Site icon Vistara News

Assault in Arsikere: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಅಟ್ಟಾಡಿಸಿ ಹೊಡೆದ ಬಿಜೆಪಿ ಮುಖಂಡ; ಗಂಭೀರ ಗಾಯ

Assault in Arsikere

ಹಾಸನ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಬಿಜೆಪಿ ಮುಖಂಡರೊಬ್ಬರು ಅಟ್ಟಾಡಿಸಿ ಹೊಡೆದ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ (Assault in Arsikere) ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಅರಸೀಕೆರೆ ತಾಲೂಕು ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯ್ ಕುಮಾರ್ ಎಂಬುವವರು ಹಲ್ಲೆ ಮಾಡಿದ್ದಾರೆ.

ಬಿಜೆಪಿ ಮುಖಂಡ ವಿಜಯ್ ಕುಮಾರ್‌

ಬಿಜೆಪಿಯ ಬೂತ್ ವಿಜಯ ಅಭಿಯಾನದ ವೇಳೆ ವಿವಿಧ ಗ್ರಾಮಗಳಿಗೆ ತೆರಳಿದ್ದಾಗ ಕೆಲವರು ವಿಜಯ್ ಕುಮಾರ್‌ಗೆ ಅವಮಾನ ಮಾಡಿದ್ದಾರೆ. ಈ ವಿಡಿಯೊವನ್ನು ಅರಸೀಕೆರೆ ಬಿಜೆಪಿ ಕಾರ್ಯಕರ್ತ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ತನಗೆ ಅವಮಾನ ಮಾಡಿಸಿದ್ದೀಯಾ ಎಂದು ತಮ್ಮ ಕಾರು ಚಾಲಕನ ಜತೆ ಸೇರಿ ಅಣ್ಣಾಯಕನಹಳ್ಳಿ ವಿಜಯ್ ಕುಮಾರ್ ಲಾಠಿಯಿಂದ ಕಾರ್ಯಕರ್ತನಿಗೆ ಹಿಗ್ಗಾಮಗ್ಗ ಥಳಿಸಿದ್ದಾರೆ. ಗಾಯಾಳು ಕುಮಾರ್‌ ಅವರನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದ್ದು, ಕಾರ್ಯಕರ್ತನಿಗೆ ಗಂಭೀರ ಗಾಯಗಳಾಗಿವೆ. ವರ್ಷದ ಹಿಂದೆ ಬಿಜೆಪಿ ಸಮಾವೇಶದ ವೇಳೆ ಅರಸೀಕೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್.ಆರ್.ಸಂತೋಷ್ ಬಣ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕುಮಾರ್, ಎನ್.ಆರ್ ಸಂತೋಷ್ ಬಣದಲ್ಲಿ ಗು‌ರುತಿಸಿಕೊಂಡಿದ್ದರು. ಹೀಗಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕುಮಾರ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ವಿಜಯ್ ಕುಮಾರ್ ವಿರುದ್ಧ ಕೇಳಿಬಂದಿದೆ.

ಇದನ್ನೂ ಓದಿ | ಹಿರೇಕೆರೂರು ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಿ.ಎಸ್‌. ಯಡಿಯೂರಪ್ಪ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ

Exit mobile version