Site icon Vistara News

Ghulam Nabi Azad | ರಾಹುಲ್ ಗಾಂಧಿ ವಿರುದ್ಧ ಗುಲಾಂ ನಬಿ ಆಜಾದ್ ಆರೋಪ ನಿರಾಧಾರ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರು ರಾಜೀನಾಮೆ ನೀಡಿರುವುದು ವಿಷಾದನೀಯ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಆಜಾದ್ ಅವರು ಪಕ್ಷವನ್ನು ಕಟ್ಟಿ ಬೆಳೆಸಲು ನೀಡಿರುವ ಕೊಡುಗೆಯನ್ನು ಸ್ಮರಿಸುತ್ತಲೇ, ಅವರ ಈ ರಾಜೀನಾಮೆ ದಿಢೀರ್ ನಿರ್ಧಾರವನ್ನು ಖಂಡಿಸಬೇಕಾಗಿ ಬಂದಿದೆ. ರಾಹುಲ್ ಗಾಂಧಿ ವಿರುದ್ಧ ಆಜಾದ್ ಮಾಡಿರುವ ಎಲ್ಲ ಆರೋಪಗಳು ನಿರಾಧಾರ. ಅವರ ಮಾತುಗಳು ಬಿಜೆಪಿಯನ್ನುಸಂತುಷ್ಟಪಡಿಸುವ ರೀತಿಯಲ್ಲಿವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇತ್ತೀಚಿನ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಕಾಂಗ್ರೆಸ್ ಪಕ್ಷ ಕಷ್ಟದ ದಿನಗಳಲ್ಲಿದೆ. ಇದಕ್ಕಿಂತಲೂ ಮುಖ್ಯವಾಗಿ ಸರ್ವಾಧಿಕಾರಿ ಪ್ರಭುತ್ವದಿಂದಾಗಿ ದೇಶ ಕಷ್ಟದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರದಲ್ಲಿದೆ. ಸಂವಿಧಾನದ ಒಂದೊಂದು ಸ್ತಂಭಗಳೇ ನಮ್ಮ ಕಣ್ಣೆದುರಿಗೆ ಉರುಳಿ ಬೀಳುತ್ತಿದೆ. ದೇಶಾದ್ಯಂತ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಹಲ್ಲೆ-ದೌರ್ಜನ್ಯಗಳು ನಡೆಯುತ್ತಿವೆ. ಈ ಸಮುದಾಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗುಲಾಂ ನಬೀ ಆಜಾದ್ ಅವರಂತಹ ಅಪಾರ ಅನುಭವ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿರುವ ನಾಯಕರ ಅಗತ್ಯ ಖಂಡಿತ ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೂ ಕೂಡಾ ಇದೆ ಎನ್ನುವುದನ್ನು ನಿರಾಕರಿಸಲಾಗದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನಿರಾಧಾರ ಆರೋಪಗಳು
ಕಾಂಗ್ರೆಸ್ ಪಕ್ಷವನ್ನು ತೊರೆದು ಅವರ ಪಾಡಿಗೆ ಅವರು ಹೋಗಿ ಬಿಟ್ಟಿದ್ದರೆ ಅವರಿಗೆ ಶುಭಕೋರಿ ಬೀಳ್ಕೊಡಬಹುದಿತ್ತೇನೋ? ಆದರೆ ಅವರು ತಮ್ಮ ನಿರ್ಗಮನದ ಜೊತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ರಾಹುಲ್ ಗಾಂಧಿ ವಿರುದ್ದ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ, ಇದನ್ನು ಕಾಂಗ್ರೆಸ್ ಪಕ್ಷದಲ್ಲಿರುವ ಯಾರೂ ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ.

