Site icon Vistara News

ಅಂತ್ಯಸಂಸ್ಕಾರಕ್ಕೆ ಹೋದವನ ಬರ್ಬರ ಹತ್ಯೆ

ಅಂತ್ಯಸಂಸ್ಕಾರ

ಹಾಸನ: ತಮ್ಮ ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆಂದು ಹೋಗಿದ್ದ ವ್ಯಕ್ತಿಯನ್ನು ಆಯುಧದಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಎ. ಸ್ವಾಮಿ (53) ಹತ್ಯೆಗೊಳಗಾದ ವ್ಯಕ್ತಿ.

ಅದೇ ಗ್ರಾಮದ ಸುನಿಲ್‌ ಭಾಸ್ಕರ್‌ ಎಂಬುವರು ಮೃತಪಟ್ಟಿದ್ದರು. ಅವರನ್ನು ನೋಡಿ ಅಂತ್ಯಸಂಸ್ಕಾರ ಮುಗಿಸಿ ಬೆಳಗ್ಗೆ ಬರುವುದಾಗಿ ಮನೆಯಲ್ಲಿ ಹೇಳಿ ಸ್ವಾಮಿ ಹೋಗಿದ್ದರು. ಇದೀಗ ಗ್ರಾಮದ ಹೊರವಲಯದಲ್ಲಿ ಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಕಂಡು ಬಂದಿದೆ. ಕೊಲೆ ಮಾಡಿದವರು ಯಾರು ಎನ್ನುವುದು ತಿಳಿದಿಲ್ಲ. ಕೇಂದ್ರ ಸರ್ಕಾರಿ‌ ಸ್ವಾಮ್ಯದ ಕಾಫಿ ತೋಟದ ಕಾರ್ಮಿಕ‌ ಸ್ವಾಮಿ ಹತ್ಯೆಯ ಹಿಂದಿನ ಕಾರಣ ಬಯಲಿಗೆಳೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ವಾಮಿ ಕಳೆದ 25 ವರ್ಷಗಳಿಂದ ಕಾಫಿ ಬೋರ್ಡ್‌ನಲ್ಲಿ ತೋಟದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರ ಹತ್ಯೆ ಪ್ರಕರಣ ಕುಟುಂಬದವರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ | ಕಾಶ್ಮೀರದಲ್ಲಿ ಇಬ್ಬರು ಲಷ್ಕರೆ ಭಯೋತ್ಪಾದಕರ ಹತ್ಯೆ, ಈ ವರ್ಷ 100 ಉಗ್ರರ ಸಂಹಾರ

ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮದ್ಯವನ್ನು ಜನರಿಗೆ ಮಾರಲಾಗುತ್ತಿದೆ. ಯಾರೋ ಕುಡಿದು ಹೀಗೆ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ತಕ್ಕ‌ ಶಿಕ್ಷೆ ಕೊಡಿಸಬೇಕೆಂದು ಕೊಲೆಯಾದ ಸ್ವಾಮಿ‌ ಅವರ ಪುತ್ರ ಪ್ರವೀಣ್ ಆಗ್ರಹಿಸಿದ್ದಾರೆ. ಸಕಲೇಶಪುರ ನಗರ ಠಾಣೆ ಪೊಲೀಸರು ಹಾಗೂ ಶ್ವಾನದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ತಾನಾಯ್ತು, ತನ್ನ ಸಂಸಾರವಾಯ್ತು ಎಂದಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವುದು ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ. ಪ್ರಕರಣದ ಹಿಂದೆ ಅಕ್ರಮ ಮದ್ಯ ಮಾರಾಟದ ಪಾತ್ರ ಎದ್ದು ಕಾಣುತ್ತಿದೆ.

ಇದನ್ನೂ ಓದಿ | ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಕೊಚ್ಚಿ ಕೊಲೆ

Exit mobile version