Site icon Vistara News

Bangle Ban: ಬಿಸಿಯೂಟದ ಸಿಬ್ಬಂದಿಗೆ ಬಳೆ ನಿಷೇಧ ಮಾಡಿದ್ದು ಕಾಂಗ್ರೆಸ್‌ ಸರ್ಕಾರವಲ್ಲ, ಕೇಂದ್ರದ ಬಿಜೆಪಿ ಸರ್ಕಾರ!

Bangle ban

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ (Midday meal programme) ಅಡುಗೆ ಮಾಡಲು ನಿಯೋಜಿತರಾಗಿರುವ ಸಿಬ್ಬಂದಿ ಅಡುಗೆ ಮಾಡುವ ಸಂದರ್ಭದಲ್ಲಿ ಕೈಗಳಿಗೆ ಬಳೆ ತೊಡಬಾರದು (Bangle Ban) ಎಂಬ ಶಿಕ್ಷಣ ಇಲಾಖೆಯ ಸುತ್ತೋಲೆಯೊಂದು (Education department circular) ಭಾನುವಾರ (ಜುಲೈ 16) ಭಾರಿ ಸದ್ದು ಮಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ (Anti hindu sentiment) ಎಂದು ಹಿಂದು ಸಂಘಟನೆಗಳು ಮುಗಿಬಿದ್ದಿವೆ. ಆದರೆ, ಈಗ ನೋಡಿದರೆ ಈ ಬಳೆ ನಿಷೇಧ ಆದೇಶ ರಾಜ್ಯದ ಕಾಂಗ್ರೆಸ್‌ ಸರ್ಕಾರದ್ದಲ್ಲ (Congress Government) ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ತಿಳಿದುಬಂದಿದೆ!

ರಾಜ್ಯದ ಕೆಲವು ಕಡೆ ಬಿಸಿಯೂಟ ತಯಾರಿ ವೇಳೆ ನಡೆದ ನಿರ್ಲಕ್ಷ್ಯದಿಂದಾಗಿ ಆಹಾರ ಕೆಟ್ಟು ಮಕ್ಕಳು ಅಸ್ವಸ್ಥರಾದ ಘಟನೆಗಳು ನಡೆದಿದ್ದವು. ಇದರ ಮೇಲೆ ನಿಗಾ ಇಡುವುದಕ್ಕಾಗಿ ಹಲವು ಸೂಕ್ಷ್ಮ ಸಂಗತಿಯನ್ನು ಪಟ್ಟಿ ಮಾಡಿ ಶಿಕ್ಷಣ ಇಲಾಖೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಯಲ್ಲಿ ಬಳಕೆ ನಿಷೇಧದ ಅಂಶವಿದ್ದುದನ್ನು ಕಂಡ ಹಿಂದು ಸಂಘಟನೆಗಳು ಸರ್ಕಾರ ಮತ್ತು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದವು.

ಆದರೆ, ಈಗ ಸ್ವತಃ ಮುಖ್ಯಮಂತ್ತಿ ಸಿದ್ದರಾಮಯ್ಯನವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ನಮ್ಮ ಮಾರ್ಗಸೂಚಿಯಲ್ಲ, ಕೇಂದ್ರ ಸರ್ಕಾರದ್ದು ಎಂದು ಫ್ಯಾಕ್ಟ್‌ ಚೆಕ್‌ ರೂಪದಲ್ಲಿ ಟ್ವೀಟ್‌ ಮಾಡಿದ್ದಾರೆ

ಸಿಎಂ ಹೇಳಿದ್ದೇನು?: ಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗ ಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟ ಕೇಂದ್ರದ ಮಹಾಪೋಷಣ್‌ ಅಭಿಯಾನದಡಿ ಬರುತ್ತದೆ. ಅದಕ್ಕೆ ವಿಧಿಸಿದ ಮಾರ್ಗಸೂಚಿಯಲ್ಲಿ ಬಳೆಗಳನ್ನು ನಿಷೇಧಿಸಿರುವ ಅಂಶ ಸಮಗ್ರ ಮಾರ್ಗಸೂಚಿಯ 6.10 ಭಾಗದಲ್ಲಿದೆ.

ಕೇಂದ್ರ ಸರ್ಕಾರ ಮಹಾಪೋಷಣ್‌ ಯೋಜನೆಗೆ ಸಂಬಂಧಿಸಿ ಹೊರಡಿಸಿದ ಮಾರ್ಗದರ್ಶಿ ಸೂಚನೆಗಳು ಹೀಗಿವೆ. ಬಳೆಯ ವಿಚಾರ 6.10ನಲ್ಲಿವೆ.

ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಏನಿತ್ತು?

