Site icon Vistara News

Alcoholics association| ಅಸ್ತಿತ್ವಕ್ಕೆ ಬಂತು ಕುಡುಕರ ಸಂಘ: ಕುತೂಹಲಕಾರಿ ಬೇಡಿಕೆಗಳು ಇಲ್ಲಿವೆ ನೋಡಿ!

drinks party

ಹಾಸನ: ಈ ಜಗತ್ತಿನಲ್ಲಿ ಸೇವೆಗಾಗಿ, ಸ್ಥಾನಕ್ಕಾಗಿ, ಪ್ರಚಾರಕ್ಕಾಗಿ ಅದೆಷ್ಟೋ ಸಂಘಟನೆಗಳು ಹುಟ್ಟಿಕೊಂಡಿವೆ. ಹಾಗಿರುವಾಗ ಮದ್ಯಪ್ರಿಯರ ಸಂಘಟನೆ (Alcoholics association) ಯಾಕಿರಬಾರದು? ಹೀಗೊಂದು ಆಲೋಚನೆ ಸಾಕಷ್ಟು ಬಾರಿ ಹುಟ್ಟಿಕೊಂಡಿರಬಹುದು. ಯಾಕೆಂದರೆ, ಈ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವವರು ಕುಡುಕರು, ರಾಜ್ಯಾಡಳಿತ ನಡೆಯುವುದೇ ಕುಡುಕರಿಂದ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ!

ಇದೀಗ ಹಾಸನದಲ್ಲಿ ಒಂದು ಮದ್ಯಪಾನ ಪ್ರಿಯರ ಹೋರಾಟ ಸಂಘವೇ ಅಸ್ತಿತ್ವಕ್ಕೆ ಬಂದಿದೆ. ಅದರ ರಾಜ್ಯಾಧ್ಯಕ್ಷರು ವೆಂಕಟೇಶ್‌ ಗೊರರಹಳ್ಳಿ. ಅವರು ಶುಕ್ರವಾರ ಹಾಸನ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸಂಘದ ಉದ್ಘಾಟನೆಗೆ ಅಬಕಾರಿ ಸಚಿವರನ್ನೇ ಕರೀತೇವೆ ಎಂದು ಅವರು ಹೇಳಿಕೊಂಡರು. ಈ ನಡುವೆ, ಪತ್ರಿಕಾಗೋಷ್ಠಿ ನಡೆಸಿದವರು ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಈ ಪತ್ರಿಕಾಗೋಷ್ಠಿ, ಮದ್ಯಪ್ರಿಯರ ಸಂಘದ ಉದ್ಘಾಟನೆ ಸುದ್ದಿ ಯಾಕೆ ಇಷ್ಟೊಂದು ಮಹತ್ವದ್ದೆಂದರೆ, ನಮ್ಮೂರಲ್ಲಿ​ ​ ​ ಮದ್ಯದಂಗಡಿ ಬೇಡವೇ ಬೇಡ ಎಂದು ಒಂದಲ್ಲ ಒಂದು ಕಡೆ ಪ್ರತಿಭಟನೆ ನಡೆಯುತ್ತಿದೆ. ಮದ್ಯಪಾನ ನಿಲ್ಲಿಸಿ ಎಂದು ಮಹಿಳೆಯರು, ಪುರುಷರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡೋದು ಕಾಮನ್‌. ಕೆಲವು ಕಡೆ ಮದ್ಯದಂಗಡಿ ಬೇಕು ಎಂದು ಪ್ರತಿಭಟನೆ ನಡೆದಿದೆಯಾದರೂ ಇಷ್ಟೊಂದು ವ್ಯವಸ್ಥಿತವಾಗಿ ಸಂಘ ಕಟ್ಟಿಕೊಂಡು ಮದ್ಯಪಾನದ ಪರ ಹೋರಾಟ ಮಾಡಿದ್ದು ಕಡಿಮೆಯೇ.

