Site icon Vistara News

ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಬಾಮೈದನಿಂದಲೇ ಕೊಲೆ: ಯೋಧನಿಗೆ ಇತ್ತಾ ಅನೈತಿಕ ಸಂಬಂಧ?

ಯೋಧ ಬಾಮೈದನಿಂದಲೇ ಕೊಲೆ

ಬಾದಾಮಿ: ವ್ಯಕ್ತಿಯೊಬ್ಬ ಭಾರತೀಯ ಸೇನೆಯಲ್ಲಿ ಯೋಧನಾಗಿರುವ ತನ್ನ ಸಹೋದರಿಯ ಗಂಡನನ್ನೇ ಕೊಲೆ ಮಾಡಿದ್ದಾನೆ. ಯೋಧನಿಗೆ ಅನೈತಿಕ ಸಂಬಂಧ ಇರುವ ಶಂಕೆ ಮೇರೆಗೆ ಆತ ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.

ತಾಲೂಕಿನ ಕೆರೂರ ಠಾಣಾ ವ್ಯಾಪ್ತಿಯಲ್ಲಿ ಬರುವ ನೀರಲಕೇರಿ ಗ್ರಾಮದಲ್ಲಿ ಕರಿಸಿದ್ದಪ್ಪ ಕಳಸದ ಎಂಬ ೨೮ ವರ್ಷದ ಯೋಧ ಕೊಲೆಯಾದವರು. ಕರಿಸಿದ್ದಪ್ಪ ರಾಜಸ್ಥಾನದ ೨೧೩ನೇ ರಾಕೆಟ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಊರಲ್ಲಿ ಅಮೋಘ ಸಿದ್ದೇಶ್ವರ ಜಾತ್ರೆ ಹಾಗೂ ರಾಖಿ ಹಬ್ಬದ ಪ್ರಯುಕ್ತ ರಜೆ ಪಡೆದು ಬಂದಿದ್ದರು ಎನ್ನಲಾಗಿದೆ.

ಸ್ನೇಹಿತರ ಜತೆ ಸೇರಿ ಗ್ರಾಮದಲ್ಲಿನ ಅಮೋಘ ಸಿದ್ದೇಶ್ವರ ಜಾತ್ರೆ ಮುಗಿಸಿ ಮನೆಗೆ ಬಂದು ರಾತ್ರಿ ಊಟಕ್ಕೆ ಕುಳಿತಿದ್ದರು. ಈ ವೇಳೆ ಕರಿಸಿದ್ದಪ್ಪ ಅವರ ಮೊಬೈಲ್‌ ಅನ್ನು ಪತ್ನಿ ಪರಿಶೀಲನೆ ಮಾಡಿದಳು ಎಂದು ಗಲಾಟೆ ಶುರುವಾಗಿತ್ತು ಎನ್ನಲಾಗಿದೆ. ಆಗ ಪತ್ನಿ ವಿದ್ಯಾ ಊಟ ಮಾಡುವುದನ್ನು ಬಿಟ್ಟು ಹೊರಬಂದು ಸಹೋದರ ಧರಿಗೌಡನಿಗೆ ಕರೆ ಮಾಡಿದ್ದಳು. ವಿದ್ಯಾ ತವರು ನೀರಲಕೇರಿ ಗ್ರಾಮದಲ್ಲೇ ಇರುವುದರಿಂದ ತಕ್ಷಣಕ್ಕೆ ಸಹೋದರ ಧರಿಗೌಡ ಹಾಗೂ ತಂದೆ ಫಕ್ಕೀರಪ್ಪ ಯೋಧನ ಮನೆಗೆ ಬಂದಿದ್ದರು. ಈ ವೇಳೆ ಗಲಾಟೆಗಳು ನಡೆದು ಕೊಲೆ ನಡೆದಿದೆ ಎಂದು ಹೇಳಲಾಗಿದೆ.

ವಿದ್ಯಾಳನ್ನು ಮೂರು ವರ್ಷದ ಹಿಂದೆ ಯೋಧ ಕರಿಸಿದ್ದಪ್ಪ ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಆದರೆ ನಂತರ ಇಬ್ಬರ ಸಂಸಾರದಲ್ಲಿ ಮೇಲಿಂದ‌‌ ಮೇಲೆ ಜಗಳ ನಡೆಯುತ್ತಿತ್ತು. ಈ ಕುರಿತು ಹಿಂದೆಯೂ ರಾಜಿ ಪಂಚಾಯಿತಿ ನಡೆಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ | ರಜೆ ಮೇಲೆ ಬಂದಿದ್ದ ಯೋಧನ ಕೊಲೆ, ಸೋದರಿಗೆ ಕಿರುಕುಳ ನೀಡಿದ್ದಕ್ಕೆ ಬಾಮೈದನೇ ಚಾಕುವಿನಿಂದ ಇರಿದ

ಯೋಧನ ಪತ್ನಿ ವಿದ್ಯಾಶ್ರಿ ಐದು ತಿಂಗಳ ಗರ್ಭಿಣಿಯಾಗಿದ್ದು, ಯೋಧನ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ಇರುವ ಸಂಶಯವೇ ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ತನ್ನ ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಸಹೋದರ ಹಾಗೂ ತಂದೆ, ತಾಯಿ ಬಳಿ ಆಗಾಗ ದೂರು ಹೇಳುತ್ತಿದ್ದಳು ಎಂದು ಹೇಳಲಾಗಿದೆ. ಕೊಲೆ ಆರೋಪದ ಮೇರೆಗೆ ಧರಿಗೌಡ, ಫಕ್ಕೀರಪ್ಪ, ಶಾಂತವ್ವ, ಯೋಧನ ಪತ್ನಿ ವಿದ್ಯಾಶ್ರಿಯನ್ನು ಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | BSF Soldier | ಪಶ್ಚಿಮ ಬಂಗಾಳದಲ್ಲಿ ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು

Exit mobile version