Site icon Vistara News

Karnataka Election: ಸಿದ್ದರಾಮಯ್ಯ ಪರ ಶಿವಣ್ಣ ಪ್ರಚಾರ, ಪ್ರತಾಪ್‌ ಸಿಂಹ, ಸೋಮಣ್ಣ ಅಸಮಾಧಾನ

Actor Shivaraj Kumar Campaigns For Siddaramaih; Pratap Simha, V Somanna Express Quite Unhappy

Actor Shivaraj Kumar Campaigns For Siddaramaih; Pratap Simha, V Somanna Express Quite Unhappy

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಅಭ್ಯರ್ಥಿಗಳು, ಕೇಂದ್ರ ನಾಯಕರ ಜತೆಗೆ ಸ್ಯಾಂಡಲ್‌ವುಡ್‌ ನಟರು ಕೂಡ ತಮ್ಮ ಆಪ್ತ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ಅವರ ಕ್ಷೇತ್ರಗಳಿಗೆ ತೆರಳಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಕಿಚ್ಚ ಸುದೀಪ್‌ ಅವರಂತಹ ಹಿರಿಯ ನಟರು ಕೂಡ ಪ್ರಚಾರಕ್ಕೆ ಧುಮುಕಿದ್ದಾರೆ. ಇದರ ಮಧ್ಯೆಯೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಶಿವರಾಜ್‌ ಕುಮಾರ್‌ ಅವರು ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಕ್ಕೆ ಸಂಸದ ಪ್ರತಾಪ್‌ ಸಿಂಹ, ಸಚಿವ ವಿ.ಸೋಮಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೋಕ್ಷವಾಗಿ ಪ್ರತಾಪ್‌ ಸಿಂಹ ಆಕ್ಷೇಪ

“ಪುನೀತ್‌ ರಾಜಕುಮಾರ್‌ ಸರ್‌ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ. ಅವರವರ ಭಾವ ಭಕುತಿಗೆ” ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡುವ ಮೂಲಕ ಪ್ರತಾಪ್‌ ಸಿಂಹ ಪರೋಕ್ಷವಾಗಿ ಅಸಮಾಧನ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ವಿ.ಸೋಮಣ್ಣ ಅವರನ್ನು ರಾಘವೇಂದ್ರ ರಾಜಕುಮಾರ್‌ ಅವರು ಹೊಗಳಿರುವ ವಿಡಿಯೊವನ್ನು ಕೂಡ ಪ್ರತಾಪ್‌ ಸಿಂಹ ಶೇರ್‌ ಮಾಡಿದ್ದಾರೆ.

ಶಿವಣ್ಣರಿಗೆ ಯಾವ ಒತ್ತಡ ಎಂದ ಸೋಮಣ್ಣ?

ಶಿವರಾಜ್‌ ಕುಮಾರ್‌ ಅವರು ಸಿದ್ದರಾಮಯ್ಯ ಅವರ ಪರ ಪ್ರಚಾರ ಕೈಗೊಂಡಿದ್ದರ ಕುರಿತು ಪ್ರತಿಕ್ರಿಯಿಸಿದ ವಿ. ಸೋಮಣ್ಣ, “ಶಿವರಾಜ್‌ ಕುಮಾರ್‌ ಅವರು ಯಾವ ಒತ್ತಡದಿಂದಾಗಿ ಪ್ರಚಾರಕ್ಕೆ ಬಂದಿದ್ದಾರೋ ಗೊತ್ತಿಲ್ಲ” ಎಂದು ಹೇಳಿದರು. “ಗೋವಿಂದರಾಜ ನಗರದಲ್ಲಿ ಆಸ್ಪತ್ರೆ ಸೇರಿ ಹಲವಾರು ಕಟ್ಟಡಗಳಿಗೆ ಪುನೀತ್ ರಾಜ್‍ಕುಮಾರ್ ಹೆಸರು ಇಟ್ಟಿದ್ದೇವೆ. ಸೋಮಣ್ಣನಿಗೆ ಸಲ್ಯೂಟ್ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ. ಆದರೆ, ಶಿವಣ್ಣ ಏಕೆ ಬಂದಿದ್ದಾರೆ ಎಂಬುದು ಗೊತ್ತಿಲ್ಲ” ಎಂದು ವಿ.ಸೋಮಣ್ಣ ಹೇಳಿದರು.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌

ಶಿವರಾಜ್‌ ಕುಮಾರ್‌ ಪ್ರಚಾರ

ವರುಣ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನಟ ಶಿವರಾಜ್‌ ಕುಮಾರ್‌ ಪ್ರಚಾರ ನಡೆಸಿದರು. ತಾಂಡವಪುರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಶಿವರಾಜ್‌ ಕುಮಾರ್‌, ಹಾಡು ಹಾಡಿದರು. “ನಾನೆಂದು ನಿಮ್ಮವನು, ನಿಮಗಾಗಿ ಬಂದವನು” ಹಾಡು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ವರುಣಕ್ಕೆ ಆಗಮಿಸಿದ ಕಾರಣ ಪ್ರಚಾರ ಮತ್ತಷ್ಟು ಜೋರಾಗಿದೆ.

Exit mobile version