Site icon Vistara News

Shivaram Karanth Layout: ಜ. 25ರಿಂದ ಶಿವರಾಮ ಕಾರಂತ ಬಡಾವಣೆ ನಿವೇಶನಗಳಿಗೆ ಅರ್ಜಿ ಆಹ್ವಾನ: ಡಿಕೆಶಿ

Dk Shivakumar

ಬೆಂಗಳೂರು: ಜನವರಿ 25ರಿಂದ ಶಿವರಾಮ ಕಾರಂತ ಬಡಾವಣೆ (Shivaram Karanth Layout) ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು. ಮೊದಲ ಆದ್ಯತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬಿಡಿಎ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ ಕಾರಂತ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಗಳ ಪರಿಶೀಲನೆ ಮಾಡಿದ್ದೇವೆ. ಶಿವರಾಮ ಕಾರಂತ ಬಡಾವಣೆ ನಿವೇಶನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುವುದು. ಉಳಿದಂತೆ ಬೆಂಗಳೂರಿನ ವಿವಿಧ ಬಿಡಿಎ ಕಚೇರಿಗಳಲ್ಲಿ ಆಪ್‌ಲೈನ್ ಮೂಲಕ ಅರ್ಜಿಗಳ ಸ್ವೀಕಾರ ಮಾಡಲಾಗುವುದು ಎಂದು ಹೇಳಿದರು.

ಅರ್ಜಿ ಹಾಕಿದ ನಂತರ ಅರ್ಜಿದಾರರು ಒಂದು ತಿಂಗಳಲ್ಲಿ ನಿವೇಶನ ಒಟ್ಟು ಮೊತ್ತದ ಶೇ.12.5 ಷ್ಟು ಆರಂಭಿಕ ಠೇವಣಿ ಕಟ್ಟಬೇಕು. ಪರಿಶಿಷ್ಟರು ಶೇ. 5 ರಷ್ಟು ಠೇವಣಿ ಕಟ್ಟಬೇಕು. ಬಹಳ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಯಾರು ಬೇಕಾದರೂ ಮಾಹಿತಿ ಪಡೆಯಲು ಹಾಗೂ ನೋಡಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ.

ಇದನ್ನೂ ಓದಿ | Sangolli Rayanna: ತಾಯ್ನಾಡಿಗಾಗಿ ಸಂಗೊಳ್ಳಿ ರಾಯಣ್ಣನ ಹೋರಾಟ ನಮಗೆಲ್ಲಾ ಮಾದರಿ: ಸಿದ್ದರಾಮಯ್ಯ

ಶಿವರಾಮ ಕಾರಂತ ಬಡಾವಣೆಯಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣಕ್ಕೆ 45 ಅಡಿ ರಸ್ತೆ ಇರುವ ಕಡೆ 25-30 ಎಕರೆ ಜಾಗ ಗುರುತಿಸಲಾಗಿದೆ. ಕಂಠೀರವ ಕ್ರೀಡಾಂಗಣ ಮಾದರಿಯಲ್ಲಿ ಬೆಂಗಳೂರು ಉತ್ತರ ಭಾಗದಲ್ಲಿ ಮತ್ತೊಂದು ಕ್ರೀಡಾಂಗಣ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಸಿಎ ನಿವೇಶನ, ಪಾರ್ಕ್ ಎಲ್ಲವೂ ಇದೆ. ಇಲ್ಲಿ ಶೇ.42 ರಷ್ಟು ಜಾಗದಲ್ಲಿ ನಿವೇಶನ ಮಾಡಲಾಗಿದ್ದು, ಉಳಿದ ಜಾಗವನ್ನು ಅಗಲವಾದ ರಸ್ತೆ ಹಾಗೂ ಇತರೆ ಸೌಕರ್ಯಕ್ಕೆ ಬಳಸಲಾಗಿದೆ ಎಂದು ಮಾಹಿತಿ ನೀಡಿದರು.

