Site icon Vistara News

Assembly Session: ಶುಕ್ರವಾರದಿಂದ ಜಂಟಿ ಸದನ, ಫೆ.17ರಿಂದ ಬಜೆಟ್‌ ಅಧಿವೇಶನ; 7 ಮಸೂದೆ, 1,300 ಪ್ರಶ್ನೆ: ಸ್ಪೀಕರ್‌ ಕಾಗೇರಿ ಸುದ್ದಿಗೋಷ್ಠಿ

Karnataka assembly session to begin from friday

#image_title

ಬೆಂಗಳೂರು: ರಾಜ್ಯ ವಿಧಾನ ಸಭೆಯ 15 ನೇ ಅಧಿವೇಶನದಲ್ಲಿ ಬಜೆಟ್‌ ಮಂಡನೆಯೂ ಆಗಲಿದ್ದು, ಶುಕ್ರವಾರದಿಂದ ಆರಂಭವಾಗಲಿದೆ. ಫೆ.17ರಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಬಾರಿ ಕನ್ನಡ ಸಮಗ್ರ ಕಾಯ್ದೆ ಸೇರಿ 7 ಮಸೂದೆಗಳು, 1,300 ಪ್ರಶ್ನೆಗಳು ಸಲ್ಲಿಕೆಯಾಗಿವೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನವು ಪ್ರಜಾಪ್ರಭುತ್ವದ ದೇಗುಲವಾಗಿದೆ ಎಂಬುದರ ಅರಿವು ಎಲ್ಲ ಸದಸ್ಯರಿಗೂ ಇದೆ. ಆದಕಾರಣ, ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ತಮ್ಮ ಆಗ್ರಹ. ಫೆಬ್ರವರಿ 10 ರಿಂದ ನಡೆಯಲಿರುವ ಜಂಟಿ ಅಧಿವೇಶನ ಹಾಗೂ ಫೆಬ್ರವರಿ 17 ರಿಂದ ನಡೆಯಲಿರುವ ಆಯವ್ಯಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದನದ ಘನತೆಯನ್ನು ಹೆಚ್ಚಿಸುವಂತೆ ಸದಸ್ಯರಲ್ಲಿ ವಿನಂತಿಸಿದರು.

ತಮ್ಮ ಕೆಲಸ ಸುಲಭ !
ಅಧಿವೇಶನದ ವೇಳಾಪಟ್ಟಿ ಪ್ರಕಟಗೊಂಡ ನಂತರವೂ ಕೆಲವು ರಾಜಕೀಯ ಪಕ್ಷಗಳು ಹಾಗೂ ಸದಸ್ಯರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಗಮನಿಸಿದರೆ ತಮ್ಮ ಕೆಲಸ ಸುಲಭವಾಗಲಿದೆ ಎನಿಸುತ್ತದೆ ಎಂದ ಕಾಗೇರಿ, ಈ ಬಾರಿ ಸದನದಲ್ಲಿ ಹಾಜರಾತಿ ಕಡಿಮೆ ಇರುವ ಸಾಧ್ಯತೆಯಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು.

ಜಂಟಿ ಅಧಿವೇಶನ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಫೆಬ್ರವರಿ 10 ರಂದು ಪ್ರಾರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ‌, ಚಳಿಗಾಲದ ಅಧಿವೇಶನದಿಂದ ಜಂಟಿ ಅಧಿವೇಶನದ ನಡುವೆ ಸ್ವರ್ಗಸ್ಥರಾದ ಗಣ್ಯಾತಿಗಣ್ಯರಿಗೆ ಸಂತಾಪ ಸೂಚನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ಫೆಬ್ರವರಿ 13 ರಿಂದ ಸತತವಾಗಿ ನಾಲ್ಕು ದಿನಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯದ ಜೊತೆಗೆ ಎಂದಿನಂತೆ ಸದನದ ಕಾರ್ಯಕಲಾಪಗಳು ನಡೆಯುತ್ತವೆ ಎಂದರು.