ನಮ್ಮ ಮಕ್ಕಳಿಗೆ ಹಾಸ್ಟೆಲ್‌ ಬೇಕು, ಯಾಕೆಂದರೆ!
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೆಂಕಟೇಶ್‌ ಅವರು ಕೆಲವರು ತುಂಬಾ ಲಘುವಾಗಿ ಪರಿಗಣಿಸಬಹುದಾದ, ಆದರೆ, ಕುಡುಕರ ಕುಟುಂಬಗಳಿಗೆ ತುಂಬಾ ಗಂಭೀರವಾಗಿರುವ ವಿಚಾರವನ್ನು ಪ್ರಸ್ತಾಪಿಸಿದರು.
ನಾವು ಕುಡಿದು ಮನೆಗೆ ಹೋದಾಗ ಬೇರೆ ಬೇರೆ ಕಾರಣಗಳಿಗೆ ಜಗಳಗಳು ಆಗಬಹುದು. ಆಗ ನಮ್ಮ ಮಕ್ಕಳಿಗೆ ಓಡಲು ಕಷ್ಟವಾಗುತ್ತದೆ. ಮಕ್ಕಳಿಗೆ ಕಲಿಕೆಯ ವಾತಾವರಣ ಇರಬೇಕು. ಹೀಗಾಗಿ ಕುಡಿದು ಮನೆಗೆ ಹೋಗಿ ಗಲಾಟೆ ಮಾಡುವವರ ಕುಟುಂಬಗಳನ್ನು ಗುರುತಿಸಿ ಅವರ ಮಕ್ಕಳಿಗೆ ಹಾಸ್ಟೆಲ್‌ ಸೌಲಭ್ಯವನ್ನು ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಗೋಷ್ಠಿಯಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ತಿಮ್ಮೇಗೌಡ, ಮಳಲಿಗೌಡ, ಮಧು, ಸಿದ್ದೇಶ್, ಕುಮಾರ್, ರಮೇಶ್ ಇತರರು ಉಪಸ್ಥಿತರಿದ್ದರು.

ಕುಡುಕರ ಸಂಘದ ಗುರಿ ಮತ್ತು ಉದ್ದೇಶಗಳು
1. ಮದ್ಯ ಪ್ರಿಯರ ಕೌಟುಂಬಿಕ ಕಲ್ಯಾಣಕ್ಕಾಗಿ ಹೋರಾಟ ಮಾಡುವುದು.
೨. ಮದ್ಯಪ್ರಿಯರಿಗೆ ವಿಮಾ ಸೌಲಭ್ಯ ಒದಗಿಸುವುದಕ್ಕೆ ಹೋರಾಟ ಮಾಡುವುದು.
೩. ಮದ್ಯಪ್ರಿಯರ ನಿಗಮ ಮಂಡಳಿ ರಚಿಸುವುದಕ್ಕೆ ಹೋರಾಟ.
5.ಮದ್ಯಪ್ರಿಯರ ಆರೋಗ್ಯದ ಸವಲತ್ತಿನ ಬಗ್ಗೆ ಹೋರಾಟ ಮಾಡುವುದು
6. ಮದ್ಯಪ್ರಿಯರ ಕೌಟುಂಬಿಕ ವಸತಿಯ ಬಗ್ಗೆ ಪ್ರೋತ್ಸಾಹ ನೀಡುವುದು.
೭. ಧಾರ್ಮಿಕ ಪರಂಪರೆ, ತತ್ವಜ್ಞಾನ, ಆಧ್ಯಾತ್ಮಿಕ ವಿಷಯಗಳ ಅಧ್ಯಯನ
8. ಯುವ ಜನಾಂಗವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರೋತ್ಸಾಹಿಸುವುದು.
೯. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಪುರಸ್ಕರಿಸುವುದು.
10. ಯುವಕರಿಗಾಗಿ ಕ್ರೀಡೆಗಳನ್ನು ಆಯೋಜಿಸುವುದು.
೧೧. ಸಮಾಜದಲ್ಲಿ ನೈತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಪ್ರಚಾರ ಮಾಡುವುದು.
11. ವಾರ್ಷಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
೧೨. ಪ್ರತಿಷ್ಠಾನದ ಉದ್ದೇಶಕ್ಕಾಗಿ ದಾನ ವಂತಿಗೆ ಪಡೆಯುವುದು.
1೩. ಯುವಕರ ಸರ್ವತೋಮುಖ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶ್ರಮಿಸುವುದು.
1೪. ವ್ಯವಸಾಯ ಮತ್ತು ಹೈನುಗಾರಿಕೆಯ ಅಭಿವೃದ್ಧಿಗೆ ಉತ್ತೇಜನ ನೀಡುವುದು.

ಇದನ್ನೂ ಓದಿ | Vistara News Impact | ಕ್ಲಾಸ್‌ಗೆ ಚಕ್ಕರ್‌ ಹಾಕಿ ಎಣ್ಣೆ ಪಾರ್ಟಿ ಮಾಡ್ತಿದ್ದ ನಾಲ್ವರು ಶಿಕ್ಷಕರು ಸಸ್ಪೆಂಡ್‌, HM ವಿರುದ್ಧ ಶಿಸ್ತುಕ್ರಮ

Exit mobile version