ನಾವು ರೈತರಿಗೆ ಈಗ ನಿವೇಶನಗಳನ್ನು ಹಂಚಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಈ ನಿವೇಶನಗಳ ಬೆಲೆ ದುಬಾರಿಯಾಗಿದೆ. ಈ ಮುನ್ನ ಅವರಿಗೆ ಹಣಕಾಸಿನ ಪರಿಹಾರ ನೀಡಿ ಭೂಮಿ ವಶಪಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ನಿವೇಶನವನ್ನು ನೀಡುತ್ತಿದ್ದೇವೆ. ಈ ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ 4900 ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಭೂಮಿ ಕಳೆದುಕೊಂಡ ರೈತರಿಗೆ ಮೊದಲ ಆದ್ಯತೆ

ಶಿವರಾಮ ಕಾರಂತ ಲೇಔಟ್ ಸಂಬಂಧ ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ 3069 ಎಕರೆಯನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ. 17 ಗ್ರಾಮದಲ್ಲಿ ಒಟ್ಟು 18 ಸಾವಿರ ಮಂದಿ ಭೂಮಿ ಕಳೆದುಕೊಂಡಿದ್ದು, ಅವರಿಗೆ ಮೊದಲ ಆದ್ಯತೆಯಲ್ಲಿ ಶೇ. 40 ರಷ್ಟು ನಿವೇಶನಗಳನ್ನು ನೀಡಲಾಗುವುದು. ಅವರದೇ ಜಮೀನಿನಲ್ಲಿ ನಿವೇಶನ ನೀಡಲಾಗುವುದು. ಸಾಧ್ಯವಾಗದಿದ್ದರೆ ಅವರದೇ ಊರಿನಲ್ಲಿ ಸೈಟ್ ನೀಡಲಾಗುವುದು. ಭೂ ಸಂತ್ರಸ್ತರು ಎಲ್ಲಾ ದಿಕ್ಕಿನ ನಿವೇಶನಗಳನ್ನು ಪಡೆಯಲು ಸಿದ್ಧರಿರಬೇಕು. ನಮಗೆ ನಿರ್ದಿಷ್ಟ ದಿಕ್ಕಿನ ನಿವೇಶನ ಬೇಕು ಎಂದು ಪಟ್ಟು ಹಿಡಿಯುವಂತಿಲ್ಲ ಎಂದು ಡಿಸಿಎಂ ತಿಳಿಸಿದರು.

ಈ ಬಡವಾಣೆಯಲ್ಲಿ 9500 ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಬೇಕಾಗಿದೆ. 4750 ಕ್ಕೂ ಹೆಚ್ಚು ಕಾರ್ನರ್ ನಿವೇಶನಗಳನ್ನು ಕಾನೂನಿನ ಪ್ರಕಾರದಂತೆ ಇ-ಹರಾಜು ಹಾಕಲಾಗುವುದು. ಉಳಿದ 10 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗೆ 9 ಬ್ಯಾಂಕುಗಳನ್ನು ಗುರುತಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Vistara Top 10 News : ಕಾಂಗ್ರೆಸ್‌ನಲ್ಲಿ ಯತೀಂದ್ರ ಹೇಳಿಕೆ ತಲ್ಲಣ, ಮಂದಿರ ಪ್ರವೇಶಿಸಿದ ರಾಮಲಲ್ಲಾ!

ಪಿಆರ್‌ಆರ್ ರಸ್ತೆ ಈಗ ಬೆಂಗಳೂರು ಬಿಸಿನೆಸ್ ಕಾರಿಡಾರ್

ಬೆಂಗಳೂರಿನ ಉತ್ತರದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ಮಾಡಲು ತೀರ್ಮಾನಿಸಿದ್ದು, ಬಹಳ ಒತ್ತಡವಿದ್ದರೂ ಇದರ ಡಿನೋಟಿಫಿಕೇಶನ್ ಮಾಡುವುದಿಲ್ಲ. ಇದಕ್ಕೆ ಈಗ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC)ಎಂದು ನಾಮಕರಣ ಮಾಡಿದ್ದೇವೆ. ಮುಂದಿನ ಒಂದು ವಾರದಲ್ಲಿ ಈ ರಸ್ತೆಯ ಗ್ಲೋಬಲ್ ಟೆಂಡರ್ ಕರೆಯಲಾಗುವುದು. ಯಾರು ಬೇಕಾದರೂ ಭಾಗವಹಿಸಬಹುದು. ಭೂಮಿ ಕಳೆದುಕೊಳ್ಳುವ ರೈತರಿಗೆ ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಡಿನೋಟಿಫಿಕೇಶನ್ ಮಾಡುವುದಿಲ್ಲ

ಬಿಬಿಸಿ ಸೇರಿದಂತೆ ಯಾವುದೇ ಯೋಜನೆಗೆ ಒಮ್ಮೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ. ನಂತರ ಅದನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ ಎಂಬ ತೀರ್ಮಾನ ಮಾಡಲಾಗಿದೆ ಎಂದ ಅವರು, ಕೆಂಪೇಗೌಡ ಬಡಾವಣೆಯ ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ಲೂಪ್ ರಸ್ತೆ ಸೇರಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ. 3278 ವಸತಿ ಮನೆಗಳನ್ನು ಆದಷ್ಟು ಬೇಗ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಪ್ರಶ್ನೋತ್ತರ