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದಾಗ ಸೋನಿಯಾ ಗಾಂಧಿ ಅವರು ಮನಸ್ಸು ಮಾಡಿದ್ದರೆ ಸುಲಭದಲ್ಲಿ ಪ್ರಧಾನಿಯಾಗಬಹುದಿತ್ತು. ಆದರೆ, ಅವರು ಮನೆ ಬಾಗಿಲಿಗೆ ಬಂದಿದ್ದ ಅವಕಾಶವನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಮಾತ್ರವಲ್ಲ ವಿಶ್ವದ ಇತಿಹಾಸದಲ್ಲಿಯೇ ಅಪರೂಪದ ಘಟನೆ ಎಂದು ತಿಳಿಸಿದ್ದಾರೆ.

ಗುಲಾಂ ನಬಿ ಆಜಾದ್ ಮತ್ತು ರಾಹುಲ್ ಗಾಂಧಿ

ರಾಹುಲ್ ಅಧಿಕಾರಕ್ಕೆ ಆಸೆಪಟ್ಟವರಲ್ಲ
2004ರಲ್ಲಿಯೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ರಾಹುಲ್ ಗಾಂಧಿಯವರು ಇಚ್ಛೆ ಪಟ್ಟಿದ್ದರೆ ಕೇಂದ್ರದಲ್ಲಿ ಸಚಿವರಾಗಬಹುದಿತ್ತು. ಅವರನ್ನು ಯಾರೂ ಬೇಡ ಎಂದು ಹೇಳುತ್ತಿರಲಿಲ್ಲ. ಆದರೆ ಅಧಿಕಾರಕ್ಕಾಗಿ ಆಸೆ ಪಡದೆ ಪಕ್ಷಕ್ಕಾಗಿ ದುಡಿಯುವ ನಿರ್ಧಾರ ಕೈಗೊಂಡ ರಾಹುಲ್ ಅವರು ಹತ್ತು ವರ್ಷಗಳ ಯುಪಿಎ ಸರ್ಕಾರದ ಕಾಲದಲ್ಲಿ ಸಚಿವರಾಗದೆ ಪಕ್ಷದ ಬಲವರ್ಧನೆಗೆ ದುಡಿದದ್ದನ್ನು ದೇಶ ನೋಡಿದೆ. ರಾಹುಲ್ ಗಾಂಧಿ ಅವರು ತಾವು ಸಚಿವರಾಗದೆ, ಹಿರಿಯರಾದ ಗುಲಾಂ ನಬಿ ಆಜಾದ್ ಅವರಂತಹವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರು. ಈಗ ಇದೇ ಆಜಾದ್ ಅವರು ರಾಹುಲ್ ಗಾಂಧಿಯವರ ಮೇಲೆ ವೈಯಕ್ತಿಕ ಮಟ್ಟದ ದಾಳಿಗಿಳಿದಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಪಕ್ಷ ಸಾಕಷ್ಟು ನೀಡಿದೆ
ಸುಮಾರು ಐದು ದಶಕಗಳ ಸುದೀರ್ಘ ರಾಜಕೀಯ ಜೀವನವನ್ನುಕಾಂಗ್ರೆಸ್ ಪಕ್ಷದಲ್ಲಿ ಕಳೆದಿದ್ದಾರೆ. ಗುಲಾಂ ನಬೀ ಆಜಾದ್ ಅವರಿಗೆ ಕಾಂಗ್ರೆಸ್ ನೀಡಿರುವ ಕೊಡುಗೆ ಅಪಾರವಾದುದು. ಅದೇ ರೀತಿ, ಕಾಂಗ್ರೆಸ್ ಪಕ್ಷಕ್ಕೂ ಅವರ ಕೊಡುಗೆಯನ್ನು ಅಲ್ಲಗಳೆಯಲಾಗದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ಪ್ರಧಾನಿಗಳ ಸಂಪುಟದಲ್ಲಿ ದೀರ್ಘಕಾಲ ಸಚಿವರಾಗಿದ್ದ ಆಜಾದ್ ಅವರು ಪಕ್ಷದ ವಿವಿಧ ಘಟಕಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ, ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಸಂಸದೀಯ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಚುನಾವಣಾ ಸಮಿತಿಗಳಲ್ಲಿ ಸದಸ್ಯರಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದರು ಎಂದು ಅವರು ತಿಳಿಸಿದ್ದಾರೆ.

