಕುತ್ತಿದ್ದು, ಜೈಲುವಾಸಿಗಳಿಗೆ ಮಲಗುವುದು ಬಿಡಿ, ಕೂರಲೂ ಜಾಗವಿರುವುದಿಲ್ಲವಂತೆ. ಹಾಗಾಗಿಯೇ ಈ ಜೈಲು ವಿಶ್ವದ ಅತ್ಯಂತ ಕೆಟ್ಟ ಜೈಲುಗಳಲ್ಲಿ ಒಂದಾಗಿದೆ.

ಈ ಜೈಲೊಂದರಲ್ಲೇ ಐದು ಸಾವಿರದಿಂದ ದಿಂದ ಏಳು ಸಾವಿರವರೆಗೂ ಜೈಲುವಾಸಿಗಳಿದ್ದು, ಜೈಲೊಂದು ಗರಿಷ್ಟ ಎಷ್ಟು ಮಂದಿಯನ್ನು ತನ್ನಲ್ಲಿ ಇರಿಸಿಕೊಳ್ಳಬಹುದು ಎಂಬುದಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ ಎಂಬ ದೂರುಗಳೂ ಇವೆ.

ಆಮ್ನೇಸ್ಟಿ ಇಂಟರ್‌ನ್ಯಾಷನಲ್‌ ಪ್ರಕಾರ, ೩೦೦೦ ಮಂದಿ ಇರಬಹುದಾದ ಜಾಗವಿರುವ ಈ ಜೈಲಿನಲ್ಲಿ 2007ರಲ್ಲಿ 7,477 ಮಂದಿಯಿದ್ದರು ಎನ್ನಲಾಗಿದೆ. ಹಾಗಾಗಿ ಇಲ್ಲಿನ ಜೈಲುವಾಸಿಗಳು ಕೆಲವೊಮ್ಮೆ ತಮ್ಮೊಳಗೇ ಬಡಿದಾಡಿ, ಕೊಂದು ಕೊನೆಗೆ ಅವರ ಮಾಂಸವನ್ನೇ ತಿಂದಂಥ ಘಟನೆಗಳ ಉದಾಹರಣೆಗಳಿವೆ ಎನ್ನಲಾಗಿದೆ.

ಇಲಿಗಳು, ಹೆಗ್ಗಣಗಳು ಜೈಲಿನ ತುಂಬ ಓಡಾಡಿಕೊಂಡಿದ್ದು, ಅತ್ಯಂತ ಅನಾರೋಗ್ಯಕರ ವಾತಾವರಣ ಇಲ್ಲಿದೆ. 1995ರಲ್ಲಿ ಈ ಜೈಲಿನ ಪರಿಸ್ಥಿತಿಯ ಬಗ್ಗೆ ಸಾಕಷ್ಟು ವಿವಾದ ಎದ್ದಿತ್ತು. ಅಪರಾಧಿಗಳು ಎಂಥ ನರಕದ ಪರಿಸ್ಥಿತಿಯಲ್ಲಿ ಇಲ್ಲಿ ಕೊಳೆಯಬೇಕಾಗಿದೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. 1994ರ ರುವಾಂಡ ನರಮೇಧ ಘಟನೆಯ ನಂತರ ಈ ಜೈಲು ಸಾಕಷ್ಟು ಸುದ್ದಿ ಮಾಡಿತ್ತು. ರೆಡ್‌ ಕ್ರಾಸ್‌ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಇದರ ವಿರುದ್ಧ ದನಿ ಎತ್ತಿದ್ದವು. ಇದೊಂದು ಅಮಾನವೀಯ ನಡೆಯಾಗಿದ್ದು ಪ್ರತಿನಿತ್ಯ 5-6 ಮಂದಿ ಸಾವಿಗೀಡಾಗುತ್ತಾರೆ. ಅಲ್ಲಿನ ಪರಿಸ್ಥಿತಿಯನ್ನು ಶೀಘ್ರದಲ್ಲೇ ಸರಿ ಮಾಡಬೇಕಿದೆ. ಅದಕ್ಕೆ ಹೆಚ್ಚಿನ ಅಗತ್ಯವಿದೆ ಎಂದಿದ್ದವು.

