Site icon Vistara News

Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; 13 ವರ್ಷದ ಬಾಲಕ ಸಾವು

Gas cylinder blast in Bengaluru, 13-year-old boy dies, family mourns death

Gas cylinder blast in Bengaluru, 13-year-old boy dies, family mourns death

ಬೆಂಗಳೂರು: ಇಲ್ಲಿನ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ಭಾನುವಾರ ಗ್ಯಾಸ್‌ ಸಿಲಿಂಡರ್ (Bengaluru Cylinder Blast) ಸ್ಫೋಟಗೊಂಡಿದ್ದು, 13 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮಹೇಶ್ (13) ಮೃತ ದುರ್ದೈವಿ.

ಸಿಲಿಂಡರ್ ಫಿಲ್ಲಿಂಗ್ ಅಂಗಡಿಯಲ್ಲಿ ಗ್ಯಾಸ್‌ ಬ್ಲಾಸ್ಟ್‌ ಆಗಿದೆ. ಅದೇ ಅಂಗಡಿ ಪಕ್ಕದಲ್ಲಿ ಆಟವಾಡುತ್ತಿದ್ದ ಮಹೇಶ್‌ ತಲೆಗೆ ಹಾಗೂ ಎಡಗಣ್ಣಿಗೆ ಗಂಭೀರವಾಗಿ ಗಾಯಗಳಾಗಿವೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಹೇಶ್‌ ಮೃತಪಟ್ಟಿದ್ದಾನೆ. ಇತ್ತ ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಫೋಟಗೊಂಡಿರುವ ರಭಸಕ್ಕೆ ಬಾಯ್ತೆರೆದ ಸಿಲಿಂಡರ್‌

ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ನಿವಾಸಿಗಳಾದ ಮಲ್ಲಪ್ಪ, ಸರಸ್ವತಿ ದಂಪತಿ ಕಳೆದ ಎಂಟು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಚೋಳನಾಯಕನಹಳ್ಳದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ಮಹೇಶ್, ಭಾನುವಾರ (ಮಾ.5) ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಬ್ಲಾಸ್ಟ್ ಆದ ರಭಸಕ್ಕೆ ಬಾಲಕನ ದೇಹವೇ ಛಿದ್ರವಾಗಿದೆ.

ಇದನ್ನೂ ಓದಿ: Fire Accident: ಚಾಮುಂಡಿ ಬೆಟ್ಟದಲ್ಲಿ ಬೆಂಕಿ, ವಾಹನ ಸಂಚಾರ ಸ್ಥಗಿತ; ಚಿಕ್ಕಮಗಳೂರಿನಲ್ಲಿ ಸುಟ್ಟು ಕರಕಲಾದ ರೈತರಿಬ್ಬರ ತೋಟಗಳು

ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರೀ ಫಿಲ್ಲಿಂಗ್ ಮಾಡುವ ಗೋಡನ್ ಆಗಿದ್ದು, ಲಿಯಾಖತ್ ಎಂಬಾತ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ಘಟನೆ ಬಳಿಕ ಲಿಯಾಖತ್ ಪರಾರಿ ಆಗಿದ್ದಾನೆ. ಲಿಯಾಖತ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋದಾಮಿನಲ್ಲಿ ಇದ್ದ ಆರು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version