Site icon Vistara News

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Abbi Falls

ಶಿವಮೊಗ್ಗ: ಸೆಲ್ಫಿ ಕ್ರೇಜ್‌ಗೆ ಯುವಕ ಬಲಿಯಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತದ (Abbi Falls) ಬಳಿ ನಡೆದಿದೆ. ಫಾಲ್ಸ್‌ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಲು ಜಾರಿ ಬಿದ್ದು ಪ್ರವಾಸಿಗ ಮೃತ ಪಟ್ಟಿದ್ದಾನೆ.

ಬಳ್ಳಾರಿ ಮೂಲದ ವಿನೋದ್ (26) ಮೃತ ಯುವಕ. ಬೆಂಗಳೂರಿನಿಂದ ಪ್ರವಾಸಕ್ಕೆಂದು 12 ಯುವಕರ ತಂಡ ಅಬ್ಬಿ ಫಾಲ್ಸ್‌ಗೆ ಬಂಇತ್ತು. ಈ ವೇಳೆ ಜಲಪಾತ ಬಳಿ ನಿಂತು ಯುವಕ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ, ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕೋಟೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ

ಕೊಡಗು: ಜಿಲ್ಲೆಯಲ್ಲಿ ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣ ಮತ್ತೆ ಮರುಕಳಿಸಿದೆ. ಮಾದಪುರ ಸಮೀಪದ ಕೋಟೆ ಬೆಟ್ಟದಲ್ಲಿ ನಡೆದ ಘಟನೆ ನಡೆದಿದ್ದು, ಪ್ರವಾಸಿಗರ ಮೇಲೆ ಹಲ್ಲೆ, ದೌರ್ಜನ್ಯದಿಂದ ಮಕ್ಕಳು, ಮಹಿಳೆಯರು ಭಯಭೀತರಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಕೋಟೆ (Kote Betta) ಬೆಟ್ಟ ವೀಕ್ಷಣೆಗೆ ಪುತ್ತೂರು ಮೂಲದ ಕುಟುಂಬ ಬಂದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದು, ಚಿನ್ನದ ಸರವನ್ನೂ ಎಗರಿಸಿ ಪರಾರಿಯಾಗಿದ್ದಾರೆ. ಪ್ರವಾಸಿಗರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bomb Threat: ದಿಲ್ಲಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ; ಬಾಲಕ ಅರೆಸ್ಟ್‌

ವೇಗವಾಗಿ ಬಂದು ಬೈಕ್‌ಗೆ ರಭಸವಾಗಿ ಗುದ್ದಿದ ಬಸ್‌; ನಜ್ಜುಗುಜ್ಜಾದ ಸವಾರ

ಶಿವಮೊಗ್ಗ: ಭೀಕರ ರಸ್ತೆ ಅಪಘಾತದಲ್ಲಿ (Road Accident) ಯುವಕನೊಬ್ಬ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಬಸ್‌ವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಸ್‌ನಡಿ ಸಿಲುಕಿದ ಸವಾರನ ಕರುಳು ಹೊರಬಂದಿತ್ತು. ಶಿವಮೊಗ್ಗ (Shivamogga News) ನಗರದ ಊರುಗಡೂರು ಸರ್ಕಲ್ ಬಳಿ ಈ ಘಟನೆ ನಡೆದಿದೆ.

ಸಂತೋಷ್ (23) ಮೃತ ದುರ್ದೈವಿ. ರಾಜಹಂಸ ಬಸ್‌ ಬೆಂಗಳೂರಿನಿಂದ ಬರುತ್ತಿತ್ತು. ಬೈಕ್‌ನಲ್ಲಿದ್ದ ಸಂತೋಷ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ ಸಮೇತ ಬಸ್‌ನಡಿ ಸಿಲುಕಿದ ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಶ್ಚಿಮ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಸ್ಸಿನಡಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪಶ್ಚಿಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಾಹನಗಳನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.

Exit mobile version