Site icon Vistara News

Actor Darshan: ದರ್ಶನ್‌ಗೆ ಬಟ್ಟೆ, ಹಣ್ಣು ಕೊಟ್ಟ ಅಕ್ಕ-ಬಾವ, ಸ್ನ್ಯಾಕ್ಸ್‌ ವಾಪಸ್‌; ತಾಯಿ ಕಂಡು ಪವಿತ್ರಾ ಗೌಡ ಕಣ್ಣೀರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ರನ್ನು (Actor Darshan) ಅವರ ಅಕ್ಕ-ಬಾವ ಬುಧವಾರ ಭೇಟಿಯಾದರು. ಮಾತುಕತೆ ಬಳಿಕ ದರ್ಶನ್‌ಗೆ ಬಟ್ಟೆ ಹಾಗೂ ಹಣ್ಣುಗಳನ್ನು ನೀಡಿ ವಾಪಸ್‌ ಆಗಿದ್ದಾರೆ. ಮತ್ತೊಂದೆಡೆ ತನ್ನನ್ನು ಭೇಟಿಯಾಗಲು ಬಂದಿದ್ದ ತಾಯಿಯನ್ನು ಕಂಡು ಪವಿತ್ರಾ ಗೌಡ ಕಣ್ಣೀರು ಹಾಕಿರುವುದು ಕಂಡುಬಂದಿದೆ.

ಕಾರಿನಲ್ಲಿ ನಟ ದರ್ಶನ್ ಅಕ್ಕ, ಭಾವ ಮತ್ತು ಅಕ್ಕನ ಮಗ ಚಂದ್ರ ಕುಮಾರ್ ಆಗಮಿಸಿದ್ದರು. ಈ ವೇಳೆ ಮನೆಯಿಂದ ತಂದಿದ್ದ ಬಟ್ಟೆ, ಹಣ್ಣುಗಳನ್ನು ಅಕ್ಕನ ಮಗ ತೆಗೆದುಕೊಂಡು ಹೋದರು. ಇದೇ ವೇಳೆ ದರ್ಶನ್‌ಗಾಗಿ ತಂದಿದ್ದ ಸ್ನ್ಯಾಕ್ಸ್ ನೀಡಲು ಪೊಲೀಸಲು ಅನುಮತಿ ನಿರಾಕರಿಸಿದ್ದಾರೆ. ಸ್ನ್ಯಾಕ್ಸ್‌ ಬುಟ್ಟಿ ಹಿಡಿದು ಒಳಗೆ ಹೋಗುತ್ತಿದ್ದ ಡ್ರೈವರ್‌ನ ಪೊಲೀಸರು ತಡೆದು ವಾಪಸ್‌ ಕಳುಹಿಸಿದ್ದಾರೆ. ತಿಂಡಿಗಳಿಗೆ ಜೈಲಿನೊಳಗೆ ಅನುಮತಿ ಇಲ್ಲದ ಕಾರಣ ಚೆಕ್‌ಪೋಸ್ಟ್‌ನಲ್ಲಿ ತಡೆದು, ಫ್ರೂಟ್ಸ್ ಮತ್ತು ಬಟ್ಟೆಗೆ ಮಾತ್ರ ಒಳಗೆ ತೆಗೆದುಕೊಂದು ಹೋಗಲು ಅವಕಾಶ ನೀಡಲಾಗಿದೆ.

ಪತ್ನಿ ವಿಜಯಲಕ್ಷ್ಮೀ, ಮಗ ಆಗಮನ

ದರ್ಶನ್‌ ಅಕ್ಕ-ಬಾವ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌ ಆಗಮಿಸಿದ್ದರು. ಕುಟುಂಬಸ್ಥರು ದರ್ಶನ್ ಭೇಟಿಗಾಗಿ ಒಳಗೆ ಹೋಗಿದ್ದ ಕಾರಣ ಹೊರಗೆ ಕಾಯುತ್ತಿದ್ದರು.

ತಾಯಿ ಭೇಟಿ ವೇಳೆ ಪವಿತ್ರಾ ಕಣ್ಣೀರು

ತಾಯಿ ಭೇಟಿ ವೇಳೆ ಅರೋಪಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ನಟ ದರ್ಶನ್ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ತಾಯಿ ಬಳಿ ಪವಿತ್ರಾ ಹೇಳಿಕೊಂಡಿದ್ದು, ನಾನು ಏನು ತಪ್ಪು ಮಾಡಿದೆ ಎಂದು ನನಗೆ ಈ ಶಿಕ್ಷೆ ಎಂದು ಭಾವುಕರಾಗಿದ್ದಾರೆ.

