Site icon Vistara News

ಇಸ್ರೇಲ್ ವೈಮಾನಿಕ ದಾಳಿ; ಹಮಾಸ್ ನಾಯಕ, ಪ್ಯಾಲೆಸ್ತೀನ್ ಭದ್ರತಾ ಪಡೆ ಕಮಾಂಡರ್ ಜೆಹಾದ್ ಮೈಸೆನ್ ಸಾವು

Palestine national security forces head Jehad Mheisen killed by Israeli airstrike

ಜೆರುಸಲೆಂ: ಗಾಜಾ ಪಟ್ಟಿಯ (Gaza Strip) ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ(Airstrike By Israel), ಪ್ಯಾಲೆಸ್ತೀನ್‌ನ ಹಮಾಸ್ ನೇತೃತ್ವದ ರಾಷ್ಟ್ರೀಯ ಭದ್ರತಾ ಪಡೆಯ ಮುಖ್ಯಸ್ಥ ಜೆಹಾದ್ ಮೈಸೆನ್ (Major General Jehad Mheisen killed) ಹತರಾಗಿದ್ದಾರೆ. ವೈಮಾನಿಕ ದಾಳಿಯ ವೇಳೆ ಮೈಸೆನ್ ತಮ್ಮ ಕುಟುಂಬದ ಇತರ ಸದಸ್ಯರೊಂದಿಗೆ ಮನೆಯಲ್ಲಿ ಹತರಾಗಿದ್ದಾರೆ ಎಂದು ಹಮಾಸ್ ಸಹವರ್ತಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರಿದ ಮಾಡಿದೆ(Israel Palestine War).

ಪ್ಯಾಲೆಸ್ತೀನ್‌ ಸಹವರ್ತಿಯಾಗಿರುವ ಜೆರುಸಲೆಂ ನ್ಯೂಸ್ ನೆಟ್ವರ್ಕ್ ವರದಿಯ ಪ್ರಕಾರ, ಗಾಜಾದ ರಾದ್ವಾನ್ ನೆರೆ ಹೊರೆಯ ಮೇಲೆ ಇಸ್ರೇಲ್ ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಸುದ್ದಿ ಸಂಸ್ಥೆ, ಗಾಜಾ ಪಟ್ಟಿಯ ಶೇಖ್ ರಾದ್ವಾನ್ ಮತ್ತು ಅದರ ನೆರೆ ಹೊರೆ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ಬಾಂಬ್ ದಾಳಿಯಲ್ಲಿ ಗಾಜಾ ಪಟ್ಟಿಯ ಪ್ಯಾಲೆಸ್ತೀನ್ ರಾಷ್ಟ್ರೀಯ ಭದ್ರತಾ ಪಡೆಗಳ ಮೇಜರ್ ಜನರಲ್ ಕಮಾಂಡರ್ ಜೆಹಾದ್ ಮೈಸೆನ್ ಅವರು ಮತ್ತು ಅವರ ಕುಟುಂಬವು ಅಸುನೀಗಿದೆ ಎಂದು ಹೇಳಿದೆ.

ಗಾಜಾ ಪಟ್ಟಿಯ ಹಮಾಸ್ ಬಂಡುಕೋರರ ಮತ್ತು ಇಸ್ರೇಲ್ ನಡುವಿನ ಯುದ್ಧವು ಈಗ 13ನೇ ದಿನಕ್ಕೆ ಕಾಲಿಟ್ಟಿದೆ. ಗಾಜಾಪಟ್ಟಿಯಲ್ಲಿ ಅರ್ಧದಷ್ಟು ಜನರು ನಿರ್ಗತಿಕರಾಗಿದ್ದು, 5000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ವಿನಂತಿಯ ಮೇರೆಗೆ ಗಾಜಾ ಪಟ್ಟಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಮಾನವೀಯ ನೆರವು ನೀಡಲು ಅನುಮತಿಸಲಾಗುವುದು ಎಂದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಗಾಜಾಗೆ 2.5 ಕೋಟಿ ರೂ. ದೇಣಿಗೆ ನೀಡಿದ ಮಲಾಲಾ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು 13ನೇ ದಿನಕ್ಕೆ ಕಾಲಿಟ್ಟಿದ್ದು, 4 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಅದರಲ್ಲೂ, ಗಾಜಾ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಮೇಲೆ ನಡೆದ ಬಾಂಬ್‌ ದಾಳಿ (Israel Palestine War) ಬಳಿಕ ಶಾಂತಿಸ್ಥಾಪನೆ ದಿಸೆಯಲ್ಲಿ ಜಗತ್ತಿನಾದ್ಯಂತ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ನೊಬೆಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲಾ ಯೂಸುಫ್‌ಜಾಯ್‌ (Malala Yousafzai) ಅವರು ಗಾಜಾ ನಗರದ ಜನರಿಗಾಗಿ 2.5 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Palestine War: ಇಸ್ರೇಲ್‌ ಪೊಲೀಸರಿಗೂ ಕೇರಳದ ಟೇಲರ್‌ಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ!

ಗಾಜಾ ನಗರದ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಕುರಿತು ವಿಡಿಯೊ ಒಂದನ್ನು ಪೋಸ್ಟ್‌ ಮಾಡಿರುವ ಮಲಾಲಾ ಯೂಸುಫ್‌ಜಾಯ್‌, “ಗಾಜಾ ನಗರದ ಅಲ್‌-ಅಲ್ಹಿ ಆಸ್ಪತ್ರೆ ಮೇಲೆ ನಡೆದ ಬಾಂಬ್‌ ದಾಳಿಯಿಂದ ನಾನು ದಿಗಿಲುಗೊಂಡಿದ್ದೇನೆ ಹಾಗೂ ದಾಳಿಯನ್ನು ಖಂಡಿಸುತ್ತೇನೆ. ಇಸ್ರೇಲ್‌ ಸರ್ಕಾರವು ಕೂಡಲೇ ಗಾಜಾ ನಗರದಲ್ಲಿ ಜನರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಲು, ಅವರಿಗೆ ಸಹಾಯ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇನೆ. ಹಾಗೆಯೇ, ಪ್ಯಾಲೆಸ್ತೀನ್‌ ಜನರಿಗೆ ಸಹಾಯ ಮಾಡುತ್ತಿರುವ ಮೂರು ಸಂಸ್ಥೆಗಳಿಗೆ 2.5 ಕೋಟಿ ರೂ. ದೇಣಿಗೆ ಘೋಷಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಇಸ್ರೇಲ್‌ ಹಾಗೂ ಗಾಜಾ ಸಂಘರ್ಷದಿಂದಾಗಿ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಯಾವುದೇ ಸಮಸ್ಯೆಗೆ ದಾಳಿ, ಸಂಘರ್ಷವೊಂದೇ ಪರಿಹಾರವಲ್ಲ. ಹಾಗಾಗಿ, ಗಾಜಾ ಹಾಗೂ ಇಸ್ರೇಲ್‌ ಕೂಡಲೇ ಶಾಂತಿಸ್ಥಾಪನೆ ಒಪ್ಪಂದಕ್ಕೆ ಬರಬೇಕು” ಎಂದು ಕೂಡ ಯೂಸುಫ್‌ಜಾಯ್‌ ವಿಡಿಯೊ ಮೂಲಕ ಆಗ್ರಹಿಸಿದ್ದಾರೆ. ಗಾಜಾ ನಗರದ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದು, ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version