Site icon Vistara News

Murder | ಕುಡುಗೋಲಿನಿಂದ ಹಲ್ಲೆ; ಬರ್ಬರವಾಗಿ ಪತ್ನಿಯ ಕೊಲೆಗೈದು ಪೊಲೀಸರಿಗೆ ಶರಣಾದ ವೃದ್ಧ

Murder

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ಹೊರವಲಯದಲ್ಲಿ ವೃದ್ಧನೊಬ್ಬ ಕುಡುಗೋಲಿನಿಂದ ಹಲ್ಲೆ ಮಾಡಿ ಪತ್ನಿಯನ್ನು ಬರ್ಬರವಾಗಿ ಹತ್ಯೆ(Murder) ಮಾಡಿ, ಬಳಿಕ ಪೊಲೀಸ್ ಠಾಣೆಗೆ ಹೋಗಿ‌ ಶರಣಾಗಿದ್ದಾನೆ.

ಖೋದನಾಪುರದ ರುದ್ರವ್ವ ಅಡಕಿ (55) ಮೃತ ಮಹಿಳೆ, ಚನ್ನಬಸಪ್ಪ ಸಂಗಪ್ಪ ಅಡಕಿ (60) ಕೊಲೆ ಮಾಡಿದ ಪತಿ. ಆರೋಪಿ ಚನ್ನಬಸಪ್ಪ ಸಂಗಪ್ಪ ಅಡಕಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡಕಟ್ಟಿ ಗ್ರಾಮದ ನಿವಾಸಿ. ಕೌಟುಂಬಿಕ ಕಲಹಕ್ಕೆ ಬೇಸತ್ತು ರುದ್ರವ್ವ ಅಡಕಿ ಖೋದನಾಪುರದ ತವರು ಮನೆಯಲ್ಲಿ ವಾಸವಿದ್ದರು. ಆದರೆ ಕೆಲ ದಿನಗಳ ಹಿಂದೆ ಪತ್ನಿಯ ತವರು ಮನೆಗೆ ಆಗಮಿಸಿದ್ದ ಪತಿ ಅಲ್ಲೇ ವಾಸವಿದ್ದ.

ಶುಕ್ರವಾರ ಬೆಳಗ್ಗೆಯೂ ‌ಪತಿ-ಪತ್ನಿ ಮಧ್ಯೆ ಗಲಾಟೆ ಆಗಿದ್ದು, ನಂತರ ರುದ್ರವ್ವ ಹೊಲಕ್ಕೆ ಹೋಗಿದ್ದಾರೆ. ಅದೇ ಕೋಪದಲ್ಲಿ ಹೊಲಕ್ಕೆ ಹೋಗಿರುವ ಚನ್ನಬಸಪ್ಪ ಕುಡುಗೋಲಿನಿಂದ ರುದ್ರವ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯನ್ನು ಕೊಲೆಗೈದ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕಿತ್ತೂರು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಇದನ್ನೂ ಓದಿ | ಸರ ಕಳ್ಳತನ, ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

Exit mobile version