ರೇಣುಕಾಸ್ವಾಮಿ ಕೆಟ್ಟದ್ದಾಗಿ ಮ್ಯಾಸೇಜ್ ಮಾಡಿದ್ದನ್ನು ನಾನು ತಿಳಿಸಿದ್ದು ನನ್ನ ತಪ್ಪಾ? ನನ್ನಿಂದಲೇ ತಪ್ಪಾಯಿತು ಎಂಬಂತೆ ನಟ ದರ್ಶನ್ ವರ್ತಿಸುತ್ತಿದ್ದಾರೆ. ನನ್ನ ಬಾಳಿನ ಜತೆ ಆಟವಾಡುತ್ತಿದ್ದಾರೆ ಎಂದು ಪವಿತ್ರಾ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ | Viral News: ಇನ್ನು ಅವಳಲ್ಲ, ಅವನು: ಅಧಿಕೃತ ದಾಖಲೆಗಳಲ್ಲಿ ಹೆಸರು & ಲಿಂಗ ಬದಲಾಯಿಸಿದ IRS ಅಧಿಕಾರಿ

ಜೈಲುವಾಸದಿಂದ ಹೈರಾಣಾಗಿರುವ ಪವಿತ್ರಾ, ಜೈಲಿನ ಊಟ ಸೇರಿ ಅಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿ, ಮನೆ ಊಟ, ಮನೆಯ ವಸ್ತುಗಳ ಬಳಕೆಗೆ ಕೋರ್ಟ್ ಅನುಮತಿ ಕೇಳುವಂತೆ ತಾಯಿಗೆ ಹೇಳಿದ್ದಾರೆ. ವಕೀಲರ ಮೂಲಕ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೊಡಿಸುವಂತೆ ತಾಯಿ ಬಳಿ ಅಲವತ್ತುಕೊಂಡಿದ್ದಾರೆ. ಈ ವೇಳೆ ಮಗಳಿಗೆ ಸಾಂತ್ವನ ಹೇಳಿದ ತಾಯಿ, ಕಾಲ ಹೀಗೆಯೇ ಇರುವುದಿಲ್ಲ, ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂದು ಸಾಂತ್ವನ ಹೇಳಿದ್ದಾರೆ.

ಜೈಲೂಟದಿಂದ ದರ್ಶನ್‌ಗೆ ಫುಡ್‌ ಪಾಯಿಸನ್‌, ಭೇದಿ, 10 ಕಿಲೋ ತೂಕ ಇಳಿಕೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲೂಟದಿಂದಾಗಿ ಫುಡ್‌ ಪಾಯಿಸನಿಂಗ್‌ ಹಾಗೂ ಅತಿಸಾರ ಆಗುತ್ತಿದೆ. ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ದರ್ಶನ್‌ ಪರ ವಕೀಲರು ಹೈಕೋರ್ಟ್‌ಗೆ (High Court) ರಿಟ್‌ ಅರ್ಜಿ (Writ Petition) ಸಲ್ಲಿಸಿದ್ದಾರೆ.

ಮನೆ ಊಟದ ಜೊತೆಗೆ ಹಾಸಿಗೆ, ಪುಸ್ತಕ ತರಿಸಿಕೊಳ್ಳಲು ಕೂಡ ನಟ ದರ್ಶನ್ ಕೋರಿದ್ದಾರೆ. ದರ್ಶನ್ ಪರ ವಕೀಲರು ಸಲ್ಲಿಸಿರುವ ರಿಟ್ ಅರ್ಜಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಬಟ್ಟೆ, ಚಮಚ (cutlery), ಮನೆಯಲ್ಲಿ ತಯಾರಿಸಿದ ಆಹಾರ, ಹಾಸಿಗೆ, ಪುಸ್ತಕ ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಸೇವಿಸಿದಾಗ ಅತಿಸಾರ ಆಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಜೈಲಿನ ಆಹಾರ ದರ್ಶನ್‌ಗೆ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಅತಿಸಾರದಿಂದಾಗಿ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ದರ್ಶನ್ ಜಾಮೀನಿಗಾಗಿ ವಕೀಲರು ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವಷ್ಟು ದಿನ ದರ್ಶನ್ ಜೈಲಿನಲ್ಲೆ ಇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ | ED Raid: ಮಾಜಿ ಸಚಿವ ಬಿ. ನಾಗೇಂದ್ರ ಪಿಎ ಹರೀಶ್‌ ಇಡಿ ವಶಕ್ಕೆ; ಅರೆಸ್ಟ್‌ ಆಗ್ತಾರಾ ನಾಗೇಂದ್ರ?

ಜೈಲು ಅಧಿಕಾರಿಗಳು ಮನೆ ಊಟ, ಹಾಸಿಗೆ ನೀಡಲು ಅವಕಾಶ ನೀಡದೆ ತಿರಸ್ಕರಿಸಿದ್ದಾರೆ. ಜೈಲು ಅಧಿಕಾರಿಗಳ ನಿರಾಕರಣೆ ಕಾನೂನುಬಾಹಿರ, ಅಮಾನವೀಯ. ಹೀಗೇ ಮುಂದುವರಿದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ ಅನಾರೋಗ್ಯಕ್ಕೂ ಕಾರಣವಾಗಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಹೀಗಾಗಿ ಹೈಕೋರ್ಟ್ ಮುಂದೆ ಬಂದು ಮನವಿ ಮಾಡೋದು ಹೊರತು ಪಡಿಸಿ ಬೇರೆ ದಾರಿ ಇಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ದರ್ಶನ್ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.

Exit mobile version