Site icon Vistara News

Acid Attack : ಕಡಬ ಆ್ಯಸಿಡ್ ದಾಳಿಕೋರನ ವಿರುದ್ಧ ಸೂಕ್ತ ಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚನೆ

Acid attack Lakshmi Hebbalkar

ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ (Kadaba Government College) ಮೂವರು ಹೆಣ್ಮಕ್ಕಳ ಮೇಲೆ ದುಷ್ಟನೊಬ್ಬ ಆ್ಯಸಿಡ್ (Acid attack) ದಾಳಿ ಮಾಡಿದ ಘಟನೆ ಅತ್ಯಂತ ಕ್ರೂರ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದ್ದಾರೆ.

ಘಟನೆ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಇದೊಂದು ಹೀನಕೃತ್ಯವಾಗಿದ್ದು, ಈಗಾಗಲೇ ದಾಳಿ ನಡೆಸಿದವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವ ಉದ್ದೇಶದಿಂದ ಮಾಡಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಪೊಲೀಸರು ಸಮಗ್ರವಾಗಿ ತನಿಖೆ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬೇರೆ ಬೇರೆ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ನಾನು ಕೂಡ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಗಾಯಾಳು ಹೆಣ್ಣುಮಕ್ಕಳು ಅಪಾಯದಿಂದ ಪಾರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ರಾಜ್ಯ ಮಹಿಳಾ ಆಯೋಗ ತ್ವರಿತ ಕ್ರಮಕ್ಕೆ ಮುಂದಾಗಿದೆ. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ಆಗಬೇಕು; ಇಂತಹ ಘಟನೆಗಳು ಮರುಕಳಿಸದಂತೆ ಸಾಧ್ಯವಾದಷ್ಟು ಮುನ್ನಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Acid Attack : ಕಡಬದಲ್ಲಿ ಆ್ಯಸಿಡ್‌ ದಾಳಿ; ಲಕ್ಷ್ಮೀ ಹೆಬ್ಬಾಳ್ಕರ್‌ ಮೇಲೆ ಮಹಿಳಾ ಮೋರ್ಚಾ ದಾಳಿ!

ಏನಾಗಿತ್ತು ಕಡಬ ಪದವಿ ಪೂರ್ವ ಕಾಲೇಜಿನಲ್ಲಿ

ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಕಾಲೇಜು ಆವರಣದಲ್ಲಿಯೇ ಯುವಕನೊಬ್ಬ ಆ್ಯಸಿಡ್ ಎರಚಿದ್ದಾನೆ. ಆಗ ಜತೆಗಿದ್ದ ಇಬ್ಬರಿಗೂ ಆಸಿಡ್‌ ಬಿದ್ದು ಗಾಯಗಳಾಗಿವೆ.

ಈ ವಿದ್ಯಾ‌ರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಬೆಳಗ್ಗೆ ಕಾಲೇಜಿಗೆ ಬಂದು ಸಿದ್ಧತೆ ನಡೆಸುತ್ತಿದ್ದರು. ಧ್ವಜ ಕಟ್ಟೆಯ ಮೇಲೆ ಕುಳಿತು ಓದಿಕೊಳ್ಳುತ್ತಿದ್ದರು. ಆಗ ಅಲ್ಲಿಗೆ ಬಂದ ಅಬೀನ್‌ ಎಂಬಾತ ಬಂದು ದಾಳಿ ಮಾಡಿದ್ದಾನೆ. ಕೇರಳದ ಮಲಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಅಬೀನ್‌ ತಲೆಗೆ ಹ್ಯಾಟ್‌ ಮತ್ತು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದು ಅಟ್ಯಾಕ್‌ ಮಾಡಿದ್ದಾನೆ. ವಿದ್ಯಾರ್ಥಿನಿಯರು ಕಿರುಚಿಕೊಂಡು ಅಲ್ಲಿಂದ ಓಡಿದ್ದು, ಆರೋಪಿಯನ್ನು ಅಕ್ಕಪಕ್ಕದಲ್ಲಿದ್ದ ಇತರರು ಹಿಡಿದು ಹಾಕಿದ್ದಾರೆ. ವಿದ್ಯಾರ್ಥಿನಿಯರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.

ಆರೋಪಿ ಮುಬೀನ್‌ ಅಲಿನಾಳನ್ನು ಟಾರ್ಗೆಟ್ ಮಾಡಿ‌ ಈ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಆಕೆಯ ಮೇಲೆ ದಾಳಿ ಮಾಡಿದಾಗ ಅದು ಇತರ ಇಬ್ಬರು ವಿದ್ಯಾರ್ಥಿನಿಯರಿಗೆ ಸಿಡಿದು ಗಾಯಗಳಾಗಿವೆ. ಮುಬೀನ್‌ ಅಲೀನಾಗಳನ್ನು ಪ್ರೀತಿಸುತ್ತಿದ್ದು, ಆಕೆ ಆತನ ಪ್ರೇಮವನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಈ ಸಿಟ್ಟಿನಿಂದ ಆತ ಪರೀಕ್ಷೆಯ ವೇಳೆ ನೋಡಿಕೊಂಡು ದಾಳಿ ಮಾಡಿದ್ದಾನೆ ಎನ್ನಲಾಗಿದೆ.

Exit mobile version