ರುವಾಂಡಾ ಜೈಲಿನ ಇತಿಹಾಸದಲ್ಲಿ ಸಾಕಷ್ಟು ಇಂತಹ ಘಟನೆಗಳಿವೆ. 1995ರಲ್ಲಿ ಸುಮಾರು ಒಂದು ಸಾವಿರ ಮಂದಿ ಅಪರಾಧಿಗಳು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಗಂಟೆಗಟ್ಟಲೆ ನಿಂತೇ ಇರಬೇಕಾದ ಪರಿಸ್ಥಿತಿ ಇಲ್ಲಿರುವುದರಿಂದ ಅಲ್ಲಿನ ಇಲ್ಲನ ಅಪರಾಧಿಗಳ ಕಾಲುಗಳು ಕೊಳೆತು ಹೋಗುವಂತ ಆರೋಗ್ಯ ಸಮಸ್ಯೆಗಳೂ ಉಲ್ಬಣಿಸಿತ್ತು. ಸರಿಯಾದ ಆಹಾರ, ಔಷಧಿ ಮತ್ತಿತರ ಯಾವುದೇ ನೆರವಿಲ್ಲದೆ ಅತ್ಯಂತ ಕ್ಲಿಷ್ಕರ ಪರಿಸ್ಥಿತಿ ಇಲ್ಲಿದು ಕಳೆದ ವರ್ಷವೊಂದರಲ್ಲೇ ರುವಾಂಡಾದ ಜೈಲುಗಳಲ್ಲಿ ಇಟ್ಟು 2000 ಮಂದಿ ಸತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಗಿಟರಮ ಜೈಲುವಾಸಿಗಳೇ ಎನ್ನಲಾಗಿದೆ.

ರುವಾಂಡಾ ನರಮೇಧ: ರುವಾಂಡಾ ದೇಶದಲ್ಲಿ 1994ರಲ್ಲಿ ನಡೆದ ನರಮೇಧ ಇತಿಹಾಸದಲ್ಲಿನ ಕಪ್ಪುಚುಕ್ಕೆ. ರುವಾಂಡಾ ದೇಶದ ಬಹುಸಂಖ್ಯಾತ ಹುಟು ಜನಾಂಗಕ್ಕೂ ಅಲ್ಪಸಂಖ್ಯಾತ ಟೂಟ್ಸಿ ಜನಾಂಗಕ್ಕೂ ಎಣ್ಣೆ ಸೀಗೆ ಸಂಬಂಧ. 1994ರಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಬೀದಿಗಿಳಿದಿದ್ದ ಟೂಟ್ಸಿ ಜನಾಂಗದವರು ಹುಟು ಜನಾಂಗದ ರಾಷ್ಟ್ರಪತಿ ತೆರಳಿದ ವಿಮಾನ ಹೊಡೆದುರುಳಿಸಿದ್ದರು. ಈ ಘಟನೆ ನಡೆದ ಹಿನ್ನೆಲೆಯಲ್ಲಿ ಹುಟು ಜನಾಂಗದವರು ಟೂಟ್ಸಿ ಜನಾಂಗದ ಮಂದಿಯನ್ನು ಹುಡುಕಿ ಹುಡುಕಿ ಕೊಲ್ಲಲಾರಂಭಿಸಿದರು. ಕೇವಲ 100 ದಿನಗಳಲ್ಲಿ 10 ಲಕ್ಷ ಮಂದಿಯ ನರಮೇಧ ನಡೆದಿತ್ತು. ಇದು ಇತಿಹಾಸ ಕಂಡ ಅತ್ಯಂತ ಭೀಕರ ನರಮೇಧಗಳಲ್ಲಿ ಒಂದಾಗಿದೆ ಎಂಬುದನ್ನಿಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Adipurush Movie: ಕಟ್ಟಪ್ಪ ಬಾಹುಬಲಿ ಕೊಂದಿದ್ದು ಯಾಕೆ ಅಂತ ಗೊತ್ತಾಯ್ತು; ಸೆಹ್ವಾಗ್ ಟ್ವೀಟ್‌ ವೈರಲ್‌!

Exit mobile version