ಶಿಕ್ಷಣ ಇಲಾಖೆಯ ಪಿಎಂ ಪೋಷಣ್‌ (ಮಧ್ಯಾಹ್ನದ ಉಪಾಹಾರ ಯೋಜನೆ) ನಿರ್ದೇಶಕರ ಕಚೇರಿ ಹೊರಡಿಸಿರುವ ಆದೇಶದಲ್ಲಿ, ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಜಾರಿಯಲ್ಲಿರುವ ಶಾಲೆಗಳಲ್ಲಿ ಎಸ್‌ಡಿಎಂಸಿ ಸದಸ್ಯರಲ್ಲಿ ಒಬ್ಬರು ಪ್ರತಿದಿನ ಶಾಲೆಗೆ ಆಗಮಿಸಿ ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಗೆ ಭೇಟಿ ನೀಡಿ ಸ್ವಚ್ಛತೆ ಪಾಲನೆ ಮಾಡಿರುವ ಬಗ್ಗೆ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಪರಿಶೀಲಿಸಬೇಕು. ಆಯಾ ದಿನದಂದು ಸಿದ್ಧಪಡಿಸಿದ ಆಹಾರದ ಗುಣಮಟ್ಟವನ್ನು ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಪರೀಕ್ಷಿಸಬೇಕು ಎಂದು ಸೂಚಿಸಲಾಗಿತ್ತು.

ಆಹಾರ ಸುರಕ್ಷತೆಗೆ ಇಲಾಖೆ ಹೊರಡಿಸಿದ ಆದೇಶ

ಬಿಸಿಯೂಟ ಅಡುಗೆ ತಯಾರಿ ವಿಷಯದಲ್ಲಿ 9 ನಿರ್ದೇಶನಗಳು

ಅದರ ಜತೆಗೆ ಕೆಲವೊಂದು 9 ನಿರ್ಬಂಧ ಸಹಿತ ನಿರ್ದೇಶನಗಳನ್ನು ನೀಡಲಾಗಿದೆ

  1. ಕೈ ಮತ್ತು ಕಾಲುಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಛಗೊಳಿಸುವುದು.
  2. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಮತ್ತು ಧೂಳುರಹಿತ ವಾತಾವರಣ ಕಾಪಾಡುವುದು.
  3. ಪಾತ್ರೆ ಮತ್ತು ಪರಿಕರಗಳನ್ನು ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸುವುದು.
  4. ಗೋಡೆ, ಕಿಟಕಿಗಳಲ್ಲಿ ಹಲ್ಲಿ, ಜೇಡ, ಜಿರಳೆ, ನೊಣಗಳು ಇಲ್ಲದಂತೆ ನೋಡಿಕೊಳ್ಳುವುದು.
  5. ಆಹಾರ ಧಾನ್ಯಗಳಲ್ಲಿ ಕ್ರಿಮಿ ಕೀಟಗಳು ಇಲ್ಲದಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
  6. ಅಡುಗೆ ಸಿಬ್ಬಂದಿ ಏಪ್ರಾನ್‌, ತಲೆಗವಸು ಮತ್ತು ಕೈಗವಸುಗಳನ್ನು ಧರಿಸಿರುವುದು, ಕೈಗಳಲ್ಲಿ ಬಳೆ ತೊಟ್ಟಿರಬಾರದು.
  7. ಸಿದ್ಧಪಡಿಸಿದ ಆಹಾರದ ಪಾತ್ರೆಗಳನ್ನು ಸುರಕ್ಷಿತವಾಗಿ ಮುಚ್ಚಿಡುವುದು.
  8. ಹಸಿ ಸೊಪ್ಪು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದಿರುವುದು.
  9. ಸಿದ್ಧಪಡಿಸಿದ ಆಹಾರವನ್ನು ವಿತರಿಸುವ ಪೂರ್ವ ಶುಚಿ ರುಚಿ ಪರೀಕ್ಷಿಸಿ ಅಭಿಪ್ರಾಯ ದಾಖಲಿಸುವುದು.
ಬಳೆ ತೊಡಬಾರದು ಎಂಬ ಸೂಚನೆ ಇರುವ ನಿರ್ದೇಶನ

ಹಿಂದಿನ ಸುದ್ದಿ: Bangle Ban : ಬಿಸಿಯೂಟ ಸಿಬ್ಬಂದಿ ಬಳೆ ಹಾಕುವಂತಿಲ್ಲ; ಇಲಾಖೆ ಆದೇಶಕ್ಕೆ ಹಿಂದು ಸಂಘಟನೆಗಳು ಕೆಂಡಾಮಂಡಲ

Exit mobile version