Site icon Vistara News

Coronavirus News: ಶುಕ್ರವಾರ 173 ಮಂದಿಗೆ ಪಾಸಿಟಿವ್; ಬೆಂಗಳೂರಲ್ಲಿ ಕೋವಿಡ್‌ಗೆ ಇಬ್ಬರ ಬಲಿ

Covid Test

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 173 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಒಟ್ಟು ಸಕ್ರಿಯ ಪ್ರಕರಣಗಳ (Coronavirus News) ಸಂಖ್ಯೆ 702ಕ್ಕೆ ಏರಿದ್ದು, 37 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ.

ರಾಜ್ಯದಲ್ಲಿ ಶುಕ್ರವಾರ ಒಟ್ಟು 8349 ಮಂದಿಗೆ ಕೋವಿಡ್ ಟೆಸ್ಟ್‌ (6400 RTCPR+ 1949 RAT) ಮಾಡಲಾಗಿದ್ದು, ಈ ಪೈಕಿ 173 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳಿದ್ದು, ಇಲ್ಲಿಯವರೆಗೂ 471 ಕೇಸ್‌ಗಳು ವರದಿಯಾಗಿವೆ.

ಒಟ್ಟು 702 ಸಕ್ರಿಯ ಪ್ರಕರಣಗಳಲ್ಲಿ 649 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಇದ್ದು, 53 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 12 ರೋಗಿಗಳು ಐಸಿಯುನಲ್ಲಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಶೇ.2.07 ಕೊವಿಡ್ ಪಾಸಿಟಿವಿಟಿ ದರ ಇದ್ದು, ಮರಣ ಪ್ರಮಾಣ ದರ ಶೇ. 1.15 ಇದೆ.

ಇನ್ನು ರಾಜ್ಯದಲ್ಲಿ ಗುರುವಾರ 158 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದವು. 8350 ಮಂದಿಗೆ ಟೆಸ್ಟ್‌ ಮಾಡಲಾಗಿದ್ದು, ಅದರಲ್ಲಿ 158 ಮಂದಿಗೆ ಸೋಂಕು ತಗುಲಿತ್ತು.

ಇದನ್ನೂ ಓದಿ | Drowned in Sea : ಉಳ್ಳಾಲ ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲು

ಮಾಸ್ಕ್‌ ಧರಿಸಿ ಓಡಾಡಿ, ವಯಸ್ಸಾದವರು ಎಚ್ಚರಿಕೆಯಿಂದಿರಿ: ಸಚಿವರ ಸೂಚನೆ

ಕೋವಿಡ್ JN.1 ರೂಪಾಂತರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದುವರೆಗೂ 34 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ JN.1 ಸೋಂಕಿನ ಹರಡುವಿಕೆ ಸಾಮರ್ಥ್ಯ ಹೆಚ್ಚಿರುವುದು ಕಂಡುಬಂದಿದ್ದು ಹೊಸವರ್ಷಾಚರಣೆಯ ಸಂದರ್ಭದಲ್ಲಿ ಜನಸಂದಣಿಯಾಗುವ ಹಾಗು ಒಳಾಂಗಣ ಜನಸಂದಣಿ ಪ್ರದೇಶಗಳಲ್ಲಿ ಮುಂಜಾಗ್ರತವಾಗಿ ಸೂಕ್ತ ಕೋವಿಡ್ ಮಾಸ್ಕ್ ಧರಿಸಲು ಕೋರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿಳಿಸಿದ್ದಾರೆ.

60 ವರ್ಷ ಮೇಲ್ಪಟ್ಟವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇದನ್ನೂ ಓದಿ | HD Kumaraswamy : ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ ಮೋದಿ; ಕುಮಾರಸ್ವಾಮಿ ಫುಲ್‌ ಖುಷ್‌

ಮುಂಬರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಸಂದಣಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಜನಸಂದಣಿಯಾಗುವುದನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದರ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version