ಬಿಬಿಸಿ ರಸ್ತೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ ಬಹಳ ಗೊಂದಲವಾಗುತ್ತಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, “ರೈತರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂದಿದ್ದೇವೆ. ಅವರನ್ನು ಕರೆಸಿ ಮಾತನಾಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೊಸದಾಗಿ ಹಣ ನೀಡುವಂತಿಲ್ಲ. ಹೀಗಾಗಿ ರೈತರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು” ಎಂದು ಡಿಕೆಶಿ ತಿಳಿಸಿದರು.

ಬಿಡಿಎ ಮುಖ್ಯಸ್ಥ ಸ್ಥಾನಕ್ಕೆ ಎನ್.ಎ ಹ್ಯಾರಿಸ್ ಅವರ ಹೆಸರು ಕೇಳಿಬರುತ್ತಿರುವ ಬಗ್ಗೆ ಕೇಳಿದಾಗ, “ನಿಗಮ, ಮಂಡಳಿ ಪಟ್ಟಿಗೆ ಮುಖ್ಯಮಂತ್ರಿಗಳು ಸಹಿ ಹಾಕಬೇಕಿದೆ. ಬಿಡಿಎ ಮುಖ್ಯಸ್ಥರು ಹಾಗೂ ಆಯುಕ್ತರ ಕುರ್ಚಿಯಲ್ಲಿ ಇವರು ಕೂತಿದ್ದಾರೆ” ಎಂದು ರಾಕೇಶ್ ಸಿಂಗ್ ಅವರ ಕಡೆ ತೋರಿಸಿದರು.

ಕೆಂಪೇಗೌಡ ಲೇಔಟ್ ಜಾಗದ ಕೋರ್ಟ್ ಕೇಸ್ ಬಗ್ಗೆ ಕೇಳಿದಾಗ, “ಈ ಪ್ರಕರಣಗಳಲ್ಲಿ ಯಾರು ಸರ್ಕಾರದ ಪರ ಕೆಲಸ ಮಾಡದ ವಕೀಲರನ್ನು ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಲಾಗುವುದು” ಎಂದು ತಿಳಿಸಿದರು.

ಪರ್ಯಾಯ ನಿವೇಶನದ ಬಗ್ಗೆ ಕೇಳಿದಾಗ, ನಾನು ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಜನರನ್ನು ಭೇಟಿ ಮಾಡಿದಾಗ ಶೇ. 25 ರಷ್ಟು ಜನ ಪರ್ಯಾಯ ನಿವೇಶನಕ್ಕೆ ಅರ್ಜಿ ಹಾಕಿದ್ದಾರೆ. ಅವುಗಳನ್ನು ನೋಂದಣಿ ಮಾಡಿಸಿದ್ದು, ಕಾನೂನು ಪ್ರಕಾರವಾಗಿ ಯಾವುದನ್ನು ಬಗೆಹರಿಸಬಹುದೋ ಅದನ್ನು ಬಗೆಹರಿಸಲು ಸೂಚಿಸಲಾಗುವುದು” ಎಂದರು.

ಜಯನಗರ, ಮಲ್ಲೇಶ್ವರಂ ಬಿಟ್ಟರೆ ಶಿವರಾಮ ಕಾರಂತ ಉತ್ತಮ ಬಡಾವಣೆ

ಶಿವರಾಮ ಕಾರಂತ ಬಡಾವಣೆ ನಿವೇಶನ ದರ ಸ್ವಲ್ಪ ದುಬಾರಿಯಾಯಿತಲ್ಲವೇ ಎಂದು ಕೇಳಿದಾಗ, “ನಾವು ಲಾಭ ಮಾಡಲು ಹೊರಟಿಲ್ಲ. ಖಾಸಗಿಯವರು ಲೇಔಟ್ ಮಾಡಿದರೆ 55% ನಿವೇಶನಕ್ಕೆ ಸಿಗುತ್ತದೆ. ನಾವು ಮಾಡಿರುವ ಲೇಔಟ್ ನಲ್ಲಿ 42% ಮಾತ್ರ ನಿವೇಶನಗಳಾಗಿವೆ. ನಾವು ದೊಡ್ಡ ರಸ್ತೆಗಳು, ದೊಡ್ಡ ಪವರ್ ಸ್ಟೇಷನ್, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ನನ್ನ ಅನುಭವದಲ್ಲಿ ಜಯನಗರ, ಮಲ್ಲೇಶ್ವರಂ ನಂತರ ಅತಿ ಸುಸಜ್ಜಿತ ಹಾಗೂ ಅತ್ಯುತ್ತಮ ಯೋಜಿತ ಲೇಔಟ್ ಎಂದರೆ ಅದು ಶಿವರಾಮ್ ಕಾರಂತ ಲೇಔಟ್. ಈ ಭಾಗದ ರೈತರು ಪುಣ್ಯವಂತರು” ಎಂದರು.