ಇದೇ ರೀತಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಮತ್ತು ಏಳು ವರ್ಷಗಳ ಕಾಲ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಒಬ್ಬ ಸಾಮಾನ್ಯ ಕಾರ್ಯಕರ್ತ ಪಕ್ಷದಿಂದ ಬಯಸುವ ಎಲ್ಲ ಹುದ್ದೆ ಮತ್ತು ಅವಕಾಶಗಳನ್ನು ಆಜಾದ್ ಅವರು ಪಡೆದಿದ್ದಾರೆ. ಅವರಷ್ಟೇ ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡಾ ಇಷ್ಟೊಂದು ಅವಕಾಶಗಳನ್ನು ಪಡೆದಿರುವುದು ಅಪರೂಪ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರಾೆ.

ಕಷ್ಟಕಾಲದಲ್ಲಿ ಪಕ್ಷ
ಕಾಂಗ್ರೆಸ್ ಪಕ್ಷ ಖಂಡಿತ ಈಗ ಕಷ್ಟದ ಕಾಲದಲ್ಲಿದೆ. ಪಕ್ಷದ ಒಳ್ಳೆಯ ದಿನಗಳಲ್ಲಿ ಅದರ ಜೊತೆ ಗುರುತಿಸಿಕೊಂಡು ಎಲ್ಲ ಅವಕಾಶಗಳನ್ನು ಪಡೆದ ಯಾವನೇ ವ್ಯಕ್ತಿ ಪಕ್ಷದ ಕಷ್ಟದ ಕಾಲದಲ್ಲಿ ಅದರ ಜೊತೆಗೆ ನಿಲ್ಲಬೇಕಾಗಿರುವುದು ಕರ್ತವ್ಯವಾಗಿದೆ. ಆದರೆ ಆಜಾದ್ ಅವರು ಪಕ್ಷದ ಕಷ್ಟದ ಕಾಲದಲ್ಲಿಯೇ ಕುಂಟುನೆಪಗಳನ್ನು ಮುಂದಿಟ್ಟು ಪಕ್ಷವನ್ನು ತ್ಯಜಿಸಿ ಹೋಗಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ ಎಂದು ಸಿದ್ದರಾಮಯ್ಯ ಅವರು ವಿಶ್ಲೇಷಣೆ ಮಾಡಿದ್ದಾರೆ.

ಗುಲಾಂ ನಬೀ ಆಜಾದ್ ಅವರು ರಾಜೀನಾಮೆ ನೀಡಿರುವ ಹೊತ್ತು ಮತ್ತು ಅವರ ರಾಜೀನಾಮೆ ಪತ್ರದ ಒಕ್ಕಣೆಯನ್ನು ನೋಡಿದರೆ ತಮಗೆ ಆಗಿರುವ ನೋವನ್ನು ವ್ಯಕ್ತಪಡಿಸುವ ಸದುದ್ದೇಶಕ್ಕಿಂತಲೂ, ನಮ್ಮ ಪ್ರಮುಖ ಎದುರಾಳಿ ಪಕ್ಷವನ್ನು ಖುಷಿಪಡಿಸುವ ದುರುದ್ದೇಶ ಇದ್ದಂತೆ ಕಾಣುತ್ತಿದೆ. ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಒಬ್ಬ ನಾಯಕರ ನಿರ್ಗಮನ ಯಾವ ಪರಿಣಾಮವನ್ನು ಬೀರದು ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | ಗುಲಾಂ ನಬಿ ಆಜಾದ್‌ ಬಳಿಕ ಕೆ.ಎಚ್‌. ಮುನಿಯಪ್ಪ ಕಾಂಗ್ರೆಸ್‌ ಬಿಡ್ತಾರಾ?: ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ

Exit mobile version