ಬೆಳಗಾವಿ: ಮಹಿಳೆಯ ಕೊಲೆ ಮಾಡಿ (Murder Case) ಆಕೆ ಕಾಣೆಯಾಗಿದ್ದಾಳೆ (missing case) ಎಂದು ಕಥೆ ಕಟ್ಟಿ ಪೊಲೀಸರನ್ನೂ ಊರಿನವರನ್ನೂ ಯಾಮಾರಿಸಿದ ಖದೀಮರ ಅಸಲಿಯತ್ತು ಮೂರು ವರ್ಷದ ಬಳಿಕ ಬಯಲಾಗಿದ್ದು, ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.
ಬೆಳಗಾವಿ (belagavi news) ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಲೀಲಾ ವಿಠ್ಠಲ್ ಬಂಗಿ(32) ಕೊಲೆಯಾದ ದುರ್ದೈವಿ. ಸ್ವತಃ ಆಕೆಯ ಪತಿ ವಿಠ್ಠಲ್ ಲಕ್ಷಣ ಬಂಗಿ ಎಂಬವನೇ ಗೆಳೆಯರ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಇನ್ನಿತರ ಆರೋಪಿಗಳು.
ಇವರಲ್ಲಿ ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಕೊಲೆಯಾದ ಶಿವಲೀಲಾಳ ಸಹೋದರರು. ರಾಯಭಾಗದ ಖಾಸಗಿ ಕಾಲೇಜಿನಲ್ಲಿ ಶಿವಲೀಲಾ ವ್ಯಾಸಂಗ ಮಾಡುತ್ತಿದ್ದರು. 2020ರ ಜನವರಿಯಲ್ಲಿ ಕೊಲೆ ನಡೆದಿತ್ತು. ಈಕೆಯ ನಡತೆ ಸರಿಯಿಲ್ಲ ಎಂದು ಆಕೆಯ ಗಂಡ ಹಾಗೂ ಸಹೋದರರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕ್ರೂಸರ್ನಲ್ಲಿ ಸಾಗಿಸಿ ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದ ನಿರ್ಜನ ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದರು.
ನಂತರ ಏನೂ ಅರಿಯದಂತೆ ಮನೆ ಸೇರಿದ್ದರು. ಊರಿನಲ್ಲಿ ಜನರು ಶೀವಲೀಲಾಳ ಬಗ್ಗೆ ಪದೇ ಪದೆ ಕೇಳಲಾರಂಭಿಸಿದ್ದರಿಂದ ಶಿವಲೀಲಾ ಸಹೋದರ ಲಕ್ಕಪ್ಪ ಕಂಬಳಿ 2023 ಮಾರ್ಚ್ 26ರಂದು ಮೂಡಲಗಿ ಠಾಣೆಗೆ ಬಂದು ಆಕೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದ. ಪೊಲೀಸರು ಮೂಡಲಗಿ ತಾಲೂಕಿನ ಜೊಕ್ಕಾನಟ್ಟಿ ಗ್ರಾಮದಲ್ಲಿರುವ ಶಿವಲೀಲಾ ತವರು ಮನೆ ಬಳಿ ವಿಚಾರಣೆ ನಡೆಸಿದ್ದರು.
ಊರಿನಲ್ಲಿ ಶಿವಲೀಲಾ ಕೊಲೆಯಾಗಿರುವ ಬಗ್ಗೆ ಹುಟ್ಟಿಕೊಂಡ ಗುಸುಗುಸು ಹಿನ್ನೆಲೆಯಲ್ಲಿ ಶಿವಲೀಲಾ ಸಹೋದರ ಲಕ್ಕಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿಗಳು ಶವ ಬಿಸಾಕಿದಲ್ಲಿ ಕೇವಲ ಶಿವಲೀಲಾ ತಲೆಬುರುಡೆ ಮಾತ್ರ ಪತ್ತೆಯಾಗಿದೆ. ತಲೆಬುರುಡೆಯನ್ನು ಪೊಲೀಸರು ಎಫ್ಎಸ್ಎಲ್ಗೆ ಕಳಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Murder Case: ಹಸುಳೆಯನ್ನೇ ಕೊಲೆಮಾಡಿದ ತಂದೆ, ಎಂಥಾ ಕಲ್ಲು ಹೃದಯ!