Site icon Vistara News

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Madhu Bangarappa in Belagavi Winter Session

ಬೆಳಗಾವಿ: ಪ್ರೌಢಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರು ಸಿಎಂ ಆಗಿದ್ದಾಗ ನೀಡಿದ್ದ ಉಚಿತ ಸೈಕಲ್‌ ಯೋಜನೆಗೆ ಮರು ಚಾಲನೆ ಸಿಗಲಿದೆ. ಇಂಥದ್ದೊಂದು ಭರವಸೆಯನ್ನು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ನೀಡಿದ್ದಾರೆ.

ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಣೆ ಮಾಡಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ (MLA Pradeep Easwar) ಅವರು ಪ್ರಶ್ನೋತ್ತರ ವೇಳೆ ಒತ್ತಾಯ ಮಾಡಿದಾಗ, ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಆರ್ಥಿಕ ಇಲಾಖೆ (Finance Department) ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಪ್ರದೀಪ್ ಈಶ್ವರ್ ಮಾತನಾಡಿ, ಇದರೊಟ್ಟಿಗೆ ಎರಡು ಜತೆ ಶೂ, ಸಾಕ್ಸ್ ಬದಲು ನಾಲ್ಕು ಜತೆ ವಿತರಣೆ ಮಾಡಿದೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು. ಇದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದ್ದಾರೆ.

ಧ್ವನಿಗೂಡಿಸಿದ‌ ಆರ್. ಅಶೋಕ್

ಈ ವೇಳೆ ಪತಿ ಪಕ್ಷ ನಾಯಕ ಆರ್.‌ ಅಶೋಕ್ ಮಧ್ಯಪ್ರವೇಶಿಸಿ, ಇಡೀ ರಾಜ್ಯದಲ್ಲಿ ಸೈಕಲ್ ವಿತರಣೆಯನ್ನು ಪುನಾರಂಭಿಸಿ. ಬಿ.ಎಸ್.‌ ಯಡಿಯೂರಪ್ಪ ತಂದಿರುವ ಯೋಜನೆ ಅದಾಗಿದೆ. ದೂರದಿಂದ ಬರುವ ಮಕ್ಕಳಿಗೆ ಸಹಾಯ ಆಗುತ್ತದೆ ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ: Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಅವಧಿಯಲ್ಲೇ ಸ್ಥಗಿತವಾಗಿತ್ತು

ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸೈಕಲ್ ವಿತರಣೆ ಬಿಜೆಪಿ ಕಾಲದಲ್ಲೇ ಸ್ಥಗಿತ ಆಗಿದೆ. ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯಿತು, ಹೀಗಾಗಬಾರದಿತ್ತು. ಈಗ ನಮ್ಮ ಸರ್ಕಾರ ಸೈಕಲ್ ವಿತರಣೆಗೆ ಪರಿಶೀಲಿಸಿ ಕ್ರಮ ವಹಿಸಲಿದೆ ಎಂದು ಟಾಂಗ್‌ ಕೊಟ್ಟರು.

ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

ಬೆಳಗಾವಿ: ರಾಜ್ಯದಲ್ಲಿ ಹಳೇ ಪಿಂಚಣಿ ಪದ್ಧತಿಯನ್ನೇ (Old Pension Scheme) ಮರು ಜಾರಿ ಮಾಡಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಬೇಕು (NPS Cancellation) ಎಂದು ಆಗ್ರಹಿಸುತ್ತಿರುವ ಸರ್ಕಾರಿ ನೌಕರರಿಗೆ (Government employees) ಈ ಬಾರಿ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌ ಸಿಗಲಿದೆಯೇ? ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಇರುವ ಸಮಿತಿಯನ್ನು 10 ದಿನದೊಳಗೆ ಪುನಾರಚನೆ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ಹೇಳಿದ್ದಾರೆ.

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನು? ಎಂಬ ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರ್ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹಿಂದೆ ಏಕ ವ್ಯಕ್ತಿಯ ಸಮಿತಿಯನ್ನು ಮಾಡಿದ್ದರು. ಈಗ ಆ ಸಮಿತಿಯನ್ನು ಪರಿಷ್ಕರಣೆ ಮಾಡಿ ನಾಲ್ಕೈದು ಸದಸ್ಯರ ನೇಮಕ ಮಾಡಲಾಗುವುದು. ಬಳಿಕ ಆ ಸಮಿತಿ ಕಾರ್ಯವ್ಯಾಪ್ತಿ ಅಳವಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ವಾಜಪೇಯಿ ಬಗ್ಗೆ ನಮಗೆ ನಂಬಿಕೆ ಇದೆ