ಪಿಪಿಪಿ ಮಾದರಿಯಲ್ಲಿ ಬಿಡಿಎ ಕಾಂಪ್ಲೆಕ್ಸ್

ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಪಿಪಿಪಿ ಮಾದರಿಯಲ್ಲಿ ಮಾಡುವ ಪ್ರಸ್ತಾಪದ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರದಲ್ಲೇ ಈ ಪ್ರಸ್ತಾವನೆ ಇತ್ತು. ಯಡಿಯೂರಪ್ಪನವರ ಸರ್ಕಾರದಲ್ಲಿ ಬಾಕಿ ಉಳಿದಿತ್ತು. ನಾನು ಈ ಫೈಲ್‌ಗಳನ್ನು ಕ್ಲಿಯರ್ ಮಾಡುತ್ತಿದ್ದೇನೆ. ಒಂದೊಂದು ದಿನ ತಡವಾದರೂ ಸರ್ಕಾರಕ್ಕೆ ನಷ್ಟವಾಗುತ್ತದೆ. ಎಲ್ಲವನ್ನು ಕ್ಲಿಯರ್ ಮಾಡಿ ಕಟ್ಟಡ ತೆರವುಗೊಳಿಸಿ ಕೆಲಸ ಶುರು ಮಾಡಿ ಸರ್ಕಾರಕ್ಕೆ ಏನು ನೀಡಬೇಕೋ ಅದನ್ನು ನೀಡಲು ತಿಳಿಸಿದ್ದೇನೆ. ಇದರ ಅನುಪಾತವನ್ನು ನಾವು ಬದಲಿಸಿಲ್ಲ. ಈ ಹಿಂದೆ ಏನಿತ್ತೋ ಅದನ್ನೇ ಮುಂದುವರಿಸಲಾಗಿದೆ” ಎಂದು ತಿಳಿಸಿದರು.

ಹೊಸ ಲೇಔಟ್ ಮಾಡುತ್ತೀರಾ ಎಂದು ಕೇಳಿದಾಗ, “ಹೊಸ ಲೇಔಟ್‌ಗಳನ್ನು ಮಾಡಬೇಕು, ಪ್ಲಾನ್ ಮಾಡಬೇಕು, ಜಾಗಗಳನ್ನು ಗುರುತಿಸಿ ಭೂಸ್ವಾಧೀನ ಮಾಡಬೇಕು. ಇದಕ್ಕಾಗಿ ಜಾಗ ಗುರುತಿಸುತ್ತಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ | Election Commission : ರಾಜ್ಯದ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಚುನಾವಣಾ ಆಯೋಗದ ರಾಷ್ಟ್ರ ಪ್ರಶಸ್ತಿ

ಬಿಡಿಎದಲ್ಲಿ ಹಣವಿಲ್ಲ ಎನ್ನಲಾಗುತ್ತಿದೆ ಎಂದು ಕೇಳಿದಾಗ, “ಬಿಡಿಎ ಲಾಭದಾಯಕ ಉದ್ಯಮ ಸಂಸ್ಥೆಯಲ್ಲ. ಬೇರೆಯವರು ಲೇಔಟ್ ಮಾಡುವ ಮುನ್ನ ಯೋಜನೆಗೆ ಅನುಮತಿ ಸಿಕ್ಕ ತಕ್ಷಣವೇ ಗ್ರಾಹಕರಿಂದ 10%- 20% ಹಣವನ್ನು ಪಡೆಯುತ್ತಾರೆ. ಇವರು ಲೇಔಟ್ ನಂತರ ಹಣ ಪಡೆಯುತ್ತಿದ್ದಾರೆ. ಬಿಡಿಎ ಎಂದಿಗೂ ರಿಯಲ್ ಎಸ್ಟೇಟ್ ಸಂಸ್ಥೆಯಾಗಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Exit mobile version