Site icon Vistara News

Bande seer death: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಕಣ್ಣೂರು ಶ್ರೀ ಬಿಡುಗಡೆ; ಸೇಬಿನ ಹಾರ ಹಾಕಿ ಸ್ವಾಗತ

bandemutt seer suicide case

ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ (Bande seer death) ಸಂಬಂಧಿಸಿದಂತೆ ಬಂಧಿತರಾಗಿದ್ದ ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಅಲಿಯಾಸ್‌ ರೇಣುಕಾರಾಧ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದ್ದರಿಂದ ಅವರನ್ನು ಬುಧವಾರ (ಜ.೧೮) ಬಿಡುಗಡೆ ಮಾಡಲಾಗಿದೆ. ಈ ವೇಳೆ ಭಕ್ತರು ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

ಬಂಡೆ ಮಠದ ಶ್ರೀಗಳನ್ನು ಹನಿಟ್ರ್ಯಾಪ್‌ ಮಾಡಿದ್ದ ಪ್ರಕರಣದಲ್ಲಿ ಮೃತ್ಯುಂಜಯ ಸ್ವಾಮೀಜಿ ಮೊದಲ ಆರೋಪಿಯಾಗಿದ್ದಾರೆ. ಅವರಿಗೆ ಶುಕ್ರವಾರ (ಜ. ೧೩)ರಂದು ನ್ಯಾಯಮೂರ್ತಿ ಎಂ.ಜಿ. ಉಮಾ ನೇತೃತ್ವದ ಪೀಠವು ಜಾಮೀನು ಮಂಜೂರು ಮಾಡಿತ್ತು. ಮೃತ್ಯುಂಜಯ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಹೊರಗಡೆ ಸೇರಿದ್ದ ಭಕ್ತರು, ಸ್ವಾಮೀಜಿಗೆ ಸೇಬಿನ ಹಾರ, ಗುಲಾಬಿ ಹಾರ ಹಾಕಿ ಸ್ವಾಗತ ಕೋರಿದ್ದಾರೆ.

ಯಾವ ಆಧಾರದಲ್ಲಿ ಜಾಮೀನು?
“ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಮೃತ ಸ್ವಾಮೀಜಿ ಬರೆದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರು ಉಲ್ಲೇಖವಾಗಿಲ್ಲ. ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ರೀತಿ ನೇರ ಸಂಬಂಧವಿಲ್ಲ. ಆದ್ದರಿಂದ, ಅವರಿಗೆ ಜಾಮೀನು ನೀಡಬೇಕು” ಎಂದು ಮೃತ್ಯುಂಜಯ ಸ್ವಾಮೀಜಿ ಪರ ವಕೀಲರು ಎಂದು ವಾದಿಸಿದ್ದರು. ಪ್ರಕರಣದ ಮೂರನೇ ಆರೋಪಿ ವಕೀಲ ಎಂ ಮಹದೇವಯ್ಯ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಬಂಡೆ ಶ್ರೀ ಸಾವು ಸಂಭವಿಸಿದ್ದು ಹೇಗೆ?
ಬಸವಲಿಂಗ ಸ್ವಾಮೀಜಿ ಅವರು ಬಂಡೆಮಠದ ತಮ್ಮ ಕೊಠಡಿಯಲ್ಲಿ 2022ರ ಅಕ್ಟೋಬರ್‌ 23ರಂದು ರಾತ್ರಿ ಕಿಟಕಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು. ಕುದೂರು ಠಾಣಾ ಪೊಲೀಸರು, ಮೃತ ಸ್ವಾಮೀಜಿಯ ಮರಣ ಪತ್ರ ಆಧರಿಸಿ ರೇಣುಕಾರಾಧ್ಯ (ಮೃತ್ಯುಂಜಯ ಸ್ವಾಮಿ), ಜೆ ಚಂದು ಅಲಿಯಾಸ್ ನೀಲಾಂಬಿಕೆ, ವಕೀಲ ಎಂ ಮಹದೇವಯ್ಯ ಮತ್ತು ಸಹಾಯಕ ಪ್ರಾಧ್ಯಾಪಕ ಬಿ.ಸಿ. ಸುರೇಶ್ ಅವರನ್ನು ಬಂಧಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಒಳಸಂಚು ರೂಪಿಸಿದ ಆರೋಪವನ್ನು ಬಂಧಿತರ ಮೇಲೆ ಹೊರಿಸಲಾಗಿತ್ತು. ಬಂಧಿತರು ಶ್ರೀಗಳನ್ನು ಹನಿ ಟ್ರ್ಯಾಪ್‌ ಮಾಡಿದ್ದರು ಎಂದು ಪೊಲೀಸರು ಮನಗಂಡಿದ್ದರು. ಮೃತ್ಯುಂಜಯ ಸ್ವಾಮೀಜಿ 2022ರ ಅಕ್ಟೋಬರ್‌ 30ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಇದನ್ನೂ ಓದಿ | Suicide Case: ತಾಯಿ, ಇಬ್ಬರು ಹೆಣ್ಣು ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Exit mobile version