ಕಾಲಮಿತಿಯ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ರಾಜಸ್ಥಾನ್, ಛತ್ತೀಸಗಢ, ಪಂಜಾಬ್‌ನಿಂದ ಇದರ ಬಗೆಗ ಆದೇಶ ಆಗಿದೆ. ಆದರೆ, ಅಲ್ಲಿ ಇನ್ನು ಜಾರಿಗೊಳಿಸಿಲ್ಲ. ಯಾರನ್ನು ಪಿಂಚಣಿಯಿಂದ ಹೊರಗಿಡುವ ಪ್ರಶ್ನೆ ಇಲ್ಲ. ನಾನು ಅಟಲ್‌ ಬಿಹಾರಿ ವಾಜಪೇಯಿಯವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವರ ಆಡಳಿತದ ಬಗ್ಗೆಯೂ ನಂಬಿಕೆ ಇಟ್ಟಿದ್ದೇನೆ. ವಾಜಪೇಯಿ ಅವರು ಎನ್‌ಪಿಎಸ್ ತರುವಾಗ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುತ್ತಾರೆ. ಆದರೆ, ನಿಮಗೆ ಅವರ ನಿರ್ಧಾರದ ಬಗ್ಗೆ ಗೌರವ ಇಲ್ಲದಿರಬಹುದು, ನಮಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

10 ದಿನದೊಳಗೆ ಸಮಿತಿ ಪುನರ್ ರಚನೆ

ಅನುದಾನಿತ ಸಂಸ್ಥೆಯಲ್ಲಿ ಸಿಬ್ಬಂದಿಗೆ ತೊಂದರೆ ಆಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಶಿಕ್ಷಣ ಸಂಸ್ಥೆಯವರು ಕೊಡುಗೆ ನೀಡಬೇಕು. ನಮಗೆ ಅದನ್ನು ಪರಿಹರಿಸುವ ಮನಸ್ಸಿದೆ. ಅದನ್ನ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸೂಚನೆ ಕೊಟ್ಟಿದ್ದಾರೆ. 10 ದಿನದೊಳಗೆ ಸಮಿತಿ ಪುನರ್ ರಚನೆ ಮಾಡುತ್ತೇವೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಶೀಘ್ರದಲ್ಲೇ ಆರ್ಥಿಕ ಇಲಾಖೆ ಜತೆ ಸಿಎಂ ಸಭೆ

ಎನ್‌ಪಿಎಸ್‌ ತೆಗೆದು ಒಪಿಎಸ್‌ ಅನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರೆ ಮುಂದಾಗುವ ಸಾಧಕ – ಬಾಧಕಗಳು ಏನು? ರಾಜ್ಯದ ಮೇಲೆ ಆಗುವ ಆರ್ಥಿಕ ಹೊರೆ ಏನು? ಈಗಿರುವ ಎಲ್ಲ ಲೆಕ್ಕಾಚಾರಗಳ ನಡುವೆ ಅದನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬಹುದಾ ಎಂದು ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಜತೆ ಶೀಘ್ರದಲ್ಲಿಯೇ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nandini Milk: ಮತ್ತೆ ನಂದಿನಿ ಹಾಲಿನ ದರ ಏರಿಕೆ? ಯಾವಾಗ? ಎಷ್ಟು ಹೆಚ್ಚಳ ಮಾಡಬಹುದು?

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ ನಡೆಯುತ್ತಲಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲು ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಎನ್‌ಪಿಎಸ್‌ ನೌಕರರು ಈ ಸಮಾವೇಶದಲ್ಲಿ ಒಪಿಎಸ್‌ ಜಾರಿಗಾಗಿ ಸಿಎಂ ಎದುರು ಹಕ್ಕೊತ್ತಾಯವನ್ನು ಮಂಡನೆ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಮೊದಲೇ ಸಾಧಕ – ಬಾಧಕಗಳ ಬಗ್ಗೆ ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರೆ ಸಮಾವೇಶದಲ್ಲಿ ಘೋಷಣೆ ಮಾಡಲು ಅನುಕೂಲ ಆಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಆಗಿದೆ ಎಂದು ಹೇಳಲಾಗಿದೆ. ಆದರೆ, ಇನ್ನು 10 ದಿನದಲ್ಲಿ ಸಮಿತಿಯನ್ನು ಪುನಾರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಸದ್ಯಕ್ಕೆ ಹಳೇ ಪಿಂಚಣಿ ಬಗ್ಗೆ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಕಡಿಮೆಯೇ ಎಂದು ಹೇಳಲಾಗಿದೆ.

Exit mobile version