ಆಯವ್ಯಯ ಅಧಿವೇಶನ
ಫೆಬ್ರವರಿ 17 ರಂದು ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24 ನೇ ಸಾಲಿನ ಆಯವ್ಯಯವನ್ನು ಮಂಡಿಸುವುದರೊಂದಿಗೆ ಪ್ರಸಕ್ತ ಸಾಲಿನ ಆಯವ್ಯಯ ಅಧಿವೇಶನ ಪ್ರಾರಂಭವಾಗಲಿದೆ. ಆಯವ್ಯಯ ಮಂಡನೆಗೆ ಸಂಬಂಧಿಸಿದಂತೆ ಫೆಬ್ರವರಿ 20 ರಿಂದ 24 ರ ವರೆಗೆ ಚರ್ಚೆ ನಡೆಯಲಿದೆ ಎಂದು ಪ್ರಕಟಿಸಿದ ಕಾಗೇರಿ, 11 ದಿನಗಳ ಅಧಿವೇಶನದ ಅವಧಿಯಲ್ಲಿ 9 ದಿನಗಳು ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯಲ್ಲಿ ಚರ್ಚೆಯೂ ಒಳಗೊಂಡಂತೆ ಇತರೆ ಕಾರ್ಯಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯಪಾಲರನ್ನು ಭೇಟಿಯಾಗಿ ಜಂಟಿ ಅಧಿವೇಶನಕ್ಕೆ ಆಹ್ವಾನಿಸಿದ ಎರಡೂ ಸದನಗಳ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳು.

ಫೆಬ್ರವರಿ 13 ರಂದು ಸಭಾ ನಾಯಕರೂ ಆದ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಹಾಗೂ ಸದನ ನಾಯಕರೊಂದಿಗೆ ಸದನ ಕಾರ್ಯಕಲಾಪ ಸಮಿತಿ ಸಭೆ ನಡೆಯಲಿದ್ದು, ಸದನದ ನಡೆಯನ್ನು ನಿರ್ಧರಿಸಲಿದೆ. ಇದೀಗ ಸದನದಲ್ಲಿ ಮಂಡನೆಗೆ ಏಳು ವಿಧೇಯಕಗಳು ಸ್ವೀಕೃತವಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಹಾಗೂ ಆರು ಖಾಸಗಿ ವಿಶ್ವವಿದ್ಯಾನಿಲಯಗಳ ವಿಧೇಯಕಗಳು ಒಳಗೊಂಡಿವೆ. ಅಲ್ಲದೇ, 1300 ಪ್ರಶ್ನೆಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.

ಅತ್ಯುತ್ತಮ ಸದನ
ಭಾರತದಲ್ಲಿನ ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳ ಕಾರ್ಯಕಲಾಪಗಳನ್ನು ಮತ್ತಷ್ಟು ಉತ್ತಮೀಕರಿಸಲು ಪ್ರೋತ್ಸಾಹದಾಯಕವಾಗಿ ಅತ್ಯುತ್ತಮ ಸದನ ಪ್ರಶಸ್ತಿಯನ್ನು ಸ್ಥಾಪಿಸಲು ಲೋಕ ಸಭಾ ಸಭಾಧ್ಯಕ್ಷ ಓಂ ಬಿರ್ಲಾ ಅವರು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಅತ್ಯುತ್ತಮ ಸದನ ಪ್ರಶಸ್ತಿಗೆ ಸೂಕ್ತವಾದ ಮಾನದಂಡಗಳನ್ನು ರೂಪಿಸಿ ವರದಿಯನ್ನು ಸಲ್ಲಿಸಿದೆ. ಅಂತೆಯೇ, ಇದೇ ವರ್ಷದಲ್ಲಿಯೇ ಪ್ರಶಸ್ತಿಯನ್ನು ಪ್ರಕಟಿಸುವಂತೆ ಲೋಕ ಸಭಾ ಸದಸ್ಯರಲ್ಲಿ ವಿನಂತಿಸಲಾಗಿದೆ.

ತಮ್ಮ ಇತ್ತೀಚಿನ ದೆಹಲಿ ಭೇಟಿಯ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಂವಿಧಾನದ 10ನೇ ಅನುಸೂಚಿ, ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತಂತೆ ಕರ್ನಾಟಕ ವಿಧಾನ ಸಭೆಯ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಚರ್ಚೆ, ಸಂವಾದ, ಕಮ್ಮಟ ಹಾಗೂ ಕಾರ್ಯಾಗಾರಗಳ ಕುರಿತು ರಾಷ್ಟ್ರಪತಿ ದ್ರೌಪತಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಾಗ ಉಭಯ ನಾಯಕರು ತೀವ್ರ ಆಸಕ್ತಿ ತೋರಿದರಲ್ಲದೇ ಕರ್ನಾಟಕ ವಿಧಾನ ಸಭೆಯ ಈ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನ ಸಭಾ ಸಚಿವಾಲಯದ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Exit mobile version