Site icon Vistara News

Murder Case: ಹಳೆವೈಷಮ್ಯದಿಂದ ಯುವಕನ ಕೊಲೆ, ಆರೋಪಿ ಮನೆ ಮೇಲೆ ಕಲ್ಲು ತೂರಾಟ

gokak murder santosh

ಬೆಳಗಾವಿ: ಗೋಕಾಕ ನಗರದಲ್ಲಿ ನಿನ್ನೆ ರಾತ್ರಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದಾಗ ನೆತ್ತರ ಕೋಡಿ ಹರಿದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿದ್ದು, ಆರೋಪಿಯ ಮನೆಗೆ ಆಕ್ರೋಶಿತರು ಜಲ್ಲು ತೂರಾಟ ನಡೆಸಿದರು.

ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಶಾನೂರ್ ಪೂಜಾರಿ (27) ಕೊಲೆಯಾದ ದುರ್ದೈವಿ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳ ತಂಡ ಪರಾರಿಯಾಗಿದೆ.

ಗೋಕಾಕ ನಗರದ ಆದಿಜಾಂಬವ ನಗರದಲ್ಲಿ ಘಟನೆ ನಡೆದಿದ್ದು, ಇದರಿಂದ ಆದಿಜಾಂಬವ ನಗರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಗೋಕಾಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶಾನೂರ (ಸಂತೋಷ್) ಕೊಲೆ ನಡೆದಿದ್ದು, ಕೊಲೆಯಿಂದ ಉದ್ರಿಕ್ತರಾದ ಶಾನೂರ ಕಡೆಯ ಯುವಕರ ತಂಡ ಆರಪಿಯ ಮನೆಗೆ ಕಲ್ಲು ತೂರಾಟ ನಡೆಸಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದರು. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದೆ.

ಫೋಟೋಶೂಟ್‌ ವಿಚಾರದಲ್ಲಿ ಕೊಲೆ

ದೊಡ್ಡಬಳ್ಳಾಪುರ: ಪೋಟೊ ಶೂಟ್ ವಿಚಾರಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ನಡೆದಿದೆ. ಯುವಕರ ನಡುವೆ ಪೋಟೊ ತೆಗೆಯುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಸೂರ್ಯ (22) ಮೃತ ಯುವಕ. ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ಸ್ನೇಹಿತರ ಜತೆ ಸೂರ್ಯ ಫೋಟೋ ತೆಗೆಯುತ್ತಿದ್ದ. ಈ ವೇಳೆ ನಮ್ಮದೂ ಫೋಟೊ ತೆಗೆಯಿರಿ ಎಂದು ಕೆಲವರು ಗಲಭೆ ಮಾಡಿದ್ದಾರೆ. ಆಗ ಒಂದು ಫೊಟೊ ತೆಗೆದರೂ ಮತ್ತೆ ಗಲಾಟೆ ಮುಂದುವರಿದಿದೆ. ಮಾತಿಗೆ ಮಾತು ಬೆಳೆದು ಸೂರ್ಯ ಎದೆ ಭಾಗಕ್ಕೆ ಯುವಕನೊಬ್ಬ ಚಾಕು ಇರಿದಿದ್ದರಿಂದ, ತೀವ್ರ ರಕ್ತಸ್ರಾವವಾಗಿತ್ತು.

ಗಾಯಾಳು ಯುವಕನನ್ನು ದೊಡ್ಡಬಳ್ಳಾಪುರದ‌ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಅತಿಯಾದ ರಕ್ತ ಸ್ರಾವದಿಂದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Murder Case : ಕೇವಲ 15 ನಿಮಿಷದಲ್ಲಿ ನಾಲ್ವರನ್ನು ಬಲಿ ಪಡೆದ ಕೊಲೆಗಡುಕ

